ಚಿತ್ರನಟರಿಗೆ ಸ್ಮಾರಕ ನಿರ್ಮಾಣ ಮಾಡುವುದು ಸರ್ಕಾರದ ಕೆಲಸವಲ್ಲ. ಸರ್ಕಾರಿ ಹಣದಲ್ಲಿ ನಟರಿಗೆ ಸ್ಮಾರಕ ನಿರ್ಮಾಣ ಮಾಡುವುದೂ ಒಳ್ಳೆಯದಲ್ಲ. ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ
ಇದು ನಟ ಚೇತನ್ ನೀಡಿರುವ ಹೇಳಿಕೆ. ಮೊನ್ನೆ ಮೊನ್ನೆಯಷ್ಟೇ 13 ವರ್ಷಗಳಿಂದ ಕಾದು, ಹೋರಾಡಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯಾಗಿದೆ. ಈ ಹಿನ್ನೆಲೆಯಲ್ಲೇ ಚೇತನ್ ನೀಡಿರುವ ಹೇಳಿಕೆ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಾದದ್ದೇ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು.
ಚಿತ್ರ ಕಲಾವಿದರು ಎಲ್ಲರಂತೆಯೇ. ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ. ಈಗಾಗಲೇ ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರ ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ನಿರ್ಮಾಣ ಮಾಡಬಾರದು ಎನ್ನುವುದು ನಟ ಚೇತನ್ ಮನವಿ.
ಚೇತನ್ ಅವರು ಇತ್ತೀಚೆಗೆ ನಟನೆ, ಸಿನಿಮಾಗಳ ಹೊರತಾಗಿ ವಿವಾದಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಸ್ಮಾರಕಗಳ ಬಗ್ಗೆ ಹೇಳಿಕೆ ಬಂದಿದೆ. ಅಂದಹಾಗೆ ರಾಜ್ಯ ಸರ್ಕಾರ ಸ್ಮಾರಕ ನಿರ್ಮಾಣ ಮಾಡಿರುವುದು ಡಾ.ರಾಜ್ ಕುಮಾರ್, ಅಂಬರೀಷ್ ಮತ್ತು ವಿಷ್ಣುವರ್ಧನ್ ಅವರಿಗೆ ಮಾತ್ರ. ಇವುಗಳಲ್ಲಿ ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗಿ ಆಯಿತಾದರೂ ವಿಶೇಷವಾಗಿದೆ.