` dhruva sarja, - chitraloka.com | Kannada Movie News, Reviews | Image

dhruva sarja,

  • ಬಹದ್ದೂರ್ ಗಂಡು ಧ್ರುವ, ಲೆಕ್ಚರರ್ ಪ್ರೇರಣಾ ಲವ್ ಸ್ಟೋರಿ

    dhruva sarja prerna's 10 year old love story

    ಅದ್ಧೂರಿ, ಬಹದ್ದೂರ್, ಭರ್ಜರಿ ಮೂಲಕ ಹ್ಯಾಟ್ರಿಕ್ ಹಿಟ್ ನೀಡಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲವ್ವಲ್ಲಿ ಬಿದ್ದಿದ್ದರು ಅನ್ನೋದು ಗುಟ್ಟಾಗಿಯೇನೂ ಇರಲಿಲ್ಲ. ತಾನು ಮದುವೆಯಾಗುವುದಾದರೆ ಪ್ರೀತಿಸಿಯೇ ಮದುವೆಯಾಗುತ್ತೇನೆ ಎಂದಿದ್ದ ಧ್ರುವ, ಈಗ ತಮ್ಮ ಹೃದಯ ಕದ್ದ ಹುಡುಗಿಯ ಜೊತೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.

    ಧ್ರುವ ಸರ್ಜಾ ಅವರ ಸಂಗಾತಿಯ ಹೆಸರು ಪ್ರೇರಣಾ. ಪಕ್ಕದ್ಮನೆ ಹುಡುಗಿ. ಪ್ರೀತಿ ಇವತ್ತು ನಿನ್ನೆಯದ್ದಲ್ಲ. ಇದು 16 ವರ್ಷಗಳ ಪ್ರೀತಿ. ಲವ್ ಶುರುವಾಗುವಾಗ ಧ್ರುವ ಸರ್ಜಾ ಹೀರೋ ಆಗಿರಲಿಲ್ಲ. ಸ್ಟಾರ್ ಆಗಿರಲಿಲ್ಲ. ಈಗ ಸ್ಟಾರ್ ಆದ ಮೇಲೂ ಪ್ರೀತಿ ಹಾಗೆಯೇ ಇದೆ. ಇಬ್ಬರ ಮದುವೆಗೆ ಹಿರಿಯರು ಒಪ್ಪಿದ್ದಾರೆ.

    ಚಿತ್ರರಂಗಕ್ಕೆ ಬರುವ ಮುನ್ನವೇ ಪ್ರೇರಣಾರನ್ನು ಪ್ರೀತಿಸಿದ್ದೆ. ನಮ್ಮ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಡಿಸೆಂಬರ್ 9ರಂದು ನಿಶ್ಚಿತಾರ್ಥ ಎಂದಿದ್ದಾರೆ ಧ್ರುವ ಸರ್ಜಾ.

    ಬೆಂಗಳೂರಿನ ಬನಶಂಕರಿಯಲ್ಲಿರುವ ವೀರಾಂಜೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 9ರಂದು ನಿಶ್ಚಿತಾರ್ಥ ನೆರವೇರಲಿದೆ. ನಂತರ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥದ ವಿಶೇಷ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.

  • ಬಹಾದ್ದೂರ್‍ನ ಭರ್ಜರಿಯೂ ಸೆಂಚುರಿ.. ಸಂಭ್ರಮ ಅದ್ಧೂರಿ

    bharjari completes 100 days

    ಧ್ರುವ ಸರ್ಜಾ ಅವರ ಭರ್ಜರಿ ಚಿತ್ರ ಭರ್ಜರಿ ಯಶಸ್ಸನ್ನೇ ಕಂಡಿದೆ. ಚಿತ್ರ ಹಿಟ್ ಎಂಬ ಸೂಚನೆ ಸಿಕ್ಕ ದಿನದಿಂದಲೂ ಚಿತ್ರತಂಡ, ಸಿನಿಮಾದ ಪ್ರತಿ ಮೈಲುಗಲ್ಲನ್ನೂ ಸಂಭ್ರಮಿಸುತ್ತಾ ಬಂದಿತ್ತು. 25 ದಿನ, 50 ದಿನ & 75ನೇ ದಿನದ ಸಂಭ್ರಮವನ್ನು ಥಿಯೇಟರುಗಳಲ್ಲಿ ಆಚರಿಸಿತ್ತು. ಧ್ರುವ ಸರ್ಜಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.

    ಇಂದು ಚಿತ್ರಕ್ಕೆ 100 ದಿನ. ಶತದಿನೋತ್ಸವದ ಸಂಭ್ರಮವೂ ಜೋರಾಗಿಯೇ ನಡೆಯಲಿದೆ. ಇಂದು ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಮೈಸೂರು ಬ್ಯಾಂಕ್ ಸರ್ಕಲ್‍ನಿಂದ ನರ್ತಕಿ ಚಿತ್ರಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಕೇರಳ ಚಂಡೆ, ಕೀಲುಗೊಂಬೆ, ತಮಟೆ.. ಎಲ್ಲ ವಾದ್ಯಗಳ ಮೇಳವೂ ಇರಲಿದೆ.

    ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಹೂವಿನ ಅಭಿಷೇಕ, ಪಟಾಕಿಗಳ ಮೊರೆತ ಇರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‍ಗೆ ಅಭಿಷೇಕವೂ ನಡೆಯಲಿದೆ. 101 ಕೆಜಿಯ ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಭರ್ಜರಿ ಶತದಿನೋತ್ಸವ.. ಸಿನಿಮಾದವರೇ ಹೋಗಲ್ಲ..!

    bharjari to celebrate 100 days function

    ಭರ್ಜರಿ. ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. ಧ್ರುವ, ರಚಿತಾ ರಾಮ್, ಹರಿಪ್ರಿಯಾ ನಟಿಸಿರುವ ಚಿತ್ರ ಸೂಪರ್ ಹಿಟ್ ಆಗಿ, ಶತದಿನೋತ್ಸವ ಆಚರಿಸಿತ್ತು. ಆದರೆ, ಚಿತ್ರದ ಬಿಡುಗಡೆಗೂ ಮೊದಲಿನಿಂದ ಚಿತ್ರತಂಡ ಹಾಗೂ ನಿರ್ಮಾಪಕರ ಮಧ್ಯೆ ತಿಕ್ಕಾಟ ನಡೆದೇ ಇತ್ತು. ಚಿತ್ರತಂಡ, ಭರ್ಜರಿ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿದೆ ಎಂದಿದ್ದರೆ, ನಿರ್ಮಾಪಕ ಶ್ರೀನಿವಾಸ್.. ಅದೆಲ್ಲ ಸುಳ್ಳು. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಸುಳ್ಳು ಹೇಳ್ತಿದ್ದಾರೆ ಎಂದಿದ್ದರು.

    ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್, ಭರ್ಜರಿ ಚಿತ್ರದ ಶತದಿನ ಸಮಾರಂಭ ಏರ್ಪಡಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಆರ್.ವಿ.ದೇವರಾಜ್, ವಿತರಕ ಭಾಷಾ ಮೊದಲಾದವರು ಬರುತ್ತಿದ್ದಾರೆ. ಮಾರ್ಚ್ 30ನೇ ತಾರೀಕು ಕನಕಪುರ ರಸ್ತೆಯ ಮುನೇಶ್ವರ ದೇವಸ್ಥಾನದ ಬಳಿ ಶತದಿನೋತ್ಸವ ಕಾರ್ಯಕ್ರಮ ನಡೆಯಲಿದೆ.

    ಆದರೆ, ಆ ಕಾರ್ಯಕ್ರಮಕ್ಕೆ ಚಿತ್ರತಂಡದವರೇ ಹೋಗುತ್ತಿಲ್ಲ. ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡದ ಎಲ್ಲ ಸದಸ್ಯರೂ ಈ ಸಮಾರಂಭದಿಂದ ದೂರವೇ ಉಳಿದಿದ್ದಾರೆ. ನಿರ್ಮಾಪಕರು ಅಷ್ಟರಮಟ್ಟಿಗೆ ಚಿತ್ರತಂಡದವರ ಜೊತೆ ಬಾಂಧವ್ಯ ಕೆಡಿಸಿಕೊಂಡಿದ್ದಾರಾ..? ಚಿತ್ರತಂಡದವರನ್ನು ಕೇಳಿದರೆ ಒಬ್ಬೊಬ್ಬರ ಬಳಿಯೂ ಮೈಲುದ್ದದ ದೂರುಗಳಿವೆ. ಸಿನಿಮಾ ಸದಸ್ಯರೇ ಇಲ್ಲದೆ ಸಿನಿಮಾ ಶತದಿನೋತ್ಸವ ನಡೆಯುತ್ತಾ..? ವೇಯ್ಟ್ ಮಾಡಿ.

  • ಭರ್ಜರಿ.. ಭರ್ಜರಿ ಹಿಟ್.. ಆದರೆ, ಸಂಭಾವನೆ ಕಟ್

    bharjari hit

    ಭರ್ಜರಿ. ಧ್ರುವ ಸರ್ಜಾ ಅವರಿಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. 100 ದಿನ ಪೂರೈಸಿರುವ ಚಿತ್ರದ ಕಲಾವಿರದರು, ತಂತ್ರಜ್ಞರು ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದರೂ, ಆ ಸಂಭ್ರಮ ಅವರ ಮುಖದಲ್ಲಿಲ್ಲ. ಕಾರಣ, ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್. ನಿರ್ಮಾಪಕರು ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಸರಿಯಾಗಿ ಸಂಭಾವನೆ ಕೊಟ್ಟಿಲ್ಲ.

    ಈ ಚಿತ್ರತಂಡದ ಕಲಾವಿದರು, ತಂತ್ರಜ್ಞರಿಗೂ ಅನ್ನೋಕೆ ಕಾರಣವೂ ಇದೆ. ಇದೇ ಕನಕಪುರ ಶ್ರೀನಿವಾಸ್, ದನಕಾಯೋನು ಚಿತ್ರಕ್ಕೂ ನಿರ್ಮಾಪಕರಾಗಿದ್ದವರು. ಆ ಚಿತ್ರವೂ ಹಿಟ್ ಆಗಿತ್ತು. ಆ ಚಿತ್ರದ ನಿರ್ದೇಶಕ, ತಂತ್ರಜ್ಞರಿಗೂ ಶ್ರೀನಿವಾಸ್ ಸಂಭಾವನೆ ಕೊಟ್ಟಿರಲಿಲ್ಲ. ಭರ್ಜರಿ ಚಿತ್ರದ ಬಿಡುಗಡೆ ವೇಳೆ ಕೋರ್ಟ್ ಮೆಟ್ಟಿಲೇರುವ ಸೂಚನೆ ನಿಡಿದ್ದ ನಿರ್ದೇಶಕ ಯೋಗರಾಜ್ ಭಟ್, ಭರ್ಜರಿ ಸಿನಿಮಾ ಬಿಡುಗಡೆಗೆ ತೊಡಕಾಗದಿರಲಿ ಎಂದು ಸುಮ್ಮನಾಗಿದ್ದರು.  ಶ್ರೀನಿವಾಸ್ ಕೂಡಾ ಮತ್ತೊಮ್ಮೆ ಸಂಭಾವನೆ ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಮತ್ತೊಮ್ಮೆ ಸುಳ್ಳಾಗಿತ್ತು. ಯೋಗರಾಜ್ ಭಟ್ಟರಿಗೆ ಕೊಟ್ಟಿದ್ದ ಚೆಕ್ಕು, ಮತ್ತೊಮ್ಮೆ ಬೌನ್ಸ್ ಆಗಿತ್ತು. ಹೀಗಾಗಿ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗ ಮತ್ತೊಮ್ಮೆ ಅದೇ ನಿರ್ಮಾಪಕರ ವಿರುದ್ಧ ಭರ್ಜರಿ ಚಿತ್ರತಂಡದ ಕಲಾವಿದರು ತಂತ್ರಜ್ಞರಿಂದಲೂ ಆರೋಪ ಕೇಳಿಬಂದಿದೆ. ಸ್ವತಃ ಧ್ರುವ ಸರ್ಜಾ ಇದನ್ನು ಒಪ್ಪಿಕೊಂಡಿದ್ದಾರೆ. ನಾವೇನೋ ರಾಜಿಗೆ ಬರಬಹುದು. ಸುಮ್ಮನಾಗಬಹುದು. ಆದರೆ, ನಿರ್ಮಾಪಕರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗೆ ಕೆಲಸ ಮಾಡಿದವರಿಗೆ ಕೊಡಬೇಕಾದ ಸಂಭಾವನೆ ಕೊಡುವುದು ಮುಖ್ಯ ಎಂದಿದ್ದಾರೆ ಧ್ರುವ ಸರ್ಜಾ.

    ಹೀಗಾಗಿ ಸಿನಿಮಾ ಶತದಿನೋತ್ಸವ ಆಚರಿಸಿದ್ದರೂ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಚಿತ್ರತಂಡ ಇಲ್ಲ. ಕನಕಪುರ ಶ್ರೀನಿವಾಸ್ ಹೀಗೇಕೆ ಮಾಡ್ತಾರೋ ಅರ್ಥವಾಗಲ್ಲ. 

     

  • ಭರ್ಜರಿ' ಬಾಕ್ಸಾಫೀಸ್ ರಿಯಲ್ ಕಲೆಕ್ಷನ್ ಎಷ್ಟು..?

    bharjari's real box office collection ad per producer

    ಭರ್ಜರಿ, ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ನೀಡಿದ ಚಿತ್ರ. ರಚಿತಾ ರಾಮ್, ಹರಿಪ್ರಿಯಾ ನಟಿಸಿದ್ದ ಚಿತ್ರ, ಶತದಿನೋತ್ಸವವನ್ನಾಚರಿಸಿತ್ತು. ಆಗ ಕೇಳಿಬಂದಿದ್ದ ಸುದ್ದಿಯೇನೆಂದರೆ, ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿದೆ ಅನ್ನೋದು. ಈ ಕುರಿತು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಾಯ್ಬಿಟ್ಟಿದ್ದಾರೆ.

    ಭರ್ಜರಿ 50 ಕೋಟಿ ಕಲೆಕ್ಷನ್ ಮಾಡಿಲ್ಲ. ಚಿತ್ರಕ್ಕೆ 17 ಕೋಟಿ ಖರ್ಚು ಮಾಡಿದ್ದೆ. 21 ಕೋಟಿ ಬಂತು. ಲಾಭ ಎಂದು ನನಗೆ ಸಿಕ್ಕಿದ್ದು 3 ಕೋಟಿ ಮಾತ್ರ ಎಂದಿದ್ದಾರೆ ಶ್ರೀನಿವಾಸ್.

    ಕೋಟಿ ಕೋಟಿ ಕಲೆಕ್ಷನ್ ಆಯ್ತು ಎಂದು ಮಾತನಾಡಿಬಿಟ್ಟರೆ, ಸಂಭಾವನೆ ಹೆಚ್ಚುತ್ತೆ ಅನ್ನೋದು ಕಾರಣ ಇರಬಹುದೇನೋ ಎಂದು ಧ್ರುವ ಸರ್ಜಾರತ್ತಲೇ ಬ್ಯಾಟು ಬೀಸಿದ್ದಾರೆ. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಬೋಗಸ್ ಫಿಗರ್ ಕೊಡಬಾರದು. ಹಾಗೆ ಹೇಳಿದವರಿಗೆ ಉಗೀರಿ ಎಂದಿದ್ದಾರೆ ಕನಕಪುರ ಶ್ರೀನಿವಾಸ್.

  • ಮದುವೆ ಸಮಯದಲ್ಲೂ ಧ್ರುವ ಸರ್ಜಾ ಗಡ್ಡಕ್ಕಿಲ್ಲ ಮುಕ್ತಿ..?

    dhruva sarja to retain his beard for wedding

    ಧ್ರುವ ಸರ್ಜಾ ಮದುವೆಗೆ ರೆಡಿಯಾಗಿದ್ದಾರೆ. ಪ್ರೇರಣಾ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆಯಲ್ಲೂ ಹೀಗೇ ಇರೋಕಾಗುತ್ತಾ..? ಶೇವ್ ಮಾಡಿಕೊಂಡು ಸ್ಮಾರ್ಟ್ ಆಗಿರುತ್ತೇನೆ ಎಂದಿದ್ದರು ಧ್ರುವ. ಅದಕ್ಕೆ ತಕ್ಕಂತೆ ಪೊಗರು ಶೂಟಿಂಗ್ ಮುಗೀತಂತೆ ಅನ್ನೋ ಸುದ್ದಿಯೂ ಬಂದಿತ್ತು. ಆದರೆ, ಈಗಿನ ಅಪ್‌ಡೇಟ್ ಬೇರೆ. ಮದುವೆ ನವೆಂಬರ್ 24ಕ್ಕೆ. ನವೆಂಬರ್ 25ರ ನಂತರ ಮತ್ತೆ ಪೊಗರು ಶೂಟಿಂಗ್ ಇದೆ ಎಂದಿದ್ದಾರೆ ಧ್ರುವಾ.

    ಹಾಗಾದರೆ, ಪೊಗರು ಗೆಟಪ್ ಕಂಟಿನ್ಯೂ ಆಗುತ್ತಾ..? ಗೊತ್ತಿಲ್ಲ. ಅಥವಾ ಇನ್ನೂ ಒಂದು ಮಾತಿದೆ. ಪೊಗರುನಲ್ಲಿ ಗಡ್ಡದ ಗೆಟಪ್ ಶೂಟಿಂಗ್ ಮುಗಿದಿದ್ದರೆ, ಗಡ್ಡಕ್ಕೆ ಮುಕ್ತಿ ಸಿಗಲಿದೆ. ಸದ್ಯಕ್ಕೆ ಧ್ರುವ ಸರ್ಜಾ ಪೊಗರು ಹೀಗೇ ಇರಲಿದೆ. ಅದ್ಧೂರಿ, ಭರ್ಜರಿ ಧ್ರುವ ಸದ್ಯಕ್ಕಿಲ್ಲ.

  • ಮಾ.27ಕ್ಕೆ ಪೊಗರುನ ಕರಾಬ್ ಸಾಂಗ್

    khabaru song on marcha 27th

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ನಂದ ಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು. ಟ್ರೇಲರಿನ ಪೊಗರು ನೋಡಿಯೇ ಥ್ರಿಲ್ಲಾಗಿರುವ ಫ್ಯಾನ್ಸ್‍ಗೆ ಮಾರ್ಚ್ 27ಕ್ಕೆ ಕರಾಬು ಸಾಂಗ್ ಮೂಲಕ ಮತ್ತೊಂದು ಥ್ರಿಲ್ ಕೊಡೋಕೆ ರೆಡಿಯಾಗಿದೆ ಪೊಗರು ಟೀಂ.

    ಮಾ.27ರಂದು ಆನಂದ್ ಆಡಿಯೋನಲ್ಲಿ ಪೊಗರು ಚಿತ್ರದ ಕರಾಬ್.. ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. 

  • ಮಾರ್ಚ್ ಅಂತ್ಯಕ್ಕೆ ಪೊಗರು

    pogaru to release in march

    ಧ್ರುವ ಸರ್ಜಾ ಅಭಿನಯದ ಪೊಗರು ಯಾವಾಗ ರಿಲೀಸ್ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಚಿತ್ರದ ಶೂಟಿಂಗ್ ಮುಗಿಸಿದ್ದು, ಮೊದಲನೇ ಹಂತದ ಡಬ್ಬಿಂಗ್ ಕೂಡಾ ಮುಗಿದಿದೆಯಂತೆ.

    ದ್ವಿತಿಯಾರ್ಧದ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದೆ. ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ ನಿರ್ದೇಶಕ ನಂದ ಕಿಶೋರ್.

    ಧ್ರುವ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್‌ಗಳಾದ ಮೋರ್ಗನ್‌ ಆಸ್ಟೆ, ಕೈಗ್ರೀನ್‌ , ಜಾನ್‌ ಲುಕಾಸ್‌, ಜೋಸ್ಥೆಟಿಕ್ಸ್‌ ಧ್ರುವ ಜೊತೆ ಫೈಟ್ ಮಾಡಿದ್ದು, ಚಿತ್ರಕ್ಕೆ ಸಹಜವಾಗಿಯೇ ದೊಡ್ಡ ಮಟ್ಟದ ಹೈಪ್ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ ಮೇಲೆ ಧ್ರುವ ಅವರಿಗಾಗಿಯೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ. ಪೊಗರು ರಿಲೀಸ್ ಆದ ಮೇಲೆ ಆ ಚಿತ್ರದ ಬಗ್ಗೆ ಹೇಳುತ್ತಾರಂತೆ ನಂದಕಿಶೋರ್.

  • ಮಾರ್ಟಿನ್ : ಇನ್ನೂ 15 ದಿನ ಶೂಟಿಂಗ್ ಬಾಕಿ

    ಮಾರ್ಟಿನ್ : ಇನ್ನೂ 15 ದಿನ ಶೂಟಿಂಗ್ ಬಾಕಿ

    ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ ಸಿನಿಮಾ ಮಾರ್ಟಿನ್. ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಅದ್ಧೂರಿ ನಂತರ ಅರ್ಜುನ್ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳುತ್ತಿರೋ ಸಿನಿಮಾ ಮಾರ್ಟಿನ್. ಧ್ರುವ ಸರ್ಜಾರನ್ನು ಲಾಂಚ್ ಮಾಡಿದ್ದವರು ಕೂಡಾ ಅರ್ಜುನ್. ಇವರಿಬ್ಬರೂ ಮತ್ತೊಮ್ಮೆ ಒಂದಾಗಿರೋ ಸಿನಿಮಾ ಮಾರ್ಟಿನ್, ಪ್ಯಾನ್ ಇಂಡಿಯಾ ಸಿನಿಮಾ ಆಗಿ ರೂಪುಗೊಳ್ಳುತ್ತಿದೆ.

    ಚಿತ್ರದಲ್ಲಿನ ಎರಡು ಫೈಟಿಂಗ್ ಮತ್ತು ಚೇಸಿಂಗ್ ಸೀನ್ ಬ್ಯಾಲೆನ್ಸ್ ಇದೆ. ಎರಡು ಹಾಡುಗಳ ಶೂಟಿಂಗ್ ಆಗಬೇಕಿದೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಒಂದು ಫೈಟ್ ಸೀಕ್ವೆನ್ಸ್‍ನ್ನ ರಾಮ್-ಲಕ್ಷ್ಮಣ್ ಕಂಪೋಸ್ ಮಾಡುತ್ತಿದ್ದಾರೆ. ಮತ್ತೊಂದು ಸೀಕ್ವೆನ್ಸ್‍ನ ರವಿವರ್ಮ ಮಾಸ್ಟರ್ ಮಾಡಲಿದ್ದಾರೆ ಎಂದು ಮಾಹಿತಿ ಕೊಟ್ಟಿರೋದು ಎ.ಪಿ.ಅರ್ಜುನ್.

    ವೈಭವಿ ಶಾಂಡಿಲ್ಯ ನಾಯಕಿಯಾಗಿರೋ ಚಿತ್ರ ಸೆಪ್ಟೆಂಬರ್‍ನಲ್ಲಿ ರಿಲೀಸ್ ಡೇಟ್ ಘೋಷಿಸಿತ್ತು. ರಿಲೀಸ್ ಡೇಟ್ ಮುಂದೆ ಹೋಗಲಿದೆ ಎಂಬ ಸುದ್ದಿಯಿದೆ. ಆದರೆ ಅದನ್ನು ಮಾರ್ಟಿನ್ ತಂಡ ಅಧಿಕೃತವಾಗಿ ಹೇಳಿಲ್ಲ.

  • ಮಾರ್ಟಿನ್ ಟೀಂಗೆ ವೈಭವಿ ಶಾಂಡಿಲ್ಯ

    ಮಾರ್ಟಿನ್ ಟೀಂಗೆ ವೈಭವಿ ಶಾಂಡಿಲ್ಯ

    ಮಾರ್ಟಿನ್. ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ನಲ್ಲಿ ಬರುತ್ತಿರೋ 2ನೇ ಸಿನಿಮಾ. ಮೊದಲ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡಿದ್ದ ಅರ್ಜುನ್, ಈ ಬಾರಿಯೂ ಹೊಸ ಕಥೆಯೊಂದಿಗೆ ಬರುತ್ತಿದ್ದಾರೆ. ಅರ್ಜುನ್ ಜೊತೆಗೆ ಕಥೆಗೆ ಕುಳಿತಿರೋದು ಅರುಣ್ ಬಾಲಾಜಿ ಮತ್ತು ಸ್ವಾಮೀಜಿ. ಈಗ ಚಿತ್ರಕ್ಕೆ ಹೀರೋಯಿನ್ ಫೈನಲ್ ಆಗಿದ್ದು, ವೈಭವಿ ಶಾಂಡಿಲ್ಯ ಧ್ರುವ ಜೊತೆ ನಟಿಸಲಿದ್ದಾರೆ.

    ಮೂಲಗಳ ಪ್ರಕಾರ ಈಗಾಗಲೇ ವೈಭವಿ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ. ವೈಭವಿಗೆ ಇದು ಮೊದಲ ಕನ್ನಡ ಚಿತ್ರವೇನಲ್ಲ. ಈಗಾಗಲೇ ರಾಜ್ ವಿಷ್ಣು ಚಿತ್ರದಲ್ಲಿ ನಟಿಸಿದ್ದ ವೈಭವಿ, ಭಟ್ಟರ ಗಾಳಿಪಟ 2 ಚಿತ್ರದಲ್ಲೂ ನಟಿಸಿದ್ದಾರೆ. ಚಿತ್ರತಂಡ ಸದ್ಯಕ್ಕೆ ಸೈಲೆಂಟ್ ಆಗಿದೆ. ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಪೊಗರು ನಂತರ ಮತ್ತೊಮ್ಮೆ ಧ್ರುವ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಗೆ ಹೋಗುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಪಕರಾಗಿದ್ದು, ಅದ್ಧೂರಿತನಕ್ಕೆ ಕೊರತೆಯಿಲ್ಲ. ಅಂದಹಾಗೆ ಚಿತ್ರದ ಟೈಟಲ್ ಮಾರ್ಟಿನ್ ಆದರೂ, ಟೈಟಲ್ ರೋಲ್ ಅರ್ಥಾತ್ ಮಾರ್ಟಿನ್, ಧ್ರುವ ಸರ್ಜಾ ಅವರಲ್ಲವಂತೆ. ಚಿತ್ರೀಕರಣದ ವೇಳೆಯಲ್ಲೇ ಕುತೂಹಲ ಕೆರಳಿಸುತ್ತಿದೆ ಮಾರ್ಟಿನ್.

  • ಮಾರ್ಟಿನ್ ಡಬಲ್ ಆ್ಯಕ್ಟಿಂಗ್ ಇದ್ಯಾ? ಇಲ್ವಾ?

    ಮಾರ್ಟಿನ್ ಡಬಲ್ ಆ್ಯಕ್ಟಿಂಗ್ ಇದ್ಯಾ? ಇಲ್ವಾ?

    ಇತ್ತೀಚೆಗೆ ಸುದ್ದಿಯಾಗಿದ್ದ ವಿಷಯ ಇದು. ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಅವರದ್ದು ಡಬಲ್ ರೋಲ್

    ಅನ್ನೋದು. ಇದಕ್ಕೆಲ್ಲ ಸ್ವತಃ ಧ್ರುವ ಸರ್ಜಾ ಅವರೇ ಉತ್ತರ ಕೊಟ್ಟಿದ್ದಾರೆ.

    ಮಾರ್ಟಿನ್ ಚಿತ್ರದಲ್ಲಿ ನನ್ನದು ದ್ವಿಪಾತ್ರ ಅಲ್ಲ. ಒಂದೇ ರೋಲ್. ಆದರೆ ಬಾಡಿ ಟ್ರಾನ್ಸ್‍ಮೇಷನ್ ಇದೆ. ನಮ್ಮ ಡೈರೆಕ್ಟರ್ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ಸ್ವಲ್ಪ ದೇಹ ಬದಲಾವಣೆಗೆ ಸರ್ಕಸ್ ಮಾಡುತ್ತಿದ್ದೇನೆ. ಸ್ವಲ್ಪ ಶೇಪ್ ಬೇಕು. ಅದರ ಚಿತ್ರೀಕರಣ ಮುಂದಿನ ವಾರ ಇದೆ ಎಂದಿದ್ದಾರೆ ಧ್ರುವ.

    ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರ ಈಗಾಗಲೇ 55 ದಿನದ ಶೂಟಿಂಗ್ ಮುಗಿಸಿದೆ. ಅದ್ಧೂರಿ ಮೂಲಕ ಧ್ರುವರನ್ನು ಅದ್ಧೂರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ದ ಅರ್ಜುನ್, ಇಲ್ಲಿ ಧ್ರುವ ಸರ್ಜಾಗೆ ಕಡಿಮೆ ಡೈಲಾಗ್ ಕೊಟ್ಟಿದ್ದಾರಂತೆ. ಆದರೆ ಅಭಿನಯಕ್ಕೆ ಸಿಕ್ಕಾಪಟ್ಟೆ ಸ್ಕೋಪ್ ಇದೆ ಅನ್ನೋ ಸುದ್ದಿ ಚಿತ್ರತಂಡದವರಿಂದ ಗೊತ್ತಾಗುತ್ತಿದೆ.

    ಉದಯ್ ಕೆ.ಮೆಹ್ತಾ ನಿರ್ಮಾಣದ ಮಾರ್ಟಿನ್, ಧ್ರುವ ಸರ್ಜಾ ಅವರ ಹಿಂದಿನ ಚಿತ್ರಗಳಂತೆ ಸುದೀರ್ಘ ಕಾಲ ಹೋಗದೆ, ಮಾರ್ಚ್ ಹೊತ್ತಿಗೆ ತೆರೆ ಮೇಲೆ ಬರಲಿದೆ.

  • ಮಾರ್ಟಿನ್ ನಂತರ ಅರ್ಜುನ್ ಜೊತೆ ಇನ್ನೊಂದು ಸಿನಿಮಾ

    ಮಾರ್ಟಿನ್ ನಂತರ ಅರ್ಜುನ್ ಜೊತೆ ಇನ್ನೊಂದು ಸಿನಿಮಾ

    ಅದ್ಧೂರಿ ನಂತರ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಮತ್ತೆ ಜೊತೆಯಾಗಿರುವ ಚಿತ್ರ ಮಾರ್ಟಿನ್. ಧ್ರುವ ಸರ್ಜಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ದೇಶಕ ಅರ್ಜುನ್, ಮಾರ್ಟಿನ್ ನಂತರ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಮಾರ್ಟಿನ್ ಚಿತ್ರದ ಪೋಸ್ಟರ್ ಹೊರಬಿದ್ದಿದೆ. ಧ್ರುವ ಸರ್ಜಾ ಕೈಗೆ ಬೇಡಿ ಹಾಕಿರುವ ಲುಕ್ ಸಂಚಲನ ಸೃಷ್ಟಿಸಿದೆ. ಮಾರ್ಟಿನ್ ಚಿತ್ರ ಮುಗಿಸಿದ ಕೂಡಲೇ ಅರ್ಜುನ್, ಧ್ರುವ ಜೊತೆ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಮಾರ್ಟಿನ್ ಚಿತ್ರಕ್ಕೆ ಉದಯ್ ಮೆಹತಾ ನಿರ್ಮಾಪಕರಾದರೆ, ಹೊಸ ಚಿತ್ರಕ್ಕೆ ಸ್ವತಃ ಅರ್ಜುನ್ ಅವರೇ ಪ್ರೊಡ್ಯೂಸರ್.

  • ಮಾರ್ಟಿನ್ ರಿಲೀಸ್ ಡೇಟ್ ಚೇಂಜ್..?

    ಮಾರ್ಟಿನ್ ರಿಲೀಸ್ ಡೇಟ್ ಚೇಂಜ್..?

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ಮಾರ್ಟಿನ್ ರಿಲೀಸ್ ಡೇಟ್  ಮುಂದಕ್ಕೆ ಹೋಗುವ ನಿರೀಕ್ಷೆ ಇದೆ. ಮಾರ್ಟಿನ್, ಎ.ಪಿ.ಅರ್ಜುನ್ ನಿರ್ದೇಶನದ ಸಿನಿಮಾ. ಉದಯ್ ಕೆ.ಮೆಹ್ತಾ ನಿರ್ಮಾಣದ ಪ್ಯಾನ್ ಇಂಡಿಯಾ ಮೂವಿ. ಎಲ್ಲವನ್ನೂ ಪ್ಲಾನ್ ಮಾಡಿಯೇ ಸಿನಿಮಾ ರಿಲೀಸ್ ಡೇಟ್ ಘೋಷಿಸಲಾಗಿತ್ತು. ಧ್ರುವ ಸರ್ಜಾರ ಎದುರು ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿರೋ ಸಿನಿಮಾ ಇದು.

    ಆದರೆ ಈಗ ಬರುತ್ತಿರೋ ಸುದ್ದಿಗಳ ಪ್ರಕಾರ ಮಾರ್ಟಿನ್ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಕಾರಣ ಏನಿರಬಹುದು ಎಂಬುದು ಗೊತ್ತಿಲ್ಲವಾದರೂ, ಸೆಪ್ಟೆಂಬರ್ 30ಕ್ಕಂತೂ ಮಾರ್ಟಿನ್ ರಿಲೀಸ್ ಆಗುತ್ತಿಲ್ಲ ಎನ್ನಲಾಗಿದೆ.

    ಸೆಪ್ಟೆಂಬರ್ 30ರಂದು ದಸರಾ ರಜೆ ಇದ್ದ ಕಾರಣ ಹೊಸ ಸಿನಿಮಾಗಳ ಕ್ಯೂ ದೊಡ್ಡದಾಗಿತ್ತು. ಅದೇ ದಿನ ರಿಷಬ್ ಶೆಟ್ಟಿ-ಹೊಂಬಾಳೆ ಕಾಂಬಿನೇಷನ್ನಿನ ಕಾಂತಾರ ಹಾಗೂ ಜಗ್ಗೇಶ್-ವಿಜಯ್ ಪ್ರಸಾದ್-ಆದಿತಿ ಪ್ರಭುದೇವ ಜೋಡಿಯ ತೋತಾಪುರಿ ಕೂಡಾ ರಿಲೀಸ್ ಆಗುತ್ತಿದ್ದವು.

  • ಮಾರ್ಟಿನ್ ರಿಲೀಸ್ ಡೇಟ್ ಫಿಕ್ಸ್ : ಸಂಪ್ರದಾಯ ಮುರಿದ ಧ್ರುವ ಸರ್ಜಾ

    ಮಾರ್ಟಿನ್ ರಿಲೀಸ್ ಡೇಟ್ ಫಿಕ್ಸ್ : ಸಂಪ್ರದಾಯ ಮುರಿದ ಧ್ರುವ ಸರ್ಜಾ

    ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಅವರ ಖಡಕ್ ಲುಕ್ಕು ಈಗಾಗಲೇ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಧ್ರುವ ಎದುರು ವೈಭವಿ ಶಾಂಡಿಲ್ಯ ಹೀರೋಯಿನ್.

    ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಲಿದೆ ಮಾರ್ಟಿನ್. ಪ್ಯಾನ್ ಇಂಡಿಯಾ ಸಿನಿಮಾ. ಮಣಿ ಶರ್ಮಾ ಮ್ಯೂಸಿಕ್ ಇದೆ.

    ಇದೆಲ್ಲದರ ಜೊತೆಗೆ ಮಾರ್ಟಿನ್ ಮೂಲಕ ಧ್ರುವ ಸರ್ಜಾ ಚಿತ್ರಗಳ ಒಂದು ಸಂಪ್ರದಾಯವೂ ಬ್ರೇಕ್ ಆಗಲಿದೆ. ಏನೆಂದರೆ ಮೊದಲ ಚಿತ್ರ ಅದ್ಧೂರಿಯಿಂದ ಶುರುವಾದ ಪದ್ಧತಿ ಅದು. ಅದ್ಧೂರಿ, ಭರ್ಜರಿ, ಬಹದ್ದೂರ್ ಹಾಗೂ ಪೊಗರು ಚಿತ್ರಗಳು ಮಿನಿಮಮ್ 2ರಿಂದ ಎರಡೂವರೆ ವರ್ಷ ತೆಗೆದುಕೊಂಡು ರಿಲೀಸ್ ಆಗಿದ್ದ ಚಿತ್ರಗಳು. ಆದರೆ ಈ ಬಾರಿ ಹಾಗಾಗಿಲ್ಲ. ಬೇಗನೇ ರಿಲೀಸ್ ಆಗುತ್ತಿದೆ. ಇದಕ್ಕೆ ಕಾರಣ ನಿರ್ಮಾಪಕ ಉದಯ್ ಕೆ.ಮೆಹ್ತಾ.

    ಇತ್ತ ಡೈರೆಕ್ಟರ್ ಅರ್ಜುನ್‍ಗೂ ಇದು ಸ್ಪೆಷಲ್. ಮದುವೆಯಾಗಿ, ಮಗುವಾದ ನಂತರ ರಿಲೀಸ್ ಆಗಲಿರುವ ಮೊದಲ ಸಿನಿಮಾ ಮಾರ್ಟಿನ್.

  • ಮಾರ್ಟಿನ್ ರಿಲೀಸ್`ಗೆ ಮುಹೂರ್ತ

    ಮಾರ್ಟಿನ್ ರಿಲೀಸ್`ಗೆ ಮುಹೂರ್ತ

    ಅದ್ಧೂರಿ ನಂತರ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಒಟ್ಟಾಗಿರುವ ಚಿತ್ರ ಮಾರ್ಟಿನ್. ಉದಯ್ ಕೆ.ಮೆಹ್ತಾ ನಿರ್ಮಾಣದ ಮಾರ್ಟಿನ್ ರಿಲೀಸ್ ಡೇಟ್ ಘೋಷಣೆಯಾಗಿದೆ. ಧ್ರುವ ಸರ್ಜಾರ ಪ್ರೀತಿಯ ದೇವರ ಒಡೆಯನ ಹಬ್ಬ ರಾಮನವಮಿಯಂದೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿರೋದು ವಿಶೇಷ. ಸೆಪ್ಟೆಂಬರ್ 30ಕ್ಕೆ ಮಾರ್ಟಿನ್ ಚಿತ್ರಮಂದಿರಗಳಲ್ಲಿ ರಾರಾಜಿಸಲಿದ್ದಾನೆ.

    ಸೆಪ್ಟೆಂಬರ್ 30ರಂದು ರಿಲೀಸ್ ಆದರೆ ಧ್ರುವ ಸರ್ಜಾ ಸಿನಿಮಾ ಕೆರಿಯರ್‍ನಲ್ಲಿ ಅದು ಒಂದು ದಾಖಲೆಯಾಗುವುದು ಖಚಿತ. ಏಕೆಂದರೆ ಇದುವರೆಗೆ ಧ್ರುವ ಅವರ ಅದ್ಧೂರಿ, ಭರ್ಜರಿ, ಬಹದ್ದೂರ್ ಹಾಗೂ ಪೊಗರು. ಈ 4 ಚಿತ್ರಗಳೂ ಸುದೀರ್ಘ ಅವಧಿ ತೆಗೆದುಕೊಂಡಿದ್ದವು. ಮಿನಿಮಮ್ 2 ವರ್ಷದ ನಂತರ ರಿಲೀಸ್ ಆಗಿದ್ದವು. ಮಾರ್ಟಿನ್ ಚಿತ್ರವನ್ನು ಕಳೆದ ವರ್ಷವಷ್ಟೇ ಘೋಷಿಸಲಾಗಿತ್ತು. ಚಿತ್ರದ ಶೇ.75 ಶೂಟಿಂಗ್ ಮುಗಿದಿದ್ದು, ಮಾರ್ಟಿನ್ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

  • ಮಾರ್ಟಿನ್ ಲೇಟ್ ಆಗಿದ್ದೇಕೆ? ನಿರ್ದೇಶಕರು ಹೇಳಿದ ಕಾರಣ

    ಮಾರ್ಟಿನ್ ಲೇಟ್ ಆಗಿದ್ದೇಕೆ? ನಿರ್ದೇಶಕರು ಹೇಳಿದ ಕಾರಣ

    2021ರ ಸೆಪ್ಟೆಂಬರ್ನಲ್ಲಿ ಈ ಸಿನಿಮಾ ಶುರುವಾಯಿತು. ಆದರೆ ಇದು ಇಷ್ಟೊಂದು ದಿನ ತೆಗೆದುಕೊಳ್ಳುತ್ತದೆ ಎಂದುಕೊಂಡಿರಲಿಲ್ಲ. ಹೈದರಾಬಾದ್ನಲ್ಲಿ ಸೆಟ್ ಹಾಕಿ 45 ದಿನ ಶೂಟಿಂಗ್ ಮಾಡಿದ್ದೇವೆ. ವಿಶಾಖಪಟ್ಟಣದಲ್ಲಿ 20 ದಿನ ಬರೀ ಚೇಸಿಂಗ್ ಸೀನ್ಗಳನ್ನೇ ಚಿತ್ರೀಕರಣ ಮಾಡಿದ್ದೇವೆ. ಈ ಮಧ್ಯೆ ಮಳೆಯಿಂದ ಕೊಂಚ ಸಮಸ್ಯೆ ಆಯಿತು. ಕಾಶ್ಮೀರದಲ್ಲಿ 25 ದಿನ ಶೂಟಿಂಗ್ ಮುಗಿಸಿ, ನಂತರ ಮುಂಬೈನಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಮಾಡಿದ್ದೇವೆ. ಒಂದೊಂದು ಶೆಡ್ಯೂಲ್ಗೂ ಒಂದಷ್ಟು ಗ್ಯಾಪ್ ಆಗುತ್ತಲೇ ಇತ್ತುಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಹಲವು ಗೆಟಪ್ ಇದೆ. ನನ್ನ ವೃತ್ತಿ ಬದುಕಿನಲ್ಲಿ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ ಬಳಸಿ 52 ದಿನ ಬರೀ ಕ್ಲೈಮ್ಯಾಕ್ಸ್ ಅನ್ನೇ ಶೂಟಿಂಗ್ ಮಾಡಿದ್ದೇವೆ. ರಾಮ್ ಲಕ್ಷ್ಮಣ್, ರವಿವರ್ಮಾ ಇದರ ಚಿತ್ರೀಕರಣ ಮಾಡಿದ್ದಾರೆ.

    ಇದು ಮಾರ್ಟಿನ್ ಚಿತ್ರದ ಡೈರೆಕ್ಟರ್ ಎ.ಪಿ.ಅರ್ಜುನ್ ಹೇಳಿದ ಕಾರಣ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪರೀಕ್ಷೆ, ಐಪಿಎಲ್, ಚುನಾವಣೆ ಇವೆಲ್ಲ ಮುಗಿದ ನಂತರ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಅರ್ಜುನ್.

    ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಭಿನ್ನವಾಗಿದ್ದು, ಈವರೆಗೂ ಮಾಡಿರುವ ಪಾತ್ರಗಳಿಗಿಂತ ಬೇರೆ ಥರ ಇದೆ. ನನಗೆ ಇಲ್ಲಿ ಡೈಲಾಗ್ ಕೂಡ ಕಡಿಮೆ ಇದೆ. ಫೈಟ್ ಸೀನ್ ಜಾಸ್ತಿ ಇದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಸಮಯ ತೆಗೆದುಕೊಳ್ಳುತ್ತಿದೆ.ಇನ್ನೂಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ ನಾಯಕ ನಟ ಧ್ರುವ ಸರ್ಜಾ.

    ಮಾರ್ಟಿನ್ ಮೊದಲ ಟೀಸರ್ ಅನ್ನು ಫೆ.23ಕ್ಕೆ ರಿಲೀಸ್ ಆಗಲಿದೆ. ಫೆ.23ರಂದು ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಉದಯ್ ಕೆ.ಮೆಹ್ತಾ. . ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದರೆ, ತೆಲುಗಿನ ಮಣಿಶರ್ಮಾ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದು, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಏಕಕಾಲದಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

  • ಮಾವನ ಗರಡಿ ಮನೆಯಲ್ಲಿ ಧ್ರುವ ಸರ್ಜಾ

    dhruva sarja's training in garadi mane

    ಅರ್ಜುನ್ ಸರ್ಜಾ ಅವರಿಗೆ ಈಗ 55 ವರ್ಷ. ಅಚ್ಚರಿಯಾಗಬೇಡಿ. ಅವರ ಈ ಆರೋಗ್ಯವಂತ, ಇನ್ನೂ ಚಿಕ್ಕ ವಯಸ್ಸಿನವರಂತೆಯೇ ಕಾಣುತ್ತಿರುವ ಹಿಂದಿನ ಗುಟ್ಟು ಗರಡಿ ಮನೆ. ಇವತ್ತಿಗೂ ತಮ್ಮ ಗರಡಿಮನೆಯಲ್ಲಿ ಬೆವರಿಳಿಸುವ ಧ್ರುವ ಸರ್ಜಾ, ತಮ್ಮ ದೇಹವನ್ನು ಫಿಟ್ & ಫೈನ್ ಆಗಿಟ್ಟುಕೊಂಡಿದ್ದಾರೆ. ಈಗ ಆ ಗರಡಿ ಮನೆಗೆ ಧ್ರುವ ಸರ್ಜಾ ಪ್ರವೇಶವಾಗಿದೆ.

    ಪೊಗರು ಚಿತ್ರಕ್ಕೆ ದೇಹವನ್ನು ಮತ್ತೆ ಹುರಿಗೊಳಿಸುತ್ತಿರುವ ಧ್ರುವ, ಈ ಚಿತ್ರಕ್ಕೆ ತಯಾರಾಗಲು ಮಾವನ ಗರಡಿಮನೆ ಹೊಕ್ಕಿದ್ದಾರೆ. ಮಲ್ಲಕಂಬ ಹತ್ತಿ ಕಸರತ್ತು ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಾಚೀನ ಸಾಹಸ ಕಲೆಯಾದ ಮಲ್ಲಕಂಬ ಕಸರತ್ತುಗಳನ್ನು ಬಳಸಿಕೊಳ್ಳಲಾಗುತ್ತಿದೆಯಂತೆ. 

    ಹೀರೋ ಇಂಟ್ರೊಡಕ್ಷನ್ ಆಗುವುದು ಮಲ್ಲಕಂಬ ಪ್ರದರ್ಶನದ ಮೂಲಕ. ಪೊಗರಿಗೂ ಮಲ್ಲಕಂಬಕ್ಕೂ ವಿಶೇಷ ಸಂಬಂಧವಿದೆ ಎಂದು ಹೇಳಿದ್ದಾರೆ ನಿರ್ದೇಶಕ ನಂದಕಿಶೋರ್. ಮಹಾರಾಷ್ಟ್ರದ ಮಲ್ಲಕಂಬ ಶಿಕ್ಷಕರು ಧ್ರುವ ಸರ್ಜಾಗೆ ಮಲ್ಲಕಂಬದ ಕಸರತ್ತುಗಳನ್ನು ಹೇಳಿಕೊಡುತ್ತಿದ್ದಾರೆ.

  • ಮಾಸ್ ಮಾರ್ಟಿನ್.. ಮತ್ತೆ ಅರ್ಜುನ್.. ಕನ್ನಡದಲ್ಲಿ ನಂ.1

    ಮಾಸ್ ಮಾರ್ಟಿನ್.. ಮತ್ತೆ ಅರ್ಜುನ್.. ಕನ್ನಡದಲ್ಲಿ ನಂ.1

    ಧ್ರುವ ಸರ್ಜಾ ಎಂಟ್ರಿ ಅದ್ಧೂರಿ.  ಌಕ್ಷನ್ಸ್ ಭರ್ಜರಿ. ಧ್ರುವ ಫಿಟ್ನೆಸ್ ಬಹದ್ದೂರ್ ಆಗಿದೆ. ಒಂದೊಂದು ಹೆಜ್ಜೆ, ಸೀಕ್ವೆನ್ಸ್ನಲ್ಲೂ ಪೊಗರು ಎದ್ದು ಕಾಣುತ್ತಿದೆ. ಇವನು ಅರ್ಜುನ್. ಯೆಸ್, ಮಾರ್ಟಿನ್ ಚಿತ್ರದ ಹೆಸರು ಮಾರ್ಟಿನ್ ಆದರೂ, ಧ್ರುವ ಸರ್ಜಾ ಹೆಸರು ಚಿತ್ರದಲ್ಲಿ ಮತ್ತೊಮ್ಮೆ ಅರ್ಜುನ್. ಅದ್ಧೂರಿಯಲ್ಲಿ ಅರ್ಜುನ್ ಹೆಸರಲ್ಲೆ ಧ್ರುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಪಿ.ಅರ್ಜುನ್, ಮತ್ತೊಮ್ಮೆ ಅರ್ಜುನ್ ಹೆಸರನ್ನೇ ಚಿತ್ರದ ಹೀರೋಗೆ ಇಟ್ಟಿದ್ದಾರೆ.

    ಹೇಳಿ ಕೇಳಿ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ. ಅಂದ್ಮೇಲೆ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ ಇರುತ್ತೆ. ನಿರೀಕ್ಷೆಗೆ ತಕ್ಕ ಹಾಗಿದೆ ‘ಮಾರ್ಟಿನ್’ ಟೀಸರ್. ‘ಮಾರ್ಟಿನ್’ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಮತ್ತು ಸ್ಟಂಟ್ಸ್ ಇವೆ. ಆಕ್ಷನ್ ಜೊತೆಗೆ ದೇಶಪ್ರೇಮ ಕೂಡ ಇದೆ. ಟೀಸರ್ನಲ್ಲಿ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಇರುವಂತೆ ತೋರಿಸಲಾಗಿದೆ. ‘ಮಹಾ ಕ್ರೂರಿ’ ಎಂಬಂತೆ ಬಿಂಬಿಸಲಾಗಿದೆ. ಹಾಗಾದ್ರೆ, ‘ಮಾರ್ಟಿನ್’ ಕಥೆ ಏನು?

    ಧ್ರುವ ಸರ್ಜಾ ವೀರ ಯೋಧನಾ? ಅಥವಾ ಸ್ಪೈ ಏಜೆಂಟಾ? ದೇಶಪ್ರೇಮದ ಕಥೆ ಇದ್ಯಾ? ಧ್ರುವ ಸರ್ಜಾ ಹೆಸರು ಅರ್ಜುನ್. ಹಾಗಾದ್ರೆ, ‘ಮಾರ್ಟಿನ್’ ಯಾರು? ಈ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ರಿಲೀಸ್ ಆದ ಮೇಲೆ. ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿರೋದು ನಿರ್ದೇಶಕ ಎ. ಪಿ. ಅರ್ಜುನ್ ರವಿ ಬಸ್ರೂರು ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ಸಂಗೀತ ಮಣಿ ಶರ್ಮಾ ಅವರದ್ದು.

    ಚಿತ್ರದ ಟೀಸರ್ನ್ನು ವೀರೇಶ್ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಅಭಿಮಾನಿಗಳು ದುಡ್ಡು ಕೊಟ್ಟು ಸಿನಿಮಾ ಟೀಸರ್ ನೋಡಿದ್ದಾರೆ. ಆ ಹಣ ಗೋಶಾಲೆಗೆ ಹೋಗಲಿದೆ ಎನ್ನುವುದು ಸಾರ್ಥಕದ ಖುಷಿ.ಎಲ್ಲ ಭಾಷೆಗಳಲ್ಲೂ ಟ್ರೆಂಡಿಂಗ್ನಲ್ಲಿರುವ ಮಾರ್ಟಿನ್ ಟೀಸರ್, ಕನ್ನಡದಲ್ಲಿ ನಂ.1 ಆಗಿದ್ದರೆ, ಹಿಂದಿಯಲ್ಲಿ ಟಾಪ್ 10ಗೆ ಸ್ಥಾನ ಪಡೆದಿದೆ.

    ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್,ಚಿಕ್ಕಣ್ಣ, ಮಾಳವಿಕ ಅವಿನಾಶ್,ಅಚ್ಯುತ್ ಕುಮಾರ್,ನಿಖಿತಿನ್ ಧೀರ್, ನವಾಬ್ ಶಾ ಹಾಗೂ ರೋಹಿತ್ ಪಾಟಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯ ಹೆಗ್ಡೆ ಕ್ಯಾಮರಾ ಇದೆ.

  • ಮೂರು ಗೊಂಬೆಗಳ ಜೊತೆ ಧ್ರುವ ರೊಮ್ಯಾನ್ಸ್

    3 heroines in bharjari

    ಧ್ರುವ ಸರ್ಜಾ ಮತ್ತು ಚೇತನ್‌ ಕಾಂಬಿನೇಷನ್‌ನ 2ನೇ ಚಿತ್ರ, ಧ್ರುವ ಸರ್ಜಾರ ಮೂರನೇ ಚಿತ್ರ ಭರ್ಜರಿ. ಹಿಂದಿನ ಎರಡೂ ಚಿತ್ರಗಳಲ್ಲಿ ಧ್ರುವಾಗೆ ನಾಯಕಿ ಒಬ್ಬರೇ. ರಾಧಿಕಾ ಪಂಡಿತ್. ಆದರೆ, 3ನೇ ಚಿತ್ರದಲ್ಲಿ ಧ್ರುವ ಮೂರು ಗೊಂಬೆಗಳ ಜೊತೆ ರೊಮ್ಯಾನ್ಸ್ ಮಾಡುತ್ತಿದ್ಧಾರೆ. 

    ಆರ್‌.ಎಸ್‌. ಪ್ರೊಡಕ್ಷನ್ಸ್‌ನ ಈ ಸಿನಿಮಾದಲ್ಲಿ ರಚಿತಾ ರಾಮ್‌, ಹರಿಪ್ರಿಯಾ ಹಾಗೂ ವೈಶಾಲಿ ನಾಯಕಿಯರು. ಪ್ರಮುಖ ನಾಯಕಿ ರಚಿತಾರಾಮ್‌. ಇನ್ನೊಂದು ಪ್ರಮುಖ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದರೆ, ಮತ್ತೊಂದು ಮುಖ್ಯ  ಪಾತ್ರದಲ್ಲಿ ವೈಶಾಲಿ ದೀಪಕ್‌ ನಟಿಸಿದ್ದಾರೆ. ಈ ಮೂರೂ ಗೊಂಬೆಗಳು ಒಂದೇ ಹಾಡಿನಲ್ಲಿ ಧ್ರುವ ಜತೆ ಹೆಜ್ಜೆ ಹಾಕಿರುವುದು ವಿಶೇಷ. 

    ಏನಿದು ವಿಶೇಷದ ಹಿಂದಿನ ರಹಸ್ಯ ಎಂದು ಹುಡುಕಿದರೆ, ನಿರ್ದೇಶಕ ಚೇತನ್ ಉತ್ತರ ಕೊಡಲ್ಲ. ಸಿನಿಮಾ ನೋಡಿ, ಎಲ್ಲ ಪಾತ್ರಗಳಿಗೂ ಸ್ಪೇಸ್ ಇದೆ. ಕತೆ ಸಾಗುತ್ತಿರುವಾಗ ಹರಿಪ್ರಿಯಾ ಮತ್ತು ವೈಶಾಲಿ ಪಾತ್ರ ಬರುತ್ತದೆ. ರಚಿತಾ ಅವರದ್ದು ಜಡ್ಜ್‌ಮೆಂಟ್‌ ಸಿಗದೇ ಇರುವ ಪಾತ್ರ. ಹರಿಪ್ರಿಯಾ ಅವರದ್ದು ಸ್ವಲ್ಪ ಸಸ್ಪೆನ್ಸ್‌ ಉಳ್ಳ ಪಾತ್ರ. ಇವತ್ತಿನ ಜನರೇಶನ್‌ಗೆ ತಕ್ಕಂತೆ ಸಿಕ್ಕಾಪಟ್ಟೆ ಎನರ್ಜಿಟಿಕ್‌ ಪಾತ್ರದಲ್ಲಿ ವೈಶಾಲಿ ನಟಿಸಿದ್ದಾರೆ ಅಂತಾರೆ. 

    ಅಂದಹಾಗೆ ಧ್ರುವ ಸಿನಿಮಾಗಳಲ್ಲಿ ಮಾಸ್​ಗೆ ಇಷ್ಟವಾಗುವ ಡೈಲಾಗ್​ಗಳು ಕಾಮನ್. ಆದರೆ, ಧ್ರುವಗಿಂತಾ ನಾನೇ ಹೆಚ್ಚು ಮಾತನಾಡಿದ್ದೇನೆ ಎನ್ನುತ್ತಾರೆ ರಚಿತಾ. ಅವರ ಪಾತ್ರದ ಹೆಸರು ಗೌರಿಯಂತೆ. ಹೀಗಾಗಿಯೇ ಪುಟ್ಟಗೌರಿ ಹಾಡು ರೆಡಿಯಾಗಿರೋದು. ಸೆಕೆಂಡ್‌ ಆಫ್‌ನಲ್ಲಿ ಅಯ್ಯೋ ಗೌರಿಗೆ ಹೀಗೆ ಆಗಬಾರದಿತ್ತು ಅಂತಾ ನೀವು ಬೇಜಾರ್ ಮಾಡ್ಕೋತೀರಾ ಅಂತಾನೇ ಇನ್ನೊಂದು ಡಿಂಪಲ್ ಬೀಳಿಸ್ತಾರೆ ರಚಿತಾ. 

    ಭರ್ಜರಿ ಚಿತ್ರದಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ಮೂವರು ನಾಯಕಿಯರಿಗೂ ಇದೆ. ಮೂವರಿಗೂ ಒಟ್ಟಿಗೆ ನಟಿಸುವ ಸಾಕಷ್ಟು ದೃಶ್ಯಗಳಿವೆ. ಯಾರೂ ತಮ್ಮ ಸ್ಟಾರ್‌ಗಿರಿಯನ್ನು ತೋರಿಸಿಕೊಂಡಿಲ್ಲ. ಇದು ಭರ್ಜರಿ ಹೈಲೈಟ್ಸ್.

  • ಯಾರೋ.. ಯಾರೋ.. ಆ ಚೆಲುವೆ..?

    who is dhruva's heroine?

    ಧ್ರುವ ಸರ್ಜಾ, ಸತತ ಹ್ಯಾಟ್ರಿಕ್ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಒಂದರ ಹಿಂದೊಂದು ಹಿಟ್ ಕೊಟ್ಟ ಧ್ರುವಾ ಅವರ 4ನೇ ಚಿತ್ರ ಪೊಗರು ಮೇಲೆ ಭರ್ಜರಿ ನಿರೀಕ್ಷೆಗಳಿವೆ. ಚಿತ್ರಕ್ಕೆ ಮೊದಲು ಶೃತಿ ಹಾಸನ್ ನಾಯಕಿ ಎನ್ನಲಾಗಿತ್ತು. ನಂತರ ಶೃತಿ ಹಾಸನ್ ನಿರಾಕರಿಸಿದ್ದು, ಕನ್ನಡ ಚಿತ್ರಾಭಿಮಾನಿಗಳಿಂದ ಟ್ರೋಲ್ ಆಗಿದ್ದು ಹಳೆಯ ಸುದ್ದಿ.

    ಈಗ ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಧ್ರುವ ಸರ್ಜಾ ಅವರೇ ಕನ್ನಡದ ಹುಡುಗಿಯನ್ನೇ ಹಾಕಿಕೊಳ್ಳೋಕೆ ಸಲಹೆ ಕೊಟ್ಟಿದ್ದಾರಂತೆ. ಏಕೆಂದರೆ, ಅವರ ಮೂರು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಕನ್ನಡತಿಯರು. ಹೀಗಾಗಿ ಚಿತ್ರತಂಡದ ಮುಂದೆ ಈಗ ಮೂರು ಆಯ್ಕೆಗಳಿವೆ. ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ, ಅತಿರಥನ ಅರಗಿಣಿ ಲತಾ ಹೆಗಡೆ ಹಾಗೂ ಶಾನ್ವಿ ಶ್ರೀವಾಸ್ತವ್.

    ಸದ್ಯಕ್ಕೆ ಯಾರೂ ಫೈನಲ್ ಆಗಿಲ್ಲ. ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಧ್ರುವ ಸರ್ಜಾ ಅವರ ಚಿತ್ರದ ಒಂದೊಂದು ಸುದ್ದಿಯೂ ಸಂಚಲನ ಸೃಷ್ಟಿಸುತ್ತಿದೆ.