ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1944ರಲ್ಲಿ ಶುರುವಾದ ಮಂಡಳಿ 75ನೇ ವಸಂತದ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕಾಗಿಯೇ ವಿಶೇಷ ಲಾಂಛನವನ್ನು ರೂಪಿಸಿ ಬಿಡುಗಡೆ ಮಾಡಿದೆ ಫಿಲಂ ಚೇಂಬರ್. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದವರು ಗೃಹ ಸಚಿವ ಬಸವರಾಜ ಬೊಮ್ಮಾಯಿ.
ಚಿತ್ರರಂಗದ ಸಾಧನೆಯನ್ನು ಪ್ರಶಂಸಿಸುತ್ತಲೇ ಮಲ್ಟಿಪ್ಲೆಕ್ಸ್ನವರು ಮಾಡಿದ ದ್ರೋಹವನ್ನು ತೆರೆದಿಟ್ಟರು ಬಸವರಾಜ ಬೊಮ್ಮಾಯಿ. ಕನ್ನಡ ಚಿತ್ರಗಳಿಗೆ ಆದ್ಯತೆ ಎಂದು ಹೇಳಿ ಈಗ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುತ್ತೇವೆ ಎಂದು ಭರವಸೆ ಕೊಟ್ಟರು.
1983ರಲ್ಲಿಯೇ ವಿ.ರವಿಚಂದ್ರನ್ ಚಿತ್ರನಗರಿಯ ಕನಸು ಕಂಡಿದ್ದನ್ನು ಪ್ರಸ್ತಾಪಿಸಿದ ಸಾ.ರಾ.ಗೋವಿಂದು, ಚಿತ್ರನಗರಿಯ ಕನಸು ನನಸಾಗಲಿ ಎಂದು ಹಾರೈಸಿದರು. ರವಿಚಂದ್ರನ್, ಜಗ್ಗೇಶ್, ಕುಮಾರ್ ಬಂಗಾರಪ್ಪ, ಉಪೇಂದ್ರ ಸೇರಿದಂತೆ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಸಮಾರಂಭದ ಕಳೆ ಹೆಚ್ಚಿಸಿದ್ದರು.
ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು,
ಜಯಮಾಲಾ, ಕೆ.ವಿ.ಚಂದ್ರಶೇಖರ್, ಥಾಮಸ್, ಚಿನ್ನೇಗೌಡ, ಉಮೇಶ್ ಬಣಕಾರ್, ಎಂ.ಎನ್.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘದ ಗಣ್ಯರು ಸಮಾರಂಭದಲ್ಲಿದ್ದರು.