ನಾನು ಭಾರತವನ್ನು ಪ್ರೀತಿಸುತ್ತೇನೆ. ಕೆಲವರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬಿದ್ದಾರೆ. ಅದು ಅವರ ನಂಬಿಕೆ ಅಷ್ಟೆ. ವಾಸ್ತವ ಅಲ್ಲ. ನಾನು ಭಾರತವನ್ನು ಇಷ್ಟಪಡಲ್ಲ ಅನ್ನೊದೆಲ್ಲ ಸುಳ್ಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಡಿ. ನನ್ನ ಸಿನಿಮಾಗಳನ್ನು ನೋಡಿ.
ಇದು ಅಮೀರ್ ಖಾನ್ ಮಾಡಿಕೊಂಡಿರುವ ಬಹಿರಂಗ ಮನವಿ. ಅಮೀರ್ ಖಾನ್ ಚಿತ್ರ ಲಾಲ್ ಸಿಂಗ್ ಚಡ್ಡಾ ಇದೇ ವಾರ ರಿಲೀಸ್ ಆಗಬೇಕಿದೆ. ಅದಕ್ಕೆ ಮೊದಲೇ ಈ ಚಿತ್ರನ್ನು ನೋಡಬೇಡಿ. ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ಬಹಿರಂಗವಾಗಿ ಈ ಮಾತು ಹೇಳಿದ್ದಾರೆ.
ಬಾಯ್ಕಾಟ್ ಅಭಿಯಾನಕ್ಕೆ ಏನು ಕಾರಣ?
ಅಮೀರ್ ಖಾನ್ ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ಇದೆ. ಈ ದೇಶದಲ್ಲಿ ಇರಲು ಭಯವಾಗುತ್ತಿದೆ ಎಂದು ನನ್ನ ಹೆಂಡತಿ ಹೇಳುತ್ತಾಳೆ. ಆಕೆಯ ಮಾತಿನಲ್ಲಿ ಸತ್ಯವಿದೆ ಎನಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅದು ಪ್ರಧಾನಿ ಮೋದಿ ವಿರುದ್ಧ ಸಾಹಿತಿಗಳು, ಸೆಲಬ್ರಿಟಿಗಳು ಅಸಹಿಷ್ಣುತೆ ಕಾರಣ ಹೇಳಿ ಪ್ರಶಸ್ತಿಗಳನ್ನೆಲ್ಲ ಹಿಂದಿರುಗಿಸಿ ಹೋರಾಟ ನಡೆಸುತ್ತಿದ್ದ ಕಾಲ. ಆಗ ಅಮೀರ್ ಖಾನ್ ಮಾತಿಗೆ ದೊಡ್ಡ ಪ್ರಚಾರವೂ ಸಿಕ್ಕಿತ್ತು. ಆಗಲೂ ಅಮೀರ್ ಖಾನ್ ಟೀಕೆಗಳನ್ನೆದುರಿಸಿದ್ದರು. ಆದರೆ.. ಅದೊಂದು ವ್ಯವಸ್ಥಿತ ಅಭಿಯಾನ ಎಂಬುದು ಆಮೇಲೆ ಗೊತ್ತಾಗಿತ್ತು.
ಆನಂತರ ಅದೇ ಬಿಸಿಯಲ್ಲಿ ಪಿಕೆ ಚಿತ್ರದಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ವಿವಾದವೂ ಭುಗಿಲೆದ್ದಿತ್ತು. ಪಿಕೆ ಚಿತ್ರದಲ್ಲಿ ಹಿಂದೂ ಧರ್ಮದ ಮೂಢನಂಬಿಕೆಗಳು, ದೇವರನ್ನು ಲೇವಡಿ ಮಾಡುವ ಅಮೀರ್ ಪಾತ್ರ ಇತರೆ ಧರ್ಮದ ವಿಷಯಗಳನ್ನು ನೆಪಕ್ಕೂ ಮಾತನಾಡುವುದಿಲ್ಲ. ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು.
ಬೆನ್ನಲ್ಲೇ ಸತ್ಯಮೇವಜಯತೆ ಶೋನಲ್ಲಿ ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದನ್ನು ಬಡ ಮಕ್ಕಳಿಗೆ ನೀಡಿ. ಹಾಲನ್ನು ವೇಸ್ಟ್ ಮಾಡಬೇಡಿ ಎಂದು ಕರೆಕೊಟ್ಟಿದ್ದರು. ದೇವರಿಗೆ ಅಭಿಷೇಕ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿಕೆ ನೀಡಿದ್ದರು.
ಇವೆಲ್ಲವೂ ಒಟ್ಟಾಗಿ ಈಗ ಕಾಡೋಕೆ ಶುರುವಾಗಿವೆ. ಅಮೀರ್ ಖಾನ್ ಚಿತ್ರ ನೋಡುವ ಬದಲು ಆ ಹಣದಲ್ಲಿ ಯಾರಾದರೂ ಬಡವರಿಗೆ ಸಹಾಯ ಮಾಡಿ. ಹಿಂದೂ ವಿರೋಧಿಯ ಚಿತ್ರವನ್ನು ಬಹಿಷ್ಕರಿಸಿ ಎಂಬ ಕೂಗು ಬಲವಾಗಿ ಎದ್ದಿದೆ.