ಕನ್ನಡ ಚಲನಚಿತ್ರ ಕಪ್. ಇದು 3ನೇ ಸೀಸನ್. ಈ ಬಾರಿ ಮೈಸೂರಿನಲ್ಲಿಯೇ ನಡೆಯಲಿದೆ. ಫೆಬ್ರವರಿ 11 ಮತ್ತು 12ರಂದು ಮೈಸೂರಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿರೋ ಕ್ರಿಕೆಟ್ನಲ್ಲಿ ಒಟ್ಟು 6 ಟೀಂಗಳು ಭಾಗವಹಿಸಲಿವೆ. ಅಂದಹಾಗೆ ಇದು 10-10 ಓವರುಗಳ ಪಂದ್ಯ ಅಷ್ಟೆ.
ಒಟ್ಟು ಟೂರ್ನಿಯಲ್ಲಿ 6 ತಂಡಗಳಿರುತ್ತವೆ. ತಂಡದ ಕ್ಯಾಪ್ಟನ್ ಯಾರು? ಯಾವ ಟೀಮಿನಲ್ಲಿ ಯಾರ್ ಯಾರು ಅನ್ನೊ ವಿವರಗಳನ್ನೆಲ್ಲ ಜನವರಿ 26ಕ್ಕೆ ಹೇಳುತ್ತೇವೆ. 9 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಪ್ಪಿಗೆ ಕೊಟ್ಟಿದ್ದಾರೆ, ಅವರಲ್ಲಿ 6 ಮಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಕ್ರಿಕೆಟ್ನಲ್ಲಿ ಆಸಕ್ತಿ ಇರುವ ಬೇರೆ ಭಾಷೆಗಳ ನಟರು, ಕಾರ್ಪೊರೇಟ್ ಕಂಪೆನಿಯವರು, ರಾಜಕಾರಣಿಗಳೂ ತಂಡದಲ್ಲಿರುತ್ತಾರೆ ಎಂದಿದ್ದಾರೆ ಕಿಚ್ಚ ಸುದೀಪ್.
ಚಿತ್ರರಂಗದವರೆಲ್ಲ ಒಟ್ಟಿಗೇ ಸೇರಿಕೊಳ್ಳೋಕೆ ಇದೊಂದು ಅವಕಾಶ ಅಷ್ಟೆ ಎಂದಿರುವ ಸುದೀಪ್ ಪುನೀತ್ ಅವರನ್ನು ಸ್ಮರಿಸಿಕೊಂಡರು. ಕಳೆದ ಬಾರಿ ಅವರೂ ಒಂದು ತಂಡದ ನಾಯಕರಾಗಿದ್ದರು. ಈ ಬಾರಿಯೂ ಎಂದಿನಂತೆ ಪ್ರತಿಯೊಬ್ಬರನ್ನೂ ಆಹ್ವಾನಿಸಿದ್ದೇವೆ. ಎಲ್ಲರಿಗೂ ಸ್ವಾಗತ. ಆದರೆ ಬರದೇ ಇರುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಚಿತ್ರರಂಗ ನನ್ನ ಸ್ವತ್ತಲ್ಲ ಎಂದರು ಸುದೀಪ್. ಈ ಬಾರಿ ಶಿವಣ್ಣ ಟೂರ್ನಿಯಲ್ಲಿ ಆಡುವುದು ಅನುಮಾನ ಎಂದ ಸುದೀಪ್ ವೈಯಕ್ತಿಕ ಕಾರಣಗಳಿಂದ ಎಂದಿದ್ದಾರಂತೆ.