ಹಿರಿಯ ನಟಿ ದಿವ್ಯ ಸ್ಪಂದನ/ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಮ್ಯಾ ಈ ಚಿತ್ರಕ್ಕೆ ನಾಯಕಿ ಅಲ್ಲ. ನಿರ್ಮಾಪಕಿಯೆಷ್ಟೇ. ಸಿರಿ ರವಿಕುಮಾರ್ ನಾಯಕಿ. ಈಗ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಚಿತ್ರದ ಟೈಟಲ್ ನನ್ನದು ಎಂದು ವಿವಾದ ಎತ್ತಿದ್ದಾರೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ಅವರದ್ದು. ಬಣ್ಣದ ಗೆಜ್ಜೆ ಚಿತ್ರದ ಹಿಟ್ ಹಾಡೊಂದರ ಮೊದಲ ಸಾಲು ಸ್ವಾತಿ ಮುತ್ತಿನ ಮಳೆ ಹನಿಯೇ. ಆ ಚಿತ್ರಕ್ಕೆ ಸಿಂಗ್ ಬಾಬು ನಿರ್ದೇಶಕರು. ಅಷ್ಟೇ ಅಲ್ಲ, ಆ ಟೈಟಲ್ನಲ್ಲಿ ನಾವು ಈಗಾಗಲೇ ಫಿಲ್ಮ್ ಚೇಂಬರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಅದೇ ಟೈಟಲ್ನ್ನು ಇನ್ನೊಬ್ಬರಿಗೆ ಕೊಡುವುದು ಕಾಪಿರೈಟ್ ಉಲ್ಲಂಘನೆ. ಅಲ್ಲದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದು ಶೇ.80ರಷ್ಟು ಶೂಟಿಂಗ್ ಕೂಡಾ ಮುಗಿದಿದೆ. ಅಂಬಿ ನಿಧನದ ಹಿನ್ನೆಲೆಯಲ್ಲಿ ಸಿನಿಮಾ ನಿಂತಿದೆ ಎಂದಿದ್ದಾರೆ. ಹಾಡನ್ನಾಗಲೀ, ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ನ್ನಾಗಲೀ ಬಳಸಿಕೊಳ್ಳಕೂಡದು ಎಂದು ಚೇಂಬರಿಗೆ ನೋಟಿಸ್ ನೀಡಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ವಕೀಲ ಶ್ರೀನಿವಾಸ ಮೂರ್ತಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪರ ವಕೀಲರು.
ಫಿಲಂ ಚೇಂಬರ್ ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇರುವುದು ಬಿ.ಕೆ.ಗಂಗಾಧರ್ ಹೆಸರಿನಲ್ಲಿ. ಪೊಗರು ಚಿತ್ರದ ನಿರ್ಮಾಪಕ ಬಿ.ಕೆ.ಗಂಗಾಧರ್ ಈಗಾಗಲೇ ಟೈಟಲ್ನ್ನು ರಮ್ಯಾ ಅವರಿಗೆ ನೀಡಿದ್ದಾರೆ. ಆ ಪತ್ರವನ್ನೂ ಚೇಂಬರಿಗೆ ಕೊಟ್ಟಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಭಾ.ಮಾ.ಹರೀಶ್.