ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಸೋಜುಗಾದ ಸೂಜುಮಲ್ಲಿಗೆ... ಹಾಡನ್ನು ಕೊಲೆ ಮಾಡಿದ ವ್ಯಕ್ತಿಯ ನೃತ್ಯಕ್ಕೆ ಬಳಸಿರುವುದಕ್ಕೆ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುರಾಣದ ಐತಿಹ್ಯಗಳನ್ನು ರೂಪಕವಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರದ ಕಥೆ ಮಾಡಿದ್ದಾರೆ ಎಂದು ಕೇಳಿದ್ದೇವೆ. ಅದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಿನಿಮಾ ರಂಗ ರಚನಾತ್ಮಕವಾಗಿ ಹಾಗೂ ಸಮಾಜಮುಖಿಯಾಗಿ ನಡೆದುಕೊಳ್ಳುವುದು ಈಗಿನ ಅಗತ್ಯವೂ ಹೌದು. ಆದರೆ ಮೈಸೂರು ಸೀಮೆಯಲ್ಲಿ ಜನಪ್ರಿಯವಾಗಿರು ಮಾದೇವನನ್ನು ಸ್ತುತಿಸುವ ಹಾಡನ್ನು ಸೃಜನಶೀಲತೆ ಹೆಸರಲ್ಲಿ ಕೊಲೆಯಂತಾ ಹೀನಕೃತ್ಯಕ್ಕೆ ರೂಪಕವಾಗಿ ಬಳಸಿರುವುದು ಸರಿಯಲ್ಲ. ದಾಸಶ್ರೇಷ್ಟ ಪುರಂದರದಾಸರ ಚಂದ್ರಚೂಡ ಶಿವಶಂಕರ ಪಾರ್ವತಿ ಹಾಡನ್ನೂ ಇದೇ ಚಿತ್ರದಲ್ಲಿ ಇಂತಹುದೇ ಸನ್ನಿವೇಶಕ್ಕೆ ಬಳಸಿದ್ದಾರಂತೆ. ಸೃಜನಶೀಲತೆ ಎನ್ನುವುದು ಸಾಂಸ್ಕøತಿಕ ಪತನಕ್ಕೆ ಕಾರಣವಾಗಬಾರದು. ಸಮಾಜದ ಉನ್ನತಿಗೆ ಮಾರ್ಗವಾಗಬೇಕು.
ಈ ಚಿತ್ರದ ನಿರ್ಮಾಣ ಸಂಸ್ಥೆಯ ಯಾರೊಬ್ಬರೂ ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ. ಕ್ಷಮಾಭಾವ ವ್ಯಕ್ತಿಯ ಅಂತರಂಗದಲ್ಲಿ ಹುಟ್ಟಬೇಕೇ ಹೊರತು ಒತ್ತಡದಲ್ಲಿ ಬರಬಾರದು. ಇಂತಹ ದೃಶ್ಯ ರೂಪಿಸಿದ ನಿರ್ದೇಶಕರನ್ನೂ ಮಹದೇಶ್ವರರು ಹರಸಲಿ. ಇನ್ನು ಮುಂದೆ ಅವರಿಗೆ ಇಂತಹ ದುರ್ಬುದ್ದಿ ಬರದಂತೆ ಸದ್ಬುದ್ದಿ ನೀಡಲಿ ಎಂದಿದ್ದಾರೆ ಸ್ವಾಮೀಜಿ.