` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಸಂಸ್ಕøತದಲ್ಲೂ..ಶಾಲೆಯಲ್ಲೂ..ಬೊಂಬೆ ಹೇಳುತೈತೆ ಮತ್ತೆ ಮತ್ತೆ..

    raajkumara movie image

    ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡು ಹುಟ್ಟುಹಾಕಿದ ಟ್ರೆಂಡ್ ಕನ್ನಡ ಚಿತ್ರರಸಿಕರಿಗೆಲ್ಲ ಗೊತ್ತಿರುವ ವಿಚಾರವೇ. ಈ ಹಾಡಿನ ಇನ್ನಷ್ಟು ಕಥೆಗಳನ್ನು ಹೇಳಿಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

    ಬೊಂಬೆ ಹೇಳುತೈತೆ ಹಾಡನ್ನು ಅಮೆರಿಕದಲ್ಲಿನ ಇಬ್ಬರು ಪುಟ್ಟ ಅಕ್ಕ-ತಮ್ಮ ಸೇರಿಕೊಂಡು ಸಂಸ್ಕøತದಲ್ಲಿ ಭಾಷಾಂತರ ಮಾಡಿ, ಹಾಡನ್ನು ಬಿಡುಗಡೆಯೂ ಮಾಡಿದ್ದಾರಂತೆ. ಸಂಸ್ಕøತ ಶಾಲೆಗಳಲ್ಲಿ ಕೂಡಾ ಈಗ ಈ ಹಾಡು ಜನಪ್ರಿಯವಾಗಿಬಿಟ್ಟಿದೆ. 

    ಇನ್ನು ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯೊಂದರ ಮಕ್ಕಳು, ಶಾಲೆ ಬಿಟ್ಟವರನ್ನು ಮರಳಿ ಕರೆತರಲು ಹಾಡಿನ ಸಾಹಿತ್ಯವನ್ನು ಬದಲಾಯಿಸಿ, ಅದೇ ಟ್ಯೂನ್‍ನಲ್ಲಿ ಹಾಡಿರುವುದೂ ಸಂತೋಷ್ ಅವರಿಗೆ ಗೊತ್ತಾಗಿದೆ. ಹೀಗೆ ರಾಜಕುಮಾರ ಚಿತ್ರದ ಹಾಡಿನ 200ಕ್ಕೂ ಹೆಚ್ಚು ಕವರ್ ವರ್ಷನ್ ಬಂದಿವೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸಂತೋಷ್ ಆನಂದ್ ರಾಮ್. 

  • ಸಹಕಾರ ರತ್ನ ಪುನೀತ್ ರಾಜಕುಮಾರ್. ಏಕೆ ಗೊತ್ತೇ..?

    ಸಹಕಾರ ರತ್ನ ಪುನೀತ್ ರಾಜಕುಮಾರ್. ಏಕೆ ಗೊತ್ತೇ..?

    ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಗೌರವ ನೀಡಿರುವ ರಾಜ್ಯ ಸರ್ಕಾರ ಈಗ ಪುನೀತ್ ಅವರಿಗೆ ಮತ್ತೊಂದು ಪ್ರಶಸ್ತಿ ಘೋಷಿಸಿದೆ. ಪುನೀತ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪುರಸ್ಕಾರ ನೀಡುತ್ತಿದೆ ಕರ್ನಾಟಕ ಸರ್ಕಾರ. ಸ್ವತಃ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಈ ವಿಷಯ ತಿಳಿಸಿದ್ದಾರೆ.

    ಅಪ್ಪುಗೆ ಈ ಗೌರವ ನೀಡುತ್ತಿರೋದಕ್ಕೆ ಕಾರಣವೂ ಇದೆ. ಪುನೀತ್ ಸಹಕಾರಿ ವಲಯದ, ರಾಜ್ಯದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕೆಎಂಎಫ್‍ನ ರಾಯಭಾರಿಯಾಗಿದ್ದರು. ಉಚಿತವಾಗಿ ನಂದಿನಿ ಹಾಲನ್ನು ಪ್ರಚಾರ ಮಾಡಿದ್ದರು. ತಂದೆ ಡಾ.ರಾಜ್ ಅವರಂತೆಯೇ ರಾಜ್ಯದ ರೈತರಿಗೆ ನೆರವಾಗುವ ಹಾದಿಯಲ್ಲಿದ್ದರು ಪುನೀತ್. ಕೇವಲ ಕೆಎಂಎಫ್ ಅಷ್ಟೇ ಅಲ್ಲ, ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳ ರಾಯಭಾರಿಯಾಗಿದ್ದರು. ಸರ್ಕಾರಗಳು, ಪಕ್ಷಗಳು ಬದಲಾದರೂ ಪುನೀತ್ ಬದಲಾಗಿರಲಿಲ್ಲ. ರಾಜಕೀಯದಿಂದ ಸದಾ ದೂರವಿದ್ದು, ಜನಪರ ಕಾರ್ಯಕ್ರಮಗಳ ಜೊತೆ ನಿಲ್ಲುತ್ತಿದ್ದರು. ಹೀಗಾಗಿಯೇ ಸಹಕಾರ ರತ್ನ ಗೌರವ ನೀಡಲಾಗುತ್ತಿದೆ.

    ಮಾರ್ಚ್ 20ರಂದು ಪ್ರಶಸ್ತಿ ಪ್ರದಾನ ಇದ್ದು, ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

  • ಸಂಹಾರದಲ್ಲಿ ಏನಚ್ಚರಿಯೋ.. ಪುನೀತ್ ರಾಜ್‍ಕುಮಾರ್

    puneeth sings for samhara

    ಸಂಹಾರ ಚಿತ್ರದ ವಿಶೇಷತೆಗಳ ಪಟ್ಟಿ ಏರುತ್ತಲೇ ಹೋಗುತ್ತಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾರದ್ದು ಅಂಧನ ಪಾತ್ರ. ಅವರಿಗೆ ನಾಯಕಿ ಹರಿಪ್ರಿಯಾ. ಆಕೆಯದ್ದು ಎಂಥ ಪಾತ್ರ..? ರಾಕ್ಷಸಿಯೋ ಹಾಡು ಕೇಳಿ ಕನ್‍ಫ್ಯೂಸ್ ಆಗಿ ಏನ್ ಕಥೆ ಅಂದ್ರೆ ಯಾರೊಬ್ಬರೂ ಬಾಯಿಬಿಡಲ್ಲ. ನಿರ್ದೇಶಕ ಗುರು ದೇಶಪಾಂಡೆ ಅವರಂತೂ ಚಿತ್ರವನ್ನು ಮುದ್ದು ಮುದ್ದಾಗಿ ಕಟ್ಟಿಕೊಟ್ಟಿದ್ದಾರೆ. ಈಗ ಚಿತ್ರದ ವಿಶೇಷಕ್ಕೆ ಇನ್ನೊಂದು ಸೇರ್ಪಡೆ ಪುನೀತ್ ರಾಜ್‍ಕುಮಾರ್.

    ಸಂಹಾರ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಏನಚ್ಚರಿಯೋ ಎಂಬ ಹಾಡು ಹಾಡಿದ್ದಾರೆ. ಅದು ನಾಯಕಿಗೆ ನಾಯಕನ ಮೇಲೆ ಲವ್ವಾಗೋ ಸಮಯದಲ್ಲಿ ಮೂಡುವ ಹಾಡು. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ರವಿ ಬಸ್ರೂರ್ ಸಂಗೀತ ನೀಡಿರುವ ಹಾಡುಗಳು ಗುನುಗುವಂತಿವೆ ಅನ್ನೋದು ಚಿತ್ರಕ್ಕೊಂದು ದೊಡ್ಡ ಪ್ಲಸ್ ಪಾಯಿಂಟ್.

     

     

     

     

     

  • ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

    ಸಾಯಿಬಾಬಾ, ಮಹಾಲಕ್ಷ್ಮಿ ಆಶೀರ್ವಾದ ಪಡೆದ ಯುವರತ್ನ

    ಯುವರತ್ನ ಮೂಲಕ ಸೆನ್ಸೇಷನ್ ಸೃಷ್ಟಿಸಲು ಸಿದ್ಧರಾಗಿರೋ ಪುನೀತ್, ಚಿತ್ರದ ಬಿಡಗಡೆಗೆ ಮುನ್ನ ಶಿರಡಿ ಮತ್ತು ಕೊಲ್ಹಾಪುರ ಯಾತ್ರ ಕೈಗೊಂಡಿದ್ದಾರೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದರಾಮ್ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

    ವಿಜಯ್ ಕಿರಗಂದೂರು ಅವರಿಗೆ ಈ ದೇವಸ್ಥಾನಗಳ ಮೇಲೆ ಅಪಾರ ನಂಬಿಕೆ. ಕೆಜಿಎಫ್ ಬಿಡುಗಡೆಗೂ ಮುನ್ನ ಕೂಡ ಇದೇ ರೀತಿ ದೇವರ ಆಶೀರ್ವಾದ ಬೇಡಿದ್ದರು. ಈಗ ಪುನೀತ್, ಸಂತೋಷ್ ಜೊತೆ ಕೊಲ್ಹಾಪುರದ ಮಹಾಲಕ್ಷ್ಮಿ ಮತ್ತು ಶಿರಡಿ ಸಾಯಿಬಾಬಾ ಮಂದಿರಗಳಿಗೆ ಭೇಟಿ ಕೊಟ್ಟು, ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

  • ಸಿಎಂ ನೆರೆ ಪರಿಹಾರ ನಿಧಿಗೆ ಪುನೀತ್ 5 ಲಕ್ಷ ರೂ.

    Puneeth Rajkumar BS Yedhiyurappa Image

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕರ್ನಾಟಕ ಪ್ರವಾಹ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಸಿಎಂ ಅವರ ನೆರೆ ಪರಿಹಾರ ನಿಧಿಗೆ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ 5 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಎಲ್ಲರೂ ಕೂಡಾ ತಮ್ಮ ಕೈಲಾದಷ್ಟು ನೆರವು ನೀಡಬೇಕು ಎಂದು ಕರೆ ನೀಡಿದ್ದಾರೆ ಪುನೀತ್. ಅಷ್ಟೇ ಅಲ್ಲ, ಈ ಚೆಕ್‍ನ ಹೊರತಾಗಿ ಸಂತ್ರಸ್ತರಿಗೆ ನೆರವಾಗಲು ಬೇರೆ ಯೋಜನೆಗಳನ್ನು ಹಾಕಿಕೊಂಡಿದ್ದು, ಶೀಘ್ರದಲ್ಲೇ ಅವುಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

    ಅತ್ತ ತೆಲುಗು ನಟ ಸಂಪೂರ್ಣೇಶ್ ಬಾಬು ಕೂಡಾ ಸಿಎಂ ಪರಿಹಾರ ನಿಧಿಗೆ 2 ಲಕ್ಷ ರೂ. ನೆರವು ನೀಡಿದ್ದಾರೆ. 

  • ಸಿದ್ಧಗಂಗಾ ಮಠದ 10,000 ಮಕ್ಕಳಿಗೆ ಪುನೀತ್ ಟ್ರಸ್ಟ್ ನೇತ್ರ ಪರೀಕ್ಷೆ

    puneeth rajkuamr's service in siddaganga mutt

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತೊಮ್ಮೆ ಹೃದಯ ಗೆದ್ದಿದ್ದಾರೆ. ಈ ಬಾರಿ ಸಿದ್ಧಗಂಗಾ ಮಠದಲ್ಲಿ ಸುಮಾರು 10 ಸಾವಿರ ಮಕ್ಕಳಿಗೆ ನೇತ್ರ ಪರೀಕ್ಷೆ ಮಾಡಿಸಿ, ಅಗತ್ಯವಿದ್ದವರಿಗೆ ಕನ್ನಡಕಗಳನ್ನೂ ವಿತರಿಸಿದ್ದಾರೆ ಪುನೀತ್ ರಾಜ್‌ಕುಮಾರ್.

    ಡಾ.ರಾಜ್‌ಕುಮಾರ್ ಟ್ರಸ್ಟ್, ಬೆಂಗಳೂರು. ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ, ಬಿಡದಿ ಸಂಸ್ಥೆಗಳ ಮೂಲಕ ಸಿದ್ಧಗಂಗಾ ಮಠದಲ್ಲಿ ಈ ಕೆಲಸ ನೆರವೇರಿದರೆ, ಶಂಕರ್ ಕಣ್ಣಿನ ಆಸ್ಪತ್ರೆ ಈ ಕಾರ್ಯಕ್ಕೆ ಕೈ ಜೋಡಿಸಿತ್ತು.

    ಸಿದ್ಧಗಂಗಾ ಮಠದ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಾಧುಕೋಕಿಲ, ದೊಡ್ಡಣ್ಣ ಕೂಡಾ ಕಾರ್ಯಕ್ರಮದಲ್ಲಿದ್ದರು. ನೇತ್ರದಾನದ ಬಗ್ಗೆ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿದ ಡಾ.ರಾಜ್ ಹಾದಿಯಲ್ಲಿಯೇ ಅವರ ಮಕ್ಕಳೂ ಸಾಗುತ್ತಿದ್ದಾರೆ.

  • ಸಿನಿ ಕಾರ್ಮಿಕರಿಗೆ 10 ಲಕ್ಷ ನೀಡಿದ ಪುನೀತ್

    ಸಿನಿ ಕಾರ್ಮಿಕರಿಗೆ 10 ಲಕ್ಷ ನೀಡಿದ ಪುನೀತ್

    ಚಲನ ಚಿತ್ರರಂಗದ ಕಾರ್ಮಿಕರ ಕಷ್ಟಕ್ಕೆ ಮಿಡಿದಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕುಟುಂಬಗಳಿಗೆ ಈ ಹಣವನ್ನು ಬಳಸಿಕೊಳ್ಳಲು ಮನವಿ ಮಾಡಿದ್ದಾರೆ. ಪುನೀತ್ ಅವರಿಗೆ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೃತಜ್ಞತೆ ಸಲ್ಲಿಸಿದ್ದಾರೆ.

    ಕೋವಿಡ್ ಮೊದಲ ಅಲೆ ಶುರುವಾದಾಗಲೂ ಪುನೀತ್ ನೆರವು ನೀಡಿದ್ದರು. ನೇರವಾಗಿ ಸರ್ಕಾರದ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಇದರ ನಡುವೆ ರಾಜ್ಯ ಸರ್ಕಾರದ ಕೋವಿಡ್ ವ್ಯಾಕ್ಸಿನ್ ಜಾಗೃತಿ ಅಭಿಯಾನದಲ್ಲೂ ಪಾಲ್ಗೊಂಡಿದ್ದಾರೆ ಪುನೀತ್.

    ಇದೆಲ್ಲದರ ನಡುವೆ ಪುನೀತ್ ಅವರ  ಶಕ್ತಿಧಾಮ ಮತ್ತು ಅನಾಥಾಶ್ರಮಗಳಲ್ಲಿರುವವರ ಸೇವೆಯೂ ಅನೂಚಾನವಾಗಿ ಮುಂದುವರೆಯುತ್ತಿದೆ.

  • ಸಿನಿಮಾ ನನ್ನ ಪ್ಯಾಷನ್ - ಪುನೀತ್ ನಿರ್ಮಾಪಕರಾಗಿದ್ದು ಏಕೆ..?

    acting is my passion says puneeth rajkumar

    ಪುನೀತ್ ರಾಜ್‍ಕುಮಾರ್ ಒಟ್ಟೊಟ್ಟಿಗೇ 4 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಟಸಾರ್ವಭೌಮ ಗೆಲುವಿನ ಜೋಶ್‍ನಲ್ಲಿದ್ದುಕೊಂಡೇ  ಯುವರತ್ನ ಶೂಟಿಂಗ್‍ನಲ್ಲಿರುವ ಪುನೀತ್, ಪಿಆರ್‍ಕೆ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪಿಆರ್ ಕೆ ಬ್ಯಾನರ್‍ನ ಕವಲುದಾರಿ ಚಿತ್ರಕ್ಕೆ ಹೇಮಂತ್ ನಿರ್ದೇಶಕ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ನಿರ್ದೇಶನದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ.

    2ನೇ ಸಿನಿಮಾ ಮಾಯಾಬಜಾರ್, ಪನ್ನಗಾಭರಣ ನಿರ್ದೇಶನದಲ್ಲಿ ಒಂದು ಸಿನಿಮಾ, ನೋಗ್‍ರಾಜ್ ನಾಯಕತ್ವದಲ್ಲಿ ಮತ್ತೊಂದು ಸಿನಿಮಾ.. ಹೀಗೆ ಪಿಆರ್‍ಕೆ ಬ್ಯಾನರ್ ಕಂಪ್ಲೀಟ್ ಬ್ಯುಸಿ.

    ಇದನ್ನೆಲ್ಲ ಮಾಡ್ತಿರೋದು ಹೊಸಬರಿಗೆ ಪ್ರೋತ್ಸಾಹ ಕೊಡೋಕೆ ಅಂಥಾನಾ ಎಂದರೆ ಪುನೀತ್ ಸ್ಪಷ್ಟವಾಗಿ ಹೇಳೋದಿಷ್ಟು, ಹಾಗೇನಿಲ್ಲ. ನನಗೆ ಸಿನಿಮಾ ಒಂದು ಪ್ಯಾಷನ್. ಹೀಗಾಗಿ ಒಳ್ಳೊಳ್ಳೆಯ ಕಥೆಗಳನ್ನು ಸಿನಿಮಾ ಮಾಡಲು ಹೊರಟಿದ್ದೇನೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿವೆ. ಸಿನಿಮಾ ಮಾಡುತ್ತಿದ್ದೇನೆ ಅಷ್ಟೆ ಎನ್ನುತ್ತಾರೆ ಪುನೀತ್.

    ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿರ್ದೇಶಕನಾಗುವ ಆಸೆಯನ್ನೂ ತೋಡಿಕೊಂಡಿದ್ದಾರೆ ಅಪ್ಪು.

  • ಸುದೀಪ್, ಪುನೀತ್, ಉಪೇಂದ್ರ ಒಟ್ಟಿಗೇ ನಟಿಸ್ತಾರಾ..?

    sudeep, upendra, puneeth in chandragupta chanakya movie

    ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ... ಮೂವರೂ ಒಟ್ಟಿಗೇ.. ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಹಾಗೇನಾದರೂ ಆಗಿಬಿಟ್ಟರೆ.. ಅದು ಚಿತ್ರರಂಗದ ಪಾಲಿನ ದೊಡ್ಡ ಹಬ್ಬವೇ ಆಗೋದು ಖಂಡಿತಾ. ಅದೊಂಥರಾ ಸಂಕ್ರಾಂತಿ, ದೀಪಾವಳಿ, ಯುಗಾದಿಯನ್ನು ಒಟ್ಟಿಗೇ ಆಚರಿಸಿದಂತೆ. ಆದರೆ, ಅಂಥಾದ್ದೊಂದು ಕನಸು ಕಂಡಿದ್ದಾರೆ ನಿರ್ಮಾಪಕ ಮುನಿರತ್ನ.

    ಸದ್ಯಕ್ಕೆ ಕುರುಕ್ಷೇತ್ರ ಚಿತ್ರವನ್ನು ಸಿದ್ಧ ಮಾಡುತ್ತಿರುವ ಮುನಿರತ್ನ ಅವರಿಗೆ ಚಾಣಕ್ಯ-ಚಂದ್ರಗುಪ್ತರ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಸುದೀಪ್, ಅಲೆಕ್ಸಾಂಡರ್ ಪಾತ್ರ ಮಾಡಬೇಕು ಅನ್ನೊದು ಮುನಿರತ್ನ ಅವರ ಆಸೆ. ಮಗಧ ಸಾಮ್ರಾಜ್ಯ ಸ್ಥಾಪನೆಯ ಆ ಕಥೆಯನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಬೇಕು ಅನ್ನೋದು ಮುನಿರತ್ನ ಕನಸು.

    ಕುರುಕ್ಷೇತ್ರ ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆ ಬರಲಿದೆ. ಚುನಾವಣೆ ಮುಗಿದ ಮೇಲೆ ಈ ಕಥೆಯತ್ತ ಗಮನ ಹರಿಸೋದಾಗಿ ಹೇಳಿದ್ದಾರೆ ಮುನಿರತ್ನ. ಮುನಿರತ್ನ ಕನಸು ನನಸಾಗಲಿ ಎಂದು ಅಭಿಮಾನಿಗಳೂ ಕೇಳಿಕೊಳ್ತಾರೆ ಬಿಡಿ.

  • ಸುಮಲತಾಗೆ ಪ್ರಪೋಸ್ ಮಾಡಿದ್ರಂತೆ ಅಪ್ಪು..!!!

    sumalatha and puneeth shares some of their memories

    ನಾನ್ ಮದ್ವೆ ಆದ್ರೆ ಸುಮಲತಾ ಅವರನ್ನೇ ಮದುವೆಯಾಗೋದು ಎನ್ನುತ್ತಿದ್ದರಂತೆ ಅಪ್ಪು. ಆಗ ಸುಮಲತಾ ಡಾ.ರಾಜ್ ಜೊತೆ ಹೀರೋಯಿನ್ ಆಗಿದ್ದರು. ಸೆಟ್‍ನಲ್ಲಿ ಸುಮಲತಾ ಅವರೇ ಚಿಕ್ಕ ವಯಸ್ಸಿನ ಹುಡುಗಿ. ಉಳಿದವರೆಲ್ಲ ಸೀನಿಯರ್. ಹೀಗಾಗಿ ಸುಮಲತಾ ಸೆಟ್ಟಿಗೆ ಬರುತ್ತಿದ್ದ ಪುಟ್ಟ ಹುಡುಗ ಲೋಹಿತ್‍ನನ್ನು ಹಚ್ಚಿಕೊಂಡರು. ಆ ಲೋಹಿತ್ ಅಲಿಯಾಸ್ ಅಪ್ಪು, ಮನೆಗೆ ಹೋಗಿ ನಾನು ಸುಮಲತಾ ಅವರನ್ನೇ  ಮದುವೆಯಾಗೋದು ಎಂದು ಹೇಳಿದ್ದರಂತೆ. ಆಗ ಅಪ್ಪುಗೆ ಏಳೋ .. ಎಂಟೋ ವರ್ಷ. 

    ಅಂಬರೀಷ್ ಅಂತೂ ಪುನೀತ್‍ಗೆ ಏನೋ.. ನನ್ ಹೆಂಡ್ತೀಗೇ ಲೈನ್ ಹಾಕ್ತಿಯಾ ಎಂದು ರೇಗಿಸುತ್ತಿದ್ದರಂತೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ಅದನ್ನು ನೆನಪಿಸಿಕೊಂಡು ನಕ್ಕರು. ಸುಮಲತಾ ಅಂಬಿಗಿಂತ ಮೊದಲು ನನಗೆ ಪ್ರಪೋಸ್ ಮಾಡಿದ್ದುದು ಅಪ್ಪು ಎಂದು ನೆನಪಿಸಿಕೊಂಡು ನಕ್ಕರು.

  • ಸೆ.16ಕ್ಕೆ ಅಮೆರಿಕಕ್ಕೆ ಲಕ್ಕಿಮ್ಯಾನ್

    ಸೆ.16ಕ್ಕೆ ಅಮೆರಿಕಕ್ಕೆ ಲಕ್ಕಿಮ್ಯಾನ್

    ರಾಜ್ಯಾದ್ಯಂತ ಬಿಡುಗಡೆಯಾಗಿ ಸಕ್ಸಸ್ ಸಂಭ್ರಮದಲ್ಲಿದೆ ಲಕ್ಕಿಮ್ಯಾನ್ ಚಿತ್ರತಂಡ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಹಾಗೂ ರೋಷನಿ ಪ್ರಕಾಶ್ ಲೀಡ್ ರೋಲ್‍ನಲ್ಲಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ಅಭಿನಯವೇ ಹೈಲೈಟ್. ಅತಿಥಿ ಪಾತ್ರದಲ್ಲಿದ್ದರೂ ಮುಕ್ಕಾಲು ಗಂಟೆ ಇಡೀ ಚಿತ್ರವನ್ನು ಆವರಿಸಿರುವ ಪುನೀತ್ ರಾಜಕುಮಾರ್ ಲಕ್ಕಿಮ್ಯಾನ್ ಚಿತ್ರಕ್ಕೆ ದೇವರು. ನಾಗೇಂದ್ರ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು ಈಗ ಅಮೆರಿಕದಲ್ಲಿ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ.

    ಅರಿಝೋನ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಜಾರ್ಜಿಯಾ, ಮಸಾಚುಸೆಟ್ಸ್, ವಾಷಿಂಗ್ಟನ್, ವರ್ಜಿನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ, ಟೆಕ್ಸಾಸ್.. ಸೇರಿದಂತೆ ಹಲವು ನಗರಗಳಲ್ಲಿ ಬಿಡುಗಡೆಯಾಗುತ್ತಿದೆ. ಟೆಕ್ಸಾಸ್‍ನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚು. ಹೀಗಾಗಿ ಅಲ್ಲಿ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.

  • ಸೆಕೆಂಡ್ ಶೋನ ಟೈಮಲ್ಲಿ ನಟಸಾರ್ವಭೌಮ ಫಸ್ಟ್ ಶೋ

    natasarvabhouma released last night itself

    ನಟಸಾರ್ವಭೌಮ ಸಿನಿಮಾ, ನಿನ್ನೆ ರಾತ್ರಿಯೇ ರಿಲೀಸ್ ಆಗಿಬಿಟ್ಟಿದೆ. ಹೌದು, 7ನೇ ತಾರೀಕು ಅಂದರೆ ಇವತ್ತು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು 6ನೇ ತಾರೀಕು ಪ್ರದರ್ಶನವಾಗುವಂತೆ ಮಾಡಿರೋದು ಅಪ್ಪು ಫ್ಯಾನ್ಸ್.

    ದೇವರು ಭಕ್ತರ ಎದುರು ಶರಣಾಗುವಂತೆ ಅಪ್ಪು ಅಭಿಮಾನಿಗಳ ಎದುರು ರಾಕ್‍ಲೈನ್ ಶರಣಾಗಿದ್ದಾರೆ. ಹೀಗಾಗಿ ರಾತ್ರಿ 10.30ಕ್ಕೆ ಪ್ರಸನ್ನ ಥಿಯೇಟರ್‍ನಲ್ಲಿ ಮೊದಲ ಶೋ ಪ್ರದರ್ಶನಗೊಂಡಿದೆ. 

    ಇನ್ನು ಶ್ರೀನಿವಾಸ, ಊರ್ವಶಿ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯರಾತ್ರಿಯೇ ನಟಸಾರ್ವಭೌಮನಿಗೆ ಉಘೇ ಉಘೇ ಎಂದಿದ್ದಾರೆ ಪ್ರೇಕ್ಷಕರು. ಅಪ್ಪು ಜೊತೆ ರಚಿತಾ ರಾಮ್, ಅನುಪಮಾ ಜೋಡಿ ಮೋಡಿಯನ್ನೇ ಮಾಡುತ್ತಿದೆ. ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ.

  • ಸೈನಿಕನ ಅವತಾರದಲ್ಲಿ ಜೇಮ್ಸ್ ಪುನೀತ್

    ಸೈನಿಕನ ಅವತಾರದಲ್ಲಿ ಜೇಮ್ಸ್ ಪುನೀತ್

    ಜೇಮ್ಸ್ ಚಿತ್ರದಲ್ಲಿ ಪುನೀತ್ ಆರ್ಮಿ ಅಧಿಕಾರಿಯಾಗಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಬಹದ್ದೂರ್ ಚೇತನ್ ಹೇಳಿದ್ದರು. ಅದರಂತೆಯೇ ಈಗ ಚಿತ್ರದ ಪೋಸ್ಟರ್ ಹೊರಬಿದ್ದಿದ್ದು, ಸೈನಿಕರ ಜೊತೆ ಪುನೀತ್ ನಿಂತಿರುವ ಪೋಸ್ಟರ್ ವ್ಹಾವ್ ಎನ್ನುವಂತಿದೆ. ಸಲಾಂ ಸೋಲ್ಜರ್.. ದೇಶಕ್ಕೆ ನೀನೇ ಪವರ್ ಅನ್ನೋ ಟ್ಯಾಗ್ ಲೈನ್ ಬೇರೆ ಜೊತೆಯಲ್ಲಿದೆ.

    ಬಹದ್ದೂರ್, ಭರ್ಜರಿ, ಭರಾಟೆಯ ನಂತರ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಸಿನಿಮಾ ಜೇಮ್ಸ್. ಪ್ರಿಯಾ ಆನಂದ್ ನಾಯಕಿಯಾಗಿರುವ ಚಿತ್ರಕ್ಕೆ ಕಿಶೋರ್ ಪತಿಕೊಂಡ ನಿರ್ಮಾಪಕ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಆಗಸ್ಟ್ 14ರಂದು ಚಿತ್ರದ ನಿರ್ಮಾಪಕ ಕಿಶೋರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

  • ಸೈಬರ್ ಕ್ರೈಂ ಕಂಟ್ರೋಲ್‍ಗೆ ಅಂಬಿ, ಅಪ್ಪು, ರಾಘಣ್ಣ

    ambi puneeth rajkumar raghavendra rajkumar

    ಸೈಬರ್ ಕ್ರೈಂಗಳು ದಿನೇ ದಿನೇ ಹೆಚ್ಚುತ್ತಿವೆ. ಪೊಲೀಸರು ಎಷ್ಟೇ ಅಲರ್ಟ್ ಮಾಡಿದರೂ.. ಯಾರೋ ಫೋನ್ ಮಾಡಿದವರಿಗೆ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಡೇಟಾ ಕೊಟ್ಟು, ಒಟಿಪಿ ಕೊಟ್ಟು ಹಣ ಕಳೆದುಕೊಳ್ಳುವವರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಬೆಂಗಳೂರೊಂದರಲ್ಲೇ ಪ್ರತಿದಿನ ಮಿನಿಮಮ್ 25 ಜನ ಹೀಗೆ ಮೋಸ ಹೋಗ್ತಾರಂತೆ. ಈಗ ಆ ಚೀಟಿಂಗ್‍ಗೆ ಮ್ಯಾಟ್ರಿಮೋನಿಯಲ್ ವೆಬ್‍ಸೈಟುಗಳೂ ಸೇರಿವೆ. ಹೀಗಾಗಿ ಇವನ್ನು ತಡೆಗಟ್ಟಲು ಸೈಬರ್ ಪೊಲೀಸರು ಅಂಬರೀಷ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ರಂಗಾಯಣ ರಘು ಅವರನ್ನು ಅರ್ಥಾತ್ ಅವರ ಧ್ವನಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

    ಸ್ಟಾರ್‍ಗಳು, ಕಲಾವಿದರ ಮೇಲೆ ಜನರಿಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚು. ಅವರು ಹೇಳಿದ್ದನ್ನು ಪಾಲಿಸುತ್ತಾರಷ್ಟೇ ಅಲ್ಲ, ಬೇಗ ಮರೆಯುವುದಿಲ್ಲ. ಹೀಗಾಗಿ ಸೈಬರ್ ವಂಚನೆಯ ಸುಳಿಯಲ್ಲಿ ಸಿಲುಕದೇ ಇರಲು ಏನು ಮಾಡಬೇಕು.. ಏನು ಮಾಡಬಾರದು ಎಂಬ ಬಗ್ಗೆ ಅವರಿಂದ ಹೇಳಿಸೋದು ಸೈಬರ್ ಪೊಲೀಸರ ಪ್ಲಾನ್. ಈ ಮೂಲಕ ಸೈಬರ್ ಕ್ರೈಂ ಜಾಗೃತಿ ಸಂದೇಶ ಸಾರಲು ನಿರ್ಧರಿಸಿದ್ದಾರೆ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಪೊಲೀಸರು.

    ಅಷ್ಟೇ ಅಲ್ಲ, ಇದರ ಜೊತೆಯಲ್ಲೇ ಇನ್ನೂ ಒಂದು ಸಲಹೆ ಕೊಟ್ಟಿದ್ದಾರೆ ಸೈಬರ್ ವಿಭಾಗದ ಇನ್ಸ್‍ಪೆಕ್ಟರ್ ಯಶ್‍ವಂತ್ ಕುಮಾರ್. ಸೈಬರ್ ಕ್ರಿಮಿನಲ್‍ಗಳು ಹೆಚ್ಚಾಗಿ ಹೊರರಾಜ್ಯದವರು. ಅವರು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿಯೇ ವ್ಯವಹರಿಸುತ್ತಾರೆ. ನಾವು ಬ್ಯಾಂಕ್‍ನವರ ಜೊತೆ ಆದಷ್ಟು ಕನ್ನಡದಲ್ಲಿಯೇ ಮಾತನಾಡಿದರೆ ಅರ್ಧ ಅಪರಾಧಗಳನ್ನು  ತಡೆಗಟ್ಟಬಹುದು ಅನ್ನೋದು ಅವರ ಸಲಹೆ. ಯಾವುದೇ ಬ್ಯಾಂಕ್‍ನವರು ತಾವಾಗಿಯೇ ಫೋನ್ ಮಾಡಿ ನಮ್ಮ ವಿವರ, ಖಾತೆಯ ವಿವರ, ಒಟಿಪಿ, ಪಾಸ್‍ವರ್ಡ್ ಕೇಳುವುದಿಲ್ಲ ಎನ್ನುವುದನ್ನೂ ಅವರು ಮತ್ತೊಮ್ಮೆ ನೆನಪಿಸಿದ್ದಾರೆ. ಇದರರ್ಥ ಇಷ್ಟೆ.. ವಂಚನೆಯಿಂದ ತಪ್ಪಿಸಿಕೊಳ್ಳಲು ಇರುವ ಅತಿ ದೊಡ್ಡ ಆಯುಧ ನಮ್ಮ ಭಾಷೆ.. ಕನ್ನಡ.

  • ಸ್ಕಾಟ್​ಲೆಂಡ್​ನಿಂದ ಪುನೀತ್ ರಾಜ್​ಕುಮಾರ್ ಟೀಂ ವಾಪಸ್

    anjaniputra teams returns from scotland

    ಪುನೀತ್ ರಾಜ್​ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ಅಂಜನಿಪುತ್ರ ಚಿತ್ರತಂಡ ವಿದೇಶದ ಚಿತ್ರೀಕರಣ ಮುಗಿಸಿ ವಾಪಸ್ ಆಗಿದೆ. ಸ್ಕಾಟ್​ಲೆಂಡ್​ನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಹೋಗಿದ್ದ ಚಿತ್ರತಂಡ, ಈಗ ಶೇ.80ರಷ್ಟು ಚಿತ್ರೀಕರಣ ಪೂರೈಸಿದೆ. ಸ್ಕಾಟ್​ಲೆಂಡ್​ನಲ್ಲಿ ನಡೆದ ಶೂಟಿಂಗ್​ನ ಕೆಲವು ಫೋಟೋಗಳೂ ಕೂಡಾ ಲಭ್ಯವಾಗಿವೆ.

    ಡಿಸೆಂಬರ್​ನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ತಮಿಳಿನ ಪೂಜೈ ಚಿತ್ರದ ರೀಮೇಕ್ ಆಗಿರುವ ಆಂಜನಿಪುತ್ರ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಏಕೆಂದರೆ, ಅದು ಹರ್ಷ ನಿರ್ದೇಶನದ ಚಿತ್ರ. ಭಜರಂಗಿ, ವಜ್ರಕಾಯ, ಮಾರುತಿ 800 ಚಿತ್ರಗಳ ನಂತರ ಮತ್ತೊಂದು ಆಂಜನೇಯ ಹೆಸರಿನಲ್ಲಿ ಬರುತ್ತಿರುವ ಚಿತ್ರ. ಇನ್ನು ಪುನೀತ್​ಗೆ ರಾಜಕುಮಾರದಂತಹ ಸೂಪರ್ ಹಿಟ್ ಚತ್ರ ಕೊಟ್ಟ ನಂತರ ಬರುತ್ತಿರುವ ಚಿತ್ರ. ಹೀಗಾಗಿ ಅವರಿಗೂ ಭಾರೀ ನಿರೀಕ್ಷೆಯಿದೆ. ರಶ್ಮಿಕಾ ಮಂದಣ್ಣಗೆ ಕೂಡಾ ಅಷ್ಟೆ. ಕಿರಿಕ್ ಪಾರ್ಟಿ ಚಿತ್ರದ ನಂತರ ತೆರೆಗೆ ಬರುತ್ತಿರುವ ಚಿತ್ರವಾದ್ದರಿಂದ ಅವರೂ ಚಿತ್ರದ ಮೇಲೆ ಭಾರೀ ಭರವಸೆ ಇರಿಸಿಕೊಂಡಿದ್ದಾರೆ.

    Related Articles :-

    ಆಂಜನಿಪುತ್ರ ಸೆಟ್​ನಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ

    Anjaniputra Shooting Put On Hold

    Puneeth's New Film Titled Anjaniputra

  • ಸ್ಮಗ್ಲಿಂಗ್, ಇಲ್ಲೀಗಲ್ ಮೈನಿಂಗ್ ಮಾಡ್ತೇನೆ ಎಂದಿದ್ದರು - ನೆನಪು ಬಿಚ್ಚಿಟ್ಟ ಪುನೀತ್

    puneeth rajkumar talks about his early days allegations

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸ್ಯಾಂಡಲ್‍ವುಡ್‍ನ ಅತಿದೊಡ್ಡ ಸ್ಟಾರ್. ಎಲ್ಲರೊಂದಿಗೂ ಸಹಜವಾಗಿ ಬೆರೆಯುವ, ಸರಳವಾಗಿಯೇ ಇರುವ, ದೊಡ್ಡವರೆಂದರೆ ಗೌರವಿಸುವ ವ್ಯಕ್ತಿತ್ವ. ಅವರದ್ದು ಮಗುವಿನಂತಾ ವ್ಯಕ್ತಿತ್ವ ಎನ್ನುವುದು ಅವರ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರ ಅನುಭವ.

    ಹಿ ಈಸ್ ಜೆಂಟಲ್‍ಮೆನ್ ಅನ್ನೋ ಬಿರುದನ್ನು ಎಲ್ಲರೂ ಅವರಿಗೆ ಕೊಟ್ಟುಬಿಟ್ಟಿದ್ದಾರೆ. ಇಂತಹ ಪುನೀತ್ ಮೇಲೆ ಸ್ಮಗ್ಲಿಂಗ್, ಇಲ್ಲೀಗಲ್ ಮೈನಿಂಗ್ ಆರೋಪ ಹೊರಿಸಿದ್ರಂತೆ. ಹೌದು, ಅದನ್ನು ಪುನೀತ್ ಅವರೇ ಹೇಳಿಕೊಂಡಿದ್ದಾರೆ. ನಟಸಾರ್ವಭೌಮ ಚಿತ್ರದ 25ನೇ ದಿನದ ಸಕ್ಸಸ್ ಸಂಭ್ರಮದಲ್ಲಿರೋ ಪುನೀತ್ ಅವರನ್ನು, ನಿರ್ದೇಶಕ ಪವನ್ ಒಡೆಯರ್ ಸಂದರ್ಶನ ಮಾಡಿದ್ದಾರೆ. ಆ ಸಂದರ್ಶನದಲ್ಲಿ ಪುನೀತ್ ಈ ಕಥೆ ಹೇಳಿದ್ದಾರೆ.

    ``ನಾನಿನ್ನೂ ಆಗ ಚಿತ್ರರಂಗಕ್ಕೆ ಬಂದಿರಲಿಲ್ಲ. ಬ್ಯುಸಿನೆಸ್ ಮಾಡುತ್ತಿದ್ದೆ. ಬಾಲನಟನಿಂದ ನಾಯಕನಾಗುವ ನಡುವಿನ ದಿನಗಳು. ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಮನೆತನದ ಹೆಸರು, ತಂದೆಯ ಹೆಸರಿಗೆ ಇರುವ ಗೌರವ ಎಲ್ಲವೂ ಗೊತ್ತಿತ್ತು. ಆದರೆ, ಆಗ ಕೆಲವು ಪತ್ರಿಕೆಗಳಲ್ಲಿ ಪುನೀತ್ ಸ್ಮಗ್ಲಿಂಗ್ ಮಾಡ್ತಾರೆ. ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡ್ತಾರೆ ಎಂಬೆಲ್ಲ ಸುದ್ದಿಗಳು ಬಂದಿದ್ದವು. ನಾನು ಅಂತಹ ಯಾವುದೇ ತಪ್ಪು ಮಾಡಿರಲಿಲ್ಲ'' ಎಂದು ಹೇಳಿಕೊಂಡಿದ್ದಾರೆ ಪುನೀತ್.

  • ಹಳೆ ಸನ್ಯಾಸಿಯ ಲವ್ ಸ್ಟೋರಿಗೆ ಅಪ್ಪು ಫಿದಾ

    ಹಳೆ ಸನ್ಯಾಸಿಯ ಲವ್ ಸ್ಟೋರಿಗೆ ಅಪ್ಪು ಫಿದಾ

    ಓಲ್ಡ್ ಮಾಂಕ್ ಅರ್ಥಾತ್ ಹಳೆ ಸನ್ಯಾಸಿ. ಚಿತ್ರದ ಟೈಟಲ್ ಎಷ್ಟು ಸಖತ್ತಾಗಿದೆಯೋ.. ಕಾನ್ಸೆಪ್ಟೂ ಹಾಗೆಯೇ ಇದೆ. ಓಲ್ಡ್ ಮಾಂಕ್ ಅಂದರೆ ನಾರದ ಮುನಿ ಒಂದು ಶಾಪಕ್ಕೆ ತುತ್ತಾಗುತ್ತಾನೆ. ಭೂಲೋಕಕ್ಕೆ ಹೋಗಿ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಬೇಕು. ಅದೇ ಆ ಶಾಪ. ಶಾಪಕ್ಕೆ ತುತ್ತಾದ ನಾರದ, ಭೂಮಿಗೆ ಬಂದು ಸೃಷ್ಟಿಸುವ ಕಲಹ, ತರಲೆ, ರಂಪಾಟಗಳೇ ಓಲ್ಡ್ ಮಾಂಕ್ ಚಿತ್ರದ ಕಥೆಯಂತೆ.

    ಶ್ರೀನಿವಾಸ್ ಅಲಿಯಾಸ್ ಶ್ರೀನಿ ನಿರ್ದೇಶಿಸಿರುವ ಚಿತ್ರದ ಟ್ರೇಲರ್‍ನ್ನು ನೋಡಿದ ಪುನೀತ್ ರಾಜ್‍ಕುಮಾರ್, ಚಿತ್ರದ ಕಾನ್ಸೆಪ್ಟ್‍ಗೆ ಮಾರು ಹೋಗಿದ್ದಾರೆ. ಜೊತೆಗೆ ಕಚಗುಳಿಯಿಡೋ ಸಂಭಾಷಣೆಗಳಿಗೆ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.

    ಇಫ್ ಯು ಆರ್ ಲೋಫರ್.. ಆ್ಯಮ್ ಯುವರ್ ಫಾದರ್..

    ಅವನನ್ನು ಯಾವುದೇ ಹುಡುಗಿಯಾಗಲಿ ಅಪ್ಪ ಅಥವಾ ಅಣ್ಣ ಅಂತಾ ಕರೀಬೇಕು. ಲವರ್ ಅಂತ ಮಾತ್ರ ಕರೀಬಾರದು ಅನ್ನೋ ಎಸ್ ನಾರಾಯಣ್.. ಸ್ಸಾರಿ ನೋ ನಾರಾಯಣ್..

    ಇಂತಹ ಕಚಗುಳಿಗಳೇ ಇರೋ ಓಲ್ಡ್ ಮಾಂಕ್‍ನಲ್ಲಿ ಆದಿತಿ ಪ್ರಭುದೇವ ಹೀರೋಯಿನ್. ರಾಜೇಶ್, ಎಸ್.ನಾರಾಯಣ್, ಸುನಿಲ್ ರಾವ್ ನಟಿಸಿರುವ ಚಿತ್ರವಿದು.

  • ಹಾಡನ್ನೇ ತೋರಿಸದೆ 2 ಕೋಟಿ ದಾಟಿದರು..!

    raajkumara creats song record

    ಇಂಥಾದ್ದೊಂದು ದಾಖಲೆ ಬರೆದಿರುವುದು ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡು. ಹಾಡೇ ಹೇಳುವಂತೆ ಅದನ್ನು ಮತ್ತೆ ಮತ್ತೆ ನೋಡಿ ನೋಡಿ ಅಭಿಮಾನಿಗಳೇ ಆ ಹಾಡನ್ನು ಎರಡು ಕೋಟಿ ದಾಟಿಸಿಬಿಟ್ಟಿದ್ದಾರೆ.

    ಅಂದಹಾಗೆ ಇದು ಯೂಟ್ಯೂಬ್ ಹಿಟ್ಸ್ ಸ್ಟೋರಿ. ರಾಜಕುಮಾರ ಚಿತ್ರದ ಈ ಹಾಡನ್ನು ಯೂಟ್ಯೂಬ್​ನಲ್ಲಿ ನೋಡಿದವರ ಸಂಖ್ಯೆ 2 ಕೋಟಿ ದಾಟಿದೆ. ಚಿತ್ರದ ಲೈಕ್ಸ್​ಗಳೇ ಒಂದು ಕೋಟಿ ಹತ್ತಿರದಲ್ಲಿವೆ. 

    ಅಂದಹಾಗೆ ವಿಶೇಷವೇನು ಗೊತ್ತಾ..? ಯೂಟ್ಯೂಬ್​ನಲ್ಲಿ ಇದುವರೆಗೆ ಈ ಹಾಡಿನ ಜೊತೆ ಬಿಟ್ಟಿರೋದು ಚಿತ್ರದ ಮೇಕಿಂಗ್ ದೃಶ್ಯಗಳನ್ನು ಮಾತ್ರ. ವೊರಿಜಿನಲ್ ಹಾಡನ್ನು ಚಿತ್ರತಂಡ ಇನ್ನೂ ಯೂಟ್ಯೂಬ್​ಗೆ ಅಪ್​ಲೋಡ್ ಮಾಡಿಲ್ಲ. ವೊರಿಜಿನಲ್ ಹಾಡನ್ನು ಸಿನಿಮಾದಲ್ಲಿ ಮಾತ್ರ ತೋರಿಸಿರುವ ಚಿತ್ರತಂಡ, ಯೂಟ್ಯೂಬ್​ನಲ್ಲಿ  ಮೇಕಿಂಗಗ್ ತೋರಿಸಿಯೇ 2 ಕೋಟಿ ಹಿಟ್ಸ್ ದಾಟಿದೆ. 

    ಚಿತ್ರದ ಹಾಡಿನ ಜೊತೆ ಮೇಕಿಂಗ್​ ನೋಡುತ್ತಲೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರ ಈಗ ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ.

     

  • ಹಾಲು ತುಪ್ಪ ಆದ ಮೇಲೆ ಅಭಿಮಾನಿಗಳಿಗೆ ಸಮಾಧಿ ದರ್ಶನ : ಶಿವಣ್ಣ 

    ಹಾಲು ತುಪ್ಪ ಆದ ಮೇಲೆ ಅಭಿಮಾನಿಗಳಿಗೆ ಸಮಾಧಿ ದರ್ಶನ : ಶಿವಣ್ಣ 

    ಅಪ್ಪು ನಾನು ಎತ್ತಿ ಆಡಿಸಿದ ಹುಡುಗ. ಇದೇ ಕೈಗಳಲ್ಲಿ ಅವನನ್ನು ಎತ್ತಿ ಆಡಿಸಿದ್ದೆ. ಅವನಿಗೂ ನನಗೂ 13 ವರ್ಷ ಅಂತರ. ಚಿಕ್ಕವರಿಗೆ ಹಾಲು ತುಪ್ಪ ಬಿಡೋ ನೋವು ಯಾರಿಗೂ ಬರಬಾರದು. ಅಭಿಮಾನಿಗಳನ್ನು ಸದ್ಯಕ್ಕೆ ಬಿಡುತ್ತಿಲ್ಲ. ನಾಳೆ ಕುಟುಂಬದವರಿಗೆ ಹಾಲು ತುಪ್ಪ ಆದ ಮೇಲೆ ಅಭಿಮಾನಿಗಳನ್ನು ಸಮಾಧಿ ಬಳಿ ಬಿಡುತ್ತೇವೆ ಎಂದಿದ್ದಾರೆ ನಟ ಶಿವರಾಜ್ ಕುಮಾರ್.

    ಪುನೀತ್ ಮಾಡುತ್ತಿದ್ದ ಎಷ್ಟೋ ಸಮಾಜ ಸೇವೆ ಕೆಲಸಗಳು ನಮಗೂ ಗೊತ್ತಿಲ್ಲ. ನಾವೂ ಮಾಡುತ್ತೇವೆ. ಎಷ್ಟು ಪುಣ್ಯ ಮಾಡಿದ್ದೆವೋ ಏನೋ.. ಕರುನಾಡಿನ ಪ್ರತಿ ಕುಟುಂಬದ ಪ್ರೀತಿ ನಮಗೆ ಸಿಕ್ಕಿದೆ. ಇಷ್ಟೆಲ್ಲ ಆದ ನಂತರವೂ ನೋವು ನುಂಗಿ ನಡೆಯುವವನೇ ನಿಜವಾದ ಮನುಷ್ಯ. ಎಷ್ಟೋ ಕಡೆ ಅಭಿಮಾನಿಗಳ ಸಾವು, ಆತ್ಮಹತ್ಯೆ ಸುದ್ದಿ ಬರ್ತಾ ಇದೆ. ನಮಗೆ ಅಪ್ಪು ಹೇಗೋ.. ನಿಮ್ಮ ಫ್ಯಾಮಿಲಿಗೆ ನಿಮ್ಮ ಜೀವ ಮುಖ್ಯ. ದಯವಿಟ್ಟು ದುಡುಕಿನ ತೀರ್ಮಾನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಶಿವ ರಾಜ್ಕುಮಾರ್.

  • ಹಿಂದಿನ ದಿನ ಅಪ್ಪುಗೆ ರಮೇಶ್ ಹೇಳಿದ್ದ ಬುದ್ದನ ಕಥೆ

    ಹಿಂದಿನ ದಿನ ಅಪ್ಪುಗೆ ರಮೇಶ್ ಹೇಳಿದ್ದ ಬುದ್ದನ ಕಥೆ

    ಕಣ್ಣಲ್ಲಿ ಕಣ್ಣಿಟ್ಟು ಸುಮಾರು 2 ಗಂಟೆಗಳ ಕಾಲ ನನ್ನೊಂದಿಗೆ ಮಾತನಾಡಿದ್ದ ಅಪ್ಪು, ಮರುದಿನ ಅದೇ ಕಣ್ಣುಗಳನ್ನು ದಾನ ಮಾಡ್ತಾರೆ ಅಂದ್ರೆ ನಂಬೋದಾದರೂ ಹೇಗೆ..

    ಹೀಗೆ ಹೇಳುತ್ತಲೇ ರಮೇಶ್ ಅರವಿಂದ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಧ್ವನಿ ಭಾರವಾಗಿತ್ತು. ಭಾವನೆಯನ್ನು ಅದುಮಿಟ್ಟುಕೊಂಡೇ ಮಾತನಾಡುತ್ತಾ  ಹೋದ ರಮೇಶ್ ಅಪ್ಪು ಜೊತೆ ನನ್ನ ನೆನಪುಗಳು ನೂರಾರಿವೆ. ಆದರೆ ನನಗೆ ಎಲ್ಲಕ್ಕಿಂತ ಹೆಚ್ಚು ಕಾಡೋದು ಹಿಂದಿನ ದಿನ ಗುರುಕಿರಣ್ ಮನೆಯಲ್ಲಿ ನಡೆದಿದ್ದ ಹುಟ್ಟುಹಬ್ಬದ ಪಾರ್ಟಿ. ಅಲ್ಲಿ ಅವರು ನಮ್ಮೊಂದಿಗೆ ಸುಮಾರು 2 ಗಂಟೆ ಹೊತ್ತು ಮಾತನಾಡಿದ್ದರು. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಆಗ ನಾನು ಮಾತನಾಡುತ್ತಾ ಬುದ್ಧನ ಒಂದು ಮಾತು ಹೇಳಿದ್ದೆ. ಬುದ್ದ ಹೇಳ್ತಾನೆ, ಬದುಕಿನಲ್ಲಿ ನಾವು ಇಷ್ಟಪಡುವ ಎಲ್ಲ ವಿಷಯಗಳನ್ನೂ ಒಂದಲ್ಲ ದಿನ ಕಳೆದುಕೊಳ್ಳಬೇಕಾಗುತ್ತೆ ಅಂತಾ. ಅದಕ್ಕೆ ಅಪ್ಪು ಹೌದು ಸಾರ್, ಬೆಳಕು ಹೋದ ಮೇಲೆ ರಾತ್ರಿ ಬರಲೇಬೇಕಲ್ವಾ.. ಅದೇ ಅಲ್ವಾ ಜೀವನ ಎಂದಿದ್ದರು. ಮರುದಿನವೇ ಬೆಳಕು ಹೋಗಿತ್ತು.

    100 ಚಿತ್ರದ ಸುದ್ದಿಗೋಷ್ಠಿಯಲ್ಲಿ ರಮೇಶ್ ಈ ಎಲ್ಲ ವಿಷಯ ಹೇಳಿದರು. ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಪುನೀತ್ ಅವರಿಗಾಗಿ ಮೌನ ಶ್ರದ್ಧಾಂಜಲಿ ಸಲ್ಲಿಸಿದರು.