ದರ್ಶನ್ ಅವರದ್ದೊಂದು ಗುಣವಿದೆ. ಅವರಿಗೆ ಕಷ್ಟ ಕಾಲದಲ್ಲಿ ನೆರವಾದ ಒಬ್ಬರನ್ನೂ ಅವರು ಮರೆಯೋದಿಲ್ಲ. ಅದು ರಾಬರ್ಟ್ ಚಿತ್ರದ ಪ್ರೀ-ಈವೆಂಟ್ ಶೋನಲ್ಲೂ ಗೊತ್ತಾಯ್ತು. ರಾಬರ್ಟ್ ಈವೆಂಟ್ಗೆ ಹುಬ್ಬಳ್ಳಿಯಲ್ಲಿ ಜನಸ್ತೋಮವೇ ಸೇರಿತ್ತು. ಅಲ್ಲಿ ವೇದಿಕೆಯೇರಿದ ದರ್ಶನ್ ಇದ್ದಕ್ಕಿದ್ದಂತೆ ಚಪ್ಪಲಿ ಬಿಟ್ಟು ಮಾತನಾಡೋಕೆ ಶುರು ಮಾಡಿದ್ರು. ಅದಕ್ಕೆ ಕಾರಣವೂ ಇತ್ತು.
ನಮ್ಮ ಅಪ್ಪನಿಗೆ ಇದ್ದಕ್ಕಿದ್ದಂತೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಗಿದ್ದವು. ಹೆಚ್ಚೂ ಕಡಿಮೆ ಒಂದು ವರ್ಷ ಸಿನಿಮಾನೇ ಇರಲಿಲ್ಲ. ನಟಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲದ ನಮ್ಮ ತಂದೆ ಆಗ ಉತ್ತರ ಕರ್ನಾಟಕದಲ್ಲಿ ನಾಟಕ ಪ್ರದರ್ಶನ ಮಾಡಿದ್ರು. ಆಗೆಲ್ಲ ಟಿಕೆಟ್ಟಿನ ಬೆಲೆ ಎರಡೂವರೆ ರೂಪಾಯಿ, 5 ರೂಪಾಯಿ ಮತ್ತು 10 ರೂಪಾಯಿ. ಆಗ ಉತ್ತರ ಕರ್ನಾಟಕದ ಜನ ನಮ್ಮ ತಂದೆಯ ಕಂಪೆನಿಯ ನಾಟಕಗಳನ್ನು ನೋಡಿ ಕೊಟ್ಟ ಹಣವೇ ಇವತ್ತಿನ ನಮ್ಮ ಮೈಸೂರಿನ ಮನೆ. ಆ ಮನೆ ಉತ್ತರ ಕರ್ನಾಟಕದ ಜನರ ಪ್ರೀತಿಯ ಋಣ ಎಂದರು ದರ್ಶನ್.
ಅಷ್ಟೇ ಅಲ್ಲ, ಸಂಗೊಳ್ಳಿ ರಾಯಣ್ಣ ಚಿತ್ರದ ವಿಜಯೋತ್ಸವದಲ್ಲಿ ಉತ್ತರ ಕರ್ನಾಟಕಕ್ಕೆ ಹೋಗಿದ್ದಾಗ ಅಲ್ಲಿನ ಹೆಣ್ಣು ಮಕ್ಕಳು ತಲೆಯ ಮೇಲೆ ಸೆರಗು ಹೊದ್ದು, ಚಪ್ಪಲಿ ಬಿಟ್ಟು ದರ್ಶನ್ಗೆ ನಮಸ್ಕಾರ ಮಾಡುತ್ತಿದ್ದರಂತೆ. ಅದನ್ನೆಲ್ಲ ನೋಡಿದಾಗ ನಾವು ಇದಕ್ಕೆಲ್ಲ ಲಾಯಕ್ ಇದ್ದೇವಾ ಅನಿಸಿಬಿಡುತ್ತೆ. ಹೀಗಾಗಿಯೇ ಉತ್ತರ ಕರ್ನಾಟಕದಲ್ಲಿ ಎಲ್ಲೇ ಕಾರ್ಯಕ್ರಮ ನಡೆಯಲಿ, ವೇದಿಕೆಯ ಮೇಲೆ ನಿಂತಾಗ ಚಪ್ಪಲಿ ಧರಿಸೋಕೆ ಮುಜುಗರವಾಗುತ್ತೆ ಎಂದಿದ್ದಾರೆ ದರ್ಶನ್.
ದರ್ಶನ್ ಹೀಗೆ ಕೃತಜ್ಞತೆಯ ಭಾರವನ್ನು ಉತ್ತರ ಕರ್ನಾಟಕದ ಜನರ ಮೇಲೆ ಹೊರಿಸಿದರೆ, ಉತ್ತರ ಕರ್ನಾಟಕದ ಮಂದಿ ಅಭಿಮಾನದ ಹೂಮಳೆಯನ್ನೇ ದರ್ಶನ್ ಮೇಲೆ ಸುರಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಇದೇ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ವಿನೋದ್ ಪ್ರಭಾಕರ್, ಆಶಾ ಭಟ್, ರವಿಶಂಕರ್ ನಟಿಸಿರುವ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದ್ದರೆ, ಉಮಾಪತಿ ಚಿತ್ರದ ಪ್ರೊಡ್ಯೂಸರ್.