ಶ್ರೀ ಬಾಲಾಜಿ ಸ್ಟುಡಿಯೋ ಎಂಬ ಹೊಸ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇದು ಹೊಸಬರ ಚಿತ್ರ. ಹೊಸತನದ ಕಥೆ. ಇದುವರೆಗೆ ಹಲವು ಚಿತ್ರಗಳಲ್ಲಿ ಹೀರೋ ಅಥವಾ ಮತ್ತಿತರರು ಕ್ಯಾಮೆರಾ ಹಿಡಿದು ಕೆಲಸ ಮಾಡೋದನ್ನು ನೋಡಿದ್ದೀರಿ. ಆದರೆ ಒಬ್ಬ ಫೋಟೋಗ್ರಾಫರ್ ಎದುರಿಸುವ ಸವಾಲು, ಸಮಸ್ಯೆಗಳನ್ನೇ ಮನರಂಜನಾತ್ಮಕವಾಗಿ ಹೇಳಿರುವ ಸಿನಿಮಾ ಬಾಲಾಜಿ ಸ್ಟುಡಿಯೋ. ಫೋಟೋಗ್ರಾಫರುಗಳೆಲ್ಲ ಇಷ್ಟಪಡುವ ಕಥೆ ಎನ್ನಬಹುದು. ಫೋಟೋಗ್ರಾಫರ್ ಒಬ್ಬನ ಕಥೆ ಆಧರಿಸಿದ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಹಿರಿಯ ಫೋಟೋಗ್ರಾಫರ್ ಕೆ.ಎನ್. ನಾಗೇಶ್ ಕುಮಾರ್ ಅವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಗಂಧದ ಗುಡಿ ಅಮೋಘವರ್ಷ ಚಿತ್ರಕ್ಕೆ ಶುಭ ಕೋರಿದರು.
ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಮಾತನಾಡಿ ನಿರ್ದೇಶಕ ರಾಜೇಶ್ ಧ್ರುವ ಚಿತ್ರದ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ವೆಂಕಟೇಶ್ವರ್ ರಾವ್ ಅವರಂತೂ ಅಯ್ಯೋ.. ಸಿನಿಮಾಗೆ ಯಾಕೆ ಹೋಗ್ತೀರಾ ಎಂದು ಹೇಳಿದವರೇ ಜಾಸ್ತಿ ಎಂದು ಸ್ವಾರಸ್ಯವಾಗಿ ಹೇಳಿದರು. ಇಡೀ ಚಿತ್ರವನ್ನು ಶಿರಸಿ ಸುತ್ತಮುತ್ತಲೇ ಚಿತ್ರೀಕರಿಸಲಾಗಿದ್ದು, 23 ದಿನದ ಟೈಟ್ ಶೆಡ್ಯೂಲ್ನಲ್ಲಿ ಚಿತ್ರ ಮಾಡಿರುವುದು ವಿಶೇಷ. ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ರಾಜೇಶ್ ಧ್ರುವ, ರಾಧಿಕಾ ಅಚ್ಯುತ್ ರಾವ್, ಶಿಶಿರ್, ನಕುಲ್ ಶರ್ಮಾ, ಶುಭಲಕ್ಷ್ಮಿ, ರವಿ ಸಾಲಿಯಾನ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಕಥೆ ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿರಾಜ ಪೆನ್ನು ಅವರದ್ದಾದರೆ, ಸಂಭಾಷಣೆ ಅಜಿತ್ ಬೊಪ್ಪನಳ್ಳಿಯವರದ್ದು. ಸ್ವಸ್ವಿಕ್ ಕಾರೆನಾಡ್ ಸಂಗೀತ ನಿರ್ದೇಶಕ.