` ambi namana, - chitraloka.com | Kannada Movie News, Reviews | Image

ambi namana,

  • `ಅವರು ಪತಿಯಷ್ಟೇ ಅಲ್ಲ, ಅಪ್ಪ, ಅಣ್ಣ, ಮಗ, ಫ್ರೆಂಡ್.. ಎಲ್ಲ ಆಗಿದ್ದರು'

    sumalatha's heartfelt talk on ambi

    ಕಳೆದ 27 ವರ್ಷಗಳ ಜೀವನದಲ್ಲಿ ನಾನು ಅಂಬರೀಷ್ ಅವರಲ್ಲಿ ಪತಿಯನ್ನಷ್ಟೇ ಅಲ್ಲ, ತಂದೆ, ಸ್ನೇಹಿತ, ಸಹೋದರ, ಒಳ್ಳೆಯ ಮಗ, ರಾಜಕೀಯ ನಾಯಕ, ಸಮಾಜ ಸೇವಕ, ಉತ್ಸಾಹಿ ಕ್ರೀಡಾಪಟು ಎಲ್ಲವನ್ನೂ ಕಂಡಿದ್ದೇನೆ. ಅಮರ್ ಚಿತ್ರವನ್ನು ನೋಡಬೇಕು ಅನ್ನೋದು ಅವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅಂಬರೀಷ್‍ಗೆ ನೀಡಿದ ಆಶೀರ್ವಾದವನ್ನು ಮಗನಿಗೂ ನೀಡಿ..

    ಇದು ಸುಮಲತಾ ಅಂಬರೀಷ್ ಅಂಬಿ ನಮನದಲ್ಲಿ ಅಭಿಮಾನಿಗಳನ್ನು ಕೇಳಿಕೊಂಡ ಮಾತು. ಮಂಡ್ಯದ ಜನತೆಗೆ, ಸಿಎಂ ಕುಮಾರಸ್ವಾಮಿ, ಅಭಿಮಾನಿಗಳು, ಚಿತ್ರರಂಗದ ಎಲ್ಲರಿಗೂ ಹಲವು ಬಾರಿ ಕೃತಜ್ಞತೆ ಅರ್ಪಿಸಿದ ಸುಮಲತಾ ಅಂಬರೀಷ್, ಭಾವುಕರಾಗಿಯೇ ಮಾತನಾಡುತ್ತಾ ಹೋದರು.

    ರಾಜನಂತೆಯೇ ಬಾಳಿದ್ದರು. ರಾಜನಂತೆಯೇ ಕಳಿಸಿಕೊಟ್ಟಿರಿ. ಇದಕ್ಕೆ ಕಾರಣವಾದ ಎಲ್ಲರಿಗೂ ಧನ್ಯವಾದ ಎಂದರು ಸುಮಲತಾ. ಅದರಲ್ಲೂ ಕೊನೆಯಲ್ಲಿ ಭಗವದ್ಗೀತೆ ಉಲ್ಲೇಖಿಸಿ ಹೇಳಿದ ಮಾತು ಎಲ್ಲರ ಮನಮುಟ್ಟಿತು.

    ದೇವರು ಮನುಷ್ಯನನ್ನು ಕಳಿಸುವಾಗ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಬರುವಾಗ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಎಂದು ದೇವರು ಮನುಷ್ಯನಿಗೆ ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಮನುಷ್ಯ, ನೀನು ಕಳಿಸುವಾಗ ಒಂದು ಹೃದಯ ಕೊಟ್ಟು ಕಳುಹಿಸುತ್ತೀಯ. ನಾನು ಬರುವಾಗ ಸಾವಿರಾರು ಹೃದಯಗಳಲ್ಲಿ ನೆಲೆಸುತ್ತೇನೆ ಎಂದು ಹೇಳುತ್ತಾನೆ. ಅಂಬರೀಷ್ ಹಾಗೆಯೇ ಬದುಕಿದರು. ನಾಡಿನ ಹೃದಯಗಳಲ್ಲಿ ನೆಲೆಸಿದರು ಎಂದು ಕಣ್ಣೀರಾದರು ಸುಮಲತಾ.

  • ಅಂಬಿ ನಮನದಲ್ಲಿ ಅಮರನಾಥನ ಅಮರ ನೆನಪು

    kannada film industry pays their tribute to ambi

    ಫಿಲಂ ಚೇಂಬರ್ ಹಮ್ಮಿಕೊಂಡಿದ್ದ ಅಂಬಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಹುತೇಕ ಕನ್ನಡ ಚಿತ್ರರಂಗ ಪಾಲ್ಗೊಂಡಿತ್ತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿಎಂ ಕುಮಾರಸವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ರಾಕ್‍ಲೈನ್ ವೆಂಕಟೇಶ್, ಮುನಿರತ್ನ, ರಾಘವೇಂದ್ರ ರಾಜ್‍ಕುಮಾರ್, ಶಿವರಾಜ್‍ಕುಮಾರ್, ದೊಡ್ಡಣ್ಣ, ಉಮಾಶ್ರೀ, ಬಿ.ಸರೋಜಾದೇವಿ ಸೇರಿದಂತೆ ನೂರಾರು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.

    ಅವರಿಗೆ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದಿದ್ದೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ. ಆದರೆ, ಮಾನಸಿಕವಾಗಿ ಸದಾ ನಮ್ಮೊಂದಿಗಿದ್ದಾರೆ.

    ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

    ಅಂಬರೀಷ್ ಅವರು ನನಗೆ ವಕೀಲ ಭಗವಾನ್ ಎಂಬುವವರಿಂದ 2973ರಲ್ಲಿ ಪರಿಚಯವಾದರು. ಅವರು ಮಾತು ಒರಟು. ಹೃದಯ ಮೃತದು. ನನ್ನನ್ನು ಅವರು ಬಾಸ್ ಎಂದೇ ಕರೀತಾ ಇದ್ರು. ಮೈಸೂರಿನಲ್ಲಿ ಫಿಲಂಸಿಟಿ ಆಗಬೇಕು ಅನ್ನೋದು ಅವರ ಕನಸಾಗಿತ್ತು. ಹೀಗಾಗಿ ರಾಮನಗರದಲ್ಲಿ ಫಿಲಂ ಸಿಟಿ ಬೇಡ. ಮೈಸೂರಿನಲ್ಲಿಯೇ ಆಗಲಿ.

    ಸಿದ್ದರಾಮಯ್ಯ, ಮಾಜಿ ಸಿಎಂ

    ಅಂಬರೀಷ್, ಆರ್ಟಿಸ್ಟ್‍ಗಳ ನಡುವಿನ ಮಿಸ್ ಅಂಡರ್‍ಸ್ಟ್ಯಾಂಡಿಂಗ್‍ನ್ನು ಸುಲಭವಾಗಿ ಬಗೆಹರಿಸಿಬಿಡೋರು. ಅವರು ಅಪ್ಪಾಜಿಯೊಂದಿಗೆ ಒಡಹುಟ್ಟಿದವರು ಸಿನಿಮಾದಲ್ಲಿ ನಟಿಸಿದ್ದರು. ನಾನು ಅವರ ಮಗನಾಗಿ ದೇವರ ಮಗ ಚಿತ್ರದಲ್ಲಿ ನಟಿಸಿದ್ದೆ. ಅವರಲ್ಲಿ ಸಣ್ಣ ಕಲಾವಿದ, ದೊಡ್ಡ ಕಲಾವಿದ ಎಂಬ ಭೇದ ಭಾವ ಇರಲಿಲ್ಲ

    ಶಿವರಾಜ್‍ಕುಮಾರ್, ನಟ

    ಕಲಾವಿದರ ಸ್ಮಶಾನ ಭೂಮಿಗೂ ಕೆಲವರು ಕಿರಿಕಿರಿ ಮಾಡ್ತಾರೆ. ಇದೇ ಕಾರಣದಿಂದ ಕಲಾವಿದರು ಸರ್ಕಾರದ ಮೇಲೆ ಭಾರ ಹಾಕಬಾರದು. ಸ್ಮಾರಕಕ್ಕಾಗಿ ಸರ್ಕಾರದ ಮುಂದೆ ತಿರುಪೆ ಎತ್ತುವುದು ಬೇಡ. ಆ ಕಾರಣಕ್ಕಾಗಿ ನಾನೇ ಒಂದು ಎಕರೆ ಜಮೀನು ಖರೀದಿಸಲು ಹೇಳಿದ್ದೇನೆ.

    ಜಗ್ಗೇಶ್, ನಟ

    ಅಂಬರೀಷ್ ಕಳೆದ ಬಾರಿ ಸಿಕ್ಕಾಗ ನನ್ನ ಆಯಸ್ಸನ್ನೂ ನೀನೇ ತಗೋ ಎಂದಿದ್ದೆ. ನಿನ್ನ ಆಯಸ್ಸು ನನಗ್ಯಾಕೆ, ನಿನ್ನ ಕೊರಳಲ್ಲಿರೋ ಆ ಚಿನ್ನದ ಸರ ಕೊಡು ಎಂದಿದ್ದರು. ನಾನು ಮೊದಲು ಹೋಗಬೇಕಿತ್ತು. ಅವರು ಮೊದಲು ಹೋಗಿಬಿಟ್ಟರು. 

    ಬಿ.ಸರೋಜಾದೇವಿ, ನಟಿ

    ಪ್ರಾರಂಭದ ದಿನಗಳಲ್ಲಿ ನಾನು ಸಣ್ಣ ಮನೆಯಲ್ಲಿದ್ದೆ. ಅಲ್ಲಿಗೆ ಬರೋರು. ಅಡುಗೆ ಮಾಡಿಸಿಕೊಂಡು ಊಟ ಮಾಡಿಕೊಂಡು ಹೋಗೋರು. ಸಚಿವರಾಗಿದ್ದಾಗ ಅವರು ಸೀರಿಯಸ್ಸಾಗಿರುವಂತೆ ಕಾಣುತ್ತಿರಲಿಲ್ಲ. ಅಷ್ಟೆಯೇ ಹೊರತು, ಕೆಲಸ, ಜವಾಬ್ದಾರಿಗಳ ವಿಚಾರಗಳಲ್ಲಿ ಅತ್ಯಂತ ಸೀರಿಯಸ್ ಆಗಿರುತ್ತಿದ್ದರು. ಜನರ ಕೆಲಸ ಮಾಡುವಾಗ ಯಾವುದೇ ತಪ್ಪು ಮಾಡಬಾರದು ಎಂಬ ಜಾಗೃತಿ ಅವರಲ್ಲಿ ಸದಾ ಇತ್ತು. 

    ಉಮಾಶ್ರೀ, ನಟಿ

  • ಅಂಬಿಗೆ, ಚಿತ್ರಲೋಕ ಫೋಟೋ ಎಕ್ಸಿಬಿಷನ್ ನಮನ

    ambi bimba by chitraloka veeresh at ambi namana

    ರೆಬಲ್‍ಸ್ಟಾರ್ ಅಂಬರೀಷ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚಿತ್ರಲೋಕ ವಿಶೇಷ ನಮನ ಸಲ್ಲಿಸಿತು. ಅಂಬರೀಷ್ ಅವರ ಜೀವನವನ್ನು, ಜೀವನ ಶೈಲಿಯನ್ನು ಕ್ಯಾಮೆರಾದಲ್ಲಿ ಹಿಡಿದಿಟ್ಟಿದ್ದ ಫೋಟೋಗಳನ್ನು ಪ್ರದರ್ಶನ ಮಾಡಿತು. ಒಂದೊಂದು ಫೋಟೋ ಹಿಂದೆಯೂ ನೂರಾರು ನೆನಪುಗಳು. ಚಿತ್ರಲೋಕ ಡಾಟ್ ಕಾಂ ಸಂಪಾದಕ ವೀರೇಶ್ ಅವರ ಕ್ಯಾಮೆರಾ ಕಣ್ಣು, ಹತ್ತಾರು ಕಥೆ ಹೇಳುತ್ತಿದ್ದವು.

    ಸಿಎಂ ಕುಮಾರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ, ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಶಿವರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಮುನಿರತ್ನ, ಜಗ್ಗೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು, ಸಚಿವರು ಫೋಟೋ ವೀಕ್ಷಿಸಿ ಹಳೆಯ ನೆನಪಿನಂಗಳಕ್ಕೆ ಜಾರಿದರು.

    ವೀರೇಶ್ ಅವರೊಂದಿಗೆ ಫೋಟೋಗಳ ಕುರಿತು ಮಾಹಿತಿ ಪಡೆದರು. ತಮ್ಮ ನೆನಪನ್ನೂ ಹಂಚಿಕೊಂಡರು.

  • ನಿಖಿಲ್ ತಂದೆ ಪಾತ್ರದಲ್ಲಿ ಅಂಬಿ ನಟಿಸಬೇಕಿತ್ತು - ರೆಬಲ್ ಸಿನಿಮಾ ಆಗಬೇಕಿತ್ತು

    hd kumaeaswmaya wanted ambi to act as nikhil's father in rebel

    ಅಂಬರೀಷ್ ಜೊತೆ ನನ್ನ ಮಗ ನಟಿಸಬೇಕಿತ್ತು. ಅದು ನನ್ನ ಕನಸಾಗಿತ್ತು. ಇದಕ್ಕಾಗಿಯೇ ತೆಲುಗಿನ ರೆಬಲ್ ಸಿನಿಮಾದ ರೀಮೇಕ್ ರೈಟ್ಸ್ ತೆಗೆದುಕೊಂಡಿದ್ದೆ. ತೆಲುಗಿನಲ್ಲಿ ಪ್ರಭಾಸ್ ಮಾಡಿದ್ದ ಪಾತ್ರವನ್ನು ನಿಖಿಲ್ ಹಾಗೂ ತಂದೆಯ ಪಾತ್ರದ ಅಂಬರೀಷ್ ನಟಿಸಬೇಕು ಅನ್ನೋದು ನನ್ನ ಆಸೆಯಾಗಿತ್ತು. ಹೀಗಾದರೆ, ಅಂಬರೀಷ್ ಆಶೀರ್ವಾದ ನನ್ನ ಮಗನಿಗೆ ಸಿಗಲಿದೆ ಎಂದು ಆಸೆ ಪಟ್ಟಿದ್ದೆ. ನನ್ನ ಆ ಆಸೆ ಕೊನೆಗೂ ಈಡೇರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಕುಮಾರಸ್ವಾಮಿ.

    ಅಂಬಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಆರಂಭದ ದಿನಗಳಲ್ಲಿ ತಾವು ಅಂಬರೀಷ್ ಚಿತ್ರಗಳನ್ನು ವಿತರಣೆ ಮಾಡಿಯೇ ಚಿತ್ರರಂಗಕ್ಕೆ ಬಂದವರು ಎಂದು ನೆನಪಿಸಿಕೊಂಡರು.