777 ಚಾರ್ಲಿ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ನಿರ್ದೇಶಕ ಮಂಸೋರೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ಟ್ 1978, ನಾತಿಚರಾಮಿಯಂತಾ ಚಿತ್ರಗಳನ್ನು ಕೊಟ್ಟಿರುವ ಮಂಸೋರೆ ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಇಷ್ಟು.
ಈ ಹಿಂದೆ ರಾಜ್ಯ ಸರ್ಕಾರ ಕನ್ನಡದ ಎಲ್ಲ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿತ್ತು. ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಿರಬೇಕು ಎಂಬ ಷರತ್ತಿನ ಮೇರೆಗೆ ಇದ್ದ ಅನುಕೂಲ ಅದು. ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ತೆರಿಗೆ ವಿಧಿಸುವ ನಿರ್ಧಾರ ಮಾಡಿದ್ದಾಗ ಡಾ.ರಾಜ್ ಕುಮಾರ್ ವಿರೋಧಿಸಿದ್ದರು. ಚಿತ್ರರಂಗವನ್ನೇ ತೊರೆದು ಹಳ್ಳಿಯಲ್ಲಿ ನೆಲೆಸುವ ನಿರ್ಧಾರ ತೆಗೆದುಕೊಂಡಿದ್ದರು. ಆಗ ಖುದ್ದು ಹೆಗಡೆಯವರೇ ರಾಜ್ ಅವರ ಮನವೊಲಿಸಿ, ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು. ಈಗಲೂ ಅಷ್ಟೆ, ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ಜಿಎಸ್ಟಿ ಹೆಸರಲ್ಲಿ ಹೇರಿರುವುದು ನಿಮ್ಮದೇ ಬಿಜೆಪಿ ಸರ್ಕಾರ. ಈಗ ವಿನಾಯಿತಿ ಘೋಷಿಸೋದ್ಯಾಕೆ? ಕೇವಲ ಒಂದು ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸುವುದು ಸರಿಯಲ್ಲ. ಈ ಹಿಂದೆ ನೀವು ಅನ್ಯಭಾಷೆಯ ಚಿತ್ರಕ್ಕೂ ತೆರಿಗೆ ವಿನಾಯಿತಿ ನೀಡಿದ ನೆನಪು ಇದೆ. (ಕಾಶ್ಮೀರ್ ಫೈಲ್ಸ್)
ಕನ್ನಡದಲ್ಲಿ ಒಳ್ಳೆಯ ಮೌಲ್ಯ ಸಾರುವ ಹಲವು ಚಿತ್ರಗಳು ಬರುತ್ತಿವೆ. ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯಾ ವೈಕುಂಠಕೆ, ಅಮೃತಮತಿ, ನೀಲಿ ಹಕ್ಕಿ.. ಹೀಗೆ ಹಲವು ಚಿತ್ರಗಳಿವೆ. ಎಲ್ಲ ಚಿತ್ರಗಳಿಗೂ ಇದೇ ಅನೂಕೂಲ ನೀಡಿ. ತೆರಿಗೆ ವಿಧಿಸುವುದು ಅಣ್ಣಾವ್ರ ಆಶಯಕ್ಕೆ ವಿರುದ್ಧ.
ಇದಿಷ್ಟೂ ಮಂಸೋರೆ ಅವರ ಪತ್ರದ ಸಾರಾಂಶ.