ದಿ.ಪುನೀತ್ ರಾಜಕುಮಾರ್ ಅವರಿಗೆ ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದೆ. ಮರಣೋತ್ತರವಾಗಿ ಘೋಷಣೆಯಾಗಿದ್ದ ಪ್ರಶಸ್ತಿ ಪ್ರದಾನ ಯಾವಾಗ ಎಂಬುದು ನಿಗದಿಯಾಗಿರಲಿಲ್ಲ. ಈಗ ಖುದ್ದು ಸಿಎಂ ಬೊಮ್ಮಾಯಿಯವರೇ ದಿನಾಂಕ ಘೋಷಿಸಿದ್ದಾರೆ. 2022ರ ನವೆಂಬರ್ 1ರಂದು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ಹೇಳಿದ್ದಾರೆ.
ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಪುನೀತ್ ನೆನಪಿನಲ್ಲಿಯೇ ಆಯೋಜಿಸಲಾಗಿದೆ. ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಪುನೀತ್, ಡಾ.ರಾಜ್ ಪ್ರತಿಮೆಗಳೇ ಆಕರ್ಷಣೆ. ಈ ಕಾರ್ಯಕ್ರಮ ಉದ್ಘಾಟನೆ ವೇಳೆ ಬೊಮ್ಮಾಯಿ ಕರ್ನಾಟಕ ರತ್ನ ದಿನಾಂಕ ಘೋಷಿಸಿದ್ದಾರೆ.
2021ರ ನವೆಂಬರ್ 1ರಂದು ಇಡೀ ಕರುನಾಡು ಪುನೀತ್ ಅವರನ್ನು ಕಳೆದುಕೊಂಡ ನೋವಿನಲ್ಲಿತ್ತು. ಈ ಬಾರಿ ಅದೇ ನವೆಂಬರ್ 1 ಪುನೀತ್ ಹಬ್ಬವಾಗಲಿದೆ. ಆ ಕಾರ್ಯಕ್ರಮದಲ್ಲಿ ದೊಡ್ಡಮನೆಯ ಎಲ್ಲರೂ ಭಾಗವಹಿಸಲಿದ್ದಾರೆ.