ಮೊನ್ನೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಲು ನೋಡುತ್ತಿದ್ದೆ. ಯಾವುದೋ ಹಳೇ ಪಂದ್ಯವೊಂದರ ಬಗ್ಗೆ ವಿಶ್ಲೇಷಣೆ ನಡೆಯುತ್ತಿತ್ತು. ಅಲ್ಲಿ ಅತಿಥಿಗಳಾಗಿ ಕುಳಿತಿದ್ದವರು ಹರ್ ಭಜನ್ ಸಿಂಗ್ ಮತ್ತು ಸೈಮಂಡ್ಸ್. ಒಂದು ಕಾಲದಲ್ಲಿ ಇವರಿಬ್ಬರೂ ಚಡ್ಡಿದೋಸ್ತುಗಳಾಗಿದ್ದಿರಬಹುದಾ ಎಂಬ ಅನುಮಾನ ಹುಟ್ಟಿಸುವಷ್ಟು ಅತ್ಮೀಯವಾಗಿ ಮಾತಾಡುತ್ತಿದ್ದರು. ಅದನ್ನು ನೋಡಿ ಆಶ್ಚರ್ಯವಾಯಿತು. ಅರೆ, ಇವರಿಬ್ಬರೇ ಅಲ್ವಾ ಕೆಲವು ವರ್ಷಗಳ ಹಿಂದೆ ಮೈದಾನದಲ್ಲಿ ಕೈಕೈ ಮಿಲಾಯಿಸುವ ಹಂತದ ತನಕ ಹೋಗಿದ್ದವರು? ಹರ್ ಭಜನ್ ಸಿಂಗ್ ತನ್ನನ್ನು ‘ಮಂಕಿ’ ಎಂದು ಕರೆದ ಎಂದು ಸೈಮಂಡ್ಸ್ ಗೋಳಾಡಿದ್ದ, ಐಸಿಸಿಐಗೆ ದೂರು ಕೂಡಾ ಕೊಟ್ಟಿದ್ದ ಅನ್ನುವ ನೆನಪು. ಆದರೆ ತಾನು ‘ಮಂಕಿ’ ಅನ್ನಲಿಲ್ಲ, ‘ತೇರಿ ಮಾಕಿ’ ಎಂದು ಹೇಳಿದ್ದೆ ಅನ್ನುವುದು ಭಜ್ಜಿ ನೀಡಿದ್ದ ಸಮಜಾಯಿಷಿ. ಮಾಕಿ ಅನ್ನೋದು ಮಂಕಿಗಿಂತಲೂ ಕೆಟ್ಟ ಬೈಗಳಪದ ಅನ್ನುವುದು ಸೈಮೆಂಡ್ಸ್ ಗೆ ಗೊತ್ತಿರಲಿಲ್ಲ ಅನಿಸುತ್ತದೆ. ಒಟ್ಟಲ್ಲಿ ಆ ಪ್ರಕರಣ ದಿನಕಳೆದಂತೆ ಕಾವು ಕಳೆದುಕೊಂಡಿತು. ಆಮೇಲೆ ಐಪಿಎಲ್ ನೆಪದಲ್ಲಿ ಸೈಮೆಂಡ್ಸ್ ಇಲ್ಲಿಗೇ ಬಂದು ಆಡಿದ್ದೂ ಆಯಿತು. ಈಗ ನೋಡಿದರೆ ಇಬ್ಬರೂ ಟೀವಿಯಲ್ಲಿ ಕುಳಿತು ನಗುನಗುತ್ತಾ ಹರಟೆ ಹೊಡೆಯುತ್ತಿದ್ದಾರೆ.
ಅಷ್ಟೇಕೆ, ಮೊನ್ನೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪರಸ್ಪರ ಗುರಾಯಿಸಿಕೊಂಡಿದ್ದ ಕೊಹ್ಲಿ ಮತ್ತು ಮೈಕೆಲ್ ಸ್ಪಾರ್ಕ್ ಐಪಿಎಲ್ ನಲ್ಲಿ ಒಂದೇ ತಂಡದಲ್ಲಿ ಆಡುತ್ತಿದ್ದಾರೆ. ಈ ರೀತಿಯ ಜಗಳಗಳು, ಸಂಧಾನಗಳು ಕ್ರಿಕೆಟ್ಟಲ್ಲಿ ಮಾಮೂಲು. ಕೊನೆಗೆ ಎಲ್ಲರಿಗೂ ಮುಖ್ಯವಾಗುವುದು ಆಟದ ಮಜಾ ಮತ್ತು ಅದರಿಂದ ಸಿಗುವ ಸಂಭಾವನೆ. ಕೆಲವೊಮ್ಮೆ ಆಟಕ್ಕೆ ಕಳೆಗಟ್ಟಲೆಂದೇ ಆಟಗಾರರು ಸ್ಲೆಡ್ಜಿಂಗ್ ಗೆ ಮೊರೆ ಹೋಗುವುದೂ ಉಂಟು. ನೋಡುವವರಿಗೆ ಇದೂ ಒಂದು ಮನರಂಜನೆ. ಆದರೆ ಆಯಾ ಆಟಗಾರರ ಅಭಿಮಾನಿಗಳಿಗೆ ಇಂಥಾದ್ದೆಲ್ಲಾ ವಿಪರೀತ ಕೋಪ ತರಿಸುತ್ತದೆ. ‘ನಮ್ ಗುರೂಗೆ ಅವನು ಹಾಗಂದ್ನಾ, ಅವನ ಮನೆ ಎಕ್ಕುಟ್ಟೋಗ’ ಎಂದು ಬೈಯ್ಯುತ್ತಾರೆ. ಆದರೆ ಒಂದು ಫೈನ್ ಡೇ, ಅವರಿಬ್ಬರೂ ಕೈಕುಲುಕುವ ದೃಶ್ಯ ಕಂಡಾಗ ಅದೇ ಅಭಿಮಾನಿಗಳು ಪೆಚ್ಚಾಗುತ್ತಾರೆ. ನಾವಿಷ್ಟು ದಿನ ಬೈದಾಡಿದ್ದೆಲ್ಲಾ ವ್ಯರ್ಥವಾಯಿತಲ್ಲ ಎಂದು ತಲೆ ಚಚ್ಚಿಕೊಳ್ಳುತ್ತಾರೆ.
‘ರಣ ವಿಕ್ರಮ’ ಚಿತ್ರದ ಪ್ರದರ್ಶನ ಸಂದರ್ಭದಲ್ಲಿ ‘ರನ್ನ’ ಚಿತ್ರದ ಟ್ರೇಲರ್ ತೋರಿಸಿದರು ಅನ್ನುವ ಕಾರಣಕ್ಕೆ ಪುನೀತ್ ಅಭಿಮಾನಿಗಳು ಥಿಯೇಟರಲ್ಲಿ ದಾಂಧಲೆ ಮಾಡಿದ್ದನ್ನು ಓದಿದಾಗ ಇವೆಲ್ಲ ನೆನಪಾಯಿತು. ಇಂಥಾ ರೋಷಾವೇಷದಿಂದ ಯಾರಿಗೆ ಲಾಭ? ಪುನೀತ್ ಅವರೇನು ಸಂತೋಷ ಪಡುತ್ತಾರಾ? ಆ ಕಡೆ ಸುದೀಪ್ ರೊಚ್ಚಿಗೆದ್ದು ತನ್ನ ಅಭಿಮಾನಿಗಳಿಗೂ ಹಾಗೇ ಮಾಡಿ ಎಂದು ಕರೆ ಕೊಡುತ್ತಾರಾ? ಅಂಥಾ ಸೀನ್ ಏನೂ ಆಗುವುದಿಲ್ಲ. ಸ್ಟಾರುಗಳು ಕೆಲವೊಮ್ಮೆ ತುಂಬಾ ಡಿಪ್ಲೋಮ್ಯಾಟಿಕ್ ಆಗಿ ವರ್ತಿಸುತ್ತಾರೆ. ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಅನ್ನೋ ಥರದ ಹೇಳಿಕೆಯನ್ನು ಟ್ವೀಟರ್ ನಲ್ಲೋ, ಫೇಸ್ ಬುಕ್ಕಲ್ಲೋ ಒಗಾಯಿಸಿ ಶೂಟಿಂಗಿಗೆ ನಡೆದು ಬಿಡುತ್ತಾರೆ. ಎಂಬಲ್ಲಿಗೆ ಒಂದು ತಾಸು ನಡೆದ ರಕ್ತಪಾತ, ಸಾರ್ವಜನಿಕ ಆಸ್ತಿಗಾದ ಹಾನಿ, ಎಲ್ಲವೂ ವೇಸ್ಟ್ ಆಗಿಹೋಗುತ್ತದೆ.
ಅಭಿಮಾನಿಗಳು ಯಾಕೆ ಹೀಗಾಡುತ್ತಾರೆ, ಇಷ್ಟೊಂದು ಆಕ್ರಮಣಕಾರಿ ಪ್ರವೃತ್ತಿಯನ್ನು ಯಾಕೆ ತೋರುತ್ತಾರೆ? ಈ ಪ್ರಶ್ನೆ ಅನಾದಿಕಾಲದಿಂದಲೂ ನನ್ನನ್ನು ಭಾದಿಸುತ್ತಿದೆ. ಅಭಿಮಾನ ಅಂದರೆ ಪ್ರೀತಿ ಅಲ್ವಾ. ಅಂದಮೇಲೆ ಅಲ್ಲಿ ದ್ವೇಷ ಯಾಕೆ ನುಸುಳುತ್ತದೆ? ನಾನು ತಿರುಪತಿ ತಿಮ್ಮಪ್ಪನ ಭಕ್ತ ಅನ್ನುವ ಕಾರಣಕ್ಕೆ ಅಯ್ಯಪ್ಪ ಸ್ವಾಮಿಯ ಬಗ್ಗೆ ಕಿಡಿ ಕಾರುವುದು ನ್ಯಾಯಾನಾ? ಅಷ್ಟಕ್ಕೂ ಪುನೀತ್ ಮತ್ತು ಸುದೀಪ್ ನಡುವೆ ವೈಮನಸ್ಸು ಇದೆ ಎಂದು ಹೇಳಿದವರು ಯಾರು? ವೃತ್ತಿಪರ ಪೈಪೋಟಿಯನ್ನೇ ದ್ವೇಷ ಎಂದು ಕರೆಯುವುದಕ್ಕಾಗುತ್ತಾ? ಈ ಮಾತಿಗೆ ಇನ್ನೂ ಒಂದು ಒಳ್ಳೇ ಉದಾಹರಣೆಯೆಂದರೆ ನಮ್ಮ ರಾಜಕಾರಣಿಗಳು. ವಿಧಾನಸೌಧದ ಚಾವಡಿಯಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡುವ, ಕೆಸರು ಎರಚುವ ಈ ಮಂದಿ ಹೊರಗೆ ಬಂದಾಗ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಾರೆ. ಯಾವುದೋ ಅಕ್ರಮ ವ್ಯವಹಾರದಲ್ಲಿ ಸಹಭಾಗಿಗಳು ಕೂಡಾ ಆಗಿರುತ್ತಾರೆ.
ಇವೆಲ್ಲವೂ ಅಭಿಮಾನಿಗಳಿಗೆ ಯಾಕೆ ಅರ್ಥವಾಗುವುದಿಲ್ಲ ಅಂದರೆ –
• ಅಭಿಮಾನ ಅನ್ನುವುದು ಬರೀ ಮನಸ್ಸಿಗಷ್ಟೇ ಸಂಬಂಧಪಟ್ಟಿದ್ದಲ್ಲ, ವಯಸ್ಸಿಗೂ ಸಂಬಂಧಪಟ್ಟಿದ್ದು, ಆರ್ಥಿಕ ಮತ್ತು ಮಾನಸಿಕ ಸ್ಥಿತಿಗೂ ಸಂಬಂಧಿಸಿದ್ದು. ಹರಯದ ಉತ್ಸಾಹ, ಆವೇಗ, ಉನ್ಮಾದ ಎಲ್ಲವೂ ಸೇರಿಕೊಂಡು ಅವರಲ್ಲಿ ವಿವೇಚನಾ ಶಕ್ತಿ ಕಡಿಮೆಯಾಗುತ್ತದೆ.
• ಒಬ್ಬ ವ್ಯಕ್ತಿಯನ್ನು ಕೇವಲ ನಟನನ್ನಾಗಿ ನೋಡದೆ, ದೇವರೆಂದು ಆರಾಧಿಸುವ ಮಟ್ಟಕ್ಕೆ ತಲುಪಿದಾಗ ಆತ ಮಾಡಿದ್ದೆಲ್ಲವೂ ಸರಿ ಎಂಬ ಭಾವನೆ ಮೊಳಕೆಯೊಡೆಯುತ್ತದೆ. ದೇವರು ತಪ್ಪು ಮಾಡುವುದಕ್ಕೆ ಸಾಧ್ಯಾನಾ!
ಅಷ್ಟಕ್ಕೂ ಅಭಿಮಾನ ಅನ್ನುವುದು ಕೆಟ್ಟ ಪದವೇನಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ದೋಷವಿದೆ. ನನಗೆ ಕಮಲಾಹಾಸನ್ ಅಭಿನಯ ಇಷ್ಟ ಅಂದಾಕ್ಷಣ ಆತ ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಆತನನ್ನು ಮೆಚ್ಚಿಕೊಳ್ಳುತ್ತಲೇ ಟೀಕಿಸುವುದಕ್ಕೂ ಸಾಧ್ಯವಾದರೆ ನಾನು ಪ್ರಬುದ್ದನಾಗಿದ್ದೇನೆ ಎಂದೇ ಅರ್ಥ.
ನಟನ ಕಟೌಟ್ ಗೆ ಹಾಲು ಸುರಿಯುವುದು, ಆತನ ಹುಟ್ಟುಹಬ್ಬದ ದಿನದಂದು ಕೇಕ್ ಕಟ್ ಮಾಡಿ ಸಂಭ್ರಮಿಸುವುದು, ರಕ್ತದಾನ ಮಾಡುವುದು, ಇವಷ್ಟೇ ಅಭಿಮಾನದ ಸಂಕೇತಗಳಲ್ಲ. ಅದರಾಚೆಗೂ ಯೋಚನೆ ಮಾಡಬಹುದು. ಅಭಿಮಾನಿ ಸಂಘದ ಮೂಲಕ ಒಂದಿಷ್ಟು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಡಿಸಬಹುದು, ಒಂದು ಕುಗ್ರಾಮವನ್ನು ಜೀರ್ಣೋದ್ಧಾರ ಮಾಡಬಹುದು, ವೃದ್ಧಾಶ್ರಮ ಕಟ್ಟಬಹುದು, ತಮ್ಮೂರಿನ ರಸ್ತೆಗಳನ್ನು ರಿಪೇರಿ ಮಾಡಬಹುದು. ಒಬ್ಬ ನಟ ತನ್ನ ಅಭಿಮಾನಿಗಳನ್ನು ಇಂಥಾ ಜೀವನ್ಮುಖಿ ಹಾದಿಗಳತ್ತ ಅವರನ್ನು ಹೊರಳುವಂತೆ ಮಾಡಬಹುದು. ಇವೆಲ್ಲವೂ ಒಬ್ಬ ನಟ ತನ್ನ ಅಭಿಮಾನಿಗಳನ್ನು ಯಾವ ರೀತಿಯಲ್ಲಿ ನೋಡುತ್ತಿದ್ದಾನೆ ಅನ್ನುವುದರ ಮೇಲೆ ಅವಲಂಬಿತವಾಗಿದೆ. ತನ್ನ ಚಿತ್ರಕ್ಕೆ ಓಪನಿಂಗ್ ತಂದುಕೊಡುವುದಕ್ಕೆ ಅಭಿಮಾನಿಗಳು ಸಹಾಯವಾಗುತ್ತಾರೆ, ತನ್ನ ವಿರುದ್ಧ ಯಾರಾದರೂ ಮಾತಾಡಿದಾಗ ಅವರನ್ನು ಬಾಯಿಮುಚ್ಚಿಸುವುದಕ್ಕೆ ಅಭಿಮಾನಿಗಳನ್ನು ಬಳಸಿಕೊಳ್ಳಬಹುದು ಎಂಬುದಷ್ಟೇ ಆತನ ಯೋಚನೆಯಾಗಿದ್ದರೆ ಕಷ್ಟ.
ಅಭಿಮಾನಿಗಳಿಗೆ ಅರ್ಥವಾಗದ ಕೆಲವು ಸಂಗತಿಗಳಿವೆ. ನಟನಿಗೂ ಒಂದು ಖಾಸಗಿ ಬದುಕಿದೆ. ಅದರೊಳಗೆ ಆತ ಯಾವ ಅಭಿಮಾನಿಯನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೊಂದು ಉದಾಹರಣೆ ನೀಡುತ್ತೇನೆ. ಈಗಲೂ ಚಾಲ್ತಿಯಲ್ಲಿರುವ ನಟನಿಗೊಬ್ಬ ಸಂಭಾವಿತ ಅಭಿಮಾನಿಯಿದ್ದ, ಆತ ಪದವೀಧರನಾಗಿದ್ದ. ಇತರೇ ಅಭಿಮಾನಿಗಳ ಥರ ಜೈಕಾರ ಮತ್ತು ಕ್ಷೀರಾಭಿಷೇಕಕ್ಕಷ್ಟೇ ಆತನ ಅಭಿಮಾನ ಸೀಮಿತವಾಗಿರಲಿಲ್ಲ. ತನ್ನ ಮೆಚ್ಚಿನ ನಟ ಆಯ್ಕೆ ಮಾಡುವ ಚಿತ್ರಗಳು ಹೇಗಿರಬೇಕು ಅನ್ನುವ ಬಗ್ಗೆ ಆತನಿಗೊಂದು ಸ್ಪಷ್ಟ ಕಲ್ಪನೆಯಿತ್ತು, ಆ ಬಗ್ಗೆ ಆತ ಸಲಹೆಗಳನ್ನೂ ನೀಡುತ್ತಿದ್ದ. ಆದರೆ ಮುಂದೊಂದು ದಿನ ಏನಾಯಿತು ಅಂದರೆ ಆತ ಎಲ್ಲಾ ವಿಷಯದಲ್ಲೂ ಮೂಗು ತೂರಿಸುತ್ತಿದ್ದಾನೆ ಎಂದು ಆ ನಟನಿಗೆ ಅನಿಸೋದಕ್ಕೆ ಶುರುವಾಯಿತು. ಅಲ್ಲಿಗೆ ಅವರಿಬ್ಬರ ನಡುವೆ ಬ್ರೇಕಪ್ ಆಯಿತು.
ಅಭಿಮಾನ ಅನ್ನುವುದು ನಟನೊಬ್ಬನ ಬೆಳವಣಿಗೆಗೆ ತಡೆಗೋಡೆಯೂ ಆಗಬಲ್ಲದು. ಈ ಮಾತಿಗೊಂದು ದೃಷ್ಠಾಂತ ನೀಡುತ್ತೇನೆ, ಕೇಳಿ. ವಿಷ್ಣುವರ್ಧನ್ ಅವರು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರಿಗೆ ಸಾಹಸಸಿಂಹ ಬಿರುದು ಸಂದಾಯವಾಯಿತು. ಎಟಿ. ರಘು, ತಿಪಟೂರು ರಘು, ಜೋಸೈಮನ್ ಮುಂತಾದವರ ಸಿನಿಮಾಗಳಿಂದಾದ ಕಿತಾಪತಿಯದು. ವಿಷ್ಣು ಎಡಗೈಯಲ್ಲಿ ಖಳರಿಗೆ ಬಾರಿಸುವ ದೃಶ್ಯ ಅವರ ಅಭಿಮಾನಿಗಳಿಗೆ ಹಬ್ಬವಾಗಿತ್ತು. ಆ ಏಟಿಗೆ ಇನ್ನಷ್ಚು ಖದರ್ ಬರಲಿ ಎಂಬಂತೆಯೋ ಏನೋ ವಿಷ್ಣು ಎಡಗೈಗೆ ಕಡಗ ಧರಿಸುವುದಕ್ಕೆ ಶುರು ಮಾಡಿದರು. ಅವರು ಭಾವನಾತ್ಮಕ ಚಿತ್ರಗಳಲ್ಲಿ ನಟಿಸುವಾಗಲೂ ಕಡಗ ಕಳಚುತ್ತಿರಲಿಲ್ಲ, ಇದು ಅಭಾಸವಾದರೂ ಅಭಿಮಾನಿಗಳಿಗೆ ಬೇಜಾರಾಗುತ್ತೆ ಎಂದೇ ಅವರು ಹೇಳುತ್ತಿದ್ದರು. ಅದೇ ಕಾರಣವನ್ನಿಟ್ಟುಕೊಂಡು ಹಲವು ಪ್ರಬುದ್ಧ ಪಾತ್ರಗಳಿಂದ ಅವರು ದೂರವೇ ಉಳಿದರು. ಅವರು ಮನಸ್ಸು ಮಾಡಿದ್ದರೆ ಅವರ ಅಷ್ಟುದ್ದ ವೃತ್ತಿಬದುಕಲ್ಲಿ ಲಾಲಿ, ಸುಪ್ರಭಾತದಂಥ ಹತ್ತಾರು ಸಿನಿಮಾಗಳು ಬರುತ್ತಿದ್ದವು. ಒಬ್ಬ ನಟ, ತನ್ನ ಅಭಿಮಾನಿಗಳ ಪ್ರೀತ್ಯರ್ಥಕ್ಕೋಸ್ಕರ ತನಗೆ ತಾನೇ ಮಿತಿಗಳನ್ನು ಹೇರಿಕೊಂಡಾಗ ಇಂಥಾದ್ದೆಲ್ಲಾ ಅನಾಹುತವಾಗುತ್ತದೆ.
ಮೊನ್ನೆ ಸಲ್ಮಾನ್ ಖಾನ್ ಗೆ ಜಾಮೀನು ದೊರಕಿದಾಗ ಆತನ ಅಭಿಮಾನಿಗಳು ಸಂಭ್ರಮಿಸುವ ದೃಶ್ಯವನ್ನು ನೋಡಿದೆ. ಆ ಗುಂಪಿನಲ್ಲಿ ಕೊಳಚೆಗೇರಿಯ ಹುಡುಗರೂ ಇದ್ದರು. ಹಾಗೆ ಕುಣಿಯುವ ಹೊತ್ತಲ್ಲಿ, ಪಟಾಕಿ ಸಿಡಿಸುವ ಹೊತ್ತಲ್ಲಿ ಅವರಿಗೆ ತಮ್ಮಂತೆಯೇ ಬಡವನಾಗಿದ್ದ, ನಿಷ್ಪಾಪಿಯಾಗಿದ್ದ ಒಬ್ಬಾತ ಸಲ್ಮಾನ್ ಖಾನ್ ನ ಕಾರಿನ ಚಕ್ರದ ಕೆಳಗೆ ಸಿಲುಕಿ ಸತ್ತುಹೋಗಿದ್ದು ಯಾಕೆ ನೆನಪಾಗಲಿಲ್ಲ? ಜನಪ್ರಿಯತೆ ಅನ್ನುವುದು ನಾವು ಎಸಗಿದ ಎಲ್ಲಾ ಕ್ರೌರ್ಯಗಳನ್ನು ಅಳಿಸಿಹಾಕುತ್ತದೆಯಾ? ಸಲ್ಮಾನ್ ಖಾನ್ ಬಡವರಿಗೆ ಮಾಡಿದ ಉಪಕಾರಗಳ ಪಟ್ಟಿ ನೀಡುವ ಜನರಿಗೆ ಇವೆಲ್ಲವೂ ಆತ ತಾನು ಮಾಡಿದ ಅಪರಾಧಗಳಿಗೆ ಡಿಸ್ಕೌಂಟ್ ಗಳಿಸುವುದಕ್ಕಾಗಿ ಮಾಡುತ್ತಿರುವ ಗಿಮಿಕ್ಕುಗಳು ಎಂದು ಯಾಕೆ ಅನಿಸುತ್ತಿಲ್ಲ? ಹಾಜಿ ಮಸ್ತಾನ್ ಎಂಬ ಪುರಾತನ ಡಾನ್ ಕೂಡಾ ತನ್ನ ಕೊನೆಯ ದಿನಗಳಲ್ಲಿ ಬಡವರ ಪಾಲಿಗೆ ದೇವರಾಗಿದ್ದ. ಅವನು ಅನುಸರಿಸಿದ್ದು ತುಂಬಾ ಸಿಂಪಲ್ ಟೆಕ್ನಿಕ್. ತನ್ನ ಭೂಗತ ಕೃತ್ಯಗಳಿಂದ ಸಂಪಾದಿಸಿದ ದುಡ್ಡಲ್ಲಿ ಒಂದು ಭಾಗವನ್ನು ಬಡವರಿಗೋಸ್ಕರ ಚೆಲ್ಲಿದ್ದು. ಸಲ್ಮಾನ್ ಮಾಡಿದ್ದೂ ಅದನ್ನೇ. ಮೊದಲು ಕೊಲೆ ಮಾಡು, ಆಮೇಲೆ ಟಾಕ್ಸ್ ಕಟ್ಟು.
ಅಂದಹಾಗೆ ಕನ್ನಡದ ಚಿತ್ರರಂಗ ಕಂಡ ಅದ್ಭುತ ನಟ ಅನಂತನಾಗ್ ಅವರಿಗಾಗಲಿ, ಹಿಂದಿಯ ಅತ್ಯಂತ ಪ್ರಬುದ್ಧ ನಟ ನಸಿರುದ್ದೀನ್ ಶಾ ಅವರಿಗಾಗಲಿ ಯಾಕೆ ಅಭಿಮಾನಿ ಸಂಘಗಳಿಲ್ಲ? ಹಾಗಂದ ಮಾತ್ರಕ್ಕೆ ಅವರಿಗೆ ಅಭಿಮಾನಿಗಳೇ ಇಲ್ಲ ಅನ್ನುವುದಕ್ಕಾಗುತ್ತಾ? ಖಂಡಿತಾ ಇದ್ದಾರೆ, ಅವರ್ಯಾರೂ ಬೀದಿಗೆ ಬಂದು ನಾವು ನಿಮ್ಮ ಅಭಿಮಾನಿ ಸ್ವಾಮಿ ಎಂದು ಕಿರುಚುವುದಿಲ್ಲ. ಅವರು ನಟಿಸಿದ ಸಿನಿಮಾಗಳನ್ನು ನೋಡುತ್ತಾರೆ, ಆನಂದಿಸುತ್ತಾರೆ ಅಷ್ಟೆ.
ಉತ್ತರ ಸರಳಃ ಪ್ರೀತಿಯಾಗಲಿ, ಅಭಿಮಾನವಾಗಲಿ ಅದು ತುಂಬಾ ಖಾಸಗಿಯಾದದ್ದು. ಅದನ್ನು ಸಾರ್ವಜನಿಕ ಪ್ರದರ್ಶನಕ್ಕಿಟ್ಟಾಗ ಅದರ ಬೆಲೆ ಕಡಿಮೆಯಾಗುತ್ತದೆ. ಹಾಗಾಗಿ ಅದನ್ನು ನಿಮ್ಮದೆಯೊಳಗೆ ಇಟ್ಟುಕೊಳ್ಳಿ, ಜೋಪಾನವಾಗಿ ಕಾಪಾಡಿ. ನಾಳೆ ನಿಮಗೆ ವಯಸ್ಸಾಗುತ್ತದೆ, ನಿಮ್ಮ ಅಭಿಮಾನಕ್ಕೂ ವಯಸ್ಸಾಗುತ್ತದೆ, ನಿಮ್ಮ ಬದುಕಿನ ಆದ್ಯತೆಗಳು ಬದಲಾಗುತ್ತವೆ, ನಿಮ್ಮ ಮೆಚ್ಚಿನ ನಟ ನಿವೃತ್ತನಾಗಿರುತ್ತಾನೆ. ಪಕ್ಕದಲ್ಲಿ ಮಗನನ್ನು ಕೂರಿಸಿಕೊಂಡು, ನಿಮ್ಮ ಮೆಚ್ಚಿನ ದೈವದ ಹಳೆಯ ಚಿತ್ರದ ಹಾಡೊಂದನ್ನು ಟೀವಿಯಲ್ಲಿ ನೋಡುತ್ತಾ ಹಳೆಯ ದಿನಗಳತ್ತ ಹೊರಳುವ ಸುಖವನ್ನು ಒಮ್ಮೆ ಕಲ್ಪಿಸಿಕೊಳ್ಳಿ.
ಅಂಥಾ ಅಭಿಮಾನಕ್ಕೆ ಸಾವಿರುವುದಿಲ್ಲ.
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.