ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜರ ಪಟ್ಟಿ ಮಾಡಲು ಹೊರಟರೆ ಕನ್ನಡಕ್ಕೆ ಡಾ.ರಾಜ್ ಕುಮಾರ್, ತಮಿಳಿಗೆ ಎಂಜಿಆರ್, ಶಿವಾಜಿ ಗಣೇಶನ್ ಹಾಗೂ ತೆಲುಗಿಗೆ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಹಾಗೂ ರಂಗರಾವ್ ಹೆಸರನ್ನು ಮರೆಯುವಂತೆಯೇ ಇಲ್ಲ. ವಿಶೇಷವೆಂದರೆ ಈ ಮೂವರೂ ಪರಸ್ಪರ ಗೌರವದಿಂದ ಇದ್ದವರು. ಎನ್.ಟಿ.ಆರ್. ಅವರ ಹಲವು ಕನಸುಗಳಿಗೆ ಅಕ್ಕಿನೇನಿ ಜೊತೆಯಾದರೆ, ಅಕ್ಕಿನೇನಿ ಅವರ ಕನಸುಗಳಿಗೆ ಹೆಗಲು ಕೊಟ್ಟವರು ಎನ್.ಟಿ.ಆರ್. ಆದರೆ ಆ ಬಾಂಧವ್ಯ ಅವರ ಮಕ್ಕಳಲ್ಲಿ ಉಳಿಯಲಿಲ್ಲ. ಬಾಲಕೃಷ್ಣ ಒಂದು ದಿಕ್ಕಾದರೆ ಅಕ್ಕಿನೇನಿ ನಾಗಾರ್ಜುನ ಮತ್ತೊಂದು ದಿಕ್ಕಾದರು. ವಿವಾದಗಳ ಬಗ್ಗೆ ನಾಗಾರ್ಜುನ ಮಾತನಾಡಿಲ್ಲವಾದರೂ ಬಾಲಕೃಷ್ಣ ಹಾಗಲ್ಲ. ಅವರಿವರನ್ನು ಕೆಣಕುವುದು, ಹೂಂಕರಿಸುವುದು, ಲೇವಡಿ ಮಾಡುವುದನ್ನು ಮಾಡುತ್ತಲೇ ಬಂದಿದ್ದಾರೆ. ನೋ ಫಿಲ್ಟರ್. ಈಗಲೂ ಆಗಿರುವುದು ಇಷ್ಟೆ.
ವೀರಸಿಂಹರೆಡ್ಡಿ ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತನಾಡುತ್ತಿದ್ದ ಬಾಲಯ್ಯ .. ನಮ್ಮ ತಂದೆಗೆ ಅನೇಕ ಸ್ಪರ್ಧಿಗಳಿದ್ದರು. ಅಕ್ಕಿನೇನಿ..ತೊಕ್ಕಿನೇನಿ.. ಎಂದೆಲ್ಲ ಮಾತನಾಡಿದ್ದಾರೆ. ಇದು ಅಕ್ಕಿನೇನಿ ಅಭಿಮಾನಿಗಳನ್ನು ಕೆರಳಿಸಿದೆ. ನಾಗಾರ್ಜುನ ಅವರ ಮಕ್ಕಳಾದ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಅಖಿಲ್ ಇಬ್ಬರನ್ನೂ ಕೆರಳುವಂತೆ ಮಾಡಿದೆ. ನಂದಮೂರಿ ತಾರಕರಾಮಾ ರಾವ್ ಅವರು, ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮತ್ತು ಎಸ್ ವಿ ರಂಗರಾವ್ ಅವರು ತೆಲುಗು ಚಿತ್ರರಂಗದ ಹೆಮ್ಮೆ ಮತ್ತು ಆಧಾರಸ್ತಂಭಗಳು. ಅವರ ಸೃಜನಶೀಲ ಕೊಡುಗೆ ಅಪಾರವಾಗಿದೆ. ಅವರಿಗೆ ಅಗೌರವ ತೋರುವುದು ನಮ್ಮನ್ನು ನಾವೇ ಕೀಳಾಗಿಸಿಕೊಂಡಂತೆ.. ಎಂದು ಟ್ವೀಟ್ ಮಾಡಿದ್ದಾರೆ ನಾಗಚೈತನ್ಯ ಮತ್ತು ಅಖಿಲ್.