ಶಾರೂಕ್ ಖಾನ್ ಕನ್ನಡಕ್ಕೆ ಬರುತ್ತಿದ್ದಾರಾ..? ಯಾವ ಸಿನಿಮಾ..? ಯಾರು ಡೈರೆಕ್ಟರ್..? ಇದು ನಿಜಾನಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಶಾರೂಕ್ ಖಾನ್ ನಟನೆಯಲ್ಲಿ ಕನ್ನಡದಲ್ಲಿ ಬರುತ್ತಿರೋ ಚಿತ್ರದ ಹೆಸರು ರಾಕೆಟ್ರಿ. ಈ ಚಿತ್ರಕ್ಕೆ ತಮಿಳು ನಟ ಮಾಧವನ್ ನಿರ್ದೇಶಕ. ನಟನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿಯೂ ಗುರುತಿಸಿಕೊಂಡಿರೋ ಮಾಧವನ್, ಇದೇ ಮೊದಲ ಬಾರಿಗೆ ಡೈರೆಕ್ಷನ್ ಕೂಡಾ ಮಾಡಿರುವ ಚಿತ್ರ ರಾಕೆಟ್ರಿ.
ರಾಕೆಟ್ರಿ ಚಿತ್ರದ ಕಥೆ ಇಸ್ರೋ ವಿಜ್ಞಾನಿ ಎಸ್.ನಂಬಿ ನಾರಾಯಣ್ ಅವರ ಕುರಿತಾದದ್ದು. ಇವತ್ತು ಭಾರತದ ರಾಕೆಟ್ ತಂತ್ರಜ್ಞಾನದಲ್ಲಿ ಕ್ರಯೋಜೆನಿಕ್ ಟೆಕ್ನಾಲಜಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಆ ಕ್ರಾಂತಿಯ ರೂವಾರಿ ಈ ನಂಬಿ ನಾರಾಯಣ್. ಇವರನ್ನು 1994ರಲ್ಲಿ ಕೇರಳ ಸರ್ಕಾರ ದೇಶದ್ರೋಹಿ ಆಪಾದನೆಯ ಮೇಲೆ ಜೈಲಿಗೆ ತಳ್ಳಿತ್ತು. 48 ದಿನಗಳ ಕಾಲ ಜೈಲಿನಲ್ಲಿದ್ದ ನಂಬಿ ನಾರಾಯಣ್ ಅವರನ್ನು ಕೇರಳ ಅಪರಾಧಿ ಎಂದು ಘೋಷಿಸಿತ್ತು. ಆದರೆ, ಸಿಬಿಐ 1996ರಲ್ಲಿ ಇವರ ವಿರುದ್ಧ ಯಾವುದೇ ಸಾಕ್ಷಿಗಳೂ ಇಲ್ಲ.
ಇವರು ನಿರಪರಾಧಿ ಎಂದು ಸ್ಪಷ್ಟವಾಗಿ ಹೇಳಿತ್ತು. ಕೊನೆಗೆ ಸುಪ್ರೀಂಕೋರ್ಟ್ ನಂಬಿ ನಾರಾಯಣ್ ಅವರನ್ನು ಅರೋಪ ಮುಕ್ತಗೊಳಿಸಿ ಕೇರಳ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಘೋಷಿಸಿದ್ದು 2018ರಲ್ಲಿ. ಕೇರಳ ಸರ್ಕಾರ ಮಾಡಿದ ತಪ್ಪಿಗೆ ಒಂದು ಕೋಟಿ 30 ಲಕ್ಷವನ್ನು ಪರಿಹಾರ ಕೊಟ್ಟಿತೇನೋ ಹೌದು. ಅಷ್ಟು ಹೊತ್ತಿಗೆ 24 ಅಮೂಲ್ಯ ವರ್ಷಗಳನ್ನು ನಮ್ಮ ಹೆಮ್ಮೆಯ ವಿಜ್ಞಾನಿ ಅಜ್ಞಾಥವಾಗಿ ಕಳೆದುಬಿಟ್ಟಿದ್ದರು. ಆದರೆ, ಇದರಿಂದಾಗಿ ಇಸ್ರೋದ ಸಾಧನೆಯ ವೇಗ ಕನಿಷ್ಠ 10 ವರ್ಷಗಳಷ್ಟು ಹಿಂದೆ ಹೋಯ್ತು. 2019ರಲ್ಲಿ ಕೇಂದ್ರ ಸರ್ಕಾರ ನಂಬಿ ನಾರಾಯಣನ್ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿತು.
ಅವರ ಚಿತ್ರವನ್ನೇ ಈಗ ಮಾಧವನ್ ರಾಕೆಟ್ರಿ ಅನ್ನೋ ಸಿನಿಮಾ ಮಾಡಿದ್ದಾರೆ. ಅದು ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದಲ್ಲಿ ಶಾರೂಕ್ ಖಾನ್ ಅವರದ್ದು ಅತಿಥಿ ನಟನ ಪಾತ್ರ. ಅದು ಕನ್ನಡದಲ್ಲೂ ಬರುತ್ತಿರೋದ್ರಿಂದ ಇದೇ ಮೊದಲ ಬಾರಿಗೆ ಶಾರೂಕ್ ಖಾನ್ ಕನ್ನಡಕ್ಕೂ ಬರುವಂತಾಗಿದೆ.