ಇತ್ತೀಚೆಗೆ ಬಾಲಾಜಿ ಫೋಟೋ ಸ್ಟುಡಿಯೋಸ್ ಎಂಬ ಸಿನಿಮಾ ಬಂದಿತ್ತು. ಚಿತ್ರ ಬಾಕ್ಸಾಫೀಸಿನಲ್ಲಿ ಅದ್ಭುತ ಯಶಸ್ಸು ಕಾಣದೇ ಹೋದರೂ ಲಾಸ್ ಮಾಡಿರಲಿಲ್ಲ. ವಿಶೇಷವೆಂದರೆ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಚಿತ್ರದಲ್ಲಿ ನಟಿಸಿದ್ದವರೇ ಸಂಪತ್ ಜಯರಾಂ. ಮಾತು, ಖದರು, ಲುಕ್ಕು, ಹೈಟು ಎಲ್ಲವನ್ನೂ ನೋಡಿದವರು ಕನ್ನಡಕ್ಕೆ ಭರವಸೆಯ ಮತ್ತೊಬ್ಬ ಖಳನಟ ಸಿಕ್ಕ ಎಂದುಕೊಂಡಿದ್ದರು.
ಅಗ್ನಿಸಾಕ್ಷಿ ಧಾರಾವಾಹಿಯಲ್ಲೂ ನಟಿಸಿದ್ದ, ಧಾರಾವಾಹಿಯಿಂದಲೇ ಹೆಸರು ಮಾಡಿದ್ದ ಸಂಪತ್, ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಅವಕಾಶಗಳು ಸಿಗದಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಖಚಿತ ಮಾಹಿತಿ ಇಲ್ಲ.
ಪ.ಬಂಗಾಳದಲ್ಲಿ ಸುಮಾರು ವರ್ಷಗಳಿಂದ ನಟ, ನಟಿ, ಕಲಾವಿದರು, ಸಿನಿಮಾ, ಕಿರುತೆರೆಯವರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸರಾಸರಿ ಲೆಕ್ಕ ಹಾಕಿದರೆ ಕನಿಷ್ಠ ತಿಂಗಳಿಗೊಂದು ಆತ್ಮಹತ್ಯೆ ವರದಿಯಾಗುತ್ತಿವೆ. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಆದರೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕದ ವಿಷಯ.
ಸುಶೀಲ್ ಗೌಡ, ಜಯಶ್ರೀ ರಾಮಯ್ಯ, ಸೌಜನ್ಯ.. ಹೀಗೆ ಅಪರೂಪಕ್ಕೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಸೂಚನೆ ಸಿಗುತ್ತಿವೆ.