ಇತ್ತೀಚೆಗಷ್ಟೇ ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಸಮಿತಿ, 71 ಸದಸ್ಯರ ಹೆಸರನ್ನು ಪ್ರಕಟಿಸಿತ್ತು. ಆದರೆ, ಕಮಿಟಿಯಲ್ಲಿ ಚಿತ್ರರಂಗದವರಿಗಿಂತ ಚಿತ್ರರಂಗದ ಗಾಳಿಗಂಧ ಗೊತ್ತಿಲ್ಲದವರೇ ತುಂಬಿಕೊಂಡಿದ್ದರು. ಟಿವಿ, ಸೀರಿಯಲ್ಲು, ಜರ್ನಲಿಸಂ ಮಾಡಿದವರೇ ಇದ್ದ ಕಮಿಟಿಯಲ್ಲಿ 50ಕ್ಕೂ ಹೆಚ್ಚು ಸದಸ್ಯರಿಗೆ ಸಿನಿಮಾ ಕ್ಷೇತ್ರದ ಪರಿಚಯವೇ ಇಲ್ಲ. ನಿರ್ಮಾಪಕರಿಲ್ಲ. ನಿರ್ದೇಶಕರಿಲ್ಲ. ನೃತ್ಯ ನಿರ್ದೇಶಕರಿಲ್ಲ. ಸಿನಿಮಾಟೋಗ್ರಾಫರ್ ಇಲ್ಲ. ಸಂಗೀತ ನಿರ್ದೇಶಕರಿಲ್ಲ. ಹೀಗೆ ಚಿತ್ರರಂಗದ ಯಾವುದೇ ವಿಭಾಗದ ಅನುಭವವೂ ಇಲ್ಲದ, ಕೇವಲ ಅಕಾಡೆಮಿ ಅಧ್ಯಕ್ಷರಿಗೆ ಹತ್ತಿರವಾದವರೇ ತುಂಬಿಕೊಂಡಿರುವ ಸಮಿತಿಯ ವಿರುದ್ಧ ಚಿತ್ರರಂಗದ ಹಿರಿಯರು ಕಿಡಿ ಕಾರಿದ್ದಾರೆ.
ಚಿತ್ರರಂಗದ ಬಗ್ಗೆ ಕನಿಷ್ಠ ಜ್ಞಾನ, ಅನುಭವ ಇರುವವರು ಸೆನ್ಸಾರ್ ಕಮಿಟಿಯಲ್ಲಿರಬೇಕು. ಆಗ ಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಅನುಕೂಲ. ಇಲ್ಲದೇ ಹೋದರೆ ಜಡ್ಜ್ಮೆಂಟ್ ಕೊಡುವವರಿಗೆ ನಾವು ಚಿತ್ರ ನಿರ್ಮಾಣದ ಕಷ್ಟಗಳನ್ನು ವಿವರಿಸುವುದರಲ್ಲೇ ಸಮಯ ವ್ಯರ್ಥವಾಗುತ್ತದೆ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಡಿ.ಆರ್.ಜೈರಾಜ್.
ಇಂತಹ ಸದಸ್ಯರ ನೇಮಕದ ಬಗ್ಗೆ ನಮ್ಮ ವಿರೋಧವಿದೆ. ತಕ್ಷಣ ಸರ್ಕಾರ ಇಂತಹ ಅನರ್ಹರನ್ನು ಕೈಬಿಟ್ಟು ಹೊಸ ಅರ್ಹತೆಯುಳ್ಳ ಸದಸ್ಯರ ನೇಮಕಾತಿ ಮಾಡಬೇಕು ಎಂದಿದ್ದಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್.
ಕೆಲ ಅಧಿಕಾರಶಾಹಿ, ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುವುದು ಸರಿಯಲ್ಲ. ಇದು ನೈತಿಕವಾಗಿಯೂ ಸರಿಯಲ್ಲ ಎಂದಿದ್ದಾರೆ ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ಡಾ.ವಿ. ನಾಗೇಂದ್ರ ಪ್ರಸಾದ್.
ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ವಾಣಿಜ್ಯ ಮಂಡಳಿ ಎಲ್ಲರೂ ಸಾರಾಸಗಟಾಗಿ ವಿರೋದಿಸಿದ್ದಾರೆ.
ಎಲ್ಲರ ಬೇಡಿಕೆಯೂ ಒಂದೇ. ಚಿತ್ರರಂಗದಲ್ಲಿ ಅನುಭವ ಇರುವ ಯಾರನ್ನಾದರೂ ನೇಮಕ ಮಾಡಿ. ನಮಗೆ ಸಮಸ್ಯೆ ಇಲ್ಲ. ಆದರೆ, ಚಿತ್ರರಂಗದ, ಚಿತ್ರೋದ್ಯಮದ ಎಬಿಸಿಡಿಯೂ ಗೊತ್ತಿಲ್ಲದವರನ್ನು ಚಿತ್ರಗಳ ಹಣೆಬರಹ ನಿರ್ಧರಿಸುವ ಸ್ಥಾನದಲ್ಲಿ ಕೂರಿಸುವುದು ಬೇಡ ಎನ್ನುವುದೇ.
Also Read :-
ಅಕಾಡೆಮಿ ಕುಟುಂಬಸ್ಥರಿಗೇ ಸೆನ್ಸಾರ್ ಸದಸ್ಯತ್ವ : ಸುನಿಲ್ ಪುರಾಣಿಕ್ ಮತ್ತು ಪುತ್ರ ಸಾಗರ್ ಸ್ಪಷ್ಟನೆ- Exclusive