ಪುಕ್ಸಟ್ಟೆ ಲೈಫು ಚಿತ್ರದ ಮೂಲಕ ಭರವಸೆ ಹುಟ್ಟಿಸಿರುವ ನಿರ್ದೇಶಕ ಅರವಿಂದ್ ಕುಪ್ಳೀಕರ್. ನಿರ್ಮಾಪಕರಾಗಿ ಯೋಗಿ ದ್ವಾರಕೀಶ್. ಹೀರೋ ಶರಣ್. ಹೀರೋಯಿನ್ ಅಮೃತಾ ಅಯ್ಯಂಗಾರ್. ಉತ್ತರ ಕರ್ನಾಟಕದ ಕಥೆ. ಬಾಗಲಕೋಟೆ ಸುತ್ತಮುತ್ತಲೇ ಇಡೀ ಕಥೆ ನಡೆಯುತ್ತದೆ. ಇದೇ ತಿಂಗಳು 22ರಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.
ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ನದಿಯೊಂದಕ್ಕೆ ಅಣೆಕಟ್ಟು ಕಟ್ಟುವಾಗ ಹಲವು ಹಳ್ಳಿಗಳು ಮುಳುಗಿ ಹೋಗುತ್ತವೆ. ಹೀಗೆ ಮುಳುಗಿದ ಹಳ್ಳಿಗರಿಗೆ ಹತ್ತಿರದ ನಗರದಲ್ಲಿ ವಸತಿ ಕಲ್ಪಿಸಲಾಗುತ್ತಿದೆ. ಇಂತಹ ಹಳ್ಳಿ ಜನ ನಗರಕ್ಕೆ ಬಂದಾಗ ಅವರಿಗೆ ಉಂಟಾಗುವ ಸಣ್ಣ ಸಂಕಟವೇ ಈ ಚಿತ್ರ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.
ಶರಣ್ ಜೊತೆ ಇದೇ ಮೊದಲ ಬಾರಿಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗುತ್ತಿದ್ದಾರೆ. ಡೈರೆಕ್ಟರ್ ನೋಡಿದರೆ ಸೀರಿಯಸ್ ಸಿನಿಮಾದವರು. ಹೀರೋ ನೋಡಿದರೆ ಕಾಮಿಡಿ ಕಿಂಗ್. ಹಾಗಾದರೆ ಇದು ಕಾಮಿಡಿ ಸಿನಿಮಾನಾ..? ಸೀರಿಯಸ್ ಸಿನಿಮಾನಾ..? ಗೊತ್ತಿಲ್ಲ. ಶರಣ್ ಅವರ ವೃತ್ತಿಜೀವನದಲ್ಲಿ ಇದು ಹೊಸ ರೀತಿಯ ಸಿನಿಮಾ ಎಂದು ಭರವಸೆ ಕೊಡ್ತಾರೆ ಅರವಿಂದ್.
ಶರಣ್-ಅಮೃತಾ ಜೊತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಹುಲಗಪ್ಪ ಕಟ್ಟಿಮನಿ, ರಾಜು ತಾಳಿಕೋಟೆ ಹೀಗೆ ಹಲವು ರಂಗ ಕಲಾವಿದರು ನಟಿಸಲಿದ್ದಾರೆ. ಜತೆಗೆ ಉತ್ತರ ಕರ್ನಾಟಕದ ರಂಗ ಪ್ರತಿಭೆಗಳಿಗೂ ಅರವಿಂದ್ ಅವಕಾಶ ನೀಡಲಿದ್ದಾರೆ.