ನೀನು ಕಂಡಂಗಲ್ಲ ನಮ್ಮ ಬಾಳೇವು..
ಬ್ಯಾರೇನ ಐತಿ.. ಬ್ಯಾರೇನ ಐತಿ..
ಹುಟು ಬಾಳೇವು..
ಬ್ಯಾರೇನ ಐತಿ.. ಬ್ಯಾರೇನ ಐತಿ..
ಇದನ್ನು ಬರೆದವರೂ ಯೋಗರಾಜ್ ಭಟ್. ಅರೆ ಇದು ಎಂಥಾ ಭಾವನೆ.. ಎಂಬ ದಂಪತಿಗಳ ಪ್ರೇಮಗೀತೆ ಬರೆದು ಹೃದಯದಲ್ಲೊಂದು ಭಾವನೆಗಳ ಸಪ್ಪಳ ಮೂಡಿಸಿದ್ದ ಯೋಗರಾಜ್ ಭಟ್, ಈ ಹಾಡಿನಲ್ಲಿ ಬೇರೆಯದೇ ಜಗತ್ತನ್ನು ಪರಿಚಯಿಸಿದ್ದಾರೆ. ಈ ಹಾಡು ಕೇವಲ ಹಾಡಲ್ಲ.. ಜೀವನ ದರ್ಶನ. ಉತ್ತರ ಕರ್ನಾಟಕದ ಜನಪದ ಸೊಗಡಿರುವ ಈ ಹಾಡಿನಲ್ಲಿ ಜೀವನದ ದರ್ಶನವನ್ನೇ ಮಾಡಿಸಿದ್ದಾರೆ. ಜನಪದ ಸಂಗೀತದ ಹಿನ್ನೆಲೆಯಲ್ಲಿಯೇ ಬಂದಿರುವ ಹಾಡಿಗೆ ಅಜನೀಶ್ ಲೋಕನಾಥ್ ಅದ್ಭುತ ಸಂಗೀತವನ್ನೂ ನೀಡಿದ್ದಾರೆ. ಸ್ವತಃ ಹಾಡನ್ನೂ ಹಾಡಿರುವ ಅಜನೀಶ್, ಹಾಡಿನ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹಾಡಿನ ಪ್ರತಿ ಸಾಲುಗಳನ್ನು ಅನುಭವಿಸಿ ಹಾಡಿದ್ದಾರೆನ್ನಿಸುತ್ತಿದೆ.
ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚುವರಿ ಚಿತ್ರೀಕರಣ ಮಾಡಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೂ ಹಾಗೂ ಉತ್ತರ ಕರ್ನಾಟಕಕ್ಕೂ ಏನೋ ಒಂದು ವಿಶೇಷ ಕನೆಕ್ಷನ್ ಇರುವುದಂತೂ ಹೌದು. ಇದನ್ನು ಚಿತ್ರತಂಡವೇ ಸಾಕಷ್ಟು ಬಾರಿ ಹೇಳಿದ್ದುಂಟು. ಬ್ಯಾರೇನೇ ಐತಿ ಎನ್ನುವ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಗುರುದೇವ್ ಹೊಯ್ಸಳ ಚಿತ್ರದಲ್ಲಿ ಅಲೆಮಾರಿಗಳಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಂತಿದೆ. ಈ ಚಿತ್ರಕ್ಕೂ ಅಲೆಮಾರಿಗಳಿಗೂ ಏನು ಸಂಬಂಧ, ಯಾಕೆ ಅವರ ಪಂಗಡವನ್ನು ಈ ಸಿನಿಮಾ ಹಾಡಿನಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಸಿನೆಮಾದಲ್ಲೇ ನೋಡಬೇಕಿದೆ.
ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ಗುರುದೇವ್ ಹೊಯ್ಸಳ. ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ವಿಜಯ್ ಎನ್ ರವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.