` kiccha sudeepa - chitraloka.com | Kannada Movie News, Reviews | Image

kiccha sudeepa

  • ಶಿವಣ್ಣ ಬೌಲಿಂಗ್.. ಕಿಚ್ಚ ಬ್ಯಾಟಿಂಗ್

    kcc 10 practice session

    ಕರ್ನಾಟಕ ಚಲನಚಿತ್ರ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಕೆಸಿಸಿ-10 ನಾಳೆಯಿಂದ ಶುರುವಾಗಲಿದೆ. ಟೂರ್ನಿಗೆ ಪ್ರಾಕ್ಟೀಸ್ ನಡೆಯುತ್ತಿದ್ದು, 8 ತಂಡಗಳ ನಟರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. 

    ಪ್ರಾಕ್ಟೀಸ್ ವೇಳೆ ಸುದೀಪ್‍ಗೆ ಶಿವರಾಜ್ ಕುಮಾರ್ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು. 

    ಅಂದಹಾಗೆ ಸುದೀಪ್ ಮತ್ತು ಶಿವರಾಜ್‍ಕುಮಾರ್ ಇಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ ಕ್ರಿಕೆಟ್‍ನ್ನು ಇಷ್ಟಪಟ್ಟು ಆಡುತ್ತಿದ್ದವರು. ಸಿನಿಮಾಗೆ ಬಂದು ಸ್ಟಾರ್ ಆದ ಮೇಲೆ, ಇಂತಹ ವಿಶೇಷ ಟೂರ್ನಿಮೆಂಟ್‍ಗಳಲ್ಲಿ ಕ್ರಿಕೆಟ್ ಆಡಿ ಖುಷಿಪಡುತ್ತಾರೆ.

    ಸುದೀಪ್, ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಯಶ್, ರಕ್ಷಿತ್ ಶೆಟ್ಟಿ, ದಿಗಂತ್ ಒಂದೊಂದು ತಂಡದ ನಾಯಕರಾಗಿದ್ದು, 10 ಓವರುಗಳ ಪಂದ್ಯ ನಡೆಯಲಿದೆ.

     

  • ಶಿವಣ್ಣದ ಫೇವರಿಟ್ ವಿಲನ್ ಡೈಲಾಗ್ ಯಾವ್ದು..?

    shivanna talks about his favourite the villain dialogue

    ದಿ ವಿಲನ್ ಚಿತ್ರ ಥಿಯೇಟರುಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ವಿಲನ್ ತಂಡ ಸೆಲಬ್ರೇಷನ್‍ನಲ್ಲಿ ಮುಳುಗಿದೆ. ಚಿತ್ರದಲ್ಲಿ ಶಿವಣ್ಣನ ಫೇವರಿಟ್ ಡೈಲಾಗ್ ಯಾವ್ದು. ಶಿವಣ್ಣನ ಡೈಲಾಗ್ ಅಂದ್ಕೋಬೇಡಿ. ಶಿವಣ್ಣಂಗೆ ಸಿಕ್ಕಾಪಟ್ಟೆ ಇಷ್ಟ ಆಗಿರೋದು ಸುದೀಪ್ ಅವರು ಹೇಳೋ ಡೈಲಾಗ್.. ಓ..ಭ್ರಮೆ..

    ಮನೆಯಲ್ಲಿರೋವಾಗ, ವಾಕಿಂಗ್ ಮಾಡುವಾಗ..ಬೇರೆಯವರ ಜೊತೆ ಮಾತನಾಡುವಾಗ.. ಎಲ್ಲೆಲ್ಲೂ ಶಿವಣ್ಣ ಆ ಡೈಲಾಗ್ ಬಳಸ್ತಾನೇ ಇರ್ತಾರಂತೆ. ಅಷ್ಟರಮಟ್ಟಿಗೆ ಅದು ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ. ಅದೂ ಬಿಗ್‍ಬಾಸ್ ಮನೆಯಲ್ಲಿ.

    ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಶಿವರಾಜ್‍ಕುಮಾರ್, ಮುಂದಿನ ದಿನಗಳಲ್ಲಿ ಕೂಡಾ ಡೈರೆಕ್ಟರ್ ಪ್ರೇಮ್‍ಗೆ ಕಾಲ್‍ಶೀಟ್ ಕೊಡೋಕೆ ರೆಡಿ ಎಂದರು. ಪ್ರೇಮ್‍ಗೆ ತನ್ನ ತಪ್ಪನ್ನು ತಿದ್ದಿಕೊಳ್ಳೋ ಗುಣ ಇದೆ ಎಂದರು.

    ದಿ ವಿಲನ್ ಸಿನಿಮಾದ ನಿರ್ಮಾಪಕ ಸಿ.ಆರ್.ಮನೋಹರ್‍ಗೆ ಶಿವಣ್ಣ, ಸುದೀಪ್, ಪ್ರೇಮ್ ವಿಶೇಷ ಥ್ಯಾಂಕ್ಸ್ ಹೇಳಿದರು. ತೆಲುಗು ನಟ ಶ್ರೀಕಾಂತ್ ಕೂಡಾ ಸುದೀಪ್ ಅವರ ಆನೆ ಬಂತೊಂದಾನೆ ಡೈಲಾಗ್ ಹೇಳಿದ್ದು ಗಮನ ಸೆಳೆಯಿತು.

  • ಶಿವಣ್ಣನ ವೇದಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿ

    ಶಿವಣ್ಣನ ವೇದಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿ

    ಶಿವರಾಜಕುಮಾರ್ ಮತ್ತು ಸುದೀಪ್ ನಡುವಿನ ಸ್ನೇಹ ಸಂಬಂಧದ ಬಗ್ಗೆ ಪ್ರತ್ಯೆಕವಾಗಿಯೇನೂ ಹೇಳಬೇಕಾಗಿಲ್ಲ. ಗೀತಕ್ಕನ ಹೆಸರು ಹೇಳಿ ಶಿವರಾಜಕುಮಾರ್ ಅವರನ್ನು ಸಿಕ್ಕ ಸಿಕ್ಕ ಕಡೆ ಗೋಳು ಹೊಯ್ದುಕೊಳ್ಳೋ ಸುದೀಪ್, ಒಂದು ರೀತಿಯಲ್ಲಿ ಶಿವಣ್ಣನ ಮನೆಯವರೇ. ಚಿತ್ರದ ಪ್ರೀ-ರಿಲೀಸ್ ಈವೆಂಟ್ ಚಿತ್ರದುರ್ಗದಲ್ಲಿ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ. ಡಿಸೆಂಬರ್ 23ರಂದು ರಿಲೀಸ್ ಆಗಲಿರೋ ಚಿತ್ರದ ಈವೆಂಟ್ ಡಿಸೆಂಬರ್ 15 ಅಂದರೆ ಶನಿವಾರ ಚಿತ್ರದುರ್ಗದಲ್ಲಿ ನೆರವೇರಲಿದೆ.

    ಇನ್ನೊಂದೆಡೆ ವೇದ ಚಿತ್ರದ ಇನ್ನೊಂದು ಹಾಡು ರಿಲೀಸ್ ಆಗಿ ಹವಾ ಎಬ್ಬಿಸಿದೆ. ಗಿಲಕ್ಕೋ ಗಿಲಕ್ಕೋ.. ಎಂದು ಹಾಡಿ ಕುಣಿದು ಹೊಡೆದು ಝಲಕ್ ತೋರಿಸಿದ್ದ ಶಿವಣ್ಣ ತಮ್ಮ 125ನೇ ಸಿನಿಮಾದಲ್ಲಿ ತುಂಟಾಟ ದ ಪ್ರೇಮಿಯಾಗಿದ್ದಾರೆ. ವೇದ ಚಿತ್ರದ ಪುಷ್ಪ ಪುಷ್ಪ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಶಿವಣ್ಣನ ತುಂಟಾಟ, ಉಮಾಶ್ರೀಯ ತರಲೆ, ಗಾನವಿ ಲಕ್ಷ್ಮಣ್‍ರ ಕಣ್ಣಲ್ಲೇ ಕಾಣುವ ಕೆಂಡದಂತಾ ಪ್ರೀತಿ.. ಎಲ್ಲವನ್ನೂ ಪುಷ್ಪ ಹಾಡು ಹಿಡಿದಿಟ್ಟಿದೆ.

    ಹಾಡು ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಹಾಡಿರೋದು ಶಿವಣ್ಣ. ಅರ್ಜುನ್ ಜನ್ಯ ಮ್ಯೂಸಿಕ್ಕು ಮತ್ತು ಶಿವಣ್ಣನ ಸ್ಟೆಪ್ಪು.. ಗಿಲಕ್ಕಿಗಿಂತಲೂ ಸಖತ್ತಾಗಿದೆ. ಹರ್ಷ ಮತ್ತು ಶಿವಣ್ಣನ ಕಾಂಬಿನೇಷನ್ನಿನಲ್ಲಿ ಬರುತ್ತಿರೊ 4ನೇ ಸಿನಿಮಾ ವೇದ. ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದು, ಶಿವರಾಜ್ ಕುಮಾರ್ ವೃತ್ತಿ ಜೀವನದ 125ನೇ ಸಿನಿಮಾ ವೇದ. ಶಿವಣ್ಣ, ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ.. ಹೀಗೆ ಹೊಸಬರು ಮತ್ತು ಹಳಬರ ಸಮ್ಮಿಶ್ರದಲ್ಲಿ ಹೊಸದೇ ಸ್ಟೈಲಿನ ವೇದ ರೆಡಿಯಾಗಿದೆ. ಡಿಸೆಂಬರ್ ಕೊನೆಗೆ ರಿಲೀಸ್ ಆಗುತ್ತಿರುವ ಚಿತ್ರವಿದು.

    'ವೇದ' ಚಿತ್ರದಲ್ಲಿ 60- 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ.. ರವಿ ಸಂತೆಹಕ್ಲು ನಿರ್ದೇಶನದಲ್ಲಿ ಹಲವು ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಇದು ಫ್ಯಾಂಟಸಿ ಕಥೆ ಅಲ್ಲ. ದಶಕಗಳ ಹಿಂದೆ ಒಂದು ಹಳ್ಳಿಯಲ್ಲಿ ನಡೆದ ಕಥೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಗಳ ಸುತ್ತಾ ಕಥೆ ಸುತ್ತುತ್ತದೆ ಎಂದು ಚಿತ್ರತಂಡ ಹೇಳಿದೆ.

     

  • ಶಿವರಾತ್ರಿಗೆ ಕಿಚ್ಚ ಕಿಚ್ಚ ಎನ್ನಿರೋ..

    kotigobba 3 teaser for shivaratri

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗೋಕೆ ಇನ್ನೇನು ಕೆಲವೇ ದಿನ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಚಿತ್ರ ಟೀಸರ್ ರಿಲೀಸ್ ಮಾಡೋಕೆ ಶಿವರಾತ್ರಿಯಂದು ಮುಹೂರ್ತ ಫಿಕ್ಸ್ ಆಗಿದೆ.

    2020ರ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ 3 ಚಿತ್ರದ ಟೀಸರ್ ಫೆಬ್ರವರಿ 21 ರಿಲೀಸ್ ಆಗುತ್ತಿದ್ದು, ಶಿವರಾತ್ರಿಯ ದಿನ ಕಿಚ್ಚನ ಜಪ ಮಾಡುವಂತಾಗಲಿದೆ.

    ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ 3 ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶನವಿದೆ. ಕೋಟಿಗೊಬ್ಬ 2 2016ರಲ್ಲಿ ರಿಲೀಸ್ ಆಗಿತ್ತು. ಅದಾದ 4 ವರ್ಷಗಳ ನಂತರ  ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ. ಫೆಬ್ರವರಿ 21ರ ಶಿವರಾತ್ರಿ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಸುದೀಪ್ ಎದುರು ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿದ್ದಾರೆ.

  • ಶುಭಾಶಯ.. ಕಿಚ್ಚ ಶುಭಾಶಯ..

    22 years of kichcha sudeep

    ಕಿಚ್ಚ ಸುದೀಪ್, ತಾವು ಚಿತ್ರರಂಗಕ್ಕೆ ಬಂದು ಜನವರಿ 31ಕ್ಕೆ 22 ವರ್ಷವಾಯಿತು ಎಂದು ನೆನಪಿಸಿಕೊಂಡಿದ್ದರು. ಬ್ರಹ್ಮ ಚಿತ್ರದ ಮೊದಲ ದೃಶ್ಯ ಚಿತ್ರೀಕರಣವಾದ ದಿನವನ್ನು ನೆನಪಿಸಿಕೊಂಡಿದ್ದಷ್ಟೇ ಅಲ್ಲ, ತಮ್ಮ ಚಿತ್ರಯಾತ್ರೆಯಲ್ಲಿ ಜೊತೆಯಲ್ಲಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದರು. ಕಿಚ್ಚನ 22 ವರ್ಷಗಳ ಸವಿನೆನಪನ್ನು ಅಭಿಮಾನಿಗಳು ಸುದೀಪ್‍ಗಿಂತ ಹೆಚ್ಚು ಸಂಭ್ರಮಿಸಿದ್ದಾರೆ. ಅವರು ಅಭಿನಯಿಸುತ್ತಿರುವ ಚಿತ್ರತಂಡಗಳೂ ಇದಕ್ಕೆ ಹೊರತಲ್ಲ.

    ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು, ನಿರ್ದೇಶಕ ಕಾರ್ತಿಕ್, ದಿ ವಿಲನ್ ಚಿತ್ರದ ನಿರ್ದೇಶಕ ಪ್ರೇಮ್.. ಎಲ್ಲರೂ ಕಿಚ್ಚ ಸುದೀಪ್ ನಿವಾಸಕ್ಕೆ ಭೇಟಿ ನೀಡಿ, ಕಿಚ್ಚನಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಚಿತ್ರರಂಗದ ಹಲವು ನಟರು, ನಿರ್ದೇಶಕರು, ನಿರ್ಮಾಪಕರು ಕಿಚ್ಚ ಸುದೀಪ್‍ಗೆ ಶುಭಕೋರಿದ್ದಾರೆ.

  • ಸಂಕಷ್ಟದಲ್ಲಿದ್ದ ಹಿರಿಯ ನಿರ್ದೇಶಕ ಎ.ಟಿ.ರಘುಗೆ ಕಿಚ್ಚನ ಧೈರ್ಯ

    ಸಂಕಷ್ಟದಲ್ಲಿದ್ದ ಹಿರಿಯ ನಿರ್ದೇಶಕ ಎ.ಟಿ.ರಘುಗೆ ಕಿಚ್ಚನ ಧೈರ್ಯ

    ರೆಬಲ್‍ಸ್ಟಾರ್ ಅಂಬರೀಷ್ ಮಂಡ್ಯದ ಗಂಡು ಎಂದೇ ಹೆಸರಾದವರು. ಅವರಿಗೆ ಮಂಡ್ಯದ ಗಂಡು ಅನ್ನೋ ಟೈಟಲ್ ಕೊಟ್ಟಿದ್ದು ಎ.ಟಿ.ರಘು. ಅಂಬರೀಷ್ ಜೊತೆ 20 ಚಿತ್ರಗಳನ್ನು ಮಾಡಿದ್ದ ನಿರ್ದೇಶಕ ಎ.ಟಿ.ರಘು ಇನ್ಸ್‍ಪೆಕ್ಟರ್ ಕ್ರಾಂತಿಕುಮಾರ್, ಮೈಸೂರು ಜಾಣ, ಮಿಡಿದ ಹೃದಯಗಳು, ಪುಟ್ಟ ಹೆಂಡ್ತಿ, ಅಂತಿಮ ತೀರ್ಪು, ನ್ಯಾಯಕ್ಕಾಗಿ ನಾನು, ಪದ್ಮವ್ಯೂಹ.. ಮೊದಲಾದ ಚಿತ್ರಗಳ ಸೃಷ್ಟಿಕರ್ತ. ಒಟ್ಟಾರೆಯಾಗಿ 30ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಎ.ಟಿ.ರಘು ಅವರನ್ನು ಕಾಯಿಲೆ ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ.

    ಎ.ಟಿ.ರಘು ಅವರ ಎರಡೂ ಕಿಡ್ನಿಗಳು ಫೇಲ್ ಆಗಿವೆ. ವಾರಕ್ಕೆ 3 ಬಾರಿ ಡಯಾಲಿಸಿಸ್ ಆಗಬೇಕು. ಹಾರ್ಟ್ ಆಪರೇಷನ್ ಆಗಿದೆ. ಕಣ್ಣುಗಳ ಆಪರೇಷನ್ ಕೂಡಾ ಆಗಿದೆ.

    ಹೀಗೆ ಕಷ್ಟದಲ್ಲಿದ್ದ ಎ.ಟಿ.ರಘು ನೆರವಿಗೆ ಈಗ ಕಿಚ್ಚ ಸುದೀಪ್ ಬಂದಿದ್ದಾರೆ. ರಘು ಅವರ ಜೊತೆ ಫೋನ್‍ನಲ್ಲಿ ಮಾತನಾಡಿ ಧೈರ್ಯ ಹೇಳಿದ್ದಾರೆ. ನಿಮ್ಮ ಜೊತೆ ನಾನಿದ್ದೇನೆ ಎಂದು ಸಾಂತ್ವನ ಹೇಳಿದ್ದಾರೆ.

    ನನಗೆ ದೊಡ್ಡ ಶಕ್ತಿಯಾಗಿದ್ದ ಅಂಬರೀಷ್ ಹೋಗ್ಬಿಟ್ರು. ಈಗ ನಿಮ್ಮನ್ನ ನಾನು ದೊಡ್ಡ ಶಕ್ತಿಯಾಗಿ ಕಾಣ್ತಿದ್ದೇನೆ. ಅಂಬರೀಷ್ ಅವರೇ ನಿಮ್ಮಿಂದ ಈ ಕೆಲಸ ಮಾಡಿಸ್ತಿದ್ದಾರೆ ಎಂದು ಧನ್ಯವಾದ ಅರ್ಪಿಸಿದ್ದಾರೆ ಎ.ಟಿ.ರಘು.

  • ಸಂಧಾನದಿಂದ ಬಗೆಹರಿಸಿಕೊಳ್ಳಿ :  ಕುಮಾರ್, ಸುದೀಪ್`ಗೆ ಸಾ.ರಾ.ಗೋವಿಂದು

    ಸಂಧಾನದಿಂದ ಬಗೆಹರಿಸಿಕೊಳ್ಳಿ :  ಕುಮಾರ್, ಸುದೀಪ್`ಗೆ ಸಾ.ರಾ.ಗೋವಿಂದು

    ನಿರ್ಮಾಪಕ ಕುಮಾರ್ ಮತ್ತು ಸುದೀಪ್ ನಡುವಿನ ಸಂಘರ್ಷ ಬಗೆಹರಿಸಲು ಇಡೀ ಚಿತ್ರರಂಗ ಒಂದಾದಂತೆ ಕಾಣುತ್ತಿದೆ. ಹಿರಿಯ ನಿರ್ಮಾಪಕ, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಕೂಡಾ ಸುದೀಪ್ ಅವರು ಫಿಲಂ ಚೇಂಬರ್ನ ಸಂಧಾನ ಸಮಿತಿ ಮುಂದೆ ಹಾಜರಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಸುದೀಪ್ ಕೋರ್ಟಿಗೆ ಹೋಗುವ ಬದಲು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರೆ ಕೇವಲ 10-15 ನಿಮಿಷಗಳಲ್ಲಿ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಸುದೀಪ್, ನಮ್ಮವರು, ಕನ್ನಡದ ಕಲಾವಿದರು, ಸುದೀಪ್ ನಮ್ಮ ಹೆಮ್ಮೆ. ಅವರು ಬಂದು ವಾಣಿಜ್ಯ ಮಂಡಳಿಯಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರ ಮೇಲೆ ಯಾರೂ ದೂಷಣೆ ಮಾಡುತ್ತಿಲ್ಲ. ಸುದೀಪ್ ಅವರು ಮಂಡಳಿಗೆ ಬರಬೇಕು, ಕುಮಾರ್ ಹೇಳುತ್ತಿರುವುದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ಸುದೀಪ್ ಅವರೇ ಸಾಬೀತು ಪಡಿಸಬಹುದಾಗಿತ್ತು. ಕುಮಾರ್ ಸುಳ್ಳು ಹೇಳುತ್ತಿದ್ದರೆ ನೀವೇ ಅದನ್ನು ಸಾಬೀತು ಮಾಡಿ, ನಿಮಗೆ ಅವಕಾಶ ಇದೆ. ಒಬ್ಬ ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ ಸಾರಾ ಗೋವಿಂದು.

    ಅಷ್ಟೇ ಅಲ್ಲ, ಕಂಪ್ಲೇಂಟ್ ಮಾಡಿದ ತಕ್ಷಣ ಸುದೀಪ್ ಅವರಿಂದ ಹಣ ಕೊಡಿಸಿ ಎಂದರೆ ಆಗುವುದಿಲ್ಲ. ಸುದೀಪ್ ಸಹ ಸಣ್ಣವರಲ್ಲ ಎಂದು ಅವರಿಗೂ ಬುದ್ದಿ ಹೇಳಿದ್ಧಾರೆ. ಸುದೀಪ್ ಅವರ ಎದುರಿಗೇ ನಾನು ಸಾಬೀತು ಪಡಿಸುತ್ತೇನೆ ಎಂದು ಹೇಳುತ್ತಿರುವ ಕುಮಾರ್ ಅವರಂತೆಯೇ ಸುದೀಪ್ ಸಹ ಬಂದು ಅವರ ವಾದ ಮಂಡಿಸಲಿ, ಯಾರದ್ದು ಸರಿಯೋ ತೀರ್ಮಾನ ಆಗಿಬಿಡಲಿ ಎನ್ನುವುದು ಸಾರಾ ಗೋವಿಂದು ಮಾತು.

    ಇದೇ ವೇಳೆ ರನ್ನ ಚಿತ್ರದ ಬಿಡುಗಡೆ ವೇಳೆ ಆಗಿದ್ದ ಘಟನೆಯನ್ನೂ ನೆನಪಿಸಿಕೊಂಡ ಸಾರಾ ಗೋವಿಂದು ``ರನ್ನ ಚಿತ್ರದ ಬಿಡುಗಡೆ ವೇಳೆ ಇದೇ ಕುಮಾರ್ ಅವರಿಗೆ ಚಿತ್ರದ ನಿರ್ಮಾಪಕರು ಹಣ ಕೊಡಬೇಕಿತ್ತು. ಸುದೀಪ್ ಅವರ ಗಮನಕ್ಕೂ ಇದು ಬಂದು, ಅವರೂ ವಾಣಿಜ್ಯ ಮಂಡಳಿಗೆ ಎರಡು ದಿನ ಬಂದು ಮಾತುಕತೆ ನಡೆಸಿದರು. ಆನಂತರ ರನ್ನ ನಿರ್ಮಾಪಕರು 2 ಕೋಟಿ 35 ಲಕ್ಷ ಹಣವನ್ನು ಕೊಟ್ಟು ಸಮಸ್ಯೆ ಇತ್ಯರ್ಥವಾಯಿತು. ಇದಕ್ಕೆ ಈಗ ವಿವಾದದಲ್ಲಿ ಇರುವ ಎಲ್ಲರೂ ಸಾಕ್ಷಿ’’ ಎಂದಿದ್ದಾರೆ. ಅದೇ ರೀತಿ ಈ ವಿವಾದವನ್ನೂ ಬಗೆಹರಿಸಿಕೊಳ್ಳಬೇಕು ಅನ್ನೋದು ಸಾರಾ ಗೋವಿಂದು ಅವರ ಅಭಿಪ್ರಾಯ.

  • ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ, ಕೋಟಿಗೊಬ್ಬ 3 : ಬಾಕ್ಸಾಫೀಸ್`ನಲ್ಲಿ ಗೆದ್ದೋರು ಯಾರು?

    ಸಲಗ ರಿಲೀಸ್ ಆಗಿದ್ದು ಆಯುಧಪೂಜೆಗೆ. ಕೋಟಿಗೊಬ್ಬ 3 ರಿಲೀಸ್ ಆಗಿದ್ದು ವಿಜಯದಶಮಿಗೆ. ಆಯುಧಪೂಜೆಯಂದೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3, ಗೊಂದಲ, ವಿವಾದಗಳಿಂದ ಒಂದು ದಿನ ತಡವಾಗಿ ಥಿಯೇಟರಿಗೆ ಬಂತು. ಸೂರಪ್ಪ ಬಾಬು ಪ್ಲಾನಿಂಗ್ ಕೊರತೆ ಇತ್ತ ಕಾಣಿಸುತ್ತಿದ್ದರೆ, ಅತ್ತ ಪಕ್ಕಾ ಪ್ಲಾನ್‍ನೊಂದಿಗೆ ರಿಲೀಸ್ ಮಾಡಿದ್ದ ಕೆ.ಪಿ.ಶ್ರೀಕಾಂತ್ ತಮ್ಮ ಚಿತ್ರವನ್ನು ಅಚ್ಚುಕಟ್ಟಾಗಿ ಪ್ರೇಕ್ಷರಕ ಮುಂದಿಟ್ಟಿದ್ದರು. ಒಂದು ದಿನದ ಗ್ಯಾಪ್‍ನಲ್ಲಿ ರಿಲೀಸ್ ಆದ ಎರಡೂ ಸ್ಟಾರ್ ನಟರ ಚಿತ್ರಗಳಲ್ಲಿ ಗೆದ್ದೋರು ಯಾರು?

    ಆಯುಧಪೂಜೆಯ ದಿನ ರಿಲೀಸ್ ಆದ ಸಲಗ ಮೊದಲ ದಿನ ಗಳಿಸಿದ್ದು 8 ಕೋಟಿಗೂ ಹೆಚ್ಚು. ದುನಿಯಾ ವಿಜಯ್ ಚಿತ್ರಗಳಲ್ಲಿ ಇದು ಮೊದಲ ದಿನದ ದಾಖಲೆ. ಅದಾದ ನಂತರವೂ ಸಲಗ ವೀಕೆಂಡ್ ಮತ್ತು ಹಬ್ಬದ ರಜಾ ದಿನಗಳ ಸದುಪಯೋಗ ಪಡಿಸಿಕೊಂಡಿತು. ಸೋಮವಾರದ ನಂತರವೂ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದೆ. ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡುವುದಿಲ್ಲ ಎನ್ನುವ ಮೂಲಕ ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ ಸಲಗ ಟೀಂ.

    ಸುದೀಪ್ ಅವರ ಕೋಟಿಗೊಬ್ಬ 3, ಮೊದಲ ದಿನ ಗಳಿಸಿದ್ದು 12 ಕೋಟಿಗೂ ಹೆಚ್ಚು. ಒಂದು ದಿನದ ನಷ್ಟ ಮಾಡಿಕೊಂಡರೂ ನಂತರವೂ ಮುನ್ನುಗ್ಗಿತು. ಕೋಟಿಗೊಬ್ಬ 3 ಕಲೆಕ್ಷನ್ ಕೂಡಾ ಸ್ಥಿರತೆ ಕಾಯ್ದುಕೊಂಡಿದೆ.

    ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಂದರೆ ನಷ್ಟವಾಗಬಹುದು ಎಂದು ಆತಂಕಗೊಂಡಿದ್ದ ಚಿತ್ರರಂಗಕ್ಕೆ ಇದು ರಿಲ್ಯಾಕ್ಸಿಂಗ್ ನ್ಯೂಸ್. ಎರಡೂ ಗೆದ್ದಿವೆ. ಶೀಘ್ರದಲ್ಲೇ ಎರಡೂ ಚಿತ್ರಗಳ ನಿರ್ಮಾಪಕರು ಸಕ್ಸಸ್ ಮೀಟ್ ಕರೆದು ವಿವರ ಹಂಚಿಕೊಳ್ಳಲಿದ್ದಾರೆ.

  • ಸಲ್ಮಾನ್ ಕನ್ನಡಕ್ಕೆ ಕನ್ನಡಿಗರ ದಬಾಂಗ್

    dabanng 3 kannada trailer

    ದಬಾಂಗ್ 3 ಕನ್ನಡದಲ್ಲೂ ಬರುತ್ತಿದೆ. ಚಿರಂಜೀವಿ ಅಭಿನಯದ ಸೈರಾ ಕನ್ನಡ ಚಿತ್ರಕ್ಕೆ ಸಿಕ್ಕ ಸ್ವಾಗತವೇ ದಬಾಂಗ್ 3 ಕನ್ನಡಕ್ಕೂ ಸಿಗುವ ಸಾಧ್ಯತೆ, ನಿರೀಕ್ಷೆ ಇದೆ. ಹೀಗಾಗಿಯೇ ದಬಾಂಗ್ 3 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದೇ ತಡ.. ಎಲ್ಲರೂ ಥ್ರಿಲ್ ಆಗಿದ್ದಾರೆ.

    ದಬಾಂಗ್ 3ಯಲ್ಲಿ ಸಲ್ಮಾನ್ ಖಾನ್ ಎದುರು ವಿಲನ್ ಆಗಿ ನಟಿಸಿರುವುದು ಕಿಚ್ಚ ಸುದೀಪ್. ಎಂದಿನಂತೆ ಚುಲ್ ಬುಲ್ ಕಾಮಿಡಿ ಸ್ಟೈಲ್ ಈ ಚಿತ್ರದಲ್ಲೂ ಇರಲಿದೆ. ಪ್ರಭುದೇವ ಡೈರೆಕ್ಷನ್ ಇರೋ ಕಾರಣಕ್ಕೆ ಹಾಡುಗಳೂ ಹಬ್ಬ ಸೃಷ್ಟಿಸಲಿವೆ. ಒನ್ಸ್ ಎಗೇಯ್ನ್ ಇಲ್ಲಿಯೂ ಸೋನಾಕ್ಷಿ ಸಿನ್ಹಾ ಹೀರೋಯಿನ್. ಅಂದಹಾಗೆ ಸುದೀಪ್ ಈ ಚಿತ್ರದಲ್ಲಿ ಹೀರೋಯಿನ್ ಮೇಲೇ ಕಣ್ಣು ಹಾಕೋ ವಿಲನ್ ಆಗಿದ್ದಾರಾ..? ಉತ್ತರ ಬೇಕಾದರೆ ಡಿಸೆಂಬರ್ 20ರವರೆಗೆ ವೇಯ್ಟ್ ಮಾಡಿ. ರಿಲೀಸ್ ಆಗುತ್ತೆ.

  • ಸಾಹಸ ಕಲಾವಿದರ ಸಂಘಕ್ಕೆ ಕಿಚ್ಚನ 10 ಲಕ್ಷ ಕಾಣಿಕೆ

    sudeep donates 10 l to fighters club association

    ಸಿನಿಮಾ ಎಂದರೆ ಕೇವಲ ನಟರಷ್ಟೇ ಅಲ್ಲ, ಗ್ಲಾಮರ್ ಅಷ್ಟೇ ಅಲ್ಲ. ಸಾಹಸವೂ ಅತ್ಯಂತ ಮುಖ್ಯ. ಒಂದೊಂದು ಸಾಹಸ ದೃಶ್ಯಕ್ಕೂ ನಿರ್ಮಾಪಕರು ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಆದರೆ, ಸಾಹಸ ಕಲಾವಿದರು..? ಅವರು ತೆರೆಮರೆಯಲ್ಲೇ ಉಳಿದು ಹೋಗುತ್ತಾರೆ. ಅಂತಹ ಸಾಹಸ ಕಲಾವಿದರ ನೆರವಿಗೆ ಧಾವಿಸಿದ್ದಾರೆ ಕಿಚ್ಚ ಸುದೀಪ್.

    ಕರ್ನಾಟಕ ಸಾಹಸ ಕಲಾವಿದರ ಸಂಘಕ್ಕೆ ಕಿಚ್ಚ ಸುದೀಪ್ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಹಣವನ್ನು ಸಾಹಸ ಕಲಾವಿದರ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ಸಂಘ ನಿರ್ಧರಿಸಿದೆ. ಕಿಚ್ಚ ಸುದೀಪ್ ಅವರು ದೇಣಿಗೆ ಕೊಟ್ಟಿದ್ದನ್ನು ಬಹಿರಂಗಪಡಿಸಿರುವುದು ಇತ್ತೀಚೆಗೆ ನಿರ್ದೇಶಕರಾಗಿ ಬಡ್ತಿ ಪಡೆದಿರುವ ಸಾಹಸ ನಿರ್ದೇಶಕ ರವಿ ವರ್ಮ. ಸಾಹಸ ಕಲಾವಿದರ ಪರವಾಗಿ ಕಿಚ್ಚ ಸುದೀಪ್ಗೆ ಅಭಿನಂದನೆ ಸಲ್ಲಿಸಿದ್ದಾರೆ ರವಿವರ್ಮ.ರವಿ ವರ್ಮ ಅವರಷ್ಟೇ ಅಲ್ಲ, ಥ್ರಿಲ್ಲರ್ ಮಂಜು ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

  • ಸಿದ್ದರಾಮಯ್ಯ ಸುದೀಪ್ ಭೇಟಿ - ನಿಜಕ್ಕೂ ನಡೆದಿದ್ದೇನು..?

    sudeep meets sm siddaramaiah

    ಕಿಚ್ಚ ಸುದೀಪ್ ರಾಜಕೀಯ, ಈಗ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಷ್ಟೇ ಅಲ್ಲ, ಅಭಿಮಾನಿಗಳ ಮನದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಮೊನ್ನೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ಜೊತೆ 2 ಗಂಟೆ ಮಾತುಕತೆ ನಡೆಸಿದ್ದ ಸುದೀಪ್, ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

    ಸುದ್ದಿ ಗೊತ್ತಾಗಿದ್ದೇ ತಡ, ಕೆಲವರು ಕಿಚ್ಚ ಸುದೀಪ್ ಕಾಂಗ್ರೆಸ್ ಸೇರ್ತಾರಂತೆ ಅಂದ್ರೆ, ಇನ್ನೂ ಕೆಲವರು ಇಲ್ವಂತೆ, ಅವರು ಎಲ್ಲ ಪಕ್ಷಗಳಲ್ಲೂ ಇರೋ ತಮ್ಮ ಸ್ನೇಹಿತರ ಪರವಾಗಿ ಪ್ರಚಾರ ಮಾಡ್ತಾರಂತೆ ಅಂದ್ರು. ಇನ್ನೂ ಕೆಲವರು ಜೆಡಿಎಸ್ ಸೇರೋದು ಪಕ್ಕಾ ಅಂದ್ರು. ಆದರೆ, ಇದ್ಯಾವುದಕ್ಕೂ ಸುದೀಪ್ ತಲೆಕೆಡಿಸಿಕೊಂಡಿಲ್ಲ. ಅವರ ಪಾಡಿಗೆ ಅವರು ಕರ್ನಾಟಕ ಚಲನಚಿತ್ರ ಕ್ರಿಕೆಟ್ ಲೀಗ್‍ಗೆ ಪ್ರಾಕ್ಟೀಸ್‍ನಲ್ಲ ನಿರತರಾಗಿದ್ದಾರೆ. 

    ಇಷ್ಟಕ್ಕೂ ನಡೆದಿರುವುದೇನೆಂದರೆ, ಸಿಎಂ ಸಿದ್ದರಾಮಯ್ಯ ಕರ್ನಾಟಕ ಕ್ರಿಕೆಟ್ ಲೀಗ್ ಉದ್ಘಾಟನೆ ಮಾಡಬೇಕು. ಅದು ಸುದೀಪ್ ಅವರದ್ದೇ ಯೋಜನೆ. ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸುದೀಪ್ ಹೋಗಿದ್ದಾರೆ. ಆದರೆ, ಎಲೆಕ್ಷನ್ ಬಿಸಿ, ಮೊನ್ನೆ ಮೊನ್ನೆಯಷ್ಟೇ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದ ವಿಷಯಗಳೂ ಸೇರಿಕೊಂಡು ರೆಕ್ಕೆಪುಕ್ಕ ಹಬ್ಬಿಬಿಟ್ಟಿದೆ. ಸುದೀಪ್ ನಕ್ಕು ಸುಮ್ಮನಾಗಿದ್ದಾರೆ. ಅಷ್ಟೆ. 

    ಇನ್ನು ಸುದೀಪ್ ರಾಜಕೀಯದ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಕ್ರಿಕೆಟ್ ಟೂರ್ನಿ ಉದ್ಘಾಟನೆಗೆ ಕರೆಯಲು ಬಂದಿದ್ದರು. ಅಷ್ಟೆ, ಪಕ್ಷಕ್ಕೆ ಬನ್ನಿ, ಪ್ರಚಾರ ಮಾಡಿ ಎಂದು ನಾವು ಆಹ್ವಾನ ಕೊಟ್ಟಿಲ್ಲ. ಸುಮ್ಮನೆ ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.

    ಕುಮಾರಸ್ವಾಮಿ ಮಾತ್ರ, ನಾನು ಕರೆದಿರುವುದು ನಿಜ. ಆದರೆ, ಒಪ್ಪಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಅವರಿಗೆ ಉತ್ತಮ ಚಿಂತನೆಗಳಿವೆ. ಆದರೆ, ಅವರು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

    ಸುದೀಪ್ ಅವರು ಮಾತ್ರ, ಆ ಕುತೂಹಲ ಹಾಗೆಯೇ ಇರಲಿ ಬಿಡಿ ಎಂದಿದ್ದಾರೆ. ಸ್ಸೋ.. ಕುತೂಹಲ ಜಾರಿಯಲ್ಲಿದೆ.

     

  • ಸಿನಿಮಾ ಕೆಟ್ಟದಾಗಿದ್ದರೆ ಬಯ್ಯಿರಿ, ಆದರೆ.. - ಜೋಗಿ ಪ್ರೇಮ್

    the villain bangkok shooting

    ಶಿವರಾಜ್‍ಕುಮಾರ್, ಸುದೀಪ್ ಒಟ್ಟಿಗೇ ನಟಿಸುತ್ತಿರುವ ದಿ ವಿಲನ್ ಸಿನಿಮಾ ತಡವಾಗುತ್ತಿರುವುದಕ್ಕೆ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರೇಮ್ ಸರಿಯಾಗಿ ಪ್ಲಾನ್ ಮಾಡಿಕೊಂಡು ಸಿನಿಮಾ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಾಗ, ಸ್ವತಃ ಕಿಚ್ಚ ಸುದೀಪ್ ಪ್ರೇಮ್ ರಕ್ಷಣೆಗೆ ಬಂದಿದ್ದರು. ಪ್ರೇಮ್ ಒಬ್ಬ ಫ್ಯಾಷನೇಟ್ ನಿರ್ದೇಶಕ. ಪ್ಲಾನ್ ಇಟ್ಟುಕೊಂಡೇ ಮಾಡಿದ್ದಾರೆ. ಕೆಲವು ಸಂದರ್ಭ, ಸನ್ನಿವೇಶ ಹಾಗೂ ವ್ಯಕ್ತಿಗಳಿಂದಾಗಿ ಚಿತ್ರ ನಿಧಾನವಾಯ್ತು. ಪ್ರೇಮ್‍ರನ್ನು ದೂಷಿಸಬೇಡಿ ಎಂದು ಅಭಿಮಾನಿಗಳಲ್ಲೂ ಕೇಳಿಕೊಂಡಿದ್ದರು. ಈಗ ಸ್ವತಃ ಪ್ರೇಮ್, ಈ ಎಲ್ಲ ಆಕ್ಷೇಪಗಳಿಗೆ ಉತ್ತರ ಕೊಟ್ಟಿದ್ದಾರೆ.

    ಈ ತಿಂಗಳ ಕೊನೆಯ ಹೊತ್ತಿಗೆ ಚಿತ್ರದ ಶೂಟಿಂಗ್ ಮುಗಿಯುವ ವಿಶ್ವಾಸ ಇದೆ. ಚಿತ್ರದ 3 ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಯಾರೊಬ್ಬರೂ ತಮ್ಮ ಸಿನಿಮಾ ನಿಧಾನವಾಗಲಿ ಎಂದು ಕೆಲಸ ಮಾಡುವುದಿಲ್ಲ. ದಿ ವಿಲನ್, ನಟರಷ್ಟೇ ಅಲ್ಲ, ತಂತ್ರಜ್ಞರೂ ಸೇರಿದಂತೆ ಸಂಪೂರ್ಣವಾಗಿ ಸ್ಟಾರ್‍ಗಳೇ ಇರುವ ಚಿತ್ರ. ಒಂದು ಏರುಪೇರಾದಾಗ, ಉಳಿದ ಎಲ್ಲವೂ ಏರುಪೇರಾಗುವುದು ಸಹಜ. ಏನೇ ಇರಲಿ, ಈ ತಿಂಗಳ ಕೊನೆಯ ಹೊತ್ತಿಗೆ ಸಿನಿಮಾ ಶೂಟಿಂಗ್ ಮುಗಿಸುತ್ತೇನೆ ಎಂದು ವಿಶ್ವಾಸದಿಂದ ಹೇಳಿದ್ದಾರೆ ಪ್ರೇಮ್.

    ಸಿನಿಮಾ ಚೆನ್ನಾಗಿಲ್ಲ ಅಂದ್ರೆ, ನನ್ನನ್ನು ಬಯ್ಯಿರಿ. ನಾನು ಟೀಕೆಗಳನ್ನು ಸ್ವೀಕರಿಸುತ್ತೇನೆ. ದಯವಿಟ್ಟು ವೈಯಕ್ತಿಕವಾಗಿ ಟೀಕಿಸಬೇಡಿ. ವೈಯಕ್ತಿಕ ಟೀಕೆಗಳು ನಿಜಕ್ಕೂ ನೋಯಿಸುತ್ತವೆ. ಸಿನಿಮಾ ನಿಧಾನವಾದರೆ, ಹಣ ಕಳೆದುಕೊಳ್ಳುವುದು ನಿರ್ಮಾಪಕರೇ ಹೊರತು, ಅಭಿಮಾನಿಗಳಲ್ಲ. ನಾನು ಸಿನಿಮಾವನ್ನು ಕೇವಲ ಅಭಿಮಾನಿಗಳಿಗಾಗಿ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಈ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಾರೆ. ಆ ವಿಶ್ವಾಸ ನನಗಿದೆ ಎಂದಿದ್ದಾರೆ ಪ್ರೇಮ್. 

    ಒಂದಂತೂ ಸತ್ಯ, ದಿ ವಿಲನ್ ವಿಳಂಬವಾಗುತ್ತಿರುವುದಕ್ಕೆ ಪ್ರೇಮ್ ಅವರನ್ನು ದೂಷಿಸುತ್ತಿರುವ ಅಭಿಮಾನಿಗಳು, ಒಂದು ಹಂತದಲ್ಲಿ ಗೌರವದ ಎಲ್ಲೆ ದಾಟಿದ್ದಾರೆ. ಅದು ಪ್ರೇಮ್ ಅವರನ್ನು ನೋಯಿಸಿದೆ. ಕನಸಿನ ಸಿನಿಮಾ ಮಾಡುತ್ತಿರುವ ಪ್ರೇಮ್, ಸಿನಿಮಾವನ್ನು ಯಶಸ್ವಿಯಾಗಿ, ಶೀಘ್ರವಾಗಿ ಮುಗಿಸಿ ತೆರೆಗೆ ತರಲಿ.

    Related Articles :-

    ವಿಲನ್ ವಿಳಂಬಕ್ಕೆ ಪ್ರೇಮ್ ಕಾರಣ ಅಲ್ಲ - ಸುದೀಪ್

    ದಿ ವಿಲನ್ ವಿಳಂಬಕ್ಕೆ ಯಾರು ಕಾರಣ..?

  • ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

    ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

    ಕಬ್ಜ. ಈ ವರ್ಷವೇ ರಿಲೀಸ್ ಆಗಬೇಕಿರುವ ಬಹು ನಿರೀಕ್ಷಿತ ಸಿನಿಮಾ. ಉಪೇಂದ್ರ ಮತ್ತು ಕಿಚ್ಚ ಸುದೀಪ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಕಬ್ಜ. ಆರ್. ಚಂದ್ರು ಅವರೇ ನಿರ್ಮಾಪಕರಾಗಿದ್ದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಗಾಂಧಿ ನಗರದಲ್ಲಿ ಒಂದು ಸುದ್ದಿ ಹರಿದಾಡೋಕೆ ಶುರುವಾಗಿತ್ತು.

    ಸುದೀಪ್ ಕಬ್ಜ ಚಿತ್ರದಿಂದ ಹೊರ ನಡೆದಿದ್ದಾರಂತೆ. ವಿಕ್ರಾಂತ್ ರೋಣ ಪ್ರಮೋಷನ್`ಗೆ ಟೈಂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಬ್ಜ ಬಿಟ್ಟಿದ್ದಾರಂತೆ ಅನ್ನೋ ಸುದ್ದಿಗಳವು. ಈ ಬಗ್ಗೆ ಈಗ ಸ್ವತಃ ಆರ್.ಚಂದ್ರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸುದೀಪ್ ಕಬ್ಜ ಚಿತ್ರತಂಡದ ಜೊತೆಯಲ್ಲಿದ್ದಾರೆ. ಗಾಳಿಸುದ್ದಿಗಳನ್ನೆಲ್ಲ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

    ಕಬ್ಜ ಸೆಟ್ಟೇರಿದ್ದು ಸುಮಾರು 2 ವರ್ಷಗಳ ಹಿಂದೆ. 7 ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಚಿತ್ರದಲ್ಲಿ 80ರ ದಶಕದ ಅಂಡರ್‍ವಲ್ರ್ಡ್ ಸ್ಟೋರಿ ಇದೆ. ಉಪ್ಪಿ, ಸುದೀಪ್ ಜೊತೆ ಶ್ರಿಯಾ ಸರಣ್ ನಟಿಸುತ್ತಿದ್ದು, ಇನ್ನೊಬ್ಬ ನಾಯಕಿ ಯಾರು ಅನ್ನೋದನ್ನ ಈಗಲೂ ಸಸ್ಪೆನ್ಸ್‍ನಲ್ಲೇ ಇಟ್ಟಿದ್ದಾರೆ ಚಂದ್ರು. ಜೊತೆಗೆ ಪೊಸಾನಿ ಕೃಷ್ಣ ಮುರಳಿ, ಮುರಳಿ ಶರ್ಮಾ ಸೇರಿದಂತೆ ಬೃಹತ್ ತಾರಾಬಳಗ ಇದೆ.

  • ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..?

    ಸುದೀಪ್ ಚೇತರಿಕೆ : ಮುಂದಿನ ವಾರ ಬರ್ತಾರಾ ಬಿಗ್ ಬಾಸ್..?

    ಕಳೆದ 2 ವಾರಗಳಿಂದ ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿದ್ದ ಕಿಚ್ಚ ಸುದೀಪ್, ಈಗ ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ, ಶೀಘ್ರದಲ್ಲೇ ಸೆಟ್‍ಗೆ ಬರುವುದಾಗಿಯೂ ಹೇಳಿದ್ದಾರೆ. ಕಳೆದ ವಾರ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುದೀಪ್, ಶುಕ್ರವಾರ ಡಿಸ್‍ಚಾರ್ಜ್ ಆಗಿದ್ದರು.

    `ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಡಾ.ವೆಂಕಟೇಶ್ ಮತ್ತು ಡಾ.ವಿನಯ್ ಅವರಿಗೆ ಧನ್ಯವಾದಗಳು. ಅಭಿಮಾನಿಗಳು ಹಲವು ಕಡೆ ಪೂಜೆ ಮಾಡಿಸಿದ ವಿಡಿಯೋಗಳನ್ನು ನೋಡಿದೆ. ನಿಮ್ಮೆಲ್ಲರ ಪ್ರೀತಿಗೆ ಅಭಾರಿ. ಐ ಲವ್ ಯೂ ಎಂದಷ್ಟೇ ಹೇಳಬಲ್ಲೆ' ಎಂದಿದ್ದಾರೆ ಸುದೀಪ್.

    ಬಹುಶಃ ಈ ವೀಕೆಂಡ್ ಸಾಧ್ಯವಾಗದೇ ಹೋಗಬಹುದು. ಮುಂದಿನ ವಾರ ಸುದೀಪ್ ತೆರೆಯ ಮೇಲೆ ಬರೋದಂತೂ 100% ಪಕ್ಕಾ.

  • ಸುದೀಪ್ ಟೀಟ್ ಉಚ್ಚರವಾ?

    ಸುದೀಪ್ ಟೀಟ್ ಉಚ್ಚರವಾ?--

    ಕಿಚ್ಚ ಸುದೀಪ್ ಅವರಿಂದ ಮೋಸವಾಗಿದೆ. ವಂಚನೆಯಾಗಿದೆ. ಅಡ್ವಾನ್ಸ್ ಕೊಟ್ಟಿದ್ದೇನೆ. ಕಾಲ್ ಶೀಟ್ ಕೊಟ್ಟಿಲ್ಲ. 8 ವರ್ಷಗಳಿಂದ ಆಟವಾಡಿಸುತ್ತಿದ್ದಾರೆ ಎಂದೆಲ್ಲ ಎನ್.ಕುಮಾರ್ ಆರೋಪ ಮಾಡಿದ್ದರು. ಎನ್.ಕುಮಾರ್ ಕೂಡಾ ಚಿತ್ರರಂಗದ ಹಿರಿಯ ನಿರ್ಮಾಪಕ. ಸುದೀಪ್ ಅವರ ಚಿತ್ರಗಳನ್ನೂ ಕೂಡಾ ನಿರ್ಮಾಣ ಮಾಡಿದ್ದವರು. ಸುದೀಪ್ ಚಿತ್ರಗಳನ್ನು ವಿತರಣೆ ಮಾಡಿದ್ದವರು. ಇಂತಹ ಕುಮಾರ್, ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆಂದರೆ.. ಚಿತ್ರರಂಗ ಕುತೂಹಲದಿಂದ ನೋಡುತ್ತಿತ್ತು. ಇದೀಗ ಸುದೀಪ್ ಅವುಗಳಿಗೆಲ್ಲ ಉತ್ತರವೇನೋ ಎಂಬಂತೆ ಟ್ವೀಟ್ ಮಾಡಿದ್ದಾರೆ.

    ಒಳ್ಳೆಯತನಕ್ಕೆ ರಾಜಿ ಇಲ್ಲ, ಇದನ್ನು ಓದಿ, ತುಂಬ ಚೆನ್ನಾಗಿದೆ ತಿರುಚೋದಿಕ್ಕೆ ಅಥವಾ ದುರ್ಬಳಕೆ ಮಾಡಿಕೊಳ್ಳೋದಿಕ್ಕೆ ನನ್ನ ಒಳ್ಳೆಯತನ ಉಪಕರಣ ಅಲ್ಲ. ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿನಮ್ರವಾಗಿರಿ, ಸತ್ಯವಂತರಾಗಿರಿ ಇದು ಸುದೀಪ್ ಅವರ ಟ್ವೀಟ್. ಈ ಟ್ವೀಟ್ ಕುಮಾರ್ ಅವರಿಗೇ ಹೇಳಿದ್ದು ಎಂದು ಮಾತನಾಡಿಕೊಳ್ತಿದೆ ಗಾಂಧಿನಗರ. ತೆರೆಯ ಹಿಂದೆ ನಡೆದಿರುವ ಚಟುವಟಿಕೆಗಳೇನು.. ಎನ್ನುವುದು ಸುದೀಪ್ ಮತ್ತು ಕುಮಾರ್ ಅವರಿಗೆ ಗೊತ್ತು.

    ಅಂದಹಾಗೆ ಕುಮಾರ್ ಅವರ ಸುದ್ದಿಗೋಷ್ಠಿಯಲ್ಲಿ ಫಿಲಂ ಚೇಂಬರ್ ಮತ್ತು ನಿರ್ಮಾಕರ ಸಂಘದ ಅಧ್ಯಕ್ಷರೂ ಇದ್ದದ್ದು ವಿಶೇಷವಾಗಿತ್ತು.

  • ಸುದೀಪ್ ಪತ್ನಿ ಪ್ರಿಯಾರ ಹೊಸ ದಾಖಲೆ

    priya sudeep's new record

    ಕಿಚ್ಚ ಸುದೀಪ್ ದಿನಕ್ಕೊಂದು ದಾಖಲೆ ಬರೆಯುತ್ತಲೇ ಇರುತ್ತಾರೆ. ಆನ್‍ಲೈನ್‍ನಲ್ಲಿ ಸದಾ ಆಕ್ಟಿವ್ ಆಗಿರುವ ಸುದೀಪ್, 1.3 ಮಿಲಿಯನ್‍ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕಲಾವಿದ. ಆದರೆ, ಇದು ಸುದೀಪ್ ಕಥೆಯಲ್ಲ. ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರ ಕಥೆ. 

    ಟ್ವಿಟರ್‍ನಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಅವರ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಇದು ಸ್ವತಃ ಪ್ರಿಯಾ ಅವರಿಗೂ ಅಚ್ಚರಿ ತಂದಿದೆ. ಪತ್ನಿಯ ಫಾಲೋವರ್ಸ್ ಸಂಖ್ಯೆ 50 ಸಾವಿರದ ಗಡಿ ದಾಟಿದ ಬಗ್ಗೆ ಸುದೀಪ್ ಕೂಡಾ ಟ್ವಿಟರ್‍ನಲ್ಲೇ ಶುಭಕೋರಿದ್ದಾರೆ.

  • ಸುದೀಪ್ ಬೇಟೆಗೆ ಇಂಟರ್‍ಪೋಲ್ ಆಫೀಸರ್ ಶ್ರದ್ಧಾ ದಾಸ್ 

    shraddha das will jpin kotigobba 3

    ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಯೂರೋಪ್‍ನ ಬೆಲ್‍ಗ್ರೇಡ್‍ನಲ್ಲಿ ಶುರುವಾಗಿದೆ. ಚಿತ್ರದಲ್ಲಿ ಸುದೀಪ್ ಹೀರೋ. ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಅಫ್ತಾಬ್ ಶಿವದಾಸನಿ, ನವಾಬ್ ಶಾ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಶ್ರದ್ಧಾ ದಾಸ್, ಇಂಟರ್‍ಪೋಲ್ ಅಧಿಕಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 

    ಶ್ರದ್ಧಾ ದಾಸ್, ಮೂಲತಃ ತೆಲುಗಿನವರು. ತೆಲುಗು ಹಾಗೂ ಕನ್ನಡಕ್ಕೆ ಬಹಳ ಸಾಮ್ಯತೆ ಇರುವ ಕಾರಣ, ಕನ್ನಡ ಭಾಷೆ ಸವಾಲಾಗುವುದಿಲ್ಲ ಎನ್ನುವುದು ಅವರ  ನಂಬಿಕೆ. ಚಿತ್ರದಲ್ಲಿ ಅವರದ್ದು ಇಂಟರ್‍ಪೋಲ್ ಅಧಿಕಾರಿಯ ಪಾತ್ರ. ಸುದೀಪ್ ಬೆನ್ನ ಹಿಂದೆ ಬೀಳುವ ಅವರ ಪಾತ್ರ, ಡಾನ್ 2 ಚಿತ್ರದ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಹೋಲುತ್ತದಂತೆ.

    ಸುದೀಪ್ ಜೊತೆ ನಟಿಸುತ್ತಿದ್ದೇನೆ ಎನ್ನುವುದೇ ಈಗ ಶ್ರದ್ಧಾಗೆ ಥ್ರಿಲ್. 

  • ಸುದೀಪ್ ಮೇಲಿನ ಕುಮಾರ್ ಆರೋಪಗಳಿಗೆ ಜಾಕ್ ಮಂಜು ಉತ್ತರ

    ಸುದೀಪ್ ಮೇಲಿನ ಕುಮಾರ್ ಆರೋಪಗಳಿಗೆ ಜಾಕ್ ಮಂಜು ಉತ್ತರ

    ನಟ ಕಿಚ್ಚ ಸುದೀಪ್ ತಮಗೆ ಸಿನಿಮಾ ಮಾಡಿಕೊಡುತ್ತಿಲ್ಲ. ಸಂಭಾವನೆ ತೆಗೆದುಕೊಂಡಿದ್ದಾರೆ. ಇ ವರ್ಷಗಳಿಂದ ನನ್ನ ಹಣ ಅವರಲ್ಲೇ ಇದೆ. ಆದರೆ ಸಿನಿಮಾ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದರು ನಿರ್ಮಾಪಕ ಎನ್. ಕುಮಾರ್. ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘ ಕೂಡ ಕುಮಾರ್ ಜೊತೆಗಿತ್ತು.

    ಟ್ವಿಟರಿನಲ್ಲಿ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದ ಸುದೀಪ್, ಕಾನೂನು ಹೋರಾಟದ ಮೊರೆ ಹೋದರು. ನೇರವಾಗಿ ಮಾನನಷ್ಟ ಮೊಕದ್ದಮೆ ನೋಟಿಸ್ ಕೊಟ್ಟಿದ್ದರು. ಅದಾದ ಮೇಲೆ ನಿರ್ಮಾಪಕ ಹಾಗೂ ಸುದೀಪ್ ಅವರ ಆತ್ಮೀಯ ಗೆಳೆಯರಾಗಿರುವ ಜಾಕ್ ಮಂಜು ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರವ ಕೊಟ್ಟದ್ದೀವಿ, ಮುಂದೆಯೂ ಕೊಡುತ್ತೇವೆ. ಸುದೀಪ್ ಅವರ ಮನೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಬಂದಿದ್ದರು. ಎನ್ ಕುಮಾರ್ ಕುರಿತಾಗಿ ಸಂಪೂರ್ಣ ಚರ್ಚೆ ಮಾಡಿದ್ದರು. ಐದಾರು ವರ್ಷಗಳಲ್ಲಿ ಏನೆಲ್ಲ ಆಯ್ತು ಅನ್ನೋದರ ಬಗ್ಗೆ ಸುದೀಪ್ ಹೇಳಿದ್ದಾರೆ. ಇಷ್ಟೆಲ್ಲ ಆದಮೇಲೆ ವಾಣಿಜ್ಯ ಮಂಡಳಿಗೆ ಕುಮಾರ್ ದೂರು ಕೊಟ್ಟರು. ಆಗ ಚೇಂಬರ್ನಿಂದ ನಮಗೆ ಬಂದ ಪತ್ರಕ್ಕೆ ನಾವು ಆಗಲೇ ಉತ್ತರವನ್ನೂ ಕೊಟ್ಟಿದ್ದೇವೆ. ಐದಾರು ಪತ್ರ ಬರೆದ್ರು ಉತ್ತರ ಕೊಟ್ಟಿಲ್ಲ ಎಂಬ ತಪ್ಪು ಸಂದೇಶ ಎಲ್ಲ ಹಬ್ಬಿದೆ. ಒಂದೇ ವಿಚಾರಕ್ಕೆ ಐದಾರು ಬಾರಿ ಪತ್ರ ಬರೆದಿದ್ದಾರೆ. ನಾವು ಮೊದಲನೇ ಪತ್ರಕ್ಕೆ ಉತ್ತರ ಕೊಟ್ಟಿದ್ದೇವೆ. ನಮ್ಮಿಂದ ಆಗಲೇ ಸ್ಪಷ್ಟನೆಯನ್ನು ನೀಡಿದ್ದೇವೆ. ಆದರೆ ಪದೇ ಪದೇ ಅದೇ ವಿಚಾರವನ್ನೇ ಕೇಳಿದರೆ ಅದಕ್ಕೆ ಅರ್ಥವಿಲ್ಲ ಎಂದಿದ್ದಾರೆ ಜಾಕ್ ಮಂಜು.

    ಮುಕುಂದ ಮುರಾರಿ ರಿಲೀಸ್ ಆದ 8 ದಿನಕ್ಕೆ ಕುಮಾರ್ ಸುದೀಪ್ ಅವರ ಬಳಿ ಬಂದರು. ನೋಟ್ ಬ್ಯಾನ್`ನಿಂದಾಗಿ ತೊಂದರೆ ಸಿಕ್ಕಿಕೊಂಡಿದ್ದೇನೆ. ಈಗ ತೊಂದರೆಯಲ್ಲಿ ಇದ್ದೇನೆ. ಈಗ ಒಂದು ಸಿನಿಮಾ ಮಾಡಿ, ನನ್ನನ್ನು ತೊಂದರೆಯಿಂದ ಪಾರು ಮಾಡಿ' ಎಂದು ಮನವಿ ಮಾಡಿಕೊಂಡರು. ಓಕೆ ಎಂದ ಸುದೀಪ್, ನಿರ್ದೇಶಕರನ್ನು ಹುಡುಕುವಂತೆ ಹೇಳಿದರು. ಕೊನೆಗೆ ಸುದೀಪ್ ಅವರೇ ಒಬ್ಬ ನಿರ್ದೇಶಕರನ್ನು ನೋಡಿ ಕಥೆಯನ್ನು ನಾನು ಕೇಳಿದ್ದೇನೆ. ನೀವು ಕೇಳಿ ಅಂತ ಕುಮಾರ್ ಬಳಿ ಕಳಿಸಿಕೊಡುತ್ತಾರೆ. ಆದರೆ ನಿರ್ದೇಶಕರ ಸಂಭಾವನೆ ಜಾಸ್ತಿಯಾಯ್ತು ಎಂದ ಕುಮಾರ್, ಸಿನಿಮಾ ಕೈಬಿಟ್ಟರು.  2020ರ ಜನವರಿಯಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಶುರುವಾಯ್ತು. ಇವತ್ತಿಗೆ 3 ವರ್ಷ 7 ತಿಂಗಳಾಗಿದೆ. ಆ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾವನ್ನು ಅವರು ಮಾಡಿಲ್ಲ. ಕೊರೊನಾ ಸಮಸ್ಯೆಗಳು, ಅವರ ಆರೋಗ್ಯ ಸಮಸ್ಯೆಗಳು, ಹೀಗೆ ನಾನಾ ಕಾರಣದಿಂದ ಕುಮಾರ್ಗೆ ಜಾಸ್ತಿ ಸ್ಪಂದಿಸಲು ಸುದೀಪ್ಗೆ ಆಗಲಿಲ್ಲ ಎಂದು ಮಂಜು ತಿಳಿಸಿದ್ದಾರೆ.

    ಈ ಮಧ್ಯೆ ಪ್ರಿಯಾ ಅವರು ಕುಮಾರ್ ಅವರೊಂದಿಗೆ ಭೇಟಿ ಮಾಡಿದ್ದರು. ಪ್ರಿಯಾ ಅವರು ಚಿತ್ರರಂಗದ ಯಾವ ವಿಚಾರಕ್ಕೂ ತಲೆ ಹಾಕೋದಿಲ್ಲ. ಆದರೆ ಕುಮಾರ್ ಕುಟುಂಬದ ಆತ್ಮೀಯರು ಎಂದು ಭೇಟಿ ಮಾಡಿದ್ದರು. ಆ ಮೀಟಿಂಗಿನಲ್ಲಿ ನಾನೂ ಇದ್ದೆ. ಆಗ ತುಂಬಾ ಕಷ್ಟ ಹೇಳಿಕೊಂಡರು. ಕೊನೆಗೆ ಅದನ್ನು ತಿಳಿದು ಸುದೀಪ್ ಅವರೇ ಕುಮಾರ್ ತುಂಬಾ ಕಷ್ಟದಲ್ಲಿದ್ದಾರೆ, ಈಗ 5 ಕೋಟಿ ಕೊಡೊಣ, ಆಮೇಲೆ ನೋಡೋಣ ಎಂದರು. ಅದಕ್ಕೆ ಕುಮಾರ್ ನನಗೇನು ಭಿಕ್ಷೆ ಕೊಡ್ತೀರಾ.. ಅದೆಲ್ಲ ಬೇಡ, ಸಿನಿಮಾ ಮಾಡಿ ಎಂದರು.

    ಸುದೀಪ್ ಅವರಿಗೆ ಕುಮಾರ್ ಯಾವುದೇ ದುಡ್ಡು ಕೊಟ್ಟಿಲ್ಲ. ಆದರೆ ಕುಮಾರ್ ತಮಗೆ ಸಾಲ ಕೊಟ್ಟಿರುವವರಿಗೆಲ್ಲ ಸುದೀಪ್ 8-9 ಕೋಟಿ ದುಡ್ಡು ಕೊಡಬೇಕು. ಅವರು ಕೊಟ್ಟಾಗ ಕೊಡ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ.  ಇದೆಲ್ಲ ಸುದೀಪ್ ಅವರಿಗೂ ಗೊತ್ತಿದೆ. ಕುಮಾರ್ ನೂರಾರು ಥಿಯೇಟರ್ ನಡೆಸಿದವರು, ಹಲವು ಸಿನಿಮಾಗಳನ್ನು ಮಾಡಿದವರು. ಎಷ್ಟು ಫಿಲ್ಮ್ ಹಿಟ್ ಆಗಿವೆ, ಎಷ್ಟು ಸೋತಿವೆ ನಮಗೆ ಗೊತ್ತಿಲ್ಲ. ಆದರೆ ಆಗಿರುವ ನಷ್ಟಕ್ಕೆಲ್ಲ ಸುದೀಪ್ ಕಾರಣ ಎಂದರೆ ಹೇಗೆ? ಎಂದಿದ್ದಾರೆ ಜಾಕ್ ಮಂಜು.

    ಅಷ್ಟೆ ಅಲ್ಲ, ಸುದೀಪ್ ಅವರು ಸಿನಿಮಾ ಮಾಡೋಕೆ ಮುಂದಾದರೆ 50-60 ಕೋಟಿ ಬಜೆಟ್ ಆಗುತ್ತೆ. ಇಷ್ಟೆಲ್ಲ ಆಗಲ್ಲ ಎಂದರು. ಅವರಿಗೆ ಸಹಾಯವಾಗಲಿ ಎಂದು ಒಂದು ಕಂಪೆನಿ ಜೊತೆ ಮಾತನಾಡಿ, ಕುಮಾರ್ ಅವರಿಗೆ ಸಹಾಯ ಮಾಡೋಕೆ ಹೋದರೆ ಮೊದಲು ಒಪ್ಪಿದ್ದ ಅದೇ ಕುಮಾರ್, ನಾನ್ಯಾಕೆ ಇನ್ನೊಂದು ಕಂಪನಿ ಜತೆಗ ಸಿನಿಮಾ ಮಾಡಲಿ? ನಾನೇ ಹಣ ಹಾಕುತ್ತೇನೆ ಎಂದು ಕೂಗಾಡಿದರು. ಆಗ ಸುದೀಪ್ ಅವರು, ಇದ್ಯಾಕೋ ಸರಿ ಆಗುತ್ತಿಲ್ಲ ಎಂದು ತಮ್ಮ ದಾರಿಯಲ್ಲೇ ತಾವು ಹೋಗುತ್ತಿದ್ದಾರೆ ಎಂದು ವಿವರಣೆ ಕೊಟ್ಟಿದ್ದಾರೆ.

    ನಾವು ಕಾನೂನಿನ ಮೊರೆ ಹೋಗಿದ್ದೇವೆ. ಕೋರ್ಟ್ ಏನಾದರೂ ಕುಮಾರ್ ಅವರಿಗೆ 10-20 ಕೋಟಿ ಕೊಡಿ ಎಂದರೂ ಒಪ್ಪಿಕೊಳ್ಳುತ್ತೇವೆ. ಕಾನೂನಿನ ಹೋರಾಟ ನಡೆಸುತ್ತೇವೆ ಎಂದಿದ್ದಾರೆ ಜಾಕ್ ಮಂಜು.

  • ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..?

    ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..?

    ಪ್ರತಿ ಎಲೆಕ್ಷನ್ ಬಂದಾಗಲೂ ಸುದ್ದಿಯಾಗುವಂತೆ ಈ ಬಾರಿಯೂ ಸುದೀಪ್ ರಾಜಕೀಯ ಪ್ರವೇಶ ದೊಡ್ಡ ಸುದ್ದಿಯಾಗಿದೆ. ಅದರಲ್ಲಿಯೂ ಡಿಕೆ ಶಿವಕುಮಾರ್ ಮತ್ತು ಸುದೀಪ್ ಭೇಟಿ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ನಾನು ಸುದೀಪ್ ಅವರನ್ನು ರಾಜಕೀಯಕ್ಕೆ ಕರೆತರಲು ಅಥವಾ ಪಕ್ಷಕ್ಕೆ ಕರೆಯಲು ಹೋಗಿರಲಿಲ್ಲ. ಪ್ರಣಾಳಿಕೆ ಸಿದ್ಧಪಡಿಸುವುಕ್ಕೆ ಮಾಹಿತಿ ಕೇಳುವುದಕ್ಕೆ ಹೋಗಿದ್ದೆ ಎಂದು ಡಿಕೆ ಹೇಳಿದರೂ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಸುದೀಪ್ ಎಲ್ಲಿಯೇ ಹೋದರೂ ಅವರಿಗೆ ಎದುರಾಗುವ ಪ್ರಶ್ನೆ ಇದೇ. ರಾಜಕೀಯಕ್ಕೆ ಬರುತ್ತೀರಾ ಎಂಬುದು. ಈ ಕುರಿತಂತೆ ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿರುವ ಸುದೀಪ್ ನೀಡಿರುವ ಉತ್ತರ ಇದು.

    ನನಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಪ್ರೀತಿ ಪಾತ್ರರಿದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ಕಾಂಗ್ರೆಸ್ಸಿನಲ್ಲೂ ಇದ್ದಾರೆ. ಆದರೆ ಒಳ್ಳೆಯ ಕೆಲಸ ಮಾಡುವುದಕ್ಕೆ ರಾಜಕೀಯಕ್ಕೇ ಬರಬೇಕಿಲ್ಲ. ಈಗಾಗಲೇ ನನ್ನ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ. ಅದನ್ನು ಮುಂದುವರೆಸುತ್ತೇನೆ ಎಂದಿರುವ ಸುದೀಪ್ ಅಷ್ಟಕ್ಕೇ ಸುಮ್ಮನಾಗಲ್ಲ. ಅದನ್ನೂ ಮೀರಿದ ಸಹಾಯ, ಸೇವೆ ಮಾಡುವ ಅವಕಾಶ ರಾಜಕೀಯದಲ್ಲಿ ಇದ್ದರೆ ಸಾಧ್ಯ ಎಂದು ನನಗೆ ಅರಿವಾದರೆ ಆಗ ರಾಜಕೀಯಕ್ಕೆ ಬರುವ, ಪಕ್ಷ ಸೇರುವ ಬಗ್ಗೆ ಆಲೋಚನೆ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶವನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ರಾಜಕೀಯ ಪಕ್ಷ ಸೇರಬಾರದು. ರಾಜಕೀಯಕ್ಕೇ ಬರಬಾರದು. ಚಿತ್ರರಂಗದಲ್ಲಿದ್ದಾರೆ. ಚಿತ್ರರಂಗದಲ್ಲಿಯೇ ಇರಲಿ ಎನ್ನುವ ಅಭಿಪ್ರಾಯವೂ ಜನರಲ್ಲಿದೆ. ಅದನ್ನೂ ಗೌರವಿಸಬೇಕು ಎಂದಿರುವ ಸುದೀಪ್, ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷಗಳಲ್ಲೂ ಇರುವ, ತಮ್ಮ ಆಪ್ತರ ಪರ ಪ್ರಚಾರ ಮಾಡುವ ಸುಳಿವು ಕೊಟ್ಟಿದ್ದಾರೆ. ಆ ರೀತಿಯ ಆಪ್ತರ ಪ್ರಚಾರಕ್ಕೆ ಸುದೀಪ್ ಪಕ್ಷದ ಬಾರ್ಡರ್ ಇಟ್ಟುಕೊಳ್ಳದೆ ಕೆಲಸ ಮಾಡಲಿದ್ದಾರೆ.

  • ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ?

    ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ?

    ನನ್ನನ್ನು ಟೀಕಿಸುವವರೂ ಇದ್ದಾರೆ. ಆದರೆ ಮೆಚ್ಚಿಕೊಳ್ಳುವವರು.. ಪ್ರೀತಿಸುವವರ ಸಂಖ್ಯೆ ದೊಡ್ಡದು. ಹೀಗಾಗಿ ನಾನು ತೆಗಳುವವರ ಬಗ್ಗೆ.. ಅದರಲ್ಲೂ ವಿನಾಕಾರಣ ಸುಖಾಸುಮ್ಮನೆ ತೆಗಳುವವರ ಬಗ್ಗೆ ತಲೆಕೆಡಿಸಿಕೊಳ್ಳೋದೂ ಇಲ್ಲ. ಪ್ರೀತಿಸುವವರ ಸಂಖ್ಯೆಯೇ ದೊಡ್ಡದಿರುವಾಗ.. ಅವರ ಬಗ್ಗೆ ನಾನ್ಯಾಕೆ ಯೋಚಿಸಿ ಸಮಯ ಹಾಳುಮಾಡಿಕೊಳ್ಳಲಿ..

    ಇದು ಸುದೀಪ್ ತಮ್ಮನ್ನು ಟೀಕಿಸುವ.. ಲೇವಡಿ ಮಾಡುವ.. ಮನಸ್ಸಿಗೆ ಬಂದಂತೆ ಬಯ್ಯುವವರ ಬಗ್ಗೆ ನೀಡಿದ್ದ ಹೇಳಿಕೆ. ಅದು ನಿಜವೂ ಕೂಡಾ.

    ಸುದೀಪ್ ಅವರಿಗೆ ವಿವಾದಗಳು ಹೊಸದಲ್ಲ. ಅಪಪ್ರಚಾರವೂ ಹೊಸದಲ್ಲ. ಅವರ ತಪ್ಪೇ ಇಲ್ಲದಿದ್ದರೂ ಟೀಕೆಗೆ ಗುರಿಯಾಗಿದ್ದಿದೆ.

    ಸುದೀಪ್ ಸಂಕಷ್ಟದಲ್ಲಿರುವ ಯಾರಿಗಾದರೂ ಆರ್ಥಿಕ ನೆರವು ನೀಡಿದರೆ.. ಕೊಟ್ಟಿದ್ದು ಇಷ್ಟೇನಾ.. ಇನ್ನೂ ಕೊಡಬೇಕಿತ್ತು ಎಂದೂ..

    ಸುದೀಪ್ ತಮ್ಮ ಟ್ರಸ್ಟ್ ಮೂಲಕ ನೀಡಿದ ನೆರವು ಸುದ್ದಿಯಾದರೆ.. ಪ್ರಚಾರಕ್ಕಾಗಿ ಮಾಡ್ತಾರೆ ಎಂದೂ..

    ಇನ್ಯಾರದೋ ಕಷ್ಟಕ್ಕೆ ಸ್ಪಂದಿಸಿದರೆ.. ಅವರಿಗ್ಯಾಕೆ ಸ್ಪಂದಿಸಲಿಲ್ಲ ಎಂದೂ..

    ತಮ್ಮ ಆಪ್ತರು, ಗೆಳೆಯರಿಗೆ ಸಹಾಯ ಮಾಡಿದರೆ.. ಅವರಿಗೆ ಮಾತ್ರನಾ.. ಇವರಿಗ್ಯಾಕೆ ಮಾಡಲಿಲ್ಲ ಎಂದೂ..

    ಅಡುಗೆಯ ಫೋಟೋ ಹಾಕಿದರೆ ಎಷ್ಟ್ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯ್ತಿದ್ದಾರೆ ಗೊತ್ತಾ ಎಂದೂ..

    ಥರಹೇವಾರಿ ಟೀಕೆಗಳು. ಈಗಲೂ ಅಷ್ಟೆ.. ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಶೋಗಳು ಹೌಸ್‍ಫುಲ್. ಕಲೆಕ್ಷನ್ ಮೊದಲ ದಿನವೇ 35 ಕೋಟಿ ದಾಟಿದೆ. 2ನೇ ದಿನದ ಶೋಗಳೂ ಭರ್ತಿ. ಸಿನಿಮಾ ನೋಡಿದವರಿಗೆಲ್ಲ ಚಿತ್ರದ ಪ್ರತಿಯೊಂದು ಅಂಶಗಳೂ ಇಷ್ಟವಾಗಿವೆ. ಹಾಡುಗಳು ವೈರಲ್ ಆಗಿವೆ. ಆದರೆ.. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಸ್ ಬರತೊಡಗಿವೆ. ಹೀಗೆ ಟೀಕೆ ಮಾಡುವವರು ಮೊದಲು ಸಿನಿಮಾ ನೋಡಿ. ನಂತರ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಬರುತ್ತಿರುವ ಕಮೆಂಟ್ಸ್ ಶೈಲಿ ನೋಡಿದರೆ ಇದೊಂದು ವ್ಯವಸ್ಥಿತ ಷಡ್ಯಂತ್ರದಂತೆ ಕಾಣುತ್ತಿದ್ದರೆ ಅಚ್ಚರಿಯಿಲ್ಲ.

    ಕನ್ನಡ ಸಿನಿಮಾಗಳು ಗೆಲ್ಲಬೇಕು. ಅದರಲ್ಲೂ ಚೆನ್ನಾಗಿರುವ ಸಿನಿಮಾಗಳು ಇನ್ನೂ ಇನ್ನೂ ಗೆಲ್ಲಬೇಕು. ಭರ್ಜರಿಯಾಗಿ ಗೆಲ್ಲುತ್ತಿರುವ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದು ಗೆಲ್ಲಿಸಬೇಕು. ಚಿತ್ರರಂಗ ಗೆಲ್ಲುವುದು.. ಕನ್ನಡ ಗೆಲ್ಲುವುದು ಆವಾಗಲೇ.. ಇದು ಕೆಲವರಿಗೆ ಅದ್ಯಾಕೆ ಅರ್ಥವಾಗುತ್ತಿಲ್ಲವೋ..