ಇಷ್ಟು ದಿನ ನನ್ನೆಲ್ಲಾ ಹುಚ್ಚಾಟಗಳನ್ನು ಸಹಿಸಿಕೊಂಡ ನಿಮ್ಮೆಲ್ಲರಿಗೂ ನನ್ನ ಥ್ಯಾಂಕ್ಸ್ ಅನ್ನುತ್ತಾ ಬಿಗ್ ಬಾಸ್ ವೇದಿಕೆಯ ಮೇಲೆಯೇ ಅಕುಲ್ ಬಾಲಾಜಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಅದಾಗಿ ಸ್ವಲ್ಪ ಹೊತ್ತಲ್ಲೇ ಅವರನ್ನು ‘ಬಿಗ್ ಬಾಸ್ ವಿನ್ನರ್’ ಎಂದು ಸುದೀಪ್ ಘೋಷಿಸಿದರು. ಎಂಬಲ್ಲಿಗೆ ಯಾರು ಹುಚ್ಚುಚ್ಚಾಗಿ ಆಡುತ್ತಾರೋ ಅವರೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆಲ್ಲುತ್ತಾರೆ ಎಂಬ ಸಂದೇಶ ಸೂಚ್ಯವಾಗಿ ವೀಕ್ಷಕರಿಗೆ ರವಾನೆಯಾಯಿತು. ಸಮಾಧಾನದ ಸಂಗತಿ ಎಂದರೆ ತಾನು ಹುಚ್ಚುಚ್ಚಾಗಿ ಆಡುತ್ತೇನೆ ಅನ್ನುವುದು ಅಕುಲ್ ಅವರಿಗೇ ಗೊತ್ತಾಗಿರುವುದು. ಇದನ್ನು ಜ್ಞಾನೋದಯ ಎಂದೂ ಕರೆಯಬಹುದು ಅಥವಾ ಅವರು ಗೊತ್ತಿದ್ದೂ ‘ಅಪರಾಧ’ ಮಾಡಿದ್ದಾರೆ ಎಂದು ಕಟಕಟೆಯಲ್ಲೂ ನಿಲ್ಲಿಸಬಹುದು.
ಬಿಗ್ ಬಾಸ್ ಕಾರ್ಯಕ್ರಮದ ಸಮಾರೋಪ ನಡೆದದ್ದು ಭಾನುವಾರ ರಾತ್ರಿ. ಆದರೆ ಆವತ್ತು ಬೆಳ್ಳಂಬೆಳಿಗ್ಗೆಯೇ ಅಕುಲ್ ಬಾಲಾಜಿಗೆ ಅಭಿನಂದನೆಗಳನ್ನು ತಿಳಿಸಿ ಕೆಲವರು ಟ್ವೀಟ್ ಮಾಡಿದ್ದರು. ಇದು ಕಿವಿಯಿಂದ ಕಿವಿಗೆ ದಾಟಿ ಸಂಜೆಯ ಹೊತ್ತಿಗೆ ಫಿನಾಲೆಯನ್ನು ನೋಡುವ ಆಸಕ್ತಿಯನ್ನು ಹಲವರು ಕಳಕೊಂಡಿದ್ದರು. ನೋಡಿದವರಿಗೂ ಕಾರ್ಯಕ್ರಮ ಅಂಥಾ ಸಂತೋಷವನ್ನೇನೂ ನೀಡಲಿಲ್ಲ. ಕಳೆದ ವರ್ಷದ ಸಮಾರೋಪಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಸಪ್ಪೆಯಾಗಿತ್ತು. ಪೂಜಾ ಲೋಕೇಶ್ ಅವರ ಆತಂಕದ ಕ್ಲೋಸ್ ಅಪ್, ಬಾಲಾಜಿ ಪತ್ನಿಯ ಕಣ್ಣೀರಿನ ಹೊರತಾಗಿ ವೀಕ್ಷಕರನ್ನು ಹಿಡಿದಿಡುವ ಕ್ಷಣಗಳಿಗೆ ಕೊರತೆಯಿತ್ತು. ಮತ್ತೆ ಮತ್ತೆ ಅದೇ ಮಾತು, ಅದೇ ಹಳೇ ಕ್ಲಿಪ್ಪಿಂಗುಗಳು ಸಮಯವನ್ನು ಕೊಲ್ಲುವುದಕ್ಕಷ್ಟೇ ಸಹಕಾರಿಯಾಗಿದ್ದವು. ಗೆದ್ದವರ ಉನ್ಮಾದ ಮತ್ತು ಸೋತವರ ವಿಷಾದವನ್ನು ಸೆರೆಹಿಡಿಯುವಲ್ಲಿ ಟ್ವೆಂಟಿಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಯ ಕೆಮರಾಗಳು ತೋರುವ ವೃತ್ತಿಪರತೆ ಬಿಗ್ ಬಾಸ್ ಫಿನೇಲೆಯಲ್ಲಿ ಕಾಣಿಸಲಿಲ್ಲ.
ಫೈನಲ್ ಗೂ ಮುಂಚೆ ಖಾಸಗಿ ವಾಹಿನಿಯೊಂದು ನಡೆಸಿದ ಸಮೀಕ್ಷೆಯಲ್ಲಿ ಸೃಜನ್ ಅವರ ಪರವಾಗಿಯೇ ಜಾಸ್ತಿ ಓಟುಗಳು ಬಿದ್ದಿದ್ದವು. ಆದರೆ ಸುವರ್ಣ ಚಾನೆಲ್ಲು ವೀಕ್ಷಕರ ಆಯ್ಕೆ ಅಕುಲ್ ಬಾಲಾಜಿ ಅವರೇ ಆಗಿದ್ದರು ಅನ್ನುವುದು ಬಹಳ ಜನರಿಗೆ ಆಶ್ಚರ್ಯದ ಸಂಗತಿಯಾಗಿತ್ತು. ಇದು ಹೇಗೆ ಸಾಧ್ಯ ಎಂದು ಮುಗ್ಧರು ತಲೆ ಕೆರೆದುಕೊಂಡರು. ಮಿಕ್ಕವರು ಫೇಸ್ ಬುಕ್ಕಲ್ಲಿ ತಮ್ಮ ಆಕ್ರೋಶ ತೋಡಿಕೊಂಡರು. ಕಳೆದ ವರ್ಷವೂ ಇಂಥಾದ್ದೇ ಪವಾಡ ಜರುಗಿ ಅರುಣ್ ಸಾಗರ್ ಬದಲಾಗಿ ವಿಜಯ್ ರಾಘವೇಂದ್ರ ಗೆದ್ದಿದ್ದನ್ನು ಅವರಿಗೆ ನೆನಪಿಸೋಣವಂತೆ. ರಿಯಾಲಿಟಿ ಶೋಗಳ ಯಶಸ್ಸು ಅಡಗಿರುವುದು ಅದರ ಅನಿರೀಕ್ಷಿತ ಫಲಿತಾಂಶದಲ್ಲಿ. ಇಲ್ಲಿ ಎಲ್ಲವೂ unpredictable ಆಗಿರಬೇಕು, ಅಂದರೆ ಅನೂಹ್ಯವಾಗಿರಬೇಕು. ಆದರೆ ಆ ಕಾರಣಕ್ಕೇ ಒಬ್ಬ ಯೋಗ್ಯ ಅಭ್ಯರ್ಥಿ ಪ್ರಶಸ್ತಿ ವಂಚಿತನಾಗಬಾರದು ಅನ್ನುವುದೂ ಅಷ್ಟೇ ನಿಜ.
ಈ ಸಲದ ಬಿಗ್ ಬಾಸ್ ಸಪ್ಪೆಯೆನಿಸಿದ್ದರೂ ಕಣದಲ್ಲಿದ್ದ ಅಭ್ಯರ್ಥಿಗಳ ಪೈಕಿ ನನ್ನ ಆಯ್ಕೆ ಸೃಜನ್ ಲೋಕೇಶ್. ಅದಕ್ಕೆ ಮುಖ್ಯ ಕಾರಣ ಈತ ತನ್ನನ್ನು ತಾನೇ ಸಾದರಪಡಿಸಿಕೊಳ್ಳುವ ರೀತಿ. ಅಲ್ಲೊಂದು ಸಭ್ಯತೆಯಿದೆ, ಅಭಿರುಚಿಯಿದೆ, ಸಂಸ್ಕಾರವೂ ಇದೆ. ಇವೆಲ್ಲವೂ ಅವರ ತಂದೆಯಿಂದ ಬಳುವಳಿ ಬಂದಿದ್ದಿರಬಹುದು. ಆದರೆ ಈ ಗಾಂಭೀರ್ಯದ ಚೌಕಟ್ಟಿನೊಳಗೇ ಸೃಜನ್ ನಗುಚಿಮ್ಮಿಸುವ ಪರಿ ಮಾತ್ರ ಅದ್ಭುತ. ನಾನು ಈ ಹುಡುಗನನ್ನು ಮೊದಲು ನೋಡಿದ್ದು ‘ನೀಲಮೇಘಶ್ಯಾಮ’ ಚಿತ್ರದ ಪಾರ್ಟಿಯಲ್ಲಿ. ರಾಧಿಕಾ ಮತ್ತು ಸೃಜನ್ ಇಬ್ಬರಿಗೂ ಅದು ಮೊದಲಚಿತ್ರವಾಗಿತ್ತು. ತನ್ನ ಇತಿ ಮತ್ತು ಮಿತಿಯ ಬಗ್ಗೆ ಸೃಜನ್ ಆವತ್ತು ಬಹಳ ಆತ್ಮವಿಶ್ವಾಸದಿಂದಲೇ ಮಾತಾಡಿದ್ದರು. ಚಿತ್ರ ತಡವಾಗಿ ಬಿಡುಗಡೆಯಾಯಿತು ಮತ್ತು ಸೋತುಹೋಯಿತು. ನಂತರದ ಚಿತ್ರಗಳೂ ಯಶಸ್ಸು ಕಾಣಲಿಲ್ಲ. ಆಗ ಸೃಜನ್ ಅವರನ್ನು ಕೈಹಿಡಿದದ್ದು ಟೀವಿ ರಿಯಾಲಿಟಿ ಶೋಗಳು. ಅದನ್ನು ರಿಯಲ್ ಆಗಿಸಿದ್ದು ಮತ್ತು ಕೆಲವೊಮ್ಮೆ ಸರ್ರಿಯಲ್ ಆಗಿಸಿದ್ದು ಸೃಜನ್ ಅವರ ಸೃಜನಶೀಲತೆಗೆ ಸಾಕ್ಷಿ. ಮಜಾ ವಿಥ್ ಸೃಜಾ ಕಾರ್ಯಕ್ರಮ ಅರುಣ್ ಸಾಗರ್ ಮತ್ತು ಸೃಜನ್ ಅವರೊಳಗಿದ್ದ ದೈತ್ಯಪ್ರತಿಭೆಯನ್ನು ಅನಾವರಣಗೊಳಿಸಿತು.
ಹಾಗೆ ನೋಡಿದರೆ ಬಾಲಾಜಿಯದ್ದೂ ಇದೇ ಕತೆ. ಇವರು ಕೂಡಾ ಹೀರೋ ಆಗಲೆಂದೇ ಉದ್ಯಮಕ್ಕೆ ಬಂದವರು. ಸಿನಿಮಾ ಪಾರ್ಟಿಗಳಲ್ಲಿ ವಿನಾಕಾರಣ ಲವಲವಿಕೆಯಿಂದ ಓಡಾಡುತ್ತಾ, ತನ್ನನ್ನು ತಾನೇ ಪತ್ರಕರ್ತರಿಗೆ ಪರಿಚಯಿಸಿಕೊಳ್ಳುತ್ತಾ ಗಮನಸೆಳೆಯುತ್ತಿದ್ದ ಹುಡುಗ ಬಾಲಾಜಿ ಕೂಡಾ ಕೊನೆಗೆ ಗೆದ್ದಿದ್ದೂ ರಿಯಾಲಿಟಿ ಶೋಗಳಲ್ಲೇ. ‘ಪ್ಯಾಟೇ ಹುಡುಗೀರ ಹಳ್ಳಿ ಲೈಫು’ ಕಾರ್ಯಕ್ರಮವೇ ಬಾಲಾಜಿಗೆ ಲೈಫ್ ನೀಡಿತು. ಆದರೆ ಆ ರಿಯಾಲಿಟಿ ಶೋನಲ್ಲಿ ಬಾಲಾಜಿಯ ಕನ್ನಡ ಕರ್ಣಕಠೋರವಾಗಿತ್ತು. ಆಮೇಲೆ ಸಾಕಷ್ಟು ಸುಧಾರಣೆಯಾದರೂ ಅಲ್ಲಲ್ಲಿ ತೆಲುಗಿನ ವಾಸನೆ ಇದ್ದೇ ಇದೆ. ಆತ್ಮವಿಶ್ವಾಸದ ಮಾತು ಬಂದಾಗ ಬಾಲಾಜಿ ಮತ್ತು ಇಬ್ಬರೂ ಸರಿಸಮಾನರು. ಕಾಲಿಗೊಂದು ವೇದಿಕೆ, ಕೈಗೊಂದು ಮೈಕು ಸಿಕ್ಕರೆ ಎದುರಿಗಿದ್ದವರು ಪಡ್ಚ.
ಸೃಜನ್ ಅವರ ಆಂಕರಿಂಗ್ ನಲ್ಲಿ ಹವ್ಯಾಸಿ ರಂಗಭೂಮಿಯ ಸೂತ್ರಧಾರ ಕಾಣಿಸಿದರೆ, ಬಾಲಾಜಿಯ ಆಂಕರಿಂಗ್ ನಲ್ಲಿ ವೃತ್ತಿಪರ ರಂಗಭೂಮಿಯ ಹಾಸ್ಯಗಾರ ಕಾಣಿಸುತ್ತಾನೆ. ಸೃಜನ್ ಅವರದು ಕಾಲೆಳೆಯುವ ಶೈಲಿ, ಬಾಲಾಜಿಯದ್ದು ಮೈಕೈ ಕುಣಿಸುವ ಶೈಲಿ. ಸೃಜನ್ ಮಾತು ಕೇಳಿ ವೀಕ್ಷಕರು ನಕ್ಕರೆ, ಬಾಲಾಜಿ ತಮ್ಮ ಜೋಕಿಗೆ ತಾವೇ ನಗುತ್ತಾರೆ. ಹಾಗಾಗಿ ಅವರ ಯಾವ ಜೋಕು ಕೂಡಾ ಫ್ಲಾಪ್ ಆಗುವುದಿಲ್ಲ! ಹಾಲಿವುಡ್ ಚಿತ್ರೋದ್ಯಮದಲ್ಲಿ ಎರಡು ಪದಗಳು ಆಗಾಗ ಬಳಕೆಯಾಗುತ್ತವೆ – Actor and performer. ಸಿಲ್ವೆಸ್ಟರ್ ಸ್ಟೆಲೋನ್, ಅರ್ನಾಲ್ಡ್ ಶ್ವಾವೆಜ್ನಗರ್ ಮೊದಲಾದವರು performers ಕೆಟಗರಿಗೆ ಸೇರುತ್ತಾರೆ. ಮರ್ಲನ್ ಬ್ರಾಂಡೋ, ರಾಬರ್ಟ್ ಡಿನೇರೋ ಥರದವರು actor ಗಳು. ನಮ್ಮಲ್ಲೇ ಉದಾಹರಣೆಗಳನ್ನು ಹುಡುಕುವುದಾದರೆ ಮೋಹನ್ ಲಾಲ್ ಒಬ್ಬ actor, ಸಲ್ನಾನ್ ಖಾನ್ ಒಬ್ಬ performer. ಇದು ಕಲಾವಿದ ಮತ್ತು ಸ್ಟಾರ್ ಗಿರುವ ವ್ಯತ್ಯಾಸದಂತೆ. ಕಲಾವಿದ ಯಾವತ್ತೂ ಬೋರಾಗುವುದಿಲ್ಲ, ಆದರೆ perform ಮಾಡುವವನ ಆಯಸ್ಸು ಕ್ಷಣಿಕ. ಆತ ತಕ್ಷಣಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಾನೆ, ಅದು ಆತನ ಶಕ್ತಿ ಮತ್ತು ಮಿತಿ. ಸೃಜನ್ ಅವರಲ್ಲಿ ಕಲಾವಿದನ ಲಕ್ಷಣಗಳಿವೆ, ಬಾಲಾಜಿ ಅವರಲ್ಲಿ performer ಗುಣಗಳಿವೆ.
ಹೀಗೆ ವಿಭಿನ್ನ ಕ್ಲಾಸ್ ಗಳಿಂದ ಬಂದ ಈ ಇಬ್ಬರು ಜನಪ್ರಿಯ ಆಂಕರ್ ಗಳು ಬಿಗ್ ಬಾಸ್ ಕಾರ್ಯಕ್ರಮದ ಅಂತಿಮಹಂತದಲ್ಲಿ ಮುಖಾಮುಖಿಯಾಗುತ್ತಾರೆ ಅನ್ನುವುದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಮಿಕ್ಕ ಅಭ್ಯರ್ಥಿಗಳ ದುರ್ಬಲ ಬಯೋಡೇಟಾ ಕೂಡಾ ಇವರ ನೆರವಿಗೆ ಬಂದಿದ್ದು ಸುಳ್ಳಲ್ಲ. ಇವರಿಬ್ಬರ ಹೊರತಾಗಿ ಸಿಲಬ್ರೆಟಿ ಅನ್ನುವ ಪದಕ್ಕೆ ಅರ್ಹರಾದವರು ಅಲ್ಲಿ ಯಾರೂ ಇರಲಿಲ್ಲ. ಕನ್ನಡ ಮಾತಾಡುವವರಿಗೂ ಬರ ಇತ್ತು. ಬಹುಶಃ ಅನುಪಮಾ, ಹರ್ಷಿತಾ ಮತ್ತು ಸೃಜನ್ ಹೊರತಾಗಿ ಮಿಕ್ಕವರೆಲ್ಲರೂ ಕನ್ನಡವನ್ನು ಕೊಲ್ಲುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟರು (ಗುರುಪ್ರಸಾದ್ ಅವರೇನಿದ್ದರೂ ಅತಿಥಿ ಪಾತ್ರ). ಹಾಗಿದ್ದರೂ ಅಪ್ಪಟ ಕನ್ನಡಿಗನಿಗೆ ಪ್ರಶಸ್ತಿ ಸಿಗಲಿಲ್ಲ.
ಹಾಗಿದ್ದರೆ ಸೃಜನ್ ಅವರಿಗೆ ಕೈಕೊಟ್ಟ ಅಂಶಗಳಾದರೂ ಯಾವುದು? ಅವರು ಬಾಲಾಜಿ ಥರ ಹುಚ್ಚುಚ್ಚಾಗಿ ಆಡದೇ ಇದ್ದಿದ್ದೇ ತಪ್ಪಾಯಿತಾ? ಅಷ್ಟಕ್ಕೂ ಈ ಟಾಸ್ಕ್ ಅನ್ನುವುದು ಒಬ್ಬ ಅಭ್ಯರ್ಥಿಯ ಗೆಲುವಲ್ಲಿ ಅಷ್ಟೊಂದು ಮುಖ್ಯ ಪಾತ್ರ ವಹಿಸುತ್ತದೆಯಾ? ಟಾಸ್ಕ್ ಏನೇ ಇರಲಿ, ವೀಕ್ಷಕರು ವೋಟು ಹಾಕುವುದು ತಮ್ಮ ನೆಚ್ಚಿನ ವ್ಯಕ್ತಿಗೆ ತಾನೆ? ಹಾಗಿದ್ದರೆ ಬಾಲಾಜಿ ಅವರು ಸೃಜನ್ ಅವರಿಗಿಂತ ಹೆಚ್ಚು ಜನಪ್ರಿಯರಾ? ಅಥವಾ ಸೃಜನ್ ಅವರನ್ನು ಮೆಚ್ಚಿಕೊಳ್ಳುವ ವರ್ಗ ಬಿಗ್ ಬಾಸ್ ಕಾರ್ಯಕ್ರಮವನ್ನೇ ನೋಡಲಿಲ್ಲವೇ? ಇದ್ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಈ ಶೋ ನಲ್ಲಿ ಗೆದ್ದವರ ಭವಿಷ್ಯ ಬದಲಾಗುವುದೂ ಇಲ್ಲ. ವಿಜಯ್ ರಾಘವೇಂದ್ರ ಮೊದಲು ಎಲ್ಲಿದ್ದರೋ ಈಗಲೂ ಅಲ್ಲೇ ಇದ್ದಾರೆ, ಅರುಣ್ ಸಾಗರ್ ಅವರೇನು ಮಾಡುತ್ತಿದ್ದಾರೆ ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹಾಗಾಗಿ ಅಕುಲ್ ಹೀರೋ ಆಗಬಹುದು ಎಂದು ಅಂದುಕೊಳ್ಳುವುದು ತಪ್ಪಾಗುತ್ತದೆ.
ಬಿಗ್ ಬಾಸ್ ಕಾರ್ಯಕ್ರಮದ ಕಾನ್ಸೆಪ್ಟಿನ ವೈಶಿಷ್ಟ್ಯ ಮತ್ತು ಅದು ಹೊಂದಿರುವ ಅಪಾರ ಸಾಧ್ಯತೆಗಳ ಬಗ್ಗೆ ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದೆ. ಒಬ್ಬ ವ್ಯಕ್ತಿಯನ್ನು ಒಂದೇ ಸ್ಥಳದಲ್ಲಿ ಮೂರು ತಿಂಗಳ ಕಾಲ ಕೂಡಿ ಹಾಕಿ, ಆತನಿಗೆ ಊಟ ತಿಂಡಿ ಹೊರತಾಗಿ ಯಾವ ಸೌಲಭ್ಯವನ್ನೂ ನೀಡದೇ ಇದ್ದಾಗ ಆತನ ವರ್ತನೆಯಲ್ಲಿ ಕಾಣಿಸುವ ಏರುಪೇರುಗಳು ಮನಃಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಹೇಗೆ ಅಧ್ಯಯನಕ್ಕೊಂದು ಒಳ್ಳೆಯ ವಸ್ತುವಾಗಬಹುದು ಅನ್ನುವುದನ್ನೂ ಹೇಳಿದ್ದೆ. ಆದರೆ ಬಿಗ್ ಬಾಸ್ ಎರಡನೇ ಆವೃತ್ತಿಯಲ್ಲಿ ಇಂಥಾ ಯಾವುದೇ ಪ್ರಯೋಗಗಳೂ ಕಾಣಿಸಲಿಲ್ಲ. ಒಣಜಗಳ ಮತ್ತು ಗಾಸಿಪ್ಪನ್ನೇ ಕೇಂದ್ರವಾಗಿಸಿಕೊಂಡು ಕಾರ್ಯಕ್ರಮ ನಡೆಯಿತು. ದೊಡ್ಡವರನ್ನು ಸ್ಕೂಲ್ ಮಕ್ಕಳ ಥರ ತೋರಿಸುವ ಹಾಸ್ಯಾಸ್ಪದ ಎಪಿಸೋಡುಗಳೂ ಬಂದುಹೋದವು. ಅಭ್ಯರ್ಥಿಗಳು ಜೋಕರುಗಳಾದರು, ವೀಕ್ಷಕರು ಮೂರ್ಖರಾದರು. ಚಿತ್ರಕತೆಯಲ್ಲಾಗುವ ಎಡವಟ್ಟುಗಳಿಂದ ಒಂದು ಒಳ್ಳೆಯ ಕತೆ, ಕೆಟ್ಟ ಸಿನಿಮಾ ಆಗಿ ರೂಪುಗೊಳ್ಳುವುದನ್ನು ನಾವು ನೋಡುತ್ತಿದ್ದೇವೆ. ಬಿಗ್ ಬಾಸ್ ನಲ್ಲಿ ಆಗಿದ್ದು ಇದೇ. ಸಿಲೆಬ್ರೆಟಿಗಳು ಒಂದು ಕಾರ್ಯಕ್ರಮವನ್ನು ಚಂದಗಾಣಿಸುವಲ್ಲಿ ನೆರವಾಗುತ್ತಾರೆ ನಿಜ, ಆದರೆ ಕಾರ್ಯಕ್ರಮವೇ ಸತ್ವಹೀನವಾದಾಗ ಅವರು ಶೋಕೇಸಿನಲ್ಲಿಟ್ಟಿರುವ ಗೊಂಬೆಗಳಂತೆ ಕಾಣಿಸುತ್ತಾರೆ.
ಗೆದ್ದವರಿಗೆ ಬಂಗಲೆ ಸಿಗುತ್ತದೆ, ಸೋತವರಿಗೆ ಸಾಂತ್ವನ ಸಿಗುತ್ತದೆ.
Also See
Uma Column 53 - ಪರದೇಸಿ ನಾನಾದೆನೂ ನಂಜುಂಡ....
Uma Column 52 - ಬಾ ಬಾರೋ ಬಾರೋ ರಣಧೀರ
Uma Column 51 - ಕದಿಯೋದೇ ನಮ್ಮ ಬಿಸಿನೆಸ್ಸು...
Uma Column 50 - ನಟಿಯರೂ ಸೇಲೇಬಲ್!
Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ
Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?
Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..
Uma Column 45 - ಈ ಸಂಭಾವನೆ.....
Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?
Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್
Chitraloka 15th Year Celebration Images - View
Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್
Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ
Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ
Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು
Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ
Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ
Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...
Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ
Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ
Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..
Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...
Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...
Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ
Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?
Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು
Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!
Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ
Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು
Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!
Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ
Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ
Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್
Uma Column 20 -...ವಿಷ್ಣೂ ಎನಬಾರದೇ....
Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
Udaya Marakini Column In Chitraloka
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.