ಕರ್ನಾಟಕ ಫಿಲಂ ಚೇಂಬರ್ ಚುನಾವಣೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಚುನಾವಣೆ ವಾಣಿಜ್ಯ ಮಂಡಳಿ ಬೈಲಾ ಪ್ರಕಾರ ನಡೆದಿಲ್ಲ. ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಸಾ.ರಾ.ಗೋವಿಂದು, ಬಿ.ಕೆ.ಜಯಸಿಂಹ ಮುಸುರಿ, ರಮೇಶ್ ಕಶ್ಯಪ್, ಕೆ.ಎಂ.ವೀರೇಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಾಥಮಿಕ ಮಾಹಿತಿ ವಾಣಿಜ್ಯ ಮಂಡಳಿಗೆ ಯಾವುದೇ ಶಾಸನಾತ್ಮಕ ಮತ್ತು ಆರ್ಥಿಕ ತೀರ್ಮಾನ ಕೈಗೊಳ್ಳದಂತೆ ಸೂಚನೆ ನೀಡಿದೆ. ಇದು ಮಧ್ಯಂತರ ಆದೇಶ.
ಅಲ್ಲದೆ ಚುನಾವಣೆ ವೇಳೆ ಬಳಸಿರುವ ಬ್ಯಾಲೆಟ್ ಪೇಪರ್, ಮತದಾರರಿಗೆ ನೀಡಿದ ಗುರುತಿನ ಚೀಟಿ, ಮಹಜರ್ ಆಗಿರುವ ಬಾಕ್ಸ್ಗಳು, ಸಿಸಿಟಿವಿ ಕ್ಯಾಮೆರಾ ಫುಟೇಜ್, ಚುನಾವಣಾಧಿಕಾರಿಗಳು ರೆಕಾರ್ಡ್ ಮಾಡಿರುವ ವಿಡಿಯೋಗಳು, ಎಲೆಕ್ಷನ್ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಸೇರಿದಂತೆ ಎಲ್ಲವನ್ನೂ ಸೀಲ್ ಮಾಡಿ ಇಡಬೇಕು. ಚುನಾವಣೆ ಸಂಬಂಧ ದಾಖಲೆ/ಮಾಹಿತಿಗಳನ್ನೂ ಸರಿಯಾಗಿ ಕ್ರೋಢೀಕರಿಸಿ ಇಡಬೇಕು ಎನ್ನುವುದು ಸಹಕಾರ ಸಂಘ ಮಧ್ಯಂತರ ಆದೇಶದ ಸೂಚನೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಗೆದ್ದಿದ್ದರು.
ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ ಜೈಜಗದೀಶ್, ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜ್, ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು.
ವಿತರಕರ ವಲಯದಿಂದ ಎನ್.ಎಂ.ಕುಮಾರ್, ಪ್ರದರ್ಶಕರ ವಲಯದಿಂದ ಕುಶಾಲ್ ಗೌರವ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು. ಆದರೆ, ಈ ಆಯ್ಕೆಯಲ್ಲೇ ಅಕ್ರಮ ನಡೆದಿದೆ ಹಾಗೂ ಬೈಲಾ ಪ್ರಕಾರ ನಡೆದಿಲ್ಲ ಎನ್ನುವುದು ದೂರು. ಹೀಗಾಗಿ ಸಹಕಾರ ಸಂಘ ಫಿಲಂ ಚೇಂಬರ್ ಪ್ರಮುಖ ನಿರ್ಧಾರ ತೆಗೆದುಕೊಳ್ಳದಂತೆ ಮಧ್ಯಂತರ ತಡೆ ನೀಡಿದೆ. ಆದರೆ, ಎಂದಿನ ಕೆಲಸಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.