ಅವನಿಗೆ ಎಲ್ಲೆಂದರೆ ಅಲ್ಲಿ ನಿದ್ದೆ ಮಾಡೋ ಕಾಯಿಲೆ. ಆ ಅಜ್ಜನಿಗೆ ಎಲ್ಲವನ್ನೂ ಮರೆಯೋ ಕಾಯಿಲೆ. ಅವಳಿಗೆ ದುಡ್ಡಿನದ್ದೇ ಚಿಂತೆ. ಈ ಮೂವರೂ ಕೋಟ್ಯಧಿಪತಿಗಳಾಗೋ ಕನಸು ಕಾಣುತ್ತಾರೆ. ಮೋಸ, ವಂಚನೆ, ದ್ರೋಹ, ನಂಬಿಕೆ.. ಎಲ್ಲವೂ ಮುಖಾಮುಖಿಯಾಗುತ್ತವೆ. ನಾನು ಅದು ಮತ್ತು ಸರೋಜ ಕಥೆ ಶುರುವಾಗುವುದೇ ಹಾಗೆ..
ಲೂಸ್ ಮಾದ ಯೋಗಿ, ದತ್ತಣ್ಣ, ಅಪೂರ್ವ ಭಾರದ್ವಾಜ್.. ಎಲ್ಲರೂ ಪೈಪೋಟಿಗೆ ಬಿದ್ದಿದ್ದಾರೆ. ಈ ಸಿನಿಮಾದಲ್ಲಿ ನನ್ನದು ಲೈಂಗಿಕ ಕಾರ್ಯಕರ್ತೆಯ ಪಾತ್ರ. ಸಾಮಾನ್ಯವಾಗಿ ಬೇರೆ ನಟಿಯರು ಈ ಪಾತ್ರ ಮಾಡಲು ಮುಜುಗರ ಪಡುತ್ತಾರೆ. ನನಗೂ ಮೊದಲು ಸ್ವಲ್ಪ ಮುಜಗರ ಎನಿಸಿತು. ಆದರೆ ಪಾತ್ರವನ್ನು ಪಾತ್ರ ಎಂದು ತಿಳಿದು, ನಟಿಸಿದೆ. ಎಂದು ಹೇಳಕೊಂಡಿದ್ದಾರೆ ಅಪೂರ್ವ ಭಾರದ್ವಾಜ್.
ತಮಿಳಿನಲ್ಲಿ ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಆ ಸಮಯದಲ್ಲಿಯೇ ವಿನಯ್ ನನಗೆ ಈ ಸಿನಿಮಾದ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಾನು ಒಂದೇ ತರಹದ ಸಿನಿಮಾ ಮಾಡುವುದಕ್ಕಿಂತ ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಲೂಸ್ ಮಾದ ಯೋಗಿ. ಮಡಮಕ್ಕಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಪ್ರೀತಮ್ ಈ ಚಿತ್ರದ ಡೈರೆಕ್ಟರ್. ಪೂಜಾ ವಸಂತ್ ಕುಮಾರ್ ನಿರ್ಮಾಣದ ಸಿನಿಮಾ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ.