` shakthidhama - chitraloka.com | Kannada Movie News, Reviews | Image

shakthidhama

  • ಆಸ್ತಿಯನ್ನೆಲ್ಲ ಶಕ್ತಿಧಾಮಕ್ಕೆ ಕೊಡಲು ಬಂದ ಅಭಿಮಾನಿ : ಏನ್ ಹೇಳಿದ್ರು ಶಿವಣ್ಣ?

    ಆಸ್ತಿಯನ್ನೆಲ್ಲ ಶಕ್ತಿಧಾಮಕ್ಕೆ ಕೊಡಲು ಬಂದ ಅಭಿಮಾನಿ : ಏನ್ ಹೇಳಿದ್ರು ಶಿವಣ್ಣ?

    ಶಕ್ತಿಧಾಮ. ಅದು ಪಾರ್ವತಮ್ಮ ಮತ್ತು ಡಾ.ರಾಜ್ ಅವರ ಕೂಸು. ಅಶಕ್ತ, ಅಬಲ ಹೆಣ್ಣು ಮಕ್ಕಳಿಗೆ ಆಸರೆಯಾಗಿ 3 ದಶಕಗಳಿಂದಲೂ ಶ್ರಮಿಸುತ್ತಿರುವ ಸಂಸ್ಥೆ. ಇದುವರೆಗೆ ಸುಮಾರು 5 ಸಾವಿರ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿರುವ ಸಂಸ್ಥೆ. ಪಾರ್ವತಮ್ಮ ನಿಧನದ ನಂತರ ಗೀತಾ ಶಿವ ರಾಜಕುಮಾರ್ ಶಕ್ತಿಧಾಮ ನೋಡಿಕೊಳ್ಳುತ್ತಿದ್ದಾರೆ. ಅತ್ತಿಗೆ ಗೀತಾ ಅವರ ಜೊತೆ ಪುನೀತ್ ಶಕ್ತಿಧಾಮದಲ್ಲಿ ಹೆಚ್ಚು ಸಮಯ ಇರುತ್ತಿದ್ದರು. ಶಕ್ತಿಧಾಮಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದರು. ಪುನೀತ್ ಅಗಲಿಕೆ ನಂತರ ಆ ಜವಾಬ್ದಾರಿಯನ್ನು ಖುದ್ದು ಶಿವಣ್ಣ ವಹಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಶಿವಣ್ಣ ಅವರು ಈಗ ಸಿಗೋದು ಶಕ್ತಿಧಾಮದಲ್ಲೇ. ಆ ಶಕ್ತಿಧಾಮದ ಸೇವೆ ಕೆಲವರಿಗೆ ಗೊತ್ತಿತ್ತಾದರೂ, ಬಹುತೇಕ ಕನ್ನಡಿಗರಿಗೆ ಗೊತ್ತಾಗಿದ್ದು ಪುನೀತ್ ಅಗಲಿದ ನಂತರ. ಹೀಗಾಗಿ ಈಗ ನೆರವು ನೀಡುವವರ ಸಂಖ್ಯೆಯೂ ದೊಡ್ಡದಾಗಿದೆ.

    ಇತ್ತೀಚೆಗೆ ನಮ್ಮ ರವಿಶಂಕರ್ ಗೌಡ ಒಬ್ಬ ಮಹಿಳೆಯನ್ನು ಕರೆತಂದಿದ್ದರು. ಅವರಿಗೆ ಆ ಮಹಿಳೆ ದುಂಬಾಲು ಬಿದ್ದು ತಮ್ಮ ಆಸ್ತಿಯನ್ನೆಲ್ಲ ಶಕ್ತಿಧಾಮಕ್ಕೆ ಕೊಡುತ್ತೇನೆ ಎಂದು ಬಂದಿದ್ದರಂತೆ. ಹೀಗಾಗಿ ಅವರು ಆ ಮಹಿಳೆಯನ್ನು ನಮ್ಮ ಮನೆಗೆ ಕರೆತಂದಿದ್ದರು. ಕೊನೆಗೆ ನಾನೇ ಅವರಿಗೆ ಸಮಾಧಾನ ಹೇಳಿ, ಆಸ್ತಿಯನ್ನೆಲ್ಲ ಕೊಡುವುದು ಬೇಡ ಎಂದು ಹೇಳಿ ಕಳಿಸಿದ್ದೇನೆ ಎಂದಿದ್ದಾರೆ ಶಿವಣ್ಣ.

    ಇದೇ ವೇಳೆ ಶಿವಣ್ಣ ಪುನೀತ್ ಪುತ್ಥಳಿ ಉದ್ಘಾಟನೆಗೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ನನಗೆ ಪುನೀತ್ ಪುತ್ಥಳಿಗೆ ಅಥವಾ ಫೋಟೋಗೆ ಹಾರ ಹಾಕುವುದು, ಗಂಧದ ಕಡ್ಡಿ ಹಚ್ಚೋದನ್ನ ನೋಡೋಕೆ, ನೋಡಿ ಸಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ನನಗೂ ಅವನಿಗೆ 13 ವರ್ಷ ಅಂತರ. ನನಗೆ ಮದುವೆ ಆದಾಗ ಅವನಿಗೆ 11 ವರ್ಷ. ಜನ ಬೇಜಾರು ಮಾಡಿಕೊಳ್ಳಬಹುದು. ಆದರೆ ನಮಗೂ ಒಂದು ಮನಸ್ಸಿರುತ್ತಲ್ವಾ? ಅವನನ್ನು ನಾನು ನನ್ನೊಳಗೇ ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ ಶಿವಣ್ಣ.

  • ಪಾರ್ವತಮ್ಮನವರ ಶಕ್ತಿಧಾಮ ಹುಟ್ಟಿದ ಕಥೆ

    shakthidhama launch image

    ಪಾರ್ವತಮ್ಮನವರಷ್ಟೇ ಅಲ್ಲ, ರಾಜ್ ಕುಟುಂಬದಲ್ಲಿ ಸಹಾಯ ಹಸ್ತ ಚಾಚುವ ಗುಣವೇ ಇದೆ. ಆದರೆ, ಅದನ್ನು ಹೇಳಿಕೊಳ್ಳುವ ಕೆಲಸವನ್ನು ಅವರು ಮಾಡಿಲ್ಲ. ಎಡಗೈಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗಬಾರದು ಅನ್ನೋದು ರಾಜ್​ನೀತಿ. ಅದನ್ನೇ ಪಾಲಿಸಿಕೊಂಡು ಬರುತ್ತಿದೆ ರಾಜ್ ಕುಟುಂಬ.

    ಮೈಸೂರಿನಲ್ಲಿ ಶಕ್ತಿಧಾಮ ಅನ್ನೋ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಿದೆ. ಆ ಸಂಸ್ಥೆ ಜನ್ಮತಾಳಲು ಕಾರಣ ಈಗ ಗೃಹ ಸಚಿವಾಲಯದ ಸಲಹೆಗಾರರಾಗಿರುವ ಆಗ ಮೈಸೂರಿನ ಕಮಿಷನರ್​ ಆಗಿದ್ದ ಕೆಂಪಯ್ಯ. ವೇಶ್ಯಾವೃತ್ತಿಗೆ ಸಿಲುಕಿ ನರಳುತ್ತಿದ್ದ ಹೆಣ್ಣು ಮಕ್ಕಳನ್ನು ಪೊಲೀಸರು ಬಂಧಿಸಿದರೂ, ಬ್ರೋಕರ್​ಗಳು ಬಂದು ಬಿಡಿಸಿಕೊಂಡು ಹೋಗ್ತಾ ಇದ್ರು. ಅವರಲ್ಲಿ ತುಂಬಾ ಜನಕ್ಕೆ ದುಡಿದು ತಿನ್ನುವ ಬಯಕೆಯೂ ಇತ್ತು. ಆದರೆ, ಬದುಕು ಬಿಡುತ್ತಿರಲಿಲ್ಲ. 

    shakthidhama_mysore1_17.jpg

    ಆಗ ಕೆಂಪಯ್ಯನವರು ಈ ಸಮಸ್ಯೆಗೆ ನೀವೇನಾದರೂ ಪರಿಹಾರ ನೀಡಬಹುದೇ ಎಂದು ಪಾರ್ವತಮ್ಮನವರನ್ನು ಕೇಳಿದರಂತೆ. ರಾಜ್ ಕೂಡಾ ಏನಾದ್ರೂ ಮಾಡು, ಜೊತೆಗೆ ನಾನಿರ್ತೀನಿ ಅಂದರಂತೆ. ಸುತ್ತೂರು ಮಠದವರು ಒಂದೂವರೆ ಎಕರೆ ಜಾಗ ಕೊಡುತ್ತೇನೆ ಎಂದಾಗ ಉದ್ಭವವಾಗಿದ್ದೇ ಶಕ್ತಿಧಾಮ.

    ಆ ಸಂಸ್ಥೆ ಶುರುವಾಗಿದ್ದು 1997ರಲ್ಲಿ. ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆ ಸಂಸ್ಥೆಗೆ ಸಂಗೀತ ಸಂಜೆ ಏರ್ಪಡಿಸಿ 90 ಲಕ್ಷ ರೂ. ಸಂಗ್ರಹಿಸಿದವರು ಪಾರ್ವತಮ್ಮ. ಆ ಶಕ್ತಿಧಾಮದಲ್ಲಿ ಮನೆ ಬಿಟ್ಟು ಬಂದವರು, ಅತ್ಯಾಚಾರಕ್ಕೊಳಗಾದವರು, ಅನಾಥರು, ನಿರಾಶ್ರಿತರು, ಮದುವೆಯಾಗದೇ ಗರ್ಭಿಣಿಯಾದವರು..ಇಂಥವರೇ ನೂರಾರು ಜನರಿದ್ದಾರೆ. ಅವರೆಲ್ಲರಿಗೂ ಊಟ, ಬಟ್ಟೆ, ಆಶ್ರಯ, ವಿದ್ಯೆ ಎಲ್ಲವನ್ನೂ ಒದಗಿಸುತ್ತಿದೆ ಶಕ್ತಿಧಾಮ. ಸದಾನಂದ್ ಎನ್ನುವವರು ಅದೆಲ್ಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅನಾಥರಿಗೆ ಆಶ್ರಯವಷ್ಟೇ ಅಲ್ಲ, ಬದುಕಿನ ಭರವಸೆಯೂ ಆಗಿದೆ ಶಕ್ತಿಧಾಮ. ಅದು ಪಾರ್ವತಮ್ಮನವರ ಶಕ್ತಿಧಾಮ.

  • ಶಕ್ತಿಧಾಮದ ಮಕ್ಕಳೊಂದಿಗೆ ಖೋಖೋ ಆಡಿದ ಶಿವಣ್ಣ

    ಶಕ್ತಿಧಾಮದ ಮಕ್ಕಳೊಂದಿಗೆ ಖೋಖೋ ಆಡಿದ ಶಿವಣ್ಣ

    ಅಮ್ಮ ಇರುವವರೆಗೆ ನಾವೆಲ್ಲ ಶಕ್ತಿಧಾಮಕ್ಕೆ ರೆಗ್ಯುಲರ್ ಆಗಿ ಹೋಗತ್ತಿರಲಿಲ್ಲ. ಅಮ್ಮನೇ ಎಲ್ಲ ಜವಾಬ್ದಾರಿ ನಿಭಾಯಿಸುತ್ತಿದ್ದರು. ಜೊತೆಯಲ್ಲೇ ಅದನ್ನು ನಿಭಾಯಿಸುವ ಬಗ್ಗೆ ನಮಗೆ ಮಾಹಿತಿಯನ್ನೂ ಕೊಡುತ್ತಿದ್ದರು. ಅಮ್ಮ ಹೋದ ಮೇಲೆ ಅದನ್ನು ಮನೆಯ ಹಿರಿಯ ಸೊಸೆ ಗೀತಾ ಮಾಡಲಿ ಎಂದು ಕುಟುಂಬದವರೆಲ್ಲ ಒಪ್ಪಿದೆವು. ಅವರೇ ಈಗ ನಡೆಸುತ್ತಿದ್ದಾರೆ. ಗೀತಾ ವಹಿಸಿಕೊಂಡ ಮೇಲೆ ನಾವೆಲ್ಲ ರೆಗ್ಯುಲರ್ ಆಗಿ ಹೋಗುತ್ತಿದ್ದೆವು. ಹೆಚ್ಚಾಗಿ ಅಪ್ಪು ಹೋಗುತ್ತಿದ್ದ. ಅಲ್ಲಿನ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಬೆರೆಯುತ್ತಿದ್ದ. ಶಕ್ತಿಧಾಮದಲ್ಲಿ ಹೆಚ್ಚಾಗಿ ಆಸಕ್ತಿ ಇಟ್ಟುಕೊಂಡಿದ್ದ.

    ಅಪ್ಪು ಸಮಾಧಿ ಎದುರು ಶಿವಣ್ಣ ಮಾತನಾಡುತ್ತಾ ಹೋದರು. ಅದಕ್ಕೆಲ್ಲ ಕಾರಣವಾಗಿದ್ದು ಒಂದು ವಿಡಿಯೋ. ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ಶಕ್ತಿಧಾಮದ ಮಕ್ಕಳೊಂದಿಗೆ ಖೋಖೋ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಅಲ್ಲಿ ಹೋದರೆ ಅವರೆಲ್ಲ ನಮ್ಮನ್ನು ಅಣ್ಣ, ಅಪ್ಪಾಜಿ ಎಂದೆಲ್ಲ ಕರೆಯುತ್ತಾರೆ. ನಮಗೂ ಅವರು ಮಕ್ಕಳೇ ಅಲ್ವಾ? ಅವರೂ ಇನ್ನೂ ಅಪ್ಪು ನೋವಿನಿಂದ ಹೊರಬಂದಿಲ್ಲ. ನಮ್ಮೆಲ್ಲರಿಗಿಂತ ಹೆಚ್ಚು ಅವರ ಜೊತೆ ಆಪ್ತನಾಗಿದ್ದವನು ಅಪ್ಪು. ಹೀಗಾಗಿ ಅವರನ್ನೂ ದುಃಖದಿಂದ ಹೊರತರುವ ಅದರೊಂದಿಗೆ ನಾವೂ ದುಃಖವನ್ನು ಮರೆಯುವ ಪ್ರಯತ್ನದಲ್ಲಿ ಖೋಖೋ ಆಡಿದೆ ಅಷ್ಟೆ ಎಂದಿದ್ದಾರೆ ಶಿವಣ್ಣ.

  • ಶಕ್ತಿಧಾಮದ ಹೊಸ ಗುರಿಗೆ ನೆರವು ನೀಡಿದವರು ಯಾರು?

    ಶಕ್ತಿಧಾಮದ ಹೊಸ ಗುರಿಗೆ ನೆರವು ನೀಡಿದವರು ಯಾರು?

    ಶಕ್ತಿಧಾಮ. 25 ವರ್ಷಗಳ ಹಿಂದೆ ಆರಂಭವಾದ ಪಾರ್ವತಮ್ಮ ಮತ್ತು ರಾಜಕುಮಾರ್ ಕನಸು. ಅಶಕ್ತ ಮಹಿಳೆಯರಿಗೆ ಆಸರೆ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಸಂಸ್ಥೆ. ಈ ಸಂಸ್ಥೆ ಇದುವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯ ಮಾಡಿದೆ. ಈಗ ಆ ಸಂಸ್ಥೆಯಲ್ಲಿ ಮಹಿಳೆಯರ ಜೊತೆ 800ಕ್ಕೂ ಹೆಚ್ಚು ಮಕ್ಕಳೂ ಇದ್ದಾರೆ. ಅವರಲ್ಲಿ ಬಹುತೇಕರು ಅನಾಥರು. ಈಗ ಶಕ್ತಿಧಾಮ ಆ ಮಕ್ಕಳಿಗಾಗಿ ಹೊಸ ಶಾಲೆ ಆರಂಭಿಸಲು ಮುಂದಾಗಿದೆ.

    ಶಕ್ತಿಧಾಮದ ಆವರಣದಲ್ಲಿ ಶಕ್ತಿಧಾಮ ವಿದ್ಯಾಶಾಲಾ ಕಟ್ಟಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸರ್ಕಾರದ ವತಿಯಿಂದ ಶಕ್ತಿಧಾಮಕ್ಕೆ 5 ಕೋಟಿಯ ನೆರವನ್ನೂ ಘೋಷಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಕನಸು ಇದಾಗಿತ್ತು. ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಶಾಲೆ ಆರಂಭಿಸಬೇಕೆಂದು ಕನಸು ಕಂಡಿದ್ದರು ಪುನೀತ್. ಈ ಕಟ್ಟಡ ನಿರ್ಮಾಣವಾದ ನಂತರ ಶಕ್ತಿಧಾಮದ ಹೆಣ್ಣು ಮಕ್ಕಳು ಇಲ್ಲಿಯೇ 1ರಿಂದ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಲಿದ್ದಾರೆ.

    ಇನ್ಫೋಸಿಸ್‍ನ ಸುಧಾಮೂರ್ತಿ ಕೂಡಾ ಶಕ್ತಿಧಾಮದ ಕೆಲಸಗಳಿಗೆ ಕೈಜೋಡಿಸಿದ್ದಾರೆ. ಇನ್ಫೋಸಿಸ್ ಬ್ಲಾಕ್ ಎಂಬ ಕಟ್ಟಡ ಕಟ್ಟಿಸಿದ್ದಾರೆ. ಸುಮಾರು 3 ಕೋಟಿ ವೆಚ್ಚದ ಕಟ್ಟಡದಲ್ಲಿ ಊಟದ ಹಾಲ್, ಯೋಗದ ಸಭಾಂಗಣ, ಗ್ರಂಥಾಲಯ ವ್ಯವಸ್ಥೆ ಇರಲಿದೆ.

    ಶಕ್ತಿಧಾಮದ ಅಧ್ಯಕ್ಷೆಯಾಗಿರುವ ಗೀತಾ ಶಿವರಾಜಕುಮಾರ್ ಅಮ್ಮ ಪಾರ್ವತಮ್ಮನ ಆಶಯದಂತೆ ಕೆಂಪಯ್ಯ ಮಾಮ ನನ್ನನ್ನು ಶಕ್ತಿಧಾಮದ ಅಧ್ಯಕ್ಷೆಯನ್ನಾಗಿ ಮಾಡಿದರು. ಹಲವು ನಿರ್ಮಾಪಕರೂ ನೆರವು ನೀಡಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞಳು ಎಂದರು.

    ಶಿವರಾಜಕುಮಾರ್ ಅಪ್ಪು ನೆನಪಿಸಿಕೊಂಡು ಇಲ್ಲಿರೋ ಮಕ್ಕಳಲ್ಲಿಯೇ ನಾನು ಅಪ್ಪುನನ್ನು ಕಾಣುತ್ತಿದ್ದೇನೆ. ಮನಸ್ಸಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬರುತ್ತೇನೆ. ನನ್ನ ಉಸಿರುವ ಇರುವವರೆಗೆ ಶಕ್ತಿಧಾಮ ಬಿಡಲ್ಲ ಎಂದರು.

    ಇಲ್ಲಿರುವ ಯಾರೊಬ್ಬರೂ ಅನಾಥರಲ್ಲ. ಎಲ್ಲರೂ ದೇವರ ಮಕ್ಕಳು ಎಂದ ಸಿಎಂ ಬಸವರಾಜ ಬೊಮ್ಮಾಯಿ ಶಕ್ತಿಧಾಮಕ್ಕೆ ಸರ್ಕಾರದಿಂದ ಸಾಧ್ಯವಾಗುವ ಎಲ್ಲ ನೆರವನ್ನೂ ನೀಡುವುದಾಗಿ ಘೋಷಿಸಿದರು.

    ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇನ್ಫೋಸಿಸ್ ಉಪಾಧ್ಯಕ್ಷ ಸಾಜು ಮ್ಯಾಥ್ಯೂ, ಸಚಿವರಾದ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ನಿರಂಜನ್, ರಾಜ್ ಕುಟುಂಬದ ಆಪ್ತರಾದ ಕೆಂಪಯ್ಯ ಮೊದಲಾದವರು ಸಮಾರಂಭದಲ್ಲಿದ್ದರು.

  • ಶಕ್ತಿಧಾಮದಲ್ಲಿ ಅಪ್ಪು ಕನಸಿಗೆ ಈ ವರ್ಷ ಜೀವ..!

    ಶಕ್ತಿಧಾಮದಲ್ಲಿ ಅಪ್ಪು ಕನಸಿಗೆ ಈ ವರ್ಷ ಜೀವ..!

    ಶಕ್ತಿಧಾಮ. ಅದು ಶುರುವಾಗಿದ್ದು 1997ರಲ್ಲಿ. ಅನಾಥ ಮಹಿಳೆಯರಿಗಾಗಿಯೇ ಸ್ಥಾಪನೆಯಾದ ಈ ಶಕ್ತಿಧಾಮದಿಂದ ಇದೂವರೆಗೆ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿ ಹೊರಬಂದು ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಶಕ್ತಿಧಾಮದಲ್ಲಿ ಶಾಲೆಯೂ ಶುರುವಾಗುತ್ತಿದೆ.

    ಶಕ್ತಿಧಾಮದಲ್ಲಿ ಒಂದು ಶಾಲೆ ಮಾಡಬೇಕು ಅನ್ನೋದು ಅಪ್ಪು ಕನಸಾಗಿತ್ತು. ನಾವೆಲ್ಲರೂ ನಮ್ಮ ದುಡಿಮೆಯ ಒಂದು ಭಾಗವನ್ನು ಅದಕ್ಕಾಗಿ ತೆಗೆದಿಡುತ್ತಿದ್ದೆವು. ಅಪ್ಪು ಶಾಲೆ ಮತ್ತು ಸ್ಪೋಟ್ರ್ಸ್ ಸ್ಕೂಲ್ ಬಗ್ಗೆ ಆಸಕ್ತಿ ಹೊಂದಿದ್ದ. ಶಕ್ತಿಧಾಮದಲ್ಲೀಗ 160 ಮಕ್ಕಳಿದ್ದು, ಶೀಘ್ರದಲ್ಲೇ ಸಂಖ್ಯೆ 200 ದಾಟಲಿದೆ. ಈಗ ಅವರನ್ನು ಮೈಸೂರಿನ ಬೇರೆ ಬೇರೆ ಶಾಲೆಗಳಲ್ಲಿ ಓದಿಸುತ್ತಿದ್ದೇವೆ. ಅವರಿಗಾಗಿ ಶಕ್ತಿಧಾಮದಲ್ಲೇ ಶಾಲೆ ಶುರುವಾಗಲಿದ್ದು, ಮುಂದಿನ ವರ್ಷ ಶಾಲೆ ಆರಂಭಿಸೋಕೆ ಅನುಮತಿ ಸಿಕ್ಕಿದೆ. 1 ರಿಂದ 8ನೇ ತರಗತಿವರೆಗೆ ಶಕ್ತಿಧಾಮದಲ್ಲಿರುವ ಮಕ್ಕಳೆಲ್ಲ ಅಲ್ಲಿಯೇ ಓದಲಿದ್ದಾರೆ. ಬೇರೆಯವರಿಗೂ ಅವಕಾಶ ಇದೆ ಎಂದಿದ್ದಾರೆ ಶಿವ ರಾಜ್ ಕುಮಾರ್.

    ಅಂದಹಾಗೆ ಶಕ್ತಿಧಾಮಕ್ಕೀಗ 25 ವರ್ಷ. ಪಾರ್ವತಮ್ಮ ನಿಧನದ ನಂತರ ಗೀತಾ ಶಿವ ರಾಜ್ ಕುಮಾರ್ ಇಡೀ ಶಕ್ತಿಧಾಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಾಲೆಗಾಗಿಯೇ ಹೊಸ ಕಟ್ಟಡ ಕಟ್ಟುವ ಯೋಜನೆಯಿದ್ದು, ಸದ್ಯಕ್ಕೆ ಈಗಿರುವ ಕಟ್ಟಡದಲ್ಲೇ ವ್ಯವಸ್ಥೆ ಮಾಡಿಕೊಂಡು ಶಾಲೆ ಶುರು ಮಾಡಲಾಗುತ್ತಿದೆ.