ಕರ್ನಾಟಕದಲ್ಲಿ ನೇತ್ರದಾನಕ್ಕೆ ಜಾಗೃತಿ ಶುರುವಾಗಿದ್ದು ಡಾ.ರಾಜ್ ನೇತ್ರದಾನದ ನಂತರ. ಈಗ ಅಪ್ಪು ನಿಧನದ ನಂತರ ಮಾಡಿದ ನೇತ್ರದಾನ ಸಂಚಲನವನ್ನೇ ಸೃಷ್ಟಿಸಿದೆ. ಗ್ರಾಮೀಣ ಭಾಗದಲ್ಲಿಯೂ ನೇತ್ರದಾನಕ್ಕೆ ಜನ ಮುಂದೆ ಬರುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಲ್ಲಿ ನಾರಾಯಣ ನೇತ್ರಾಲಯವೊಂದರಲ್ಲೇ ಸಾವಿರಕ್ಕೂ ಹೆಚ್ಚು ನೋಂದಣಿಯಾಗಿವೆ. ನಾನಾ ಕಾರಣಗಳಿಂದ ಮೃತಪಟ್ಟ 14 ಜನ ಕಣ್ಣುಗಳನ್ನು, ಅವರ ಕುಟುಂಬದವರು ದಾನ ಮಾಡಿದ್ದಾರೆ. ಹಾಗೆ ದಾನ ಮಾಡಿದವರಿಗೆ, ಈ ರೀತಿ ಕಣ್ಣು ಕೊಡಬಹುದು ಎಂದು ಗೊತ್ತಾಗಿದ್ದೇ ಪುನೀತ್ ನಿಧನದ ನಂತರ ಎನ್ನುವುದು ವಿಶೇಷ.
ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ನೋಂದಣಿಯಾಗುತ್ತಿರುವುದು ಬಳ್ಳಾರಿಯಲ್ಲಿ. ಗ್ರಾಮೀಣ ಭಾಗದ ಜನರೂ ಆಸ್ಪತ್ರೆಗಳಿಗೆ ಬಂದು ನೇತ್ರದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಅಪ್ಪು ನಿಧನದ ನಂತರ ರಾಜ್ಯದಲ್ಲಿ ಕೇವಲ ನಾಲ್ಕೈದು ದಿನಗಳಲ್ಲಿ ನೇತ್ರದಾನ ಮಾಡಿದವರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ವಯಂ ಪ್ರೇರಿತ ನೇತ್ರದಾನವನ್ನು ನೋಡಿಯೇ ಇರಲಿಲ್ಲ ಎನ್ನುತ್ತಿದ್ದಾರೆ ಅನುಭವಿ ನೇತ್ರ ತಜ್ಞ ವೈದ್ಯರು. ಪುನೀತ್ ನೇತ್ರದಾನ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು ಮೂಡಿಸಿರುವುದು ವಿಶೇಷ.