ಕನ್ನಡಕ್ಕೆ ಗಾಯನ ವಿಭಾಗದಲ್ಲಿ ಮೊಟ್ಟ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿದ್ದವರು ಶಿವಮೊಗ್ಗ ಸುಬ್ಬಣ್ಣ. 1979ರಲ್ಲಿ ಕಾಡು ಕುದುರೆ ಓಡಿ ಬಂದಿತ್ತಾ.. ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಕನ್ನಡದ ಮೊದಲ ಗಾಯಕ ಸುಬ್ಬಣ್ಣ. ತಮ್ಮ 83ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುಬ್ಬಣ್ಣ ಅವರು ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶಿವಮೊಗ್ಗ ಸುಬ್ಬಣ್ಣ ಅವರ ಮೂಲ ಹೆಸರು ಜಿ. ಸುಬ್ರಹ್ಮಣ್ಯ. ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಉತ್ತುಂಗದಲ್ಲಿದ್ದರು. ಅದೇ ವೇಳೆ ಕಾಡುಕುದುರೆ ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಾಗ ಎಲ್ಲರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರಪ್ರಶಸ್ತಿ ಎಂದೇ ಬರೆದರು. ರೇಡಿಯೋಗಳಲ್ಲಿ ಹೇಳಿದರು. ಇದರಿಂದ ಬೇಸತ್ತ ಸುಬ್ರಹ್ಮಣ್ಯ ತಮ್ಮ ಹೆಸರನ್ನು ಶಿವಮೊಗ್ಗ ಸುಬ್ಬಣ್ಣ ಎಂದೇ ಬದಲಿಸಿಕೊಂಡರು.
ಸಿನಿಮಾಗಳಿಗಿಂತ ಹೆಚ್ಚು ಭಾವಗೀತೆ, ಸಂಗೀತ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡಿದ್ದ ಸುಬ್ಬಣ್ಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, ಸಂತಶಿಶುನಾಳ ಷರೀಫ ಪ್ರಶಸ್ತಿ, ಕನ್ನಡ ಕಂಪು ಪ್ರಶಸ್ತಿ, ಸುಂದರಶ್ರೀ ಪ್ರಶಸ್ತಿ ಸಂದಿದ್ದವರು. ಶಿವಮೊಗ್ಗದ ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷರೂ ಆಗಿದ್ದವರು ಶಿವಮೊಗ್ಗ ಸುಬ್ಬಣ್ಣ.
ಆನಂದಮಯ ಈ ಜಗ ಹೃದಯ..
ಹಾಕಿದ ಜನಿವಾರವಾ.. ಸದ್ಗುರು ನಾಥ ಹಾಕಿದ ಜನಿವಾರವಾ..
ಯಾರಿಗೂ ಹೇಳೋಣು ಬ್ಯಾಡ..
ಏನಾದರೂ ಆಗು.. ಮೊದಲು ಮಾನವನಾಗು..
ಸೇರಿದಂತೆ ನೂರಾರು ಭಾವಗೀತೆಗಳನ್ನು ಹಾಡಿದ್ದಾರೆ.