ಮಲಯಾಳಂ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ನಟಿಯೊಬ್ಬರ ಅಪಹರಣ ಹಾಗೂ ಅತ್ಯಾಚಾರ ಯತ್ನ ಪ್ರಕರಣದ ಆರೋಪಿ ಮಲಯಾಳಂ ನಟ ದಿಲೀಪ್ ವಿರುದ್ಧ 50ಕ್ಕೂ ಹೆಚ್ಚು ಸ್ಯಾಂಡಲ್ವುಡ್ ತಾರೆಯರು ಒಂದಾಗಿದ್ದಾರೆ. ದಿಲೀಪ್ ಅವರಿಗೆ ಅಮ್ಮಾ (AMMA- ಮಲಯಾಳಂ ಚಿತ್ರರಂಗದ ಒಕ್ಕೂಟ)ದಲ್ಲಿ ಮತ್ತೊಮ್ಮೆ ಸದಸ್ಯತ್ವ ನೀಡಿರುವುದನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಫೈರ್ (FIRE -ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ & ಈಕ್ವಾಲಿಟಿ) ಮೂಲಕ ಅಮ್ಮಾ ವಿರುದ್ಧ ಸಿಡಿದೆದ್ದಿದ್ದಾರೆ. ಚಿತ್ರನಟಿಯ ಮೇಲೆ ರೇಪ್ ಮಾಡಿಸೋಕೆ ಪ್ರಯತ್ನಿಸಿದ್ದ ಆರೋಪಿ ದಿಲೀಪ್ ಅವರನ್ನು ಮತ್ತೊಮ್ಮೆ ಸಂಘಟನೆಗೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ ಮಲಯಾಳಂನ ಕೆಲವು ಚಿತ್ರನಟಿಯರು ವಿರೋಧಿಸಿದ್ದರು. ಸಂಘಟನೆಯಿಂದ ಹೊರಬಂದು ಪ್ರತಿಭಟಿಸಿದ್ದರು. ಈಗ ಕನ್ನಡ ಚಿತ್ರರಂಗದ ಸರದಿ.
AMMA ಸಂಸ್ಥೆಯ ಅಧ್ಯಕ್ಷ ಮೋಹನ್ಲಾಲ್ ವಿರುದ್ಧ ಈಗ ಸ್ಯಾಂಡಲ್ವುಡ್ ಕೂಡಾ ಪ್ರತಿಭಟಿಸಿದೆ. ಚಿತ್ರನಟರಾರದ ರಕ್ಷಿತ್ ಶೆಟ್ಟಿ, ದಿಗಂತ್, ಐಂದ್ರಿತಾ ರೇ, ರಶ್ಮಿಕಾ ಮಂದಣ್ಣ, ಶೃತಿ ಹರಿಹರನ್, ಪ್ರಕಾಶ್ ರೈ, ಸೋನು ಗೌಡ, ಮೇಘನಾ ರಾಜ್, ನಿವೇದಿತಾ, ಲತಾ ಹೆಗ್ಡೆ, ಧನಂಜಯ್, ಮಾನ್ವಿತಾ ಹರೀಶ್, ನಿರ್ದೇಶಕರಾದ ಯೋಗರಾಜ್ ಭಟ್, ಕವಿರಾಜ್, ಕವಿತಾ ಲಂಕೇಶ್, ಪನ್ನಗಾಭರಣ ಸೇರಿದಂತೆ 50ಕ್ಕೂ ಹೆಚ್ಚು ತಾರೆಯರು ಈ ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಇವರಲ್ಲಿ ಮೇಘನಾ ರಾಜ್, ಪ್ರಕಾಶ್ ರೈ, ಶ್ರುತಿ ಹರಿಹರನ್ ಮಲಯಾಳಂ ಚಿತ್ರರಂಗದಲ್ಲೂ ಸಕ್ರಿಯಗಿರೋದು ವಿಶೇಷ.
ಕನ್ನಡದಲ್ಲೂ ಬಹುತೇಕ ಸ್ಟಾರ್ನಟರ ಜೊತೆ ನಟಿಸಿರುವ ಚಿತ್ರನಟಿಯೊಬ್ಬರಿಗೆ ಲೈಂಗಿಕ ಕಿರುಕುಳ, ಅಪಹರಣ, ಅತ್ಯಾಚಾರ ಯತ್ನ ಸೇರಿದಂತೆ 17 ಸೆಕ್ಷನ್ಗಳಲ್ಲಿ ದಿಲೀಪ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಆ ಪ್ರಕರಣ, ಇಡೀ ಭಾರತ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಅದಾದ ನಂತರ ಭಾರಿ ಪ್ರತಿಭಟನೆ ವ್ಯಕ್ತವಾದ ನಂತರವೇ ಅವರನ್ನು ಅಮ್ಮಾ ಸಂಘಟನೆಯಿಂದ ಬಹಿಷ್ಕರಿಸಲಾಗಿತ್ತು. ಆದರೆ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ದಿಲೀಪ್ ಅವರಿಗೆ ಮತ್ತೆ ಸದಸ್ಯತ್ವ ನೀಡಿರುವುದು ದಕ್ಷಿಣ ಭಾರತದ ಹಲವು ಕಲಾವಿದರು, ತಂತ್ರಜ್ಞರ ಅಕ್ರೋಶಕ್ಕೆ ಕಾರಣವಾಗಿದೆ.