` rishab shetty - chitraloka.com | Kannada Movie News, Reviews | Image

rishab shetty

  • ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

    ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

    ಕಾಂತಾರ ಚಿತ್ರ ಹಿಟ್ ಆದ ಕೆಲವು ದಿನಗಳಲ್ಲೇ ಈ ಸುದ್ದಿ ಹರಿದಾಡೋಕೆ ಶುರುವಾಯ್ತು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದ ಹೈಲೈಟ್ಸ್‍ಗಳಲ್ಲಿ ಒಂದು ಮ್ಯೂಸಿಕ್. ಅಜನೀಶ್ ಲೋಕನಾಥ್ ಮ್ಯೂಸಿಕ್ ಗುಂಗು ಹಿಡಿಸುತ್ತದೆ. ಚಿತ್ರದ ಕಥೆಗೆ ಕಥೆಯ ವೇಗಕ್ಕೆ ಹೊಂದಿಕೊಂಡು ಹೋಗುವ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ತೆಗೆದುಕೊಂಡು ಹೋಗುವುದು ಅಜನೀಶ್ ಲೋಕನಾಥ್ ಸಂಗೀತ. ಚಿತ್ರದಲ್ಲಿ ವರಾಹ ರೂಪಂ.. ಹಾಡು ಚಿತ್ರಕ್ಕೊಂದು ಕಿರೀಟವಿದ್ದಂತೆ. ಆದರೆ ಅದೇ ಹಾಡನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

    5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಆಲ್ಬಂ ಬಂದಿತ್ತು. ಅದರಲ್ಲಿ ಬರುವ ಥೈಕ್ಕುಡಂ ಬ್ರಿಡ್ಜ್‍ನ ಮ್ಯೂಸಿಕ್  ಹಾಗೂ ಕಾಂತಾರದ ವರಾಹ ರೂಪಂ ಮ್ಯೂಸಿಕ್ ಎರಡೂ ಒಂದೇ ಎನ್ನುವುದು ಆರೋಪ.

    ಆ ಹಾಡನ್ನು ನಾನೂ ಕೇಳಿದ್ದೇನೆ. ಸ್ಫೂರ್ತಿಗೊಂಡಿದ್ದೇನೆ. ಆದರೆ ಈ ವರಾಹ ರೂಪಂ ಹಾಡು.. ಕದ್ದಿದ್ದಲ್ಲ ಎನ್ನುವುದು ಅಜನೀಶ್ ಲೋಕನಾಥ್ ಪ್ರತಿಕ್ರಿಯೆ. ಅಲ್ಲದೆ ನವರಸಂನ ಹಾಡಿನಲ್ಲಿರುವ ತೋಡಿ, ವರಾಳಿ ಹಾಗೂ ಮಖಾರಿ ರಾಗಗಳನ್ನೇ ಬಳಸಿದ್ದೇವೆ. ಹೀಗಾಗಿ ಸಂಗೀತದ ಹೋಲಿಕೆಯ ಭಾವನೆ ಬರುತ್ತದೆ. ಆದರೆ ಸಂಯೋಜನೆ ಬೇರೆ. ಟ್ಯೂನ್ ಕೂಡಾ ಬೇರೆ. ಕಂಪೋಸಿಷನ್ ಬೇರೆ. ರಾಗಗಳ ಛಾಯೆ ಒಂದೇ ರೀತಿ ಇರುತ್ತಾದ ಕಾರಣ ಹಾಗೆ ಅನಿಸುತ್ತದೆ. ಆದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಅದರ ಸೂಕ್ಷ್ಮಗಳು ಅರ್ಥವಾಗುತ್ತವೆ ಎಂದಿದ್ದಾರೆ ಅಜನೀಶ್ ಲೋಕನಾಥ್.

  • ಕಾಂತಾರದ ಲೀಲಾ ಕಥೆ ಕೇಳಿ

    ಕಾಂತಾರದ ಲೀಲಾ ಕಥೆ ಕೇಳಿ

    ಲೀಲಾ. ಕಾಂತಾರದ ಸಿಂಗಾರ ಸಿರಿಯೇ.. ಆಕೆ. ಫಾರೆಸ್ಟ್ ಗಾರ್ಡ್ ಆಗಬೇಕು ಅನ್ನೋದು ಅವಳ ಕನಸು ಮತ್ತು ಗುರಿ. ಕನಸು ಈಡೇರುತ್ತೆ. ಫಾರೆಸ್ಟ್ ಗಾರ್ಡ್ ಆದ ನಂತರ ಹಳ್ಳಿಯವರು ಮತ್ತು ಕಾಡಿನ ಅಧಿಕಾರಿಗಳ ನಡುವಿನ ಕೊಂಡಿಯಾಗುತ್ತಾಳೆ. ಅಲ್ಲಿಂದ ಕಥೆ ತಿರುವು ಪಡೆಯುತ್ತೆ.. ಕಥೆಯನ್ನು ಬಿಚ್ಚಿಡುತ್ತಾರೆ ಸಪ್ತಮಿ ಗೌಡ.

    ಪಾಪ್ ಕಾರ್ನ್ ಮಂಕಿ ಟೈಗರ್ ಗಿರಿಜಾ, ಕಾಂತಾರದಲ್ಲಿ ಲೀಲಾ ಆಗಿ ಬದಲಾಗಿದ್ದಾರೆ. ಎರಡು ವರ್ಷಗಳ ನಂತರ ಇದು ಅವರ 2ನೇ ಚಿತ್ರ. ಚಿತ್ರದಲ್ಲಿ ನನ್ನದು ಮಂಗಳೂರು ಕನ್ನಡ ಮಾತನಾಡುವ ಪಾತ್ರ. ಟೀಮಿನವರು ಅದೆಷ್ಟು ಪರ್ಫೆಕ್ಟ್ ಇದ್ದರು ಅಂದ್ರೆ 2 ತಿಂಗಳ ವರ್ಕ್ ಶಾಪ್ ಮಾಡಿಸಿದರು. ಇದು ನನ್ನ ಪಾತ್ರ ಮತ್ತು ಅಭಿನಯದ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ನಾನು ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋಕೆ ಸುಲಭವಾಯ್ತು ಎನ್ನುತ್ತಾರೆ ಸಪ್ತಮಿ ಗೌಡ.

    ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. 2 ಕಿ.ಮೀ. ದಾರಿ ಸಾಗೋಕೆ 45 ನಿಮಿಷ ವ್ಯಯಿಸಿದ್ದೇವೆ. ಕಾಡಿನ ಬದುಕು ಕಷ್ಟ ಕಷ್ಟ ಎನ್ನುವ ಸಪ್ತಮಿಗೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ.

    ನಮ್ಮ ಚಿತ್ರತಂಡದ ಕ್ಯಾಪ್ಟನ್ ರಿಷಬ್ ಶೆಟ್ಟಿ. ಅವರ ಎನರ್ಜಿ ದೊಡ್ಡದು. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ದೇಶನ. ಇದೆಲ್ಲದರ ನಡುವೆ ಅವರಿಗೆ ಪ್ರತಿ ಪಾತ್ರದ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುವ ಪರಿಗೆ ಬೆರಗಾಗಿದ್ದಾರಂತೆ ಸಪ್ತಮಿ.

    ಕಾಂತಾರ ಚಿತ್ರ ಇದೇ ಸೆ.30ರಂದು ಬಿಡುಗಡೆಯಾಗುತ್ತಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿವೆ.

  • ಕಾಂತಾರದ ವರಾಹರೂಪಂ ಹಾಡಿಗೆ ಮತ್ತೆ ಶಾಕ್

    ಕಾಂತಾರದ ವರಾಹರೂಪಂ ಹಾಡಿಗೆ ಮತ್ತೆ ಶಾಕ್

    ಕನ್ನಡದ ದಂತಕಥೆಯಾದ ಸಿನಿಮಾ ಕಾಂತಾರ. ಆದರೆ ಕಾಂತಾರದ ವರಾಹರೂಪಂ ಹಾಡಿಗೆ ಮತ್ತೊಮ್ಮೆ ಶಾಕ್ ಸಿಕ್ಕಿದ್ದು, ಹಾಡನ್ನು ಬಳಸದಂತೆ ಕೇರಳದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. 'ಕಾಂತಾರ' ಸಿನಿಮಾ ಹಿಟ್ ಆಗುತ್ತಿದ್ದಂತೆ 'ನವರಸಂ' ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಥೈಕ್ಕುಡಂ ಬ್ರಿಡ್ಜ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿತ್ತು. ನಂತರ ಕೋರ್ಟ್ ಮೆಟ್ಟಿಲೇರಿತ್ತು.

    'ನವರಸಂ' ಸಾಂಗ್ ಕೇಳಿ ಇನ್ಸ್ಪೈರ್ ಆಗಿರೋದು ನಿಜ. ಇನ್ನುಳಿದಂತೆ ಆ ಹಾಡಿಗೂ ಈ ಹಾಡಿಗೂ ಸಂಬಂಧವೇ ಇಲ್ಲ. ಸಂಗೀತದ ಸೂಕ್ಷ್ಮಗಳು ಗೊತ್ತಿರುವವರಿಗೆ ಇದು ಗೊತ್ತಾಗುತ್ತದೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಆರಂಭದಲ್ಲಿ ಕೇಸು ದಾಖಲಾದ ತಕ್ಷಣ ತಡೆಯಾಜ್ಞೆ ನೀಡಲಾಗಿತ್ತು. ಆದರೆ ಆನಂತರ ಸುಪ್ರೀಂಕೋರ್ಟಿನಲ್ಲಿ ಹಾಡಿನ ಸ್ಥಳೀಯ ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡಲಾಗಿತ್ತು. ಹಾಡಿನ  ಬಳಕೆಗೆ ಅನುಮತಿ ಸಿಕ್ಕಿತ್ತು. ಆದರೆ ವಿಚಾರಣೆಯನ್ನು ಕೇರಳ ಕೋರ್ಟಿನಲ್ಲೇ ನಡೆಸಬೇಕು ಎಂದು ಸೂಚನೆ ನೀಡಲಾಗಿತ್ತು.

    ಇದೀಗ ಕೇರಳದ ಕೋಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿದೆ. ಒಟ್ಟಿನಲ್ಲಿ ಕಾಂತಾರದ ಮ್ಯೂಸಿಕ್ ಕೋರ್ಟಿನ ಮೆಟ್ಟಿಲಲ್ಲಿ ನಿರ್ಧಾರವಾಗುತ್ತಿದೆ.

  • ಕಾಂತಾರದ ಶಿವನಿಗೆ ಸಿದ್ಧಶ್ರೀ ಪುರಸ್ಕಾರ

    ಕಾಂತಾರದ ಶಿವನಿಗೆ ಸಿದ್ಧಶ್ರೀ ಪುರಸ್ಕಾರ

    ಕಲಬುರಗಿಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮುಗಳಖೋಡ ಮಠದಿಂದ ಕೊಡಮಾಡುವ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿಯು 1 ಲಕ್ಷ ನಗದು, ಎರಡು ತೊಲ ಚಿನ್ನ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ. 38ನೇ ಗುರುವಂದಮಾ ಕಾರ್ಯಕ್ರಮದಲ್ಲಿ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮಠಾಧೀಶರು ರಿಷಬ್ ಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

    ಸಿದ್ಧಶ್ರೀ ಪುರಸ್ಕಾರ  ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ, ದೈವ ನರ್ತಕರ ಕುಟುಂಬಕ್ಕೆ ಅಪ9ಣೆ ಮಾಡುತ್ತೆನೆ. ವಿಶೇಷವಾಗಿ ಕನ್ನಡ ನಾಡಿನ ಮೇರುನಟ ದಿ. ಡಾ.ಪುನೀತ್ ರಾಜಕುಮಾರ್ ಹಾಗೂ ಕನ್ನಡ ಜನತೆಗೆ ಅರ್ಪಿಸುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.  

    ನಾನು ಮೊದಲು ಬಣ್ಣ ಹಚ್ಚಿದ್ದು ಯಕ್ಷಗಾನದಲ್ಲಿ. ಆ  ಮೂಲಕ. ಕರ್ನಾಟಕದ ಭಾವನೆ, ನಂಬಿಕೆ ಒಳಗೊಂಡ ನಮ್ಮ ಮಣ್ಣಿನ ಕಥೆ ನಿಮಗೆಲ್ಲಾ ಇಷ್ಟವಾಗಿದ್ದು ನನಗೆ ಹೆಮ್ಮೆ ಎಂದ ರಿಷಬ್ ಶೆಟ್ಟಿ, ಕಾಂತಾರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.

    ಇದೇ ವೇಳೆ ಕಾಂತಾರದ ವಿವಾದಾತ್ಮಕ ಹಾಡು ವರಾಹರೂಪಂ ವೊರಿಜಿನಲ್ ಸಿನಿಮಾದಲ್ಲಿ ಕಾಣಿಸುವುದು ಯಾವಾಗ ಎಂಬ ಪ್ರಶ್ನೆಗೆ ವಿವಾದ ಕೋರ್ಟಿನಲ್ಲಿರುವುದರಿಂದ ಈಗ ಏನನ್ನೂ ಹೇಳುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಇದೇ ವೇಲೆ ದೈವನರ್ತಕರ, ದೈವಾರಾಧನೆಯ ರೀಲ್ಸ್ ಮಾಡುತ್ತಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಬೇಡ, ಇದು ನಮ್ಮ ಸಂಸ್ಕøತಿ ಅಲ್ಲ. ನಂಬಿಕೆಗಳಿಗೆ ಅವಮಾನ ಮಾಡಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ ರಿಷಬ್ ಶೆಟ್ಟಿ.

  • ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

    ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

    ಕನ್ನಡದಲ್ಲಿ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೃಷ್ಟಿಸುತ್ತಿದೆ. ದಾಖಲೆಗಳೆಲ್ಲ ಪುಡಿ ಪುಡಿಯಾಗುತ್ತಿದೆ. ಡಿವೈನ್ ಹಿಟ್ ಎಂಬ ಹೊಸ ಪದಪುಂಜವನ್ನು ಕನ್ನಡಕ್ಕೆ ಕೊಟ್ಟ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಎರಡೂ ಹೊಸ ದಾಖಲೆ ಬರೆದಿವೆ. ಈ ಹಾದಿಯಲ್ಲಿ ಕಾಂತಾರ ಯಶ್, ಪುನೀತ್ ರಾಜಕುಮಾರ್ ಹೆಸರಲ್ಲಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕಿದೆ. ಹೊಸ ಮೈಲುಗಲ್ಲು ಸ್ಥಾಪಿಸಿದೆ.

    25 ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡಿದವರ ಸಂಖ್ಯೆ 77 ಲಕ್ಷಕ್ಕೂ ಹೆಚ್ಚು. ಇದು ಹೊಸ ದಾಖಲೆ. ಈ ಹಿಂದೆ ಈ ದಾಖಲೆ ಇದ್ದದ್ದು ಕೆಜಿಎಫ್ ಚಾಪ್ಟರ್ 2 ಹೆಸರಲ್ಲಿ. ಕೆಜಿಎಫ್ 2 ಚಿತ್ರವನ್ನು 75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು 65 ಲಕ್ಷ ಜನ ವೀಕ್ಷಿಸಿದ್ದರು. ಅ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 1 ಬ್ರೇಕ್ ಮಾಡಿತ್ತು. ಕೆಜಿಎಫ್ ಸಿನಿಮಾವನ್ನು 72 ಲಕ್ಷ ಜನ ವೀಕ್ಷಿಸಿದ್ದರು. ಆ ಎರಡೂ ಚಿತ್ರಗಳು ಹೊಂಬಾಳೆ ಚಿತ್ರಗಳೇ.

    ಈಗ ಕೇವಲ 25 ದಿನಗಳಲ್ಲಿ ಕಾಂತಾರ ಚಿತ್ರವನ್ನು 25 ದಿನಗಳಲ್ಲಿ 77 ಲಕ್ಷ ವೀಕ್ಷಿಸಿದ್ದಾರೆ. ಆ ಸಂಖ್ಯೆ ಕೋಟಿ ದಾಟಿದರೂ ಅಚ್ಚರಿಯಿಲ್ಲ. ಇದು ಕೇವಲ ಕನಾಟಕದ ಲೆಕ್ಕ. ಕನ್ನಡಿಗರು ನೋಡಿರುವ ಚಿತ್ರ. ಕಾಂತಾರ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಲ್ಲ. ಸದ್ಯಕ್ಕೆ ಆ ದಾಖಲೆಯ ಹತ್ತಿರಕ್ಕೂ ಹೋಗೋಕಾಗಲ್ಲ. ಅದು ಸೃಷ್ಟಿಸಿರುವ ಇತಿಹಾಸ ಅಂತದ್ದು.

    ಹೊಂಬಾಳೆ ಶುರುವಾಗಿದ್ದು ನಿನ್ನಿಂದಲೇ ಚಿತ್ರದ ಮೂಲಕ. ವಿಜಯ್ ಕಿರಗಂದೂರು ನಿರ್ಮಾಣದ ಮೊದಲ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಅದಾದ ನಂತರ ಹೊಂಬಾಳೆ ಸಿನಿಮಾಗಳು ಸೋತದ್ದೇ ಇಲ್ಲ. ಮಾಸ್ಟರ್‍ಪೀಸ್, ರಾಜಕುಮಾರ. ಕೆಜಿಎಫ್ 1 & 2, ಯುವರತ್ನ ಎಲ್ಲ ಚಿತ್ರಗಳೂ ಇತಿಹಾಸ ಬರೆದವು. ಇನ್ನು ಮುಂದೆ ಜಗ್ಗೇಶ್ ಜೊತೆಗಿನ ರಾಘವೇಂದ್ರ ಸ್ಟೋರ್ಸ್ ಇದೆ. ಇದೇ ವರ್ಷ ರಿಲೀಸ್ ಆಗಲಿದೆ. ಇದು ಮಾತ್ರ ಕನ್ನಡದ ಸಿನಿಮಾ.

    ಪ್ರಭಾಸ್-ಪ್ರಶಾಂತ್ ನೀಲ್ ಜೊತೆಗಿನ  ಸಲಾರ್, ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಟೈಸನ್, ಪವನ್ ಕುಮಾರ್-ಫಹಾದ್ ಫಾಸಿಲ್ ಜೊತೆಗಿನ ಧೂಮಂ, ಡಾ.ಸೂರಿ-ಶ್ರೀಮುರಳಿ ಕಾಂಬಿನೇಷನ್‍ನ ಬಘೀರ, ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ಘೋಷಣೆಯಾಗಿವೆ. ಬಘೀರ ಮತ್ತು ರಿಚರ್ಡ್ ಆಂಟನಿ ಇನ್ನೂ ಸೆಟ್ಟೇರಿಲ್ಲ. ಇದರ ಜೊತೆಗೆ ಸಂತೋಷ್ ಆನಂದರಾಮ್-ಯುವ ರಾಜಕುಮಾರ್ ಚಿತ್ರವೂ ಸೆಟ್ಟೇರುತ್ತಿದೆ.

  • ಕ್ರಿ.ಶ.400ರ ಕಾಲಘಟ್ಟದ ಕಥೆ ಕಾಂತಾರ 2

    ಕ್ರಿ.ಶ.400ರ ಕಾಲಘಟ್ಟದ ಕಥೆ ಕಾಂತಾರ 2

    ಕಾಂತಾರ ಚಿತ್ರದ ಪ್ರೀಕ್ವೆಲ್ ಘೋಷಣೆಯಾಗಿದ್ದೇ ತಡ, ಚಿತ್ರದ ಬಗ್ಗೆ ಕುತೂಹಲ ಗರಿಗೆದರುತ್ತಿದೆ. ಕ್ರಿ.ಶ.400ರ ಕಾಲಘಟ್ಟದ ಕಥೆ ಇರಲಿದ್ದು, ಕಥೆ ಹಿಂದೆ ಹಿಂದೆ ಹೋಗಲಿದೆ. ಅಂದರೆ ನೆಮ್ಮದಿಯಿಲ್ಲದ ರಾಜ ಪಂಜುರ್ಲಿಯನ್ನು ತನ್ನ ರಾಜ್ಯಕ್ಕೆ ಕರೆತರುವ ಕಥೆ ಇರಲಿದೆ ಎನ್ನಲಾಗಿದೆ. ಕಾಂತಾರ 2' ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ.

    ಕಥೆ & ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಮುಖ್ಯವಾಗಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವುದಕ್ಕೂ ಒಂದು ಕಾರಣವಿದೆ. 'ಕಾಂತಾರ' ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ತಂಡ ಕೂಡ ಅಲ್ಲಿಯೇ ಉಳಿದುಕೊಂಡಿದೆ.

    ಮೂಲಗಳ ಪ್ರಕಾರ, 'ಕಾಂತಾರ 2' ಚಿತ್ರದ ಬಜೆಟ್ 150 ಕೋಟಿ ರೂ. ಎನ್ನಲಾಗುತ್ತಿದೆ. ಕಾಂತಾರ ಸೆನ್ಸೇಷನ್ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಕಾಂತಾರ 2 ಮೇಲೆ ಭಾರಿ ನಿರೀಕ್ಷೆಗಳಿವೆ. ಆ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.

  • ಗಾಂಧಿ ಪ್ರೇಮಿ ನಾಥೂರಾಮ್

    gandhi lover naathuram

    ನಾಥೂರಾಮ್ ಗೋಡ್ಸೆ. ಮಹಾತ್ಮ ಗಾಂಧೀಜಿಯನ್ನು ಹತ್ಯೆಗೈದ ಹಂತಕ. ಈಗ ಆತನ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ. ಚಿತ್ರದ ಟೈಟಲ್ ನಾಥೂರಾಮ್. ಆದರೆ, ಈ ನಾಥೂರಾಮ್, ಗಾಂಧಿ ಪ್ರೇಮಿ. ಗಾಂಧಿ ತತ್ವ ಫಾಲೋ ಮಾಡುವ ಗಾಂಧಿ ತತ್ವವಾದಿ.

    ಗಾಂದಿಯ ಬಗ್ಗೆ ಪಾಠ ಮಾಡೋ ಲೆಕ್ಚರರ್ ಆಗಿ ನಟಿಸುತ್ತಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ಟೈಟಲ್ ಮತ್ತು ಪಾತ್ರದ ಒನ್‍ಲೈನ್, ಅಚ್ಚರಿ ಮೂಡಿಸಿರುವುದು ನಿಜ. ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಕ್ಸಸ್ ಖುಷಿಯಲ್ಲಿರೋ ರಿಷಬ್ ಶೆಟ್ಟಿ, ಈ ಚಿತ್ರದ ನಾಯಕ. ನಿರ್ದೇಶಕನಾಗಿ ಸತತ 2 ಹಿಟ್ ಸಿನಿಮಾ ನೀಡಿರುವ ರಿಷಬ್, ನಾಯಕರಾಗಿ ನಟಿಸುತ್ತಿರುವ 2ನೇ ಸಿನಿಮಾ ನಾಥೂರಾಮ್. ಬೆಲ್‍ಬಾಟಮ್ ಚಿತ್ರದ ಟೀಸರ್ ಹೊರಬಂದಿದ್ದು, ಮೆಚ್ಚುಗೆ ಗಳಿಸಿದೆ. ಹೀಗಿರುವಾಗಲೇ 2ನೇ ಚಿತ್ರ ನಾಥೂರಾಮ್ ಶುರುವಾಗಿದೆ. 

  • ನವರಸಂ ತಂಡದಿಂದ ಕಾಂತಾರ ಮೇಲೆ ಕೇಸ್ ಎಚ್ಚರಿಕೆ : ವರಾಹರೂಪಂ ಹಾಡು ಕದ್ದಿದ್ದಾ?

    ನವರಸಂ ತಂಡದಿಂದ ಕಾಂತಾರ ಮೇಲೆ ಕೇಸ್ ಎಚ್ಚರಿಕೆ : ವರಾಹರೂಪಂ ಹಾಡು ಕದ್ದಿದ್ದಾ?

    ಈಗ ವಾಟ್ಸಪ್‍ನಲ್ಲಿ.. ಫೇಸ್‍ಬುಕ್‍ನಲ್ಲಿ.. ಟ್ವಿಟ್ಟರ್‍ನಲ್ಲಿ.. ಎಲ್ಲೆಲ್ಲಿಯೂ ಈ ಹಾಡು ಗುನುಗುಡುತ್ತಿದೆ. ವರಾಹರೂಪಂ ದೈವವರೀತಂ.. ಹಾಡು ಎಲ್ಲೆಡೆ ಜನಪ್ರಿಯವಾಗಿದೆ. ಕಾಂತಾರದ ಯಶಸ್ಸು ಹಾಗಿದೆ. ಆದರೆ ತಂಡದ ಮೇಲೆ ಚಿತ್ರದ ಈ ಹಾಡಿನ ಟ್ರ್ಯಾಕ್ ಕದ್ದ ಆರೋಪ ಕೇಳಿಬಂದಿತ್ತು. 2017ರಲ್ಲಿ ರಿಲೀಸ್ ಆಗಿದ್ದ ತೈಕುಡಂ

    ಬ್ರಿಡ್ಜ್ ತಂಡದ ನವರಸಂ ಆಲ್ಬಂನಲ್ಲಿ ಇದೇ ರೀತಿಯ ಮ್ಯೂಸಿಕ್ ಬಳಕೆಯಾಗಿತ್ತು. ಅಜನೀಶ್ ಲೋಕನಾಥ್ ಈ ಮ್ಯೂಸಿಕ್ಕನ್ನು ಯಥಾವತ್ತು ಬಳಸಿಕೊಂಡರಾ ಎಂಬ ಪ್ರಶ್ನೆಯೂ ಎದ್ದಿತ್ತು. ಆಗ ಅಜನೀಶ್ ಪ್ರತಿಕ್ರಿಯೆ ನೀಡಿ ಆ ಹಾಡಿನಿಂದ ಸ್ಫೂರ್ತಿ ಪಡೆದಿದ್ದು ಸತ್ಯ. ಆದರೆ ಚಿತ್ರದ ಈ ಹಾಡಿನಲ್ಲಿ ಅದೇ ರಾಗಗಳನ್ನು ಬಳಸಿಕೊಂಡಿದ್ದೇವೆ. ಕಾಪಿ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.

    ಈಗ ತೈಕುಡಂ ಬ್ರಿಡ್ಜ್ ತಂಡ ಕಾಂತಾರ ಮೇಲೆ ಕೇಸ್ ಹಾಕುವ ಎಚ್ಚರಿಕೆ ನೀಡಿದೆ. ನಮಗೂ ಕಾಂತಾರಕ್ಕೂ ಯಾವ ಸಂಬಂಧವೂ ಇಲ್ಲ. ವರಾಹರೂಪಂ ಹಾಗೂ ನವರಸಂ ಹಾಡುಗಳಲ್ಲಿ ಸಾಮ್ಯತೆ ಇದೆ. ಇದು ಕಾಪಿರೈಟ್ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಕಾಂತಾರ ತಂಡ ನಮಗೆ ಕ್ರೆಡಿಟ್ ಕೂಡಾ ನೀಡಿಲ್ಲ. ತಮ್ಮದೇ ಸ್ವಂತ ಸೃಷ್ಟಿ ಎಂಬಂತೆ ಪ್ರಚಾರ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧ. ನಿಮ್ಮ ಬೆಂಬಲವಿರಲಿ ಎಂದು ಪೋಸ್ಟ್ ಹಾಕಿದ್ದಾರೆ.

    ಈ ಬಗ್ಗೆ ಕಾಂತಾರ ಚಿತ್ರತಂಡದ ನಿರ್ದೇಶಕ ರಿಷಬ್ ಶೆಟ್ಟಿಯವರಾಗಲೀ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಾಗಲೀ ಹೊಂಬಾಳೆ ಫಿಲಮ್ಸ್‍ನವರಾಗಲೀ ಪ್ರತಿಕ್ರಿಯೆ ನೀಡಿಲ್ಲ.

  • ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

    ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

    ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿದ್ದಾರೆ.  ಇಂದು ನಡೆಯಲಿರುವ ಏರ್ ಶೋ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕರ್ನಾಟಕದ ಕೆಲವು ಗಣ್ಯರ ಜೊತೆ ಔತಣಕೂಟ ಏರ್ಪಡಿಸಿದ್ದು, ಹಲವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ವಿಜಯ್ ಕಿರಗಂದೂರು, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್, ಯಶ್, ಅಶ್ವಿನಿ ಪುನೀತ್ ರಾಜಕುಮಾರ್, ಆರ್.ಜೆ.ಶ್ರದ್ಧಾ, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಕುಂಬ್ಳೆ ದಂಪತಿ, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಸೇರಿ ಇತರರಿಗೆ ಆಹ್ವಾನವಿತ್ತು.

    ಕಾಂತಾರಾ ಸಿನಿಮಾ ನಿರ್ಮಾಣ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 20 ನಿಮಿಷಗಳ ಕಾಲ ರಾಜ್ಯದ ಪ್ರಸಕ್ತ ಬೆಳವಣಿಗೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿನಿಮಾ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ಕಾರಗಳ ಸಹಕಾರಕ್ಕೆ ಬದ್ಧ ಎಂದ ಪ್ರಧಾನಿ, ನಿರೀಕ್ಷೆಗಳೇನಾದರೂ ಇದೆಯಾ ಎಂದು ಕೇಳಿದ್ದಾರೆ. ನಂತರ ಕ್ರೀಡಾ ಕ್ಷೇತ್ರದ ಗಣ್ಯರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾದ ಪಿಎಂಓ ಕಚೇರಿ ಅಧಿಕಾರಿಗಳು ನಂತರ ಪ್ರಧಾನಿ ರಾಜಭವನದ ಸಿಬ್ಬಂದಿ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾರೆ.

  • ಮಗಳು  ಜಾನಕಿ ಹೀರೋಗೆ ಹೀರೋಯಿನ್ ಆದ ಕಥೆ

    ಮಗಳು  ಜಾನಕಿ ಹೀರೋಗೆ ಹೀರೋಯಿನ್ ಆದ ಕಥೆ

    ಟಿ ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯನ್ನು ಪ್ರೇಕ್ಷಕರು ಇವತ್ತಿಗೂ ಮರೆತಿಲ್ಲ. ಅವರೆಲ್ಲರ ಕಣ್ಣಿನಲ್ಲಿ ಅಚ್ಚಳಿಯದೆ ಉಳಿದಿರುವ ಮುಖ ಗಾನವಿ ಲಕ್ಷ್ಮಣ್ ಅವರದ್ದು. ಆ ಜಾನಕಿ ಹೀರೋಯಿನ್ ಆಗಿರೋ ಸಿನಿಮಾ ಹೀರೋ. ರಿಷಬ್ ಶೆಟ್ಟಿ ಹೀರೋ ಆಗಿರೋ ಹೀರೋ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿರೋದು ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್.

    ಹೀರೋಯಿನ್  ಗಾನವಿಯ ಪರ್ಸನಲ್ ಲೈಫ್ ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ಗಾನವಿ ಓದಿದ್ದು ಸೈಕಾಲಜಿ. ಸಂಪ್ರದಾಯಸ್ಥ ಕುಟುಂಬವಾದರೂ, ಹಠಕ್ಕೆ ಬಿದ್ದು ಕಲಿತಿದ್ದು ಡ್ಯಾನ್ಸ್. ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಾಗ ಕಥಕ್ಕಳಿ ಕಲಿತ ಗಾನವಿ, ನಂತರ ಡ್ಯಾನ್ಸ್ ಟೀಚರ್ ಆದರು. ಕೊರಿಯೋಗ್ರಫಿಯೂ ಚೆನ್ನಾಗಿ ಗೊತ್ತು. ರಂಗಭೂಮಿಯ ಪರಿಚಯವೂ ಚೆನ್ನಾಗಿದೆ.

    ಮೊದಲ ಚಿತ್ರದಲ್ಲೇ ಮಲ್ಟಿಪಲ್ ಡೈಮೆನ್ಷನ್ ಇರೋ, ವಿವಿಧ ಶೇಡ್‍ಗಳಿರೋ ಸಿನಿಮಾ ಸಿಕ್ಕಿದೆ. ಹೇಗೆ ನಟಿಸಿದ್ದೇನೆ ಅನ್ನೋ ಕುತೂಹಲ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾನೂ ಕಾಯುತ್ತಿದ್ದೇನೆ ಎಂದಿದ್ದಾರೆ ಗಾನವಿ.

    ಭರತ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ. ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾವನ್ನು ಚಿತ್ರರಂಗ ಮತ್ತು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

  • ಮಲಯಾಳಂ ಕಾಂತಾರ ರಿಲೀಸ್ ಡೇಟ್ ಕೂಡಾ ಫಿಕ್ಸ್

    ಮಲಯಾಳಂ ಕಾಂತಾರ ರಿಲೀಸ್ ಡೇಟ್ ಕೂಡಾ ಫಿಕ್ಸ್

    ನಿಗೂಢ ಕಾಡಿನ ಲೋಕದಲ್ಲಿ ನಡೆಯುವ ದೈವದ ಪವಾಡ. ಮನುಷ್ಯರು ಮತ್ತು ಕಾಡಿನ ನಡುವಿನ ಹೋರಾಟ. ಭೂತಕೋಲ. ಪಂಜುರ್ಲಿ ಹಾಗೂ ಗುಳಿಗ ದೈವದ ಆಟ.. ಎಲ್ಲವನ್ನೂ ಹೊತ್ತು ನಗುನಗಿಸುತ್ತಲೇ ಬೇರೊಂದು ಲೋಕಕ್ಕೇ ಕರೆದೊಯ್ಯುವ ಕಾಂತಾರ ಈಗ ತಮಿಳುನಾಡು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದೆ. ಹಿಂದಿಯಲ್ಲಿ ನಭೂತೋನಭವಿಷ್ಯತಿ ಎಂಬಂತೆ ಅದ್ಧೂರಿಯಾಗಿ ತೆರೆ ಕಂಡಿದೆ. ಈಗ ಮಲಯಾಳಂನಲ್ಲಿ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಮುಂದಿನ ವಾರ ಅಕ್ಟೋಬರ್ 20ಕ್ಕೆ ರಿಲೀಸ್.

    ಹಾಗೆ ನೋಡಿದರೆ ಕೇರಳ ಮತ್ತು ಕರಾವಳಿಯ ಸಂಪರ್ಕಗಳು ಹಾಗೂ ಸಂಸ್ಕೃತಿ ಒಂದೇ ತೆರನಾದದ್ದು. ಮಲಯಾಳಿಗೆ ಇದು ತುಂಬಾ ಹತ್ತಿರವಾಗುವ ನಿರೀಕ್ಷೆಯೂ ಇದೆ. ಪೃಥ್ವಿರಾಜ್ ಸುಕುಮಾರನ್ ಚಿತ್ರವನ್ನು ಕೇರಳದಲ್ಲಿ ಕಾಂತಾರವನ್ನು ರಿಲೀಸ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಅಚ್ಯುತ್, ಮಾನಸಿ ಸುಧೀರ್ ಮೊದಲಾದವರ ನಟನೆಗೆ ಮನಸೋತಿರುವ ಪ್ರೇಕ್ಷಕರು ಕಡೆಯ ಕ್ಲೈಮಾಕ್ಸ್ನಲ್ಲಂತೂ ಬೇರೆಯದೇ ಲೋಕಕ್ಕೆ ಹೋಗುತ್ತಾರೆ. ಧನುಷ್, ಪ್ರಭಾಸ್, ನಾನಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

  • ಮೊಟ್ಟೆ + ಕಿರಿಕ್ ಸ್ಟಾರ್ = ಗರುಡ ಗಮನ ವೃಷಭ ವಾಹನ

    shetty and shetty joins hands for new venture

    ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಟಾರ್ ಆದವರು ನಟ ರಿಷಬ್ ಶೆಟ್ಟಿ. ಒಂದು ಮೊಟ್ಟೆಯ ಮೂಲಕ ಸ್ಟಾರ್ ಆದವರು ರಾಜ್ ಬಿ.ಶೆಟ್ಟಿ. ಈ ಎರಡೂ ಒಟ್ಟಿಗೇ ಸೇರಿದಾಗ ಸೃಷ್ಟಿಯಾಗಿದ್ದು ಗರುಡ ಗಮನ ವೃಷಭ ವಾಹನ. ಇದು ಹೊಸ ಸಿನಿಮಾ. ಒಂದು ಮೊಟ್ಟೆಯ ಕಥೆ ನಂತರ ರಾಜ್ ಬಿ.ಶೆಟ್ಟಿ ಮತ್ತೆ ನಿರ್ದೇಶಕರಾಗಿರುವ ಚಿತ್ರವಿದು.

    ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ನಟಿಸುತ್ತಿದ್ದಾರೆ. ಇಲ್ಲಿ ಎರಡು ಪಾತ್ರಗಳಿವೆ. ಒಂದು ಕ್ರೋಧದ ಪ್ರತಿರೂಪ. ಶಿವನಂತೆ. ಇನ್ನೊಂದು ನಿಯಂತ್ರಣದ ಪ್ರತಿರೂಪ. ವಿಷ್ಣು ಇದ್ದಂತೆ. ಈ ಇಬ್ಬರೂ ಒಂದಾದರೆ ಯಾವ ಹಂತಕ್ಕೆ ಬೆಳೆಯಬಹುದು ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರೆ ರಿಷಬ್ ಶೆಟ್ಟಿ.

    ಮೊದಲು ಹರಿಹರ ಎಂದೇ ಹೆಸರಿಡುವ ಆಲೋಚನೆ ಇತ್ತಂತೆ. ಆನಂತರ ಇವರು ಹರಿ ಹರ ಅಲ್ಲ, ಅವರ ಅಂಶಗಳಿರೋ ಪಾತ್ರಗಳು ಎನ್ನಿಸಿದ್ದರಿಂದ ಗರುಡಗಮನ ಹರಿ, ವೃಷಭವಾಹನ ಶಿವ ಎಂದು ಹೆಸರಿಟ್ಟರಂತೆ. ವಿಶೇಷವೆಂದರೆ ಚಿತ್ರದ ಶೂಟಿಂಗ್ ಮುಗಿದಿದೆ. ಜೂನ್‍ನಲ್ಲಿ ರಿಲೀಸ್.

  • ರಾಜಕೀಯಕ್ಕೆ ಬರುತ್ತಿಲ್ಲ : ರಿಷಬ್ ಶೆಟ್ಟಿ

    ರಾಜಕೀಯಕ್ಕೆ ಬರುತ್ತಿಲ್ಲ : ರಿಷಬ್ ಶೆಟ್ಟಿ

    ರಾಜ್ಯದಲ್ಲೀಗ ಎಲೆಕ್ಷನ್ ಹವಾ. ವೋಟಿಂಗ್..ಪ್ರಚಾರ..ಟಿಕೆಟ್..ಬಂಡಾಯಗಳದ್ದೇ ಭರಾಟೆ. ಇತ್ತೀಚೆಗೆ ನಟ ಸುದೀಪ್ ಬಿಜೆಪಿಯ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು. ಇದು ಸುದೀಪ್ ಚಿತ್ರಗಳಿಗಿಂತಲೂ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು. ಇದರ ನಡುವೆಯೇ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯೊಂದನ್ನು ಕೊಟ್ಟುಬಿಟ್ಟರು. ಸಂಚಲನವನ್ನೇ ಸೃಷ್ಟಿಸಿತು.

    ನಮ್ಮ ಸಿದ್ದಾಂತಕ್ಕೂ  ರಿಷಬ್ ಶೆಟ್ಟಿ  ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ. ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ನನಗೆ ಆಶ್ಚರ್ಯ ಆಯ್ತು. ಬಿಜೆಪಿ, ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನೆಂದು  ಆಶೀರ್ವಾದ ಕೊಡುತ್ತಾಳೆ ನೋಡೋಣ

    ಎಂದು ಹೇಳಿಕೆ ನೀಡಿದರು ಬೊಮ್ಮಾಯಿ. ಹೇಳಿಕೆ ನೀಡಿದ್ದು ಕೊಲ್ಲೂರು ಮೂಕಾಂಬಿಕೆಯ ದಿವ್ಯ ಸಾನ್ನಿಧ್ಯದಲ್ಲಿ.

    ಹಾಗಾದರೆ ಬಿಜೆಪಿಗೆ ಇನ್ನೊಬ್ಬ ಸ್ಟಾರ್ ನಟರ ಬಲ ಸಿಕ್ಕಿತಾ..? ರಿಷಬ್ ಕೂಡಾ ಬಿಜೆಪಿಗೆ ಬೆಂಬಲ ಕೊಡ್ತಾರಾ..? ಹೀಗೆಲ್ಲ ಪ್ರಶ್ನೆಗಳೆದ್ದವು. ಕಾಂತಾರ ರಿಲೀಸ್ ವೇಳೆ ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಕುರಿತು ನೋ ಕಮೆಂಟ್ಸ್ ಎಂದಿದ್ದನ್ನೂ ನೆನಪು ಮಾಡಿಕೊಂಡರು ಜನ. ನರೇಂದ್ರ ಮೋದಿ ಭೇಟಿ ಮಾಡಿದ ಗಣ್ಯರಲ್ಲಿ ರಿಷಬ್ ಶೆಟ್ಟಿ ಒಬ್ಬರಾಗಿದ್ದರು. ಇವೆಲ್ಲದಕ್ಕೂ ಲಿಂಕ್ ಆಗಿದ್ದೇ ತಡ ಇರಬಹುದು ಇರಬಹುದು ಎಂದುಕೊಂಡರು ಜನ. ಅದಕ್ಕೆಲ್ಲ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ಧಾರೆ.

    ಅದೊಂದು ಆಕಸ್ಮಿಕ ಭೇಟಿಯಾಗಿತ್ತು. ನಾನೂ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೋಗಿದ್ದೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಬಂದರು. ಭೇಟಿಯಾಯಿತು. ಮಾತುಕತೆಯಾಯಿತು. ಇದಕ್ಕೆ ರಾಜಕೀಯದ ಬಣ್ಣ ಬೇಡ ಎಂದಿರೋ ರಿಷಬ್ ಶೆಟ್ಟಿ ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ನಿಮ್ಮ ಪ್ರೀತಿ ಹಾರೈಕೆ ಇರಲಿ ಎನ್ನುವ ಮೂಲಕ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

  • ರಾಜ್, ವಿಷ್ಣು ಜಮಾನಾ ರಿಪೀಟ್ : ಕಾಂತಾರ ಕ್ರೇಜ್

    ರಾಜ್, ವಿಷ್ಣು ಜಮಾನಾ ರಿಪೀಟ್ : ಕಾಂತಾರ ಕ್ರೇಜ್

    ಈಗ 20 ಅಥವಾ 30ರ ಹೊಸ್ತಿಲಲ್ಲಿರುವವರಿಗೆ ಇದು ವಿಶೇಷ ಅನ್ನಿಸಬಹುದು. ಏಕೆಂದರೆ ಈ ಜಮಾನಾದ ಹುಡುಗ/ಹುಡುಗಿಯರು ಅಂತಹವನ್ನೆಲ್ಲ ನೋಡಿಯೇ ಇಲ್ಲ. ಆದರೆ ಮರೆತೇಹೋಗಿದ್ದ ಆ ಕಥೆಯನ್ನು, ದೃಶ್ಯವನ್ನ ಮರುಕಳಿಸುವಂತೆ ಮಾಡಿದೆ ಕಾಂತಾರ. ಅದು ನಡೆದಿರುವುದು ಕಾಸರಗೋಡಿನಲ್ಲಿ. ಕಾಸರಗೋಡು ಕೇರಳದಲ್ಲಿದೆಯಾದರೂ ಕನ್ನಡಿಗರೇ ಹೆಚ್ಚು ಇರುವ ಜಿಲ್ಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ನಂತರ ರಿಷಬ್ ಶೆಟ್ಟಿ ಕಾಸರಗೋಡಿನವರ ಪಾಲಿಗೆ ನಮ್ಮ ಹುಡುಗನಾಗಿದ್ದಾರೆ. ಈಗ ಅದೇ ಕಾಸರಗೋಡಿನ ಮಂದಿ ರಾಜ್, ವಿಷ್ಣು ಜಮಾನಾ ನೆನಪಿಸಿದ್ದಾರೆ.

    ಒಂದು ಕಾಲದಲ್ಲಿ ಡಾ.ರಾಜ್ ಚಿತ್ರಗಳೆಂದರೆ ಊರಿಗೆ ಊರೇ ಗಾಡಿ ಕಟ್ಟಿಕೊಂಡು, ಟ್ರ್ಯಾಕ್ಟರ್ ಮಾಡಿಕೊಂಡು ಸಿನಿಮಾ ನೋಡೋಕೆ ಬರುತ್ತಿದ್ದ ಕಾಲವಿತ್ತು. ಕಿಲೋಮೀಟರುಗಟ್ಟಲೆ ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರುಗಳಲ್ಲಿ.. ನಡೆದುಕೊಂಡು ಹೋಗಿ ಸಿನಿಮಾ ನೋಡುತ್ತಿದ್ದರು. ಬಸ್‍ಗಳ ವ್ಯವಸ್ಥೆಯೂ ಅಷ್ಟಾಗಿ ಇಲ್ಲದೇ ಇದ್ದ ಕಾಲವದು. ವಿಷ್ಣುವರ್ಧನ್ ಚಿತ್ರಗಳಿಗೂ ಟಾಕ್ ಶುರುವಾದ ನಂತರ ಅಂತಹದ್ದೊಂದು ಕ್ರೇಜ್ ಸೃಷ್ಟಿಯಾಗುತ್ತಿತ್ತು. ಆಗ ಟಿವಿಗಳೂ ಮನೆ ಮನೆಯಲ್ಲಿರಲಿಲ್ಲ. ರೇಡಿಯೋ, ಟಿವಿ ಇದ್ದವರೇ ಶ್ರೀಮಂತರು. ಕಂಪ್ಯೂಟರ್ ಅನ್ನೋದು ಲಕ್ಷಾಧಿಪತಿಗಳ ಲಕ್ಷುರಿಯಾಗಿದ್ದ ಕಾಲವದು. ಸೋಷಿಯಲ್ ಮೀಡಿಯಾಗಳೂ ಇರಲಿಲ್ಲ. ಕೇವಲ ಬಾಯಿಮಾತಿನ ಪ್ರಚಾರದಲ್ಲೇ ಸಿನಿಮಾ ಗೆಲ್ಲುತ್ತಿದ್ದ ಕಾಲ. ಡಾ.ರಾಜ್ ಅವರ ಐತಿಹಾಸಿಕ ಹಿಟ್ ಎನ್ನಿಸಿಕೊಂಡ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ದಂತಹಾ ಚಿತ್ರಗಳು, ರವಿಚಂದ್ರನ್‍ರ ಪ್ರೇಮಲೋಕ, ವಿಷ್ಣುವರ್ಧನ್ ಅವರ ಬಂಧನ.. ಮೊದಲಾದ ಚಿತ್ರಗಳು ಓಪನಿಂಗ್ ಡಲ್ಲಾಗಿತ್ತು. ಆಮೇಲೆ ಹಿಟ್ ಆದವು. ಅದನ್ನೀಗ ಕಾಂತಾರ ಮತ್ತೊಮ್ಮೆ ಮಾಡಿದೆ,

    ಈಗ ಕಾಸರಗೋಡಿನ ಒಂದೇ ಗ್ರಾಮದ 69 ಜನ ಇಡೀ ಶೋ ಬುಕ್ ಮಾಡಿಕೊಂಡು ಸಿನಿಮಾ ನೋಡಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಹೋಬಳಿಯ ಕುಂಟಾಲುಮೂಲೆ ಗ್ರಾಮದ 69 ಜನಕ್ಕೆ ಕಾಂತಾರ ಕ್ರೇಜ್ ಗೊತ್ತಾಯ್ತು. ಇಡೀ ಗ್ರಾಮದ 69 ಜನ ಒಟ್ಟಾಗಿ ಸೇರಿ ಬಸ್ ಬುಕ್ ಮಾಡಿಕೊಂಡರು. ಕಾಸರಗೋಡಿನಲ್ಲಿ ಶೋ ಇತ್ತು. ಇಡೀ ಊರಿನ ಜನ ಸಿನಿಮಾ ನೋಡಿ ಖುಷಿಯಾಗಿ ಹೋಗಿದ್ದಾರೆ. ಮಲಯಾಳಂನಲ್ಲೂ ಮತ್ತೊಮ್ಮೆ ಬಂದು ನೋಡುತ್ತೇವೆ ಎಂದಿದ್ದಾರೆ.

  • ರಿಷಬ್ ಮನೆಗೆ ಜ್ಯೂ. ಪ್ರಗತಿ ಶೆಟ್ಟಿ ಬಂದಾಯ್ತು..

    ರಿಷಬ್ ಮನೆಗೆ ಜ್ಯೂ. ಪ್ರಗತಿ ಶೆಟ್ಟಿ ಬಂದಾಯ್ತು..

    ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಕುಟುಂಬಕ್ಕೆ ಹೊಸ ಸದಸ್ಯರು ಬಂದಿದ್ದಾರೆ. ಜ್ಯೂನಿಯರ್ ರಿಷಬ್ ಶೆಟ್ಟಿ. ಪ್ರಗತಿ ಶೆಟ್ಟಿ 2ನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಹೆಣ್ಣು ಮಗು. ಇದನ್ನು ರಿಷಬ್ ಖುಷಿಯಿಂದಲೇ ಹೇಳಿಕೊಂಡು ಪ್ರಗತಿಯಷ್ಟೇ ಮುದ್ದಾದ ಮಗು ಹುಟ್ಟಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

    ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಗೆ ಈಗಾಗಲೇ ಒಂದು ಮಗುವಿದೆ. ರಣ್‍ವಿತ್ ಶೆಟ್ಟಿ. ಆತನಿಗೀಗ ತಂಗಿ ಸಿಕ್ಕಿದ್ದಾಳೆ.

  • ರಿಷಬ್ ಶೆಟ್ಟರ ಕಾಂತಾರ ಶೂಟಿಂಗ್ ಎಲ್ಲಿಗೆ ಬಂತು?

    ರಿಷಬ್ ಶೆಟ್ಟರ ಕಾಂತಾರ ಶೂಟಿಂಗ್ ಎಲ್ಲಿಗೆ ಬಂತು?

    ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಮೊದಲ ಬಾರಿಗೆ ಜೊತೆಯಾಗಿರುವ ಕಾಂತಾರ ಸಿನಿಮಾ ಚಿತ್ರೀಕರಣ ಶುರುವಾಗಿ ಹೆಚ್ಚೂ ಕಡಿಮೆ ಎರಡು ತಿಂಗಳಾಗಿದೆ. ಕುಂದಾಪುರದಲ್ಲೇ ಬೀಡು ಬಿಟ್ಟಿರೋ ಚಿತ್ರತಂಡ ನಿರಂತರವಾಗಿ ಚಿತ್ರೀಕರಣದಲ್ಲಿದೆ. ಎಲ್ಲಿಗೆ ಬಂದಿದೆ ಸಿನಿಮಾ?

    ಇದುವರೆಗೆ 65 ದಿನಗಳ ಶೂಟಿಂಗ್ ಆಗಿದೆ. ಇನ್ನೂ 25 ದಿನಗಳ ಶೂಟಿಂಗ್ ಬಾಕಿ ಇದೆ. ಮಾರ್ಚ್ ಹೊತ್ತಿಗೆ ಚಿತ್ರೀಕರಣ 100% ಮುಗಿಯಲಿದೆ. ಇದು 90ರ ದಶಕದ ಕಥೆ. ಹೀಗಾಗಿ ಕುಂದಾಪುರದ ಬಳಿಯೇ ಸೆಟ್ ಹಾಕಿದ್ದೇವೆ. ಅದಕ್ಕಾಗಿ ಒಂದು ನಿಗೂಢ ಎನ್ನಿಸುವ ಕಾಡನ್ನೂ ಸೃಷ್ಟಿಸಿದ್ದೇವೆ. ಕಂಬಳದ ಶೂಟಿಂಗ್ ಮುಗಿದಿದೆ.. ಹೀಗೆ ಒಂದೇ ಉಸುರಿಗೆ ಎಲ್ಲ ಮಾಹಿತಿ ಇಡುತ್ತಾರೆ ರಿಷಬ್ ಶೆಟ್ಟಿ.

    ಪ್ರಕೃತಿ ಮತ್ತು ಮನುಷ್ಯನ ನಡುವಿನ ಯುದ್ಧದ ಕಥೆ ಇದು. ರಿಷಬ್ ಎದುರು ಸಪ್ತಮಿ ಗೌಡ ನಾಯಕಿಯಾಗಿದ್ದರೆ, ಕಿಶೋರ್, ಅಚ್ಯುತ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಮೊದಲಾದವರು ನಟಿಸಿದ್ದಾರೆ. ಅಂದಹಾಗೆ ಈ ಚಿತ್ರದ ಸ್ಟಂಟ್ಸ್, ಆ್ಯಕ್ಷನ್ ದೃಶ್ಯಗಳಲ್ಲಿ ಬಾಡಿ ಡಬಲ್ ಇಲ್ಲದೇ ಚಿತ್ರೀಕರಿಸಿದ್ದಾರಂತೆ ರಿಷಬ್ ಶೆಟ್ಟಿ. ನಿರ್ದೇಶಕರು ಹೇಳಿದ್ದನ್ನು ಹೀರೋ ರಿಷಬ್ ಶೆಟ್ಟಿ ಮರುಮಾತನಾಡದೆ ಒಪ್ಪಿಕೊಂಡು ನಟಿಸಿದ್ದಾರಂತೆ.

  • ರಿಷಬ್ ಶೆಟ್ಟಿ ಕಾಂತಾರ ಘೋಷಣೆ : ರಥಾವರ ನಿರ್ದೇಶಕ ಬೇಸರ

    ರಿಷಬ್ ಶೆಟ್ಟಿ ಕಾಂತಾರ ಘೋಷಣೆ : ರಥಾವರ ನಿರ್ದೇಶಕ ಬೇಸರ

    ರಿಷಬ್ ಶೆಟ್ಟಿ ಕಾಂತಾರ ಚಿತ್ರ ಘೋಷಿಸುತ್ತಿದ್ದಂತೆಯೇ ಚಿತ್ರರಂಗ ಸಂಭ್ರಮದಲ್ಲಿ ತೇಲಿದೆ. ಇದೂ ಕೂಡಾ ಒಂದೊಳ್ಳೆ ಚಿತ್ರವಾಗಲಿದೆ ಅನ್ನೋ ನಿರೀಕ್ಷೆ ಹಲವರದ್ದು. ಆದರೆ, ಬೇಸರ ತೋಡಿಕೊಂಡಿರುವುದು ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ. ಅದಕ್ಕೆ ಕಾರಣವೂ ಇದೆ.

    2 ವರ್ಷಗಳ ಹಿಂದೆ, ಶಿವಣ್ಣ ಹುಟ್ಟುಹಬ್ಬದ ವೇಳೆ ಬಂಡಿಯಪ್ಪ ವೈರಮುಡಿ ಅನ್ನೋ ಚಿತ್ರವನ್ನ ಅನೌನ್ಸ್ ಮಾಡಿದ್ದರು. ಕಂಬಳದ ಚಿತ್ರವಿತ್ತು. ಕೋಣ ಓಡಿಸುವ ಗೆಟಪ್‍ನಲ್ಲಿ ಶಿವಣ್ಣ ಅವರನ್ನು ತೋರಿಸಲಾಗಿತ್ತು. ಆದರೀಗ ರಿಷಬ್ ಕಾಂತಾರ ಅನೌನ್ಸ್ ಮಾಡಿದ್ದು ಅವರಿಗೆ ಬೇಸರ ತರಿಸಿದೆ.

    ಸುಮಾರು 2 ವರ್ಷ ಕಷ್ಟಪಟ್ಟು ವೈರಮುಡಿ ಚಿತ್ರಕ್ಕೆ ಕಥೆ ಮಾಡಿದ್ದೇನೆ. ಕಂಬಳದ ಬಗ್ಗೆ ಅಧ್ಯಯನ ಮಾಡಿದ್ದೇನೆ. ಈಗ ನೋಡಿದರೆ ರಿಷಬ್ ಶೆಟ್ಟಿ ಕೂಡಾ ಕಾಂತಾರದಲ್ಲಿ ಕಂಬಳದ ಕಥೆ ಹೇಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಸಿನಿಮಾವನ್ನೇ ಮುಂದಕ್ಕೆ ಹಾಕುತ್ತಿದ್ದೇನೆ. ಕಾಂತಾರ ಚಿತ್ರವನ್ನು ನೋಡುತ್ತೇನೆ. ಆಮೇಲೆ ಡಿಸೈಡ್ ಮಾಡುತ್ತೇನೆ ಎಂದಿದ್ದಾರೆ.

    ಕಂಬಳದ ಸಿನಿಮಾ ಎಂದಾಗ ರಿಷಬ್ ಶೆಟ್ಟಿ ಸೌಜನ್ಯಕ್ಕಾದರೂ ನನ್ನೊಂದಿಗೆ ಕೇಳಬಹುದಿತ್ತು. ಒಂದೇ ಆಟದ ಸಿನಿಮಾ ಮಾಡುವಾಗ ಹಾಗೆ ಕೇಳಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಬಂಡಿಯಪ್ಪನವರಿಗೆ ಈ ಕುರಿತು ಕನ್ನಡ ಚಿತ್ರರಂಗದಲ್ಲಿ ಕಥೆಯನ್ನು ರಿಜಿಸ್ಟರ್ ಮಾಡುವ ವ್ಯವಸ್ಥೆಯೇ ಇಲ್ಲ ಎಂಬ ಬೇಸರವೂ ಇದೆ.

    ಸದ್ಯಕ್ಕೆ ವೈರಮುಡಿ ಬರಲ್ಲ. ಕಾಂತಾರ ನಿಲ್ಲಲ್ಲ. 

  • ರಿಷಬ್ ಶೆಟ್ಟಿ ಮನವಿ ಮೀರಿದ್ದ ಹುಡುಗಿಗೆ ಕಡೆಗೆ ಏನಾಯ್ತು?

    ರಿಷಬ್ ಶೆಟ್ಟಿ ಮನವಿ ಮೀರಿದ್ದ ಹುಡುಗಿಗೆ ಕಡೆಗೆ ಏನಾಯ್ತು?

    ಕಾಂತಾರ ಸಿನಿಮಾ ರಿಲೀಸ್ ಆದ ಹೊತ್ತಿನಲ್ಲಿ ರಿಷಬ್ ಶೆಟ್ಟಿ ಒಂದು ಮನವಿ ಮಾಡಿದ್ದರು. ಆ ಹೊತ್ತಿಗೆ ಓಓಓ.. ಎಂಬುದು ಹಾಗೂ ಪಂಜುರ್ಲಿಯ ದೃಶ್ಯಗಳು ಮೋಡಿ ಮಾಡುವುದಕ್ಕೆ ಶುರು ಮಾಡಿದ್ದವು. ಆಗ ಖುದ್ದು ರಿಷಬ್ ಪ್ರೇಕ್ಷಕರಿಗೆ ರೀಲ್ಸ್ ಅಥವಾ ಮೇಮ್ಸ್ ಮಾಡಬೇಡಿ. ದೈವಕ್ಕೆ ಅಪಚಾರ ಮಾಡಬೇಡಿ. ದೈವನನ್ನು ಆರಾಧಿಸುವವರ ನಂಬಿಕೆಗೆ ಘಾಸಿ ಮಾಡಬೇಡಿ ಎಂದಿದ್ದರು. ಆದರೆ ಪ್ರೇಕ್ಷಕರು ಕೇಳಬಲ್ಲ. ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಶ್ವೇತಾ ರೆಡ್ಡಿ ಎಂಬ ಯುವತಿ ಪೋಸ್ಟ್ ಮಾಡಿದ್ದಳು.

    ಅದಾದ ನಂತರ ಜ್ವರವೂ ಶುರುವಾಗಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಹುಚ್ಚಾಟ ಬೇಡ ಎಂದು ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ವರಾಹರೂಪಂ ಹಾಡಿಗೆ ಪಂಜುರ್ಲಿಯಂತೆ ವೇಷ ಧರಿಸಿ ನೃತ್ಯ ಮಾಡಿದ್ದು ಅಪರಾಧ ಎಂಬಂತೆ ಬೈದಿದ್ದಾರೆ. ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಪಂಜುರ್ಲಿ ದೈವಕ್ಕೆ ದೂರು ಸಲ್ಲಿಸಿದ್ದಾರೆ. ವಿಚಿತ್ರವೆಂದರೆ ಆ ಬೆನ್ನಲ್ಲೇ ಆಕೆಗೆ ಜ್ವರ ಶುರುವಾಗಿದೆ. ಬೆನ್ನಲ್ಲೇ ಶ್ವೇತಾ ರೆಡ್ಡಿ ಧರ್ಮಸ್ಥಳದ ಮಂಜುನಾಥನಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಕೋರಿದ್ದಾರೆ. ಬಳಿಕ ವೀಡಿಯೋ ಡಿಲೀಟ್ ಮಾಡಿದ್ದಾರೆ, ತೀರ್ಥಸ್ನಾನ ಮಾಡಿದ್ದಾರೆ. ದಯವಿಟ್ಟು ಹರಕೆ ಇಡಬೇಡಿ ಎಂದು ಮನವಿ ಮಾಡಿದ್ದಾರೆ.

    ನಾನು ಈ ವಿಡಿಯೋವನ್ನು ಇಷ್ಟ ಪಟ್ಟು ಮಾಡಿದ್ದೇನೆಯೇ ಹೊರತು, ಯಾರಿಗೋ ಅವಮಾನಿಸುವ, ನಂಬಿಕೆಗೆ ಅವಹೇಳನ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ. ಸಿನಿಮಾ ಇಷ್ಟವಾಯಿತು. ಪಂಜುರ್ಲಿಯೂ ಇಷ್ಟವಾಯಿತು. ನನಗೆ ಹೆಚ್ಚಿನದ್ದು ಗೊತ್ತಿರಲಿಲ್ಲ. ಯಕ್ಷಗಾನ ಮತ್ತು ದೈವಕೋಲ ಒಂದೇ ಎಂದುಕೊಂಡಿದ್ದೆ. ಈಗ ಗೊತ್ತಾಗಿದೆ. ದಯವಿಟ್ಟು ಹರಕೆ ಇಡಬೇಡಿ. ನಿಮಗೆ ನಿಮ್ಮ ದೈವಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ. ಮುಂದೆಂದೂ ಸಂಸ್ಕøತಿಗೆ ಅಪಚಾರ ಎಸಗುವ ಕೆಲಸ ಮಾಡುವುದಿಲ್ಲ. ದೈವಕೋಲವನ್ನೊಮ್ಮೆ ನೋಡಬೇಕು. ಖಂಡಿತಾ ನೋಡುತ್ತೇನೆ ಎಂದಿದ್ದಾರೆ ಶ್ವೇತಾ ರೆಡ್ಡಿ.

  • ರಿಷಬ್ ಶೆಟ್ಟಿ ಹೊಸ ಕನಸು ಕೆರಾಡಿ ಹಿಂದಿರೋ ಕಥೆ

    ರಿಷಬ್ ಶೆಟ್ಟಿ ಹೊಸ ಕನಸು ಕೆರಾಡಿ ಹಿಂದಿರೋ ಕಥೆ

    ಕೆರಾಡಿ ಸ್ಟುಡಿಯೋಸ್. ರಿಷಬ್ ಶೆಟ್ಟಿ ಆರಂಭಿಸಿರುವ ಹೊಸ ಸಂಸ್ಥೆ. ಈ ಸಂಸ್ಥೆಯ ಕೆಲಸವೇನು? ಉದ್ದೇಶವೇನು? ಈ ಪ್ರಶ್ನೆಗಳಿಗೆ ಸ್ವತಃ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ. ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

    ಕೆರಾಡಿ, ರಿಷಬ್ ಶೆಟ್ಟಿಯವರ ಹುಟ್ಟೂರು. ಕಾಂತಾರದ ಬಹುತೇಕ ಶೂಟಿಂಗ್ ಆಗಿದ್ದು ಕೂಡಾ ಅದೇ ಊರಿನಲ್ಲಿ. ಈ ಸಂಸ್ಥೆಗೆ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಗತಿ ಶೆಟ್ಟಿ. ಇದು ಕೇವಲ ಚಿತ್ರದ ಪ್ರಚಾರ, ಮಾರ್ಕೆಟಿಂಗ್ ನೋಡಿಕೊಳ್ಳುವ ಸಂಸ್ಥೆ. ಈಗಾಗಲೇ ರಿಷಬ್ ಶೆಟ್ಟಿಯವರು ಚಿತ್ರ ನಿರ್ಮಾಣಕ್ಕೆಂದು ರಿಷಬ್ ಶೆಟ್ಟಿ ಫಿಲಮ್ಸ್ ಎಂಬ ಸಂಸ್ಥೆ ಸೃಷ್ಟಿಸಿದ್ದಾಗಿದೆ. ಆ ಸಂಸ್ಥೆಯ ಮೂಲಕವೇ ಹೀರೋ, ಪೆದ್ರೋ, ಶಿವಮ್ಮ ಸಿನಿಮಾ ನಿರ್ಮಾಣವಾಗಿದೆ.

    ಪೆದ್ರೊ, ಶಿವಮ್ಮ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿವೆ. ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿವೆ. 'ಪೆದ್ರೋ' ನಿರ್ದೇಶಕ ನಟೇಶ್ ಹೆಗಡೆ ಜತೆ 'ವಾಘಾಚಿ ಪಾಣಿ' ಅನ್ನೋ ಮತ್ತೊಂದು ಸಿನಿಮಾಕ್ಕೂ ರಿಷಬ್ ಹಣ ಹಾಕಿದ್ದಾರೆ. ಅತ್ತ ಪ್ರಮೋದ್ ಶೆಟ್ಟಿ ನಾಯಕತ್ವದಲ್ಲಿ ಸಿದ್ಧವಾಗುತ್ತಿರುವ 'ಲಾಫಿಂಗ್ ಬುದ್ಧ' ಸಿನಿಮಾಕ್ಕೂ ರಿಷಬ್ ನಿರ್ಮಾಪಕ.

    ನಿರ್ದೇಶಕರಾಗಿ ರಿಷಬ್ ಶೆಟ್ಟಿಯವರ ಸಿನಿಮಾ ಜರ್ನಿ ಶುರುವಾಗಿದ್ದು ರಿಕ್ಕಿ ಚಿತ್ರದಿಂದ. ಆದರೆ ರಿಕ್ಕಿ ಚಿತ್ರಕ್ಕೆ ಸೂಕ್ತ ಪ್ರಚಾರ ದೊರಕಿಸಿಕೊಳ್ಳಲು ಪರದಾಡುವಂತಾಗಿತ್ತು. ಅಲ್ಲದೆ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಿರಿಕ್ ಪಾರ್ಟಿ, ಹೀರೋ ಸೇರಿದಂತೆ ಹಲವು ಚಿತ್ರಗಳ ಪ್ರಚಾರಕ್ಕೆ ಸ್ವತಃ ರಿಷಬ್ ಐಡಿಯಾ ಕೊಡುತ್ತಿದ್ದರು. ಪ್ರಚಾರ ಮಾಡುತ್ತಿದ್ದರು. ಈಗ ಅದನ್ನು ತಾವೇ ಮಾಡುವುದು ಹಾಗೂ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಈ ಕೆರಾಡಿ ಸ್ಟುಡಿಯೋಸ್ ತಲೆಯೆತ್ತಿದೆ.

  • ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ ವಿಶ್ವ ಶ್ರೇಷ್ಟ ಕನ್ನಡಿಗ 2023 ಪ್ರಶಸ್ತಿ

    ರಿಷಬ್ ಶೆಟ್ಟಿಗೆ ಅಮೆರಿಕದಲ್ಲಿ ವಿಶ್ವ ಶ್ರೇಷ್ಟ ಕನ್ನಡಿಗ 2023 ಪ್ರಶಸ್ತಿ

    ಕನ್ನಡದ ಇತ್ತೀಚಿನ ಸೆನ್ಸೇಷನ್, ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳೂ ಒಲಿದು ಬಂದಿವೆ. ಎಲ್ಲಕ್ಕಿಂತ ಮಿಗಿಲಾಗಿ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ರಿಷಬ್ ಶೆಟ್ಟಿಯವರಿಗೆ ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ಪ್ಯಾರಾಮೌಂಟ್ ಥಿಯೇಟರಿನಲ್ಲಿ ವಿಶ್ವ ಶ್ರೇಷ್ಟ ಕನ್ನಡಿಗ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು. ಈ ಕಾರ್ಯಕ್ರಮದಲ್ಲಿ 1800ಕ್ಕೂ ಹೆಚ್ಚು ಕನ್ನಡಿಗರು ಭಾಗಿಯಾಗಿದ್ದರು.

    ವಾಷಿಂಗ್ಟನ್ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ಗೆ 95 ವರ್ಷಗಳ ಇತಿಹಾಸ ಇದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿ ಹಲವು ಗಣ್ಯರು ಭಾಷಣ ಮಾಡಿರುವ ವೇದಿಕೆ ಇದು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಅನ್ನೋದು ವಿಶೇಷ. ಇಂಥ ಥಿಯೇಟರ್ನಲ್ಲಿ ರಿಷಬ್ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪಡೆದಿರೋದು ವಿಶೇಷಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.

    ನಾನು ಪಡೆದ ಅತಿದೊಡ್ಡ ಪ್ರಶಸ್ತಿ ಎಂದರೆ ಕನ್ನಡಿಗರು. ಇದೇ ಥಿಯೇಟರಿನಲ್ಲಿ ನಮ್ಮ ಚಿತ್ರ 48 ದಿನ ಪ್ರದರ್ಶನ ಕಂಡಿದೆ. ಅಷ್ಟು ಅವಧಿ ಶೋ ಕಂಡ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೆ ಕಾಂತಾರ ಪಾತ್ರವಾಗಿದೆ ಎಂದ ರಿಷಬ್ ಶೆಟ್ಟಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.