` ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಜನವರಿ 29. ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ 50
Kasturi Nivasa Movie Image

ಡಾ. ರಾಜ್‌ ಅಭಿನಯದ ಮಾಸ್ಟರ್ ಪೀಸ್ಗಳಲ್ಲಿ ಒಂದು ಕಸ್ತೂರಿ ನಿವಾಸ. ಈ ಚಿತ್ರಕ್ಕೀಗ 50 ವರ್ಷ. ಹೌದು, ಮೊನ್ನೆ ಮೊನ್ನೆಯಷ್ಟೇ ಈ ಚಿತ್ರ ಅರ್ಧ ಶತಮಾನ ಪೂರೈಸಿದೆ. 1971ರ ಜನವರಿ 29ರಂದು ತೆರೆಗೆ ಬಂದಿದ್ದ ಸಿನಿಮಾ, 2021ರ ಜನವರಿ 29ಕ್ಕೆ 50 ವರ್ಷ ಪೂರೈಸಿದ ದಾಖಲೆ ಬರೆದಿದೆ. ಈ ಚಿತ್ರದ ದಾಖಲೆಗಳು ಒಂದೆರಡಲ್ಲ..

ಈ ಚಿತ್ರದಲ್ಲಿ ಡಾ.ರಾಜ್ ರವಿ ಅನ್ನೋ ಉದ್ಯಮಿಯ ಪಾತ್ರದಲ್ಲಿ ನಟಿಸಿದ್ದರು. ಕೊಡುಗೈ ದೊರೆ ಉದ್ಯಮಿ, ಭಗ್ನಪ್ರೇಮಿ, ಗೆಳೆಯನಿಗೆ ಸಹಾಯ ಮಾಡಿ ಗೆಳೆಯನಿಂದಲೇ ಮೋಸ ಹೋಗುವ ಪಾತ್ರದಲ್ಲಿ ರಾಜ್ ನಟನೆ ಅಮೋಘವಾಗಿತ್ತು.

ರಾಜ್ ಎದುರು ನಾಯಕಿಯಾಗಿ ನಟಿಸಿದ್ದವರು ಜಯಂತಿ ಮತ್ತು ಆರತಿ.

ಕೆಸಿಎನ್‌ ಗೌಡ ನಿರ್ಮಾಣದ ಚಿತ್ರಕ್ಕೆ ದೊರೈ ಭಗವಾನ್ ಜೋಡಿಯ ನಿರ್ದೇಶನವಿತ್ತು. ರಾಜಾಶಂಕರ್, ಕೆಎಸ್‌ ಅಶ್ವತ್ಥ್ ಅವರ ಪೋಷಕ ಪಾತ್ರಗಳೂ ಜನರಿಗೆ ಇಷ್ಟವಾಗಿದ್ದವು.

ಈ ಚಿತ್ರದಲ್ಲಿದ್ದದ್ದು 6 ಹಾಡು. ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದ ಎಲ್ಲ ಹಾಡುಗಳೂ ಸೂಪರ್ ಹಿಟ್. ಎಲ್ಲ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದವರು ಚಿ.ಉದಯ್ ಶಂಕರ್.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.. & ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ.. ಒಂದೇ ಟ್ರ್ಯಾಕ್ನಲ್ಲಿ ಇರುವ ಎರಡು ವಿಷಾದ ಗೀತೆಗಳು. ನೀ ಬಂದು ನಿಂತಾಗ ನಿಂತು ನೀ ನಕ್ಕಾಗ.. ಹಾಡಂತೂ ಇಂದಿಗೂ ಪ್ರೇಮಿಗಳ ಎದೆಯಲ್ಲಿ ರೋಮಾಂಚನ ಸೃಷ್ಟಿಸುತ್ತದೆ. ಆಡೋಣ ನೀನು ನಾನು.. ಹಾಡು ಮಗುವಿಗೆ ಹಾಡುಗ ಜೋಗುಳ ಗೀತೆಯಾದರೆ, ಎಲ್ಲೇ ಇರು ಹೇಗೇ ಇರು.. ಹಾಡು ಪ್ರೇಮಿ.. ಪ್ರೇಮಿಗಾಗಿಯೇ ಹಾಡುವ ಗೀತೆ. ಓ ಗೆಳೆಯ.. ಅನ್ನೋ ಕ್ಯಾಬರೆ ಸಾಂಗ್ ಕೊಟ್ಟ ಥ್ರಿಲ್ಲೇ ಬೇರೆ.

ಈ ಕ್ಲಾಸಿಕ್ ಸಿನಿಮಾದ ಓಪನಿಂಗ್ ಡಲ್ ಹೊಡೆದಿತ್ತು. ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದ್ದು 9ನೇ ವಾರದ ಬಳಿಕ. ಅದಾದ ಮೇಲೆ ಈ ಚಿತ್ರ ಸತತ 100 ವಾರ ಓಡಿ ದಾಖಲೆಯನ್ನೇ ಬರೆಯಿತು. ಕಸ್ತೂರಿ ನಿವಾಸ ಚಿತ್ರವನ್ನ ಕಲರ್ನಲ್ಲಿ 2014ರಲ್ಲಿ ರಿಲೀಸ್ ಮಾಡಿದಾಗಲೂ 100 ಡೇಸ್ ಓಡಿದ್ದು ಈ ಚಿತ್ರದ ಸಾಧನೆ.

ವಿಶೇಷವೆಂದರೆ ಈ ಚಿತ್ರವನ್ನು ಕಲರ್ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದ ಚಿತ್ರತಂಡ, ಬಜೆಟ್ 5 ಲಕ್ಷ ದಾಟಲಿದೆ ಎಂಬ ಕಾರಣಕ್ಕೆ ಬ್ಲಾಕ್ & ವೈಟ್ನಲ್ಲಿ ಚಿತ್ರೀಕರಣ ಮಾಡಿತಂತೆ. ಈ ಚಿತ್ರಕ್ಕೆ ಕಥೆ ಬರೆದಿದ್ದವರು ಜಿ.ಬಾಲಸುಬ್ರಹ್ಮಣ್ಯಂ. ಶಿವಾಜಿ ಗಣೇಶನ್ ಅವರನ್ನು ಕಲ್ಪಿಸಿಕೊಂಡು ಬರೆದಿದ್ದ ಕಥೆ, ಶಿವಾಜಿ ಗಣೇಶನ್ಗೇ ಇಷ್ಟವಾಗಲಿಲ್ಲ.  ದುರಂತದ ಕ್ಲೈಮಾಕ್ಸ್ ಬೇಡ ಎಂದ ಕಾರಣಕ್ಕೆ ಕನ್ನಡಕ್ಕೆ ಬಂದ ಕಥೆ ಕಸ್ತೂರಿ ನಿವಾಸ. ತಮಿಳಿನಲ್ಲಿ ಈ ಕಥೆಗಾಗಿ 25 ಸಾವಿರ ಖರ್ಚು ಮಾಡಲಾಗಿತ್ತು. ನಂತರ ಇದನ್ನು ಕನ್ನಡಕ್ಕೆ 38 ಸಾವಿರ ಕೊಟ್ಟು ತರಲಾಯ್ತು. ವಿಶೇಷ ಅಂದ್ರೆ ಈ ಕಥೆ ಅಣ್ಣಾವ್ರ ಸಹೋದರ ವರದಪ್ಪನವರಿಗೂ ಅಷ್ಟು ಇಷ್ಟವಾಗಿರಲಿಲ್ಲ. ಕ್ಲೈಮಾಕ್ಸ್ ಬಗ್ಗೆ ಅವರಿಗೂ ತಕರಾರಿತ್ತು. ಆದರೆ ಡಾ.ರಾಜ್ ಅವರೇ ಒಪ್ಪಿಸಿದರಂತೆ. ನಂತರ ಆ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿಬಿಡ್ತು.

20 ದಿನದಲ್ಲಿ ರೆಡಿಯಾದ ಚಿತ್ರಕ್ಕೆ ಆಗಿನ ಕಾಲಕ್ಕೆ 3 ಲಕ್ಷದ 75 ಸಾವಿರ ಬಜೆಟ್ ಆಗಿತ್ತು. ಅದೇ ಚಿತ್ರವನ್ನು ಕಲರ್ ಮಾಡಿದಾಗ ಚಿತ್ರಕ್ಕೆ ಬಣ್ಣ ತುಂಬಲು 20 ತಿಂಗಳು ತಗುಲಿತ್ತು. ಮೊದಲ ವಾರದಲ್ಲೇ ಅಣ್ಣಾವ್ರ ಹಳೆಯ ಚಿತ್ರ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.

ಅಣ್ಣಾವ್ರು ಈ ಚಿತ್ರಕ್ಕೆ ಪಡೆದಿದ್ದ ಸಂಭಾವನೆ 15 ಸಾವಿರ ರೂಪಾಯಿಗಳು. ಆ ಚಿತ್ರದಲ್ಲಿ ಡಾ.ರಾಜ್ ಅವರ ಹೆಗಲ ಮೇಲೆ ಕೂರುವ ಪಾರಿವಾಳವನ್ನು 500 ರೂ. ಕೊಟ್ಟು ತರಲಾಗಿತ್ತು. ಅದಕ್ಕಿಂತ ಮಜಾ ಇನ್ನೊಂದಿದೆ.

ಯಾವ ಶಿವಾಜಿ ಗಣೇಶನ್ ಈ ಚಿತ್ರವನ್ನು ಬೇಡ ಎಂದು ತಿರಸ್ಕರಿಸಿದ್ದರೋ, ನಂತರ ಅವರೇ ಈ ಚಿತ್ರವನ್ನು ರೀಮೇಕ್ ಮಾಡಲು 2 ಲಕ್ಷ ಕೊಟ್ಟು ಹಕ್ಕುಗಳನ್ನು ಪಡೆದುಕೊಂಡರು. ಆದರೆ, ಡಾ.ರಾಜ್ ಅವರ ಅಭಿನಯದ ಎತ್ತರಕ್ಕೆ ನನ್ನ ಅಭಿನಯ ಬರಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ಶಿವಾಜಿ ಗಣೇಶನ್.