ಭಂಡಾರಿ ಬ್ರದೡೞ ತಂಡದ ರಾಜರಥ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡಗಿರ ಕ್ಷಮೆ ಕೇಳಿದೆ.
ಆರ್.ಜೆ ರಶ್ಮಿ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ 'ರಾಜರಥ ನೋಡಿಲ್ಲ ಅಂದ್ರೆ ಅಂತಹ ಆ ಪ್ರೇಕ್ಷಕನನ್ನು ಡ್ಯಾಶ್ ಅನ್ನುತ್ತೀರಾ ಎಂಬ ಪ್ರಶ್ನೆಗೆ , ನಿರ್ದೇಶಕ ಅನೂಪ್ ಮತ್ತು ನಟ ನಿರೂಪ್ ಇಬ್ಬರು 'ಕಚಡ ನನ್ ಮಗ', 'ಕಚಡ ಲೋಫರ್ ನನ್ ಮಕ್ಳು' ಅಂತ ಹೇಳುತ್ತಾರೆ. ಆ ಹೇಳಿಕೆಯಿರುವ ವಿಡಿಯೋ ವೈರಲ್ ಆಗಿತ್ತು. ಕನ್ನಡಿಗರು ರಾಜರಥ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ಚಿತ್ರತಂಡ ಈಗ ಕನ್ನಡಿಗರ ಕ್ಷಮೆ ಕೇಳಿದೆ.
'ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರ ಅದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ' ಎಂದಿದ್ದಾರೆ ಅನೂಪ್ ಭಂಡಾರಿ.
ನಿರೂಪ್ ಭಂಡಾರಿ ಸಹ ಈ ಕುರಿತು ಕ್ಷಮೆಯಾಚಿಸಿದ್ದಾರೆ. ಫೇಸ್ಬುಕ್ ಲೈವ್ ಶೋನಲ್ಲಿ ನಮ್ಮ ಕಾಮೆಂಟ್ನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಇದು ಉದ್ದೇಶಪೂರ್ವಕ ಅಲ್ಲ. ಪ್ರೇಕ್ಷಕರ ಬಗ್ಗೆ ನಮಗೆ ತುಂಬಾ ಕಾಳಜಿ ಇದೆ. ಎಲ್ಲಾ ಸಂದರ್ಶನಗಳಲ್ಲೂ ನಾವು ಇದನ್ನು ಒತ್ತಿ ಹೇಳಿದ್ದೇವೆ. ಇಂದು ನಾವು ಈ ಸ್ಥಿತಿಯಲ್ಲಿದ್ದೇವೆ ಎಂದರೆ ಅದಕ್ಕೆ ಪ್ರೇಕ್ಷಕರೇ ಕಾರಣ ಎಂದಿದ್ದಾರೆ.
ಬಹುಶಃ ಪೂರ್ತಿ ಸಂದರ್ಶನವನ್ನು ನೋಡಿದ್ದರೆ, ಇದೊಂದು ಹಾಸ್ಯಮಯ ಎಂದು ಅರಿವಾಗುತ್ತಿತ್ತೇನೋ.. ಆದರೆ, ಸಂದರ್ಶನದ ಅಷ್ಟು ಭಾಗವನ್ನಷ್ಟೇ ಎಡಿಟ್ ಮಾಡಿ, ಅದು ವೈರಲ್ ಆದ ಕಾರಣ, ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ.
Related Articles :-
Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ
Bhandari Brothers Apologises For Their Remarks