` uri gowda, - chitraloka.com | Kannada Movie News, Reviews | Image

uri gowda,

  • ಉರಿ ಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡ್ತಾರಂತೆ ಮುನಿರತ್ನ..!

    ಉರಿ ಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡ್ತಾರಂತೆ ಮುನಿರತ್ನ..!

    ಉರಿಗೌಡ ಮತ್ತು ನಂಜೇಗೌಡ. ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಹೆಸರು. ಟಿಪ್ಪು ಸುಲ್ತಾನ್ನ್ನು ಕೊಂದವರು ಉರಿಗೌಡ ಮತ್ತು ನಂಜೇಗೌಡ ಎನ್ನುತ್ತಿದೆ ಬಿಜೆಪಿ. ಅದಕ್ಕೆ ದಾಖಲೆಗಳೂ ಇವೆ ಎನ್ನುತ್ತಿದೆ. ಈ ಕುರಿತು ಇತ್ತೀಚೆಗೆ ಟಿಪ್ಪುವಿನ ನಿಜ ಕನಸುಗಳು ಎಂಬ ನಾಟಕವೂ ಬಂದಿದ್ದು, ಭಾರೀ ಜನಪ್ರಿಯವಾಗಿದೆ. ಅಡ್ಡಂಡ ಕಾರ್ಯಪ್ಪನವರ ನಾಟಕ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಲ್ಲ..ಇಲ್ಲ.. ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳೇ ಇತಿಹಾಸದಲ್ಲಿ ಇಲ್ಲ. ಅವೆರಡೂ ಕಪೋಲಕಲ್ಪಿತ ಪಾತ್ರಗಳು ಎನ್ನುತ್ತಿವೆ ಕಾಂಗ್ರೆಸ್ ಮತ್ತು ಜೆಡಿಎಸ್. ಇದರ ನಡುವೆಯೇ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಮುನಿರತ್ನ.

    ಶ್ರೀರಂಗಪಟ್ಟಣದಲ್ಲಿ ಸುಲ್ತಾನನಾಗಿ ಆಡಳಿತ ಮಾಡುತ್ತಿದ್ದ ಟಿಪ್ಪುವನ್ನು ಮಂಡ್ಯದ ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಸಚಿವರೂ ಆಗಿರುವ ಚಿತ್ರ ನಿರ್ಮಾಪಕ ಮುನಿರತ್ನ ಅವರು ಈಗ ‘ಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣದ ಬಗ್ಗೆ ಕರ್ನಾಟಕ ಫಿಲಂ ಚೇಂಬರ್ನಲ್ಲಿಯೂ ಟೈಟಲ್ ನೊಂದಣಿಯನ್ನೂ ಮಾಡಲಾಗಿದೆ. ಇನ್ನು ಮುನಿರತ್ನ ಅವರಿಂದ ಉರಿಗೌಡ ನಂಜೇಗೌಡ ಕಥೆ, ಚಿತ್ರಕಥೆ ಸಿದ್ಧವಾಗಲಿದೆ. ಸಿನಿಮಾ ನಿರ್ಮಾಣವಾಗಿ ಬೆಳ್ಳಿ ತೆರೆಗೆ ಬರುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅಷ್ಟರೊಳಗೆ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಮುಗಿದು ಹೋಗಬಹುದು. ಆದರೆ, ಸಿನಿಮಾ ಮಾಡ್ತಾರಂತೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿರುವುದಂತೂ ಹೌದು.

    ಮುನಿರತ್ನ ರಾಜರಾಜೇಶ್ವರಿ ನಗರದ ಶಾಸಕ. ಅದಕ್ಕೂ ಮುನ್ನ ಚಿತ್ರರಂಗದಲ್ಲಿ ಪ್ರಸಿದ್ಧವಾಗಿರುವ ನಿರ್ಮಾಪಕರೂ ಹೌದು. ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಮುನಿರತ್ನ ಈ ಬಾರಿ ರಾಜಕೀಯ ಬ್ಯಾಕ್ ಗ್ರೌಂಡ್ ಮತ್ತು ಇತಿಹಾಸದ ಸಿನಿಮಾ ಮಾಡಲು ಹೊರಟಿರುವುದೇ ಬಿಗ್ ನ್ಯೂಸ್.

  • ಉರಿಗೌಡ ನಂಜೇಗೌಡ ಸಿನಿಮಾ ವಾರ್ : ಕುಮಾರಸ್ವಾಮಿ ಕಿಡಿಕಿಡಿ

    ಉರಿಗೌಡ ನಂಜೇಗೌಡ ಸಿನಿಮಾ ವಾರ್ : ಕುಮಾರಸ್ವಾಮಿ ಕಿಡಿಕಿಡಿ

    ಉರಿಗೌಡ ಮತ್ತು ನಂಜೇಗೌಡ ಟಿಪ್ಪು ಸುಲ್ತಾನ್`ನ್ನು ಕೊಂದ ವೀರರು ಎಂಬ ವಿವಾದ ತಾರಕಕ್ಕೇರುತ್ತಿದ್ದಂತೆಯೇ ನಿರ್ಮಾಪಕರೂ ಆಗಿರುವ ಮುನಿರತ್ನ ಸಿನಿಮಾ ಘೋಷಿಸಿಬಿಟ್ಟರು. ಸದ್ಯಕ್ಕೆ ಉರಿಗೌಡ ನಂಜೇಗೌಡ/ನಂಜೇಗೌಡ ಉರಿಗೌಡ ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿರುವ ಮುನಿರತ್ನ, ಕಥೆಯ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕಥೆ, ನಿರ್ದೇಶನ, ತಂತ್ರಜ್ಞರ ಆಯ್ಕೆಯನ್ನೂ ಫೈನಲ್ ಮಾಡದೇ ಇರೋ ಮುನಿರತ್ನ ಸದ್ಯಕ್ಕೆ ತಮ್ಮ ಬ್ಯಾನರ್ ಹೆಸರಿನಲ್ಲಿ ಟೈಟಲ್ ಮಾತ್ರವೇ ರಿಜಿಸ್ಟರ್ ಮಾಡಿಸಿದ್ದಾರೆ. ಆದರೆ ನಿರೀಕ್ಷೆಯಂತೆಯೇ ವಾಗ್ಯುದ್ಧ ತಾರಕಕ್ಕೇರಿದೆ.

    ಟಿಪ್ಪುವನ್ನು ಕೊಂದ ಪಾಪವನ್ನು ಒಕ್ಕಲಿಗರ ತಲೆಗೆ ಕಟ್ಟಬೇಡಿ ಎಂದಿರೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಲ್ಪಿತ ಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್ ಅಜೆಂಡ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಟ್ವೀಟ್ ಮಾಡಿದ್ದಾರೆ.

    ಮುನಿರತ್ನ ವಿರುದ್ಧವೂ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಚಿವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಮೂಲಕ ಉರಿಗೌಡ-ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಎಂದಿದ್ದಾರೆ.

    ಕೇವಲ ಟೈಟಲ್ ರಿಜಿಸ್ಟರ್ ವಿಚಾರವೇ ಭರ್ಜರಿ ಸುದ್ದಿಯಾಗುತ್ತಿರುವಾಗ.. ಸಿನಿಮಾ ಮಾಡದೇ ಇರುತ್ತಾರಾ ಮುನಿರತ್ನ? ಬಿಜೆಪಿಯಲ್ಲಿ ಸಚಿವರಾಗಿರುವ ಮುನಿರತ್ನ ಸೆನ್ಸೇಷನ್ ಸೃಷ್ಟಿಸೋದ್ರಲ್ಲಿ ಎತ್ತಿದ ಕೈ.