ನಟಿ ಮೀನಾ ಬದುಕಿನಲ್ಲಿ ಬಿರುಗಾಳಿಯೇ ಬೀಸಿದೆ. ಪತಿ ವಿದ್ಯಾಸಾಗರ್ ಜೊತೆ ಸಂಭ್ರಮದಿಂದ ಸಂಸಾರ ನಡೆಸುತ್ತಿದ್ದ ಮೀನಾ ಈಗ ಏಕಾಂಗಿ. ಮಗಳನ್ನು ನೋಡಿಕೊಳ್ಳಬೇಕಾದ ಕರ್ತವ್ಯ. ಏಕಾಏಕಿ ಪತಿ ವಿದ್ಯಾಸಾಗರ್ ನಿಧನರಾದಾಗಿನಿಂತ ಮೀನಾ ದುಃಖದಲ್ಲಿದ್ದಾರೆ.
ವಿದ್ಯಾಸಾಗರ್ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಟ್ರಾನ್ಸ್ಪ್ಲಾಂಟ್ ಮಾಡಿಸಬೇಕಿತ್ತು. ಆದರೆ ದಾನಿಗಳು ಸಿಗದ ಕಾರಣ ವಿದ್ಯಾಸಾಗರ್ ಮೃತಪಟ್ಟರು. ಪತಿಯ ಸಾವಿನ ಶೋಕದಲ್ಲಿರುವ ಮೀನಾಗೆ ಶಾಕ್ ನೀಡಿದ್ದು ಅವರ ಬಗ್ಗೆ ಬಂದಿರೋ ವಿಚಿತ್ರ ಕಥೆಗಳು.
ಕೆಲವು ವೆಬ್`ಸೈಟ್`ಗಳು ವಿದ್ಯಾಸಾಗರ್ ಅವರಿಗೆ ನಿಗೂಢ ಕಾಯಿಲೆಯಿತ್ತು ಎಂದರೆ, ಇನ್ನೂ ಕೆಲವರು ಕೋವಿಡ್`ನಿಂದ ಮೃತಪಟ್ಟರು ಎಂದು ವರದಿ ಮಾಡಿದವು. ಇನ್ನೂ ಕೆಲವರು ವಿದ್ಯಾಸಾಗರ್ ಅವರಿಗೆ ಪಾರಿವಾಳಗಳಿಂದ ಒಂದು ವಿಚಿತ್ರ ಕಾಯಿಲೆ ಬಂದಿತ್ತು ಎಂದು ವರದಿ ಮಾಡಿದರು. ಅದೆಂಥಾ ಕಾಯಿಲೆಯೋ.. ಇಡೀ ಸುದ್ದಿ ಹುಡುಕಿದರೂ ಗೊತ್ತಾಗಲ್ಲ. ಇದರಿಂದೆಲ್ಲ ಶಾಕ್ ಆಗಿರುವ ನಟಿ ಮೀನಾ ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.
ನನ್ನ ದುಃಖದಲ್ಲಿ ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ. ಆದರೆ ಇದರ ನಡುವೆ ಕೆಲವು ಸುಳ್ಳು ಸುದ್ದಿಗಳು ಹಬ್ಬಿದ್ದು ಆಘಾತ ತಂದಿದೆ. ನಾನು ಶೋಕದಲ್ಲಿದ್ದೇನೆ. ದಯವಿಟ್ಟು ನನ್ನ ಖಾಸಗಿತನವನ್ನು ಗೌರವಿಸಿ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ ಮೀನಾ.