ಪೆಟ್ರೋಮ್ಯಾಕ್ಸ್ ಸಿನಿಮಾ ನೋಡಿದವರಿಗೆ ಅಗರಬತ್ತಿ ಮಾದಪ್ಪನ ಪಾತ್ರ ಖಂಡಿತಾ ನೆನಪಿರುತ್ತೆ. ತುಂಟಾಟದ ಕಚಗುಳಿ ಇಡುತ್ತಲೇ ಹೋಗುವ ಪಾತ್ರಕ್ಕೆ ಜೀವ ತುಂಬಿದ್ದವರು ಅರುಣ್. ಈ ಅರುಣ್ ಇದಕ್ಕೂ ಮೊದಲು ಬೊಂಬೆಗಳ ಲವ್ ಚಿತ್ರದಲ್ಲಿ ನಟಿಸಿದ್ದರು. ಪೆಟ್ರೋಮ್ಯಾಕ್ಸ್ ಪಾತ್ರಕ್ಕೆ ತದ್ವಿರುದ್ಧವಾದ ಭಾವತೀವ್ರತೆಯ ಪಾತ್ರವದು. ಅದಾದ ಮೇಲೆ ದಾದಾ ಈಸ್ ಬ್ಯಾಕ್ ಅನ್ನೋ ಕಮರ್ಷಿಯಲ್ ಚಿತ್ರದಲ್ಲೂ ನಟಿಸಿದ್ದ ಅರುಣ್ ಈಗ ಡೈರೆಕ್ಟರ್ ಆಗೋಕೆ ಹೊರಟಿದ್ದಾರೆ.
ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಕಥೆ. ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆಯೋ ಕಥೆ. ನಾನೂ ಅಲ್ಲಿಯವನೇ.. ಹೀಗಾಗಿ ಆ ಸೊಗಡು ಇಡೀ ಚಿತ್ರದಲ್ಲಿರುತ್ತೆ. ನನಗೆ ಗೌಳಿ ಚಿತ್ರದ ಶ್ರೀನಗರ ಕಿಟ್ಟಿಯವರ ಲುಕ್ ಇಷ್ಟವಾಯಿತು. ನನ್ನ ಕಥೆ ಮತ್ತು ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ತಾರೆ ಎನ್ನಿಸಿತು. ಹೀಗಾಗಿ ನನ್ನ ನಿರ್ದೇಶನದ ಮೊದಲ ಚಿತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡೆ. ಕಿಟ್ಟಿಯವರೂ ಕೂಡಾ ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಎಂದಿದ್ದಾರೆ ಅರುಣ್.
ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೇ ಚಿತ್ರರಂಗಕ್ಕೆ ಬಂದವನು ನಾನು. ಬೊಂಬೆಗಳ ಲವ್ ನಂತರ ಕೆಲವನ್ನು ನಾನು ಒಪ್ಪಲಿಲ್ಲ. ಒಪ್ಪಿಕೊಂಡ ಇನ್ನೂ ಕೆಲವು ಚಿತ್ರಗಳು ಕೈ ತಪ್ಪಿದವು. ಈಗ ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳೋ ಸಮಯ ಎಂದಿದ್ದಾರೆ ಅರುಣ್. ಚಿತ್ರೀಕರಣವನ್ನು ಆಗಸ್ಟ್ನಲ್ಲಿ ಆರಂಭಿಸಲಿದ್ದಾರಂತೆ.