ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚುನಾವಣೆ ರಂಗೇರುತ್ತಿದೆ. ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದಾರೆ. ಹಲವರ ಜೊತೆ ದೊಡ್ಮನೆಯ ಬೆಂಬಲವೂ ಸಿಕ್ಕಿದೆ. ರಾಘವೇಂದ್ರ ರಾಜಕುಮಾರ್ ಬೆಂಬಲ ಘೋಷಿಸಿದ್ದಾರೆ.
ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಇನ್ನೂ ಬೆಳೆಯಬೇಕಿದೆ. ನಮ್ಮ ಗೋವಿಂದು ಅವರಿಗೆ ಚಿತ್ರರಂಗದ ಎಲ್ಲ ಕ್ಷೇತ್ರಗಳಲ್ಲಿ ಅನುಭವ ಇದೆ. ಇಂತಹವರು ಬಂದರೆ ಚಿತ್ರರಂಗ ಇನ್ನಷ್ಟು ಉತ್ತಮವಾಗಿ ರೂಪುಗೊಳ್ಳಲಿದೆ. ದಯವಿಟ್ಟು ಗೋವಿಂದು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ ರಾಘವೇಂದ್ರ ರಾಜಕುಮಾರ್.
ಸಾ.ರಾ.ಗೋವಿಂದು ಅವರ ತಂಡದಲ್ಲಿ ನಿರ್ಮಾಪಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಕರಿಸುಬ್ಬು ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಚಿತ್ರಲೋಕ ವೀರೇಶ್ ಸ್ಪರ್ಧಿಸಿದ್ದಾರೆ.
ವಿತರಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಜ್ಞಾನೇಶ್ವರ ಐತಾಳ್ ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಂ.ಎನ್.ಕುಮಾರ್ ಸ್ಪರ್ಧಿಸಿದ್ದಾರೆ.
ಪ್ರದರ್ಶಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ಮತ್ತು ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಸ್ಪರ್ಧಿಸಿದ್ದಾರೆ. ಜಯಸಿಂಹ ಮುಸರಿ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.